ಶನಿವಾರ, ಸೆಪ್ಟೆಂಬರ್ 20, 2014

ಪುರಾಣೇತಿಹಾಸಗಳನ್ನೊಳಗೊಂಡ ವರ್ತಮಾನದ ಕೃತಿ- ‘ಶರ್ಮಿಷ್ಠೆ’- ಕೊಟ್ರೆಶ್ ಎಸ್. ಉಪ್ಪಾರ್, ಆಲೂರು


      ಕನ್ನಡ ನಾಡು ಕಂಡಂತಹ ವಿಶಿಷ್ಟ ಬರಹಗಾರ ಡಾ. ಮಳಲಿ ವಸಂತಕುಮಾರ್‍ರವರು. ‘ಗದ್ಯ ಮತ್ತು ಪದ್ಯ’ ಎರಡೂ ಪ್ರಕಾರಗಳಲ್ಲಿ ಪ್ರಾವಿಣ್ಯತೆ ಪಡೆದ ಘನ ವಿದ್ವಾಂಸರಾದ ಡಾ. ಮಳಲಿಯವರು ಅತ್ಯದ್ಬುತ ವಾಗ್ಮಿಗಳು ಹೌದು.
      ಕವಿತೆ, ಕಥೆ, ನಾಟಕ, ವಿಮರ್ಶೆ ಜಾನಪದ, ಸಂಶೋಧನೆ, ವಚನ, ಜೀವನ ಚರಿತ್ರೆ ಮತ್ತು ಸಂಪಾದಿತ ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸಾಧನೆ ಮಾಡಿರುವ ಇವರು ಸುಮಾರು ನಲವತ್ತಕ್ಕಿಂತಲೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
      ಈ ಹಿಂದೆ ‘ಯಮಧರ್ಮ’, ಲಂಕೇಶ್ವರ’ ನಾಟಕಗಳು ವಿಮರ್ಶಕರನ್ನು ಹಾಗೂ ಶೋತೃಗಳನ್ನು ಹೊಸ ಆಲೋಚನೆಗಳ ಸುಳಿಗೆ ಸಿಲುಕಿಸಿದ್ದವು. ಕಾರಣ ಬೇರೆಯವರ ವಸ್ತು ಸ್ಥಿತಿಯ ನಿರೂಪಣಾ ಶೈಲಿಗಿಂತ ಭಿನ್ನವಾದ ಇವರ ವೈಚಾರಿಕ ಹಾಗೂ ವೈಜ್ಞಾನಿಕ ಭಾವಗಳು. ಇದು ಹಲವಾರು ಯಶಸ್ವೀ ಪ್ರದರ್ಶನಗಳನ್ನು ಕಂಡಿದೆ.
      ರಾವಣನನ್ನು ಸಹಜವಾಗಿ ಸಾಮಾನ್ಯರು ಕಲ್ಪಿಸಿಕೊಳ್ಳುವುದಕ್ಕಿಂತ ವ್ಯತಿರಿಕ್ತವಾಗಿ ಈ ನಾಟಕದಲ್ಲಿ ರಾವಣನಲ್ಲಿನ ಯೋಗ ಸಿದ್ಧಿಯನ್ನು ಪುನರ್‍ವಿಮರ್ಶಿಸಿ ಪ್ರಖರತೆಯತ್ತ ಮುಖಮಾಡಿಸಿದ ಡಾ. ಮಳಲಿಯವರು ಒಂದು ಹೊಸ ಆಯಾಮವನ್ನು ಸೃಷ್ಟಿಸಿದ್ದಾರೆ.
      ಅರಿವಿನ ಪ್ರಜ್ಞೆಯ ದ್ಯೋತಕವಾಗಿ ಮೂಡಿ ಬಂದ ಈ ನಾಟಕದ ತಿರುಳು ಮಾನವೀಯತೆಯ ನವಚೈತನ್ಯ ತುಂಬಿ ವಿಕಾಸ
ಸಿದ್ದಾಂತದಂತೆ ಜ್ಞಾನಾರ್ಜನೆಗೊಂಡು ವ್ಯಕ್ತಿತ್ವದ ಹೊಳಪು ಪ್ರಜ್ವಲಿಸಿರುವುದನ್ನು ಕಾಣುತ್ತೇವೆ. ಇಲ್ಲಿನ ಅನೇಕ ಪ್ರಸಂಗಗಳು ಓದುಗನನ್ನು ಗಹನವಾದ ಚಿಂತನೆಗೆ ದೂಡುವುದರಲ್ಲಿ ಎರಡು ಮಾತಿಲ್ಲ.
      ಅಂತೆಯೇ ಇವರ ಮೂರನೇ ನಾಟಕ ‘ಶರ್ಮಿಷ್ಟೆ’. ತಲೆ ಬರಹದಡಿ ಸೂಚಿಸಿರುವಂತೆ ಪುರಾಣ, ಇತಿಹಾಸ ಮತ್ತು ಸಾಮಾಜಿಕ ಸಂಗತಿಗಳು ಏಕೀರ್ಭವಿಸಿರುವ ಮಹಾನಾಟಕವಿದು. ಗತಕಾಲದ ಇತಿಹಾಸ ಅದೆಷ್ಟೋ ಪ್ರಬುದ್ಧ ಪಾತ್ರಗಳು ಜೀವ ತಳೆಯದೆ ಕಮರಿಹೊಗುತ್ತವೆ. ಕೆಲವು ಸಂದರ್ಭದಲ್ಲಿ ಸಾಹಿತ್ಯದೆಡೆಗೆ ಬಂದರೂ ಸಪ್ಪೆಯಾಗಿ ಘನತೆ ಕಂಡುಕೊಳ್ಳುವಲ್ಲಿ ವಿಫಲವಾಗಿಬಿಡುತ್ತವೆ. ಇನ್ನೂ ಕೆಲವೊಮ್ಮೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತವೆ.
      ಶರ್ಮಿಷ್ಟೆ ಎಂದಾಕ್ಷಣ ನನ್ನ ನೆನಪಿಗೆ ಯಯಾತಿ, ದೇವಯಾನಿ, ಶುಕ್ರಚಾರ್ಯರು ಮುಂತಾದ ಐತಿಹಾಸಿಕ ಪಾತ್ರಗಳು ಸುಳಿದಾಡಿದವು. ಏಕೆಂದರೆ ಈ ಪಾತ್ರಗಳೆಲ್ಲಾ ಒಂದಕ್ಕೊಂದು ಬೆಸೆದುಕೊಂಡ ಅತ್ಯದ್ಭುತ ಕಥಾ ಪ್ರಸಂಗಗಳು. ಈ ಹಿಂದೆ ನಾನು ಪಿ.ಯು.ಸಿಯಲ್ಲಿದ್ದಾಗ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಡಾ. ಗಿರಿಶ್ ಕಾರ್ನಾಡರ ‘ಯಯಾತಿ’ ನಾಟಕ ಪಠ್ಯದಲ್ಲಿ ಓದಿದ್ದೆ.
      ಡಾ. ಮಳಲಿ ಹಾಗೂ ಡಾ. ಕಾರ್ನಾಡರ ಕಥಾ ವಸ್ತು ಒಂದೆಯಾದರೂ ಚಿಂತನ ಲಹರಿಗಳು ವಿಭಿನ್ನವಾಗಿವೆ. ಕಾರ್ನಾಡರ ನಾಟಕದಲ್ಲಿ ಇತಿಹಾಸ ಪ್ರಧಾನವಾದರೆ ಇಲ್ಲಿ ವೈಚಾರಿಕತೆಯ ಹೊಳವಿದೆ. ಹಳೆಯ ವಸ್ತುವಿನ ಕುರಿತ ನಾಟಕವಾದರೂ ನಾಟಕದುದ್ದಕ್ಕೂ ಹೊಸ ಹೊಳವುಗಳನ್ನು ಕಾಣುತ್ತೇವೆ. ತಮ್ಮ ಅಗಾಧ ಜ್ಞಾನದ ಅರ್ಥವಂತಿಕೆಯಿಂದ ಸನ್ನಿವೆಶಗಳಿಗೆ ಕೌತುಕತೆಯನ್ನು ತುಂಬಿ ಪರಿವರ್ತನಾ ಶೀಲತ್ವದೆಡೆಗೆ ಸಾಗಿಸಿದ ಡಾ. ಮಳಲಲಿಯವರ ಜಾಣ್ಮೆ ಅವಿಚಿನ್ನವಾದುದು ಎಂದರೆ ಅತಿಶಯೋಕ್ತಿಯಾಗಲಾರದು.
      ಈ ನಾಟಕದಲ್ಲಿ ದೇವಗುರುವಾಗಿ ಬೃಹಸ್ಪತಿ, ರಾಕ್ಷಸಗುರುವಾಗಿ ಶುಕ್ರಾಚಾರ್ಯರು ತಮ್ಮಗಳಲ್ಲಿನ ಅಹಂಮ್ಮಿಕೆಯಿಂದ ದೇವದಾನವರ ನಡುವೆ ಒಡಕು ತಂದಿಟ್ಟು ನೋಡುವ ಆಂತರಿಕ ಸಂವೇದನೆಯಿದ್ದರೆ, ದೇವಯಾನಿಯ ರಕ್ಕಸ ಮನೋಭಾವ ಹಾಗೂ ಶರ್ಮಿಷ್ಟೆಯ ಪ್ರತಿಷ್ಠೆಯ ಸಮರ ಬಾಹ್ಯಾ ಸಂವೇದನೆಯಾಗಿದೆ. ಇವೆರಡರ ಮಧ್ಯೆ ‘ಯಯಾತಿ’ ತತ್ತರಿಸಿ ಕಂಗಾಲಾದರೆ, ‘ಕಚ’ ನಿಜವಾದ ಆದರ್ಶ ವ್ಯಕ್ತಿತ್ವದ ಕೈಗನ್ನಡಿಯಾಗಿ ಒಡಮೂಡಿದ್ದಾರೆ.
     ಇಲ್ಲಿ ಬಹುಮುಖ್ಯವಾಗಿ ವರ್ಣಾಶ್ರಮದಲ್ಲಿ ಮೇಲುಸ್ತರದಲ್ಲಿ ಬರುವ ಬ್ರಾಹ್ಮಣ ಮತ್ತು ಕ್ಷತ್ರಿಯರ ನಡುವಿನ ಪ್ರತಿಷ್ಠೆಯ ಪ್ರಶ್ನೆ ಉದ್ಭವಿಸಿ, ಅಹಂವಿಕೆಯ ಹುಚ್ಚು ನೆತ್ತಿಗೇರಿ ಮಾನವೀಯತೆ ಮರೆಯಾಗುವುದನ್ನು ಕಾಣುತ್ತೇವೆ.
      ಶರ್ಮಿಷ್ಠೆ ಕ್ಷತ್ರಿಯ ವಂಶದ ರಾಜಕುಮಾರಿ ಹಾಗೆಯೇ ದೇವಯಾನಿ ಆಸ್ಥಾನ ಪುರೋಹಿತರ ಮಗಳು. ಬಾಲ್ಯದಿಂಲೂ ಉತ್ತಮ ಗೆಳೆತಿಯರಾಗಿದ್ದ ಇವರೀರ್ವರ ನಡುವೆ ಅದಲು ಬದಲು ಸೀರೆಯುಟ್ಟ ಪ್ರಸಂಗವೇ ಬಹುದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಕ್ಷತ್ರಿಯವಳು ತನ್ನ ಸೀರೆಯನ್ನುಟ್ಟು ಮಲೀನ ಮಾಡಿದಳೆಂಬ ಕ್ಷುಲ್ಲಕ ಕಾರಣ ದೇವಯಾನಿಯನ್ನು ಅವಿವೇಕದ ಕೂಪಕ್ಕೆ ತಳ್ಳಿ ಜಾತೀಯ ಬೀಜ ಮೊಳೆದು ಅವಘಡಕ್ಕೀಡಾಗುವುದನ್ನು ಕಾಣುತ್ತೇವೆ. ಇಲ್ಲಿ ಶರ್ಮಿಷ್ಟೆಯ ಪ್ರೀತಿಯ ನಿಜರೂಪಕ್ಕೆ ಬೆಲೆ ಸಿಗದೆ ದೇವಯಾನಿಯ ಕುಹಕ ಮನಸ್ಸಿನ ವಿಕಾರಕ್ಕೆ ತುತ್ತಾಗಿ ಕಾಲದ ರೂಪಕ್ಕೆ ಸಿಕ್ಕಿ ಅಚಾನಕ್ಕಾಗಿ ಬಾವಿಗೆ ಬೀಳಲು ಕಾರಣವಾಗುವ ರೀತಿ, ಹಾಗೆಯೇ ಯಯಾತಿ ಆಗಮನದಿಂದ ರಕ್ಷಣೆ, ನಂತರ ಪ್ರೇಮಾಂಕುರ, ಮದುವೆ ಹೀಗೆ ಮುಂದುವರೆದು ನಂತರ ಇದಕ್ಕ್ಕುತ್ತರವಾಗಿ ಶುಕ್ರ್ರಾಚಾರ್ಯರ ಅಜ್ಞಾನದಿಂದ ಹಾಗೂ ದೇವಯಾನಿಯ ಕುಬ್ಜ ಮನೋಧೋರಣೆಯಿಂದ ರಾಜಕುಮಾರಿ ಶರ್ಮಿಷ್ಟೆಯನ್ನು ದಾಸಿಯನ್ನಾಗಿ ಮಾಡುವುದು.
     ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಲೇಖಕರಲ್ಲಿ ಪೌರಾಣಿಕ ಹಾಗೂ ಐತಿಹಾಸಿಕ ಕಥನ ಪ್ರಸಂಗದಲ್ಲಿ ಪ್ರಸ್ತುತ ಸಾಮಾಜಿಕ ಸಂಗತಿಗಳು ಸುಳಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
     ಈ ಕಥಾ ಹಂದರ ಹೀಗೆ ಸಾಗುತ್ತಾ ‘ಯಯಾತಿ’ ಶರ್ಮಿಷ್ಟೆಯನ್ನು ವರಿಸಿ, ರಾಣಿ, ದಾಸಿಯರಿಗೆ ಸಾಮ್ರಾಟನಾಗುವ ಪರಿ, ನಂತರ ಶಂಕರಾಚಾರ್ಯರ ಸಂಚಿನಿಂದ ಜರ್ಜರಿತವಾಗುವ ಯಯಾತಿಯ ಮನೋಸ್ಥಿತಿ, ಮಧ್ಯೆ-ಮಧ್ಯೆ ‘ಕಚನ’ ಸಾಮಾಜಿಕ ಹಾಗೂ ಮಾನವೀಯ ಪ್ರಜ್ಞೆಯ ನಡೆಗಳು ನಾಟಕಕ್ಕೆ ತಿರುವು ನೀಡುತ್ತವೆ. ಅಂತ್ಯದಲ್ಲಿ ಸ್ವಯಂ ಅರಿವಿನ ನೆಲೆಯಲ್ಲಿ ಸಾಗುವ ಹಾಗೂ ಪಾಪ ಪ್ರಜ್ಞೆಯಿಂದ ಹೊರಬರಲು ಯತ್ನಿಸುವ ಪಾತ್ರಗಳು ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವ ಭಾವ ಚೇತನಮಯವಾಗಿ ಮೂಡಿ ಬಂದಿದೆ.
      ಒಟ್ಟಾರೆ ಹೆಳುವುದಾದರೆ ಡಾ. ಮಳಲಿ ವಸಂತಕುಮಾರ್‍ರವರ ಈ ‘ಶರ್ಮಿಷ್ಠೆÉ್ಟ’ ಓದುಗನನ್ನು ಬಿಟ್ಟು ಬಿಡದಂತೆ ಆಂತರಿಕವಾಗಿ ಸೆಳೆವ ನಾಟಕ. ಇಲ್ಲಿನ ಪಾತ್ರಗಳು ಓದುಗನ ಮನದಾಳಕ್ಕಿಳಿದು ಸುಳಿದಾಡುತ್ತವೆ. ಏಕೆಂದರೆ ಇಲ್ಲಿನ ಶಬ್ದಗಳ ಬಳಕೆ, ಭಾವ ತುಂಬಿದ ಬರಹ, ಅರ್ಥವತ್ತಾದ ನುಡಿಗಳನ್ನೊಳಗೊಂಡ ಸಂಭಾಷಣೆ ಹೊಂದಿದ ಪಾತ್ರಗಳು ಸಹಜವಾಗಿಯೇ ಓದುಗನ ಮನÀ ಪ್ರವೆಶ ಮಾಡುತ್ತವೆ. ಹಾಗೆಯೇ ಗಹನವಾದ ಚಿಂತನೆಗೀಡುಮಾಡುತ್ತವೆನ್ನಬಹುದು.
       ಪ್ರತಿಯೊಬ್ಬ ಕನ್ನಡಿಗನಿಗೂ ಓದಲೇ ಬೇಕಾದ ನಾಟಕ ‘ಶರ್ಮಿಷ್ಠೆ’. ಇವರ ಈ ಹಿಂದಿನ ನಾಟಕಗಳಾದ ‘ಯಮಧರ್ಮ’ ಹಾಗೂ ‘ಲಂಕೇಶ್ವರ’ ನಾಟಕಗಳ ಕುರಿತು ನಾಡಿನ ಖ್ಯಾತ ಸಾಹಿತಿಗಳಾದ ಪು.ತಿ. ನರಸಿಂಹಚಾರ್, ಎಚ್,ತಿಪ್ಪೇರುದ್ರಸ್ವಾಮಿ, ರಾಮಸ್ವಾಮಿ ಅಯ್ಯಂಗಾರ್, ಹಾ.ಮಾ. ನಾಯಕ, ಡಾ. ಬಿ. ರಾಮಚಂದ್ರರಾವ್ ಮುಂತಾದ ಸಾಹಿತ್ಯ ದಿಗ್ಗಜರು ಮೆಚ್ಚಿಕೊಂಡು, ಶ್ಲಾಘಿಸಿರುವುದೇ ಡಾ. ಮಳಲಿಯವರ ಸಾಹಿತ್ಯ ದೀವಿಗೆಯ ಪ್ರಬುದ್ಧತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.
ಕೊಟ್ರೆಶ್ ಎಸ್. ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
                                  ಮೊ-9483470794




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ