ಶನಿವಾರ, ಸೆಪ್ಟೆಂಬರ್ 20, 2014

ಕನ್ನಡದ ಅಸಾಧ್ಯ ಪತ್ರಿಕೋದ್ಯಮಿ-ಪಾಟೀಲ ಪುಟ್ಟಪ್ಪ-ಕೊಟ್ರೆಶ್ ಎಸ್. ಉಪ್ಪಾರ್, ಆಲೂರು


    ಓರ್ವ ಅಪ್ರತಿಮ ಮಾತುಗಾರರಾಗಿ, ನಾಡು ನುಡಿಯ ಹೋರಾಟಗಾರರಾಗಿ, ಸಾಹಿತಿಯಾಗಿ ಎಲ್ಲದಕ್ಕೂ ಮಿಗಿಲಾಗಿ ಕನ್ನಡದ ಅಸಾಧ್ಯ ಪತ್ರಕರ್ತರಾಗಿ ಪಾಪು ಕನ್ನಡಿಗರ ಹೃನ್ಮನಗಳಲ್ಲಿ ಬೆರೆತುಹೋಗಿದ್ದಾರೆ.
    ಪಾಪು ಎಂಬ ಕಾವ್ಯನಾಮದಿಂದಲೇ ಮನೆಮಾತಾಗಿರುವ ಪಾಟೀಲ ಪುಟ್ಟಪ್ಪನವರು ಜನಿಸಿದ್ದು 1921 ಜನವರಿ 21 ರಂದು ಹಾವೇರಿ ತಾಲ್ಲೂಕಿನ ಕುರುಬಗೊಂಡದಲ್ಲಿ. ಕುರುಬಗೊಂಡ, ಬ್ಯಾಡಗಿ ಹಾವೇರಿಗಳಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪಡೆದ ಪಾಪು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಮುಗಿಸಿ ಬೆಳಗಾವಿಯ ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ ಮುಗಿಸಿದರು.
    ಆಗ ಭಾರತದಲ್ಲಿ ಗಾಂಧಿ ಹಾಗೂ ಹಲವಾರು ರಾಷ್ಟ್ರ ನಾಯಕರ ನೇತೃತ್ವದಲ್ಲಿ ಸ್ವಾತಂತ್ರ ಹೋರಾಟ ತೀವ್ರ ಸ್ವರೂಪ ಪಡೆದಿತ್ತು. ಚಲೇಜಾವ್ ಚಳುವಳಿಯ ಕಾವು ತೀವ್ರಗೊಂಡು ಯುವಕರನ್ನೆಲ್ಲ ತನ್ನತ್ತ ಸೆಳೆದುಕೊಂಡಿತು. ನಾಡು ನುಡಿ ರಾಷ್ಟ್ರ ಪ್ರೇಮದ ವಿಷಯದಲ್ಲಿ ಸದಾ ತುಡಿಯುತ್ತಿದ್ದ ಪಾಪು ಈ ಹೋರಾಟದಲ್ಲಿ ಪಾಲ್ಗೊಂಡರು. ಚಲೇಜಾವ್ ಚಳುವಳಿ ಕಾಲದಲ್ಲಿ ವಿದ್ಯಾರ್ಥಿ ಸಂಘಟನೆ ಮಾಡಿದ ಆಪಾದನೆಯಲ್ಲಿ ಬಂದಿತರಾದರು. ನಂತರ ಜಾಗೃತರಾದ ‘ಪಾಪು’ ಸ್ವಾತಂತ್ರ ಚಳವಳಿ ವಿಷಯವಾಗಿ ಒಂದು ವರ್ಷಗಳ ಕಾಲ ಭೂಗತವಾಗಿಯೇ ಪರಿಣಾಮಕಾರಿಯಾಗಿ ಸಂಘಟಿಸಿ ಕಾರ್ಯ ನಿರ್ವಹಿಸಿದರು.
   ಒಮ್ಮೆ ಇವರು ಶಾಲಾ ವಿದ್ಯಾರ್ಥಿಯಾಗಿ ಸ್ವಯಂ  ಸೇವಕರಾಗಿ ಗಾಂಧೀಜಿಯನ್ನು ಸ್ವಾಗತಿಸಿದಾಗ ಅವರಿಂದ ಬೆನ್ನುತಟ್ಟಿಸಿಕೊಂಡ ಕೀರ್ತಿ ಪಾಟೀಲ ಪುಟ್ಟಪ್ಪನವರದು.
   ಕ್ರಿ.ಶ 1945ರಲ್ಲಿ ವಕೀಲಿ ಕೆಲಸಕ್ಕೆಂದು ಮುಂಬೈಗೆ ತೆರಳಿದ ಪಾಪು ವೃತ್ತಿ ಮಾಡುತ್ತಲೇ ಅಲ್ಲಿಯ ಪತ್ರಿಕೆಗಳಿಗೆ ಸ್ವಾತಂತ್ರ ಚಳವಳಿ ಹಾಗೂ ಜಾಗೃತಿ ಬಗ್ಗೆ, ದೇಶ ಪ್ರೇಮ ಮೊಳೆತದ ಬಗ್ಗೆ ಆಂಗ್ಲಭಾಷೆಯಲ್ಲಿಯೇ ವಿಚಾರಪೂರಿತ ಲೇಖನಗಳನ್ನು ಬರೆದರು. ಇವರ ಅತ್ಯಾಕರ್ಷಕ ಬರಹಗಳು ಭಾರತದ ಉಕ್ಕಿನ ಮನುಷ್ಯರೆಂದೇ ಖ್ಯಾತಿವೆತ್ತ ಸರ್ದಾರ್ ವಲ್ಲಭಾಯಿ ಪಟೇಲರ ಗಮನ ಸೆಳೆದವು.
    ತತ್ಪರಿಣಾಮ ಪಾಪು ಹಾಗೂ ಪಟೇಲರ ಸಂಪರ್ಕವೇರ್ಪಟ್ಟಿತು. ಆಗ ವಲ್ಲಬಾಯಿ ಪಟೇಲರು ಪಾಪುರವರಿಗೆ ‘ತಮ್ಮ ಹರಿತವಾದ, ದೇಶಪ್ರೇಮ ಜಾಗೃತೆಗೊಳಿಸುವ ಚಿಂತನೆಗಳು ಅವಶ್ಯಕವಾಗಿರುವುದರಿಂದ ಪತ್ರಿಕೋದ್ಯಮಿಯಾಗಿಯೇ ಕಾರ್ಯ ನಿರ್ವಹಿಸಿ’ಎಂದು ಸಲಹೆ ನೀಡಿದ ಹಿನ್ನೆಲೆಯಲ್ಲಿ ಪಾಪುರವರ ದೃಷ್ಟಿ ಪತ್ರಿಕೋದ್ಯಮದತ್ತ ಹರಿಯಿತು. ಆಗ ಅಲ್ಲಿನ ಅನೇಕ ಪ್ರತಿಷ್ಠಿತ ಪತ್ರಿಕೆಗಳು ಪಾಪುರವರಿಗೆ ಆಹ್ವಾನವಿತ್ತರೂ ಅವರು ಒಪ್ಪದೆ ಕರ್ನಾಟಕದಲ್ಲಿಯೇ ತನ್ನ ಪತ್ರಿಕಾ ವೃತ್ತಿ ಆರಂಭಿಸಬೇಕೆಂಬ ಹಂಬಲದಿಂದ ತಾಯ್ನಾಡಿಗೆ ಹಿಂದಿರುಗಿದರು. ಆಗ ಕರ್ನಾಟಕದಲ್ಲಿ ತುಂಬ ಹೆಸರು ಮಾಡಿದ್ದ ಪ್ರಚಲಿತ ಪತ್ರಿಕೆಯಾಗಿದ್ದ ‘ವಿಶಾಲ ಕರ್ನಾಟಕ’ ವಾರ ಪತ್ರಿಕೆಗೆ ಸೇರಿಕೊಂಡರು. ನಂತರ ಹಂತಹಂತವಾಗಿ ಪ್ರಗತಿ ಸಾಧಿಸುತ್ತಾ ಅದನ್ನು ದಿನ ಪತ್ರಿಕೆಯನ್ನಾಗಿ ಮಾಡಿದರು.
    ಪತ್ರಿಕೋದ್ಯಮದ ಬಗ್ಗೆ ಇನ್ನೂ ಆಳ ಅರಿವುಗಳನ್ನು ಪಡೆಯಬೇಕೆಂಬ ಹಂಬಲದಿಂದ 1949ರಲ್ಲಿ ಕ್ಯಾಲಿಫೋರ್ನಿಯಾಗೆ ತೆರಳಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಮೇರಿಕದಿಂದ ಹಿಂದಿರುಗಿ ಬಂದನಂತರ ‘ನವಯುಗ’ ಎಂಬ ಮಾಸಪತ್ರಿಕೆಯನ್ನು ತಮ್ಮ ಸಂಪಾದಕತ್ವದಲ್ಲಿ ಪ್ರಾರಂಭಿಸಿದರು. ನವೀನ ವಿಚಾರ, ಚಿಂತನ ಮಂಥನಗಳನ್ನೊಳಗೊಂಡಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಹಗಲಿರುಳು ದುಡಿದರು.
       ಕರ್ನಾಟಕದ ಏಕೀಕರಣ ಕುರಿತಂತೆ ನಾಡು ನುಡಿ ಚಿಂತನೆಗಳ ಬಗ್ಗೆ ಬರೆಯುತ್ತಾ ಕನ್ನಡಿಗರನ್ನು ಒಂದು ಗೂಡಿಸುವ ಕಾಯಕ ಮಾಡಿದರು. ನಂತರ 1954ರಲ್ಲಿ ‘ಪ್ರಪಂಚ’ ಎಂಬ ಹೊಸ ಮಾಸಿಕ ಪತ್ರಿಕೆಯನ್ನು ಸ್ಥಾಪನೆ ಮಾಡಿದರು. 1957ರಲ್ಲಿ ‘ಸಂಗಮ’ಎಂಬ ಕನ್ನಡದ ಪ್ರಥಮ ಡೈಜೆಸ್ಟ ಹೊರ ತಂದರು.
   ಸದಾ ಹೊಸತನದತ್ತ ತುಡಿಯುತ್ತಿದ್ದ ಪಾಪು ಮನಸ್ಸು ನಾಡು-ನುಡಿಯ ವಿಷಯದಲ್ಲಿ ಸದಾ ಚಿಂತನಶೀಲವಾಗಿರುತ್ತಿತ್ತು. ಆದ್ದರಿಂದಲೆ ಅವರ ಪ್ರಾಯೋಗಿಕ ಮನಸ್ಸು ಒಂದಿಲ್ಲೊಂದು ಕಾರ್ಯದಲ್ಲಿ ತಲ್ಲಿನವಾಗಿರುತ್ತಿತ್ತು.
   ಇವರು 1959ರಲ್ಲಿ ಆರಂಭಿಸಿದ ‘ವಿಶ್ವವಾಣಿ’ ಎಂಬ ಮತ್ತೊಂದು ದಿನಪತ್ರಿಕೆ ಪ್ರಮುಖವಾದುದು. ಚಲನಚಿತ್ರ ಮಾಸಿಕವಾಗಿ ಆರಂಭಿಸಿದ ಇವರ ‘ಮನೋರಮಾ’ ತುಂಬಾ ಹೆಸರು ಮಾಡಿತು. ತದನಂತರ ‘ಸ್ತ್ರೀ’ ಎಂಬ ಮಾಸಿಕವನ್ನು ಹೊರ ತಂದರು. ಹುಬ್ಬಳ್ಳಿ ಇವರ ಪತ್ರಿಕಾ ರಂಗದ ಕರ್ಮಭೂಮಿಯಾಯಿತು. ಹೀಗೆ ಪಾಪು ಐದಾರು ದಶಕಗಳಿಗೂ ಹೆಚ್ಚು ಕಾಲ ಪತ್ರಿಕೊದ್ಯಮಿಯಾಗಿಯೇ ದುಡಿದರು. ಇನ್ನೂ ಈ 94ರ ಪ್ರಾಯದಲ್ಲಿ ಕಾರ್ಯನಿರತರಾಗಿರುವುದು ಇವರ ದಕ್ಷತೆಗೆ ಹಿಡಿದ ಕನ್ನಡಿಯಾಗಿದೆ.
ಪಾಪು ಎಂದರೆ ಕನ್ನಡಿಗರು ಬರಹಗಾರರೆಂದೆ ಪರಿಭಾವಿಸುವುದು ಹೆಚ್ಚು. ಇಷ್ಟೆ ಅಲ್ಲದೆ ಹಲವಾರು ಬರಹಗಳು ಸಂಕಲನಗಳಾಗಿ ಹೊರಬಂದಿವೆ.

ಸಾಹಿತ್ಯ ಕ್ಷೇತ್ರ ಃ
   ಪಾಪು ಕೇವಲ ಪತ್ರಿಕಾ ರಂಗಕ್ಕೆ ಮಾತ್ರ ಸೀಮಿತಗೊಳ್ಳಲಿಲ್ಲ. ಅವರಲ್ಲೊಬ್ಬ ಉತ್ತಮ ಬರಹಗಾರ, ಮಾತುಗಾರ, ಹೋರಾಟಗಾರ ಹೀಗೆ ಹಲವು ವ್ಯಕ್ತಿತ್ವದ ನೆಲೆ ನೋಡಬಹುದು.
  ಕರ್ನಾಟಕದ ಕಥೆ, ನಮ್ಮ ದೇಶ ನಮ್ಮ ಜನ, ನನ್ನದು ಕನ್ನಡ ನಾಡು, ಪಾಪು ಪ್ರಪಂಚ, ಶಿಲಾ ಬಾಲಿಕೆ ನುಡಿದಳು, ಗವಾಕ್ಷಿ ತೆರೆಯಿತು, ಸಾವಿನ ಮೇಜವಾನಿ, ಕಲಾ ಸಂಗಮ, ನೆಲದ ನಕ್ಷತ್ರಗಳು, ಪ್ರಪಂಚದ ಪುಟಗಳು, ಉಸಿರಾಗಲಿ ಸಮಗ್ರ ಕನ್ನಡ ಮುಂತಾದ ಅಮೂಲ್ಯ ಕೃತಿಗಳನ್ನು ಪಾಪು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅಲ್ಲದೇ ‘ಸೋವಿಯತ್ ದೇಶ ಕಂಡೆ’ ಎಂಬ ಪ್ರವಾಸ ಕಥನವನ್ನು ಬರೆದಿದ್ದಾರೆ.
ರಾಜಕೀಯ ಕ್ಷೇತ್ರ ಃ
    1962ರಿಂದ 1974ರವರೆಗೆ ಎರಡು ಅವಧಿಗೆ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ತನ್ಮೂಲಕ ಜನರ ಆಶೋತ್ತರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದರ ಮೂಲಕ ಸಾಮಾನ್ಯರ ಸೇವೆ ಮಾಡಿದ್ದಾರೆ. ಗ್ರಾಮಿಣ ಸೊಗಡಿನ ನಾಡು -ನುಡಿ ಪ್ರಗತಿಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರು.
ಶಿಕ್ಷಣ ಕ್ಷೇತ್ರ ಃ
     ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ಪಾಪು ಮಾಡದ ಕ್ಷೇತ್ರವಿಲ್ಲ ಎನ್ನುವಂತೆ ಪತ್ರಿಕಾರಂಗ, ರಾಜಕೀಯ, ಸಾಹಿತ್ಯ, ಸಂಘಟನೆ ಮುಂತಾದವುಗಳಲ್ಲಿ ಗಣನೀಯ ಸೇವೆ ಮಾಡಿದಂತೆ ಶಿಕ್ಷಣ ಕ್ಷೇತ್ರದಲ್ಲಿಯೂ ಛಾಪು ಮೂಡಿಸಿದ್ದಾರೆ.
    ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಧಾರವಾಡ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗಾಗಿ ಚಿಂತನೆ ನಡೆಸಿ ಹಲವಾರು ವಿಷಯಗಳನ್ನು ಸಾಕಾರಗೊಳಿಸಿದ್ದಾರೆ. ಕರ್ನಾಟಕ ವಿಧ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಹಲವಾರು ಜನಾನುರಾಗಿ ಕಾರ್ಯ ಮಾಡಿದ್ದಾರೆ. ಧಾರವಾಡದಲ್ಲಿ ದೊಡ್ಡ ರಂಗ ಮಂದಿರ ನಿರ್ಮಿಸಿದ ಕೀರ್ತಿ ಪಾಪುರವರಿಗೆ ಸಲ್ಲುತ್ತದೆ.
     ಅಂದಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆ ಅಧಿಕಾರದ ಸಂದರ್ಭದಲ್ಲಿ ‘ಕನ್ನಡ ಕಾವಲು ಸಮಿತಿ’ ರಚಿಸಿದಾಗ ಪಾಪು ಅದರ ಮೊದಲ ಅಧ್ಯಕ್ಷರಾದರು. ನಂತರ ದಿನಗಳಲ್ಲಿ ರಾಜ್ಯಾದ್ಯಾಂತ ಪ್ರವಾಸ ಮಾಡಿ ಬೃಹತ್ ಕರ್ನಾಟಕದ ಉಳಿವಿಗೆ ಶ್ರಮಿಸಿದರು. ಆಗ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ ಎಂಬ ಕೂಗು ಬಂದಾಗ ‘ಕನ್ನಡ ನಾಡಿನ ವಿಭಜನೆಯಾಗುವುದಾದರೆ ಅದು ನನ್ನ ಶವದ ಮೇಲೆ ಆಗಲಿ’ ಎಂಬ ಖಡಕ್ ಹೇಳಿಕೆ ನೀಡಿ ಕನ್ನಡದ ಬಗ್ಗೆ ಜಾಗೃತೆ ಮೂಡಿಸಿ ಹೋರಾಟ ನಡೆಸಿದರು.
     ಧರ್ಮಾತೀತ, ಜಾತ್ಯಾತೀತ ನೆಲೆಗಟ್ಟಿನಲ್ಲಿ ಬದುಕಿ ಬಾಳಿದ ಪಾಪುರವರ ನಾಡು-ನುಡಿಯ ಕುರಿತಾದ ಅವಿಸ್ಮರಣೀಯ ಕೊಡುಗೆಗಳನ್ನು ಪರಿಗಣಿಸಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಜನತೆ 2003ರಲ್ಲಿ ಬೆಳಗಾವಿಯಲ್ಲಿ ನಡೆದ 70ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.
    ಪಾಪುರವರ ಅಧ್ಯಕ್ಷತೆಯಲ್ಲಿ ಸಮ್ಮೇಳನವು ಅರ್ಥಪೂರ್ಣವಾಗಿ ಮೂಡಿಬಂದಿತ್ತು. ಇವರ ವಿದ್ವತ್ತನ್ನು, ನಾಡು-ನುಡಿಯ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇದಲ್ಲದೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿ, ಪ್ರತಿಷ್ಠಿತ ನಾಡೋಜ ಪ್ರಶಸ್ತಿ, ಟಿ.ಎಸ್ಸಾರ್ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಮುಂತಾದ ಹಲವಾರು ಮೌಲ್ಯಭರಿತ ಪ್ರಶಸ್ತಿ - ಪುರಸ್ಕಾರಗಳು ಸಂದಿವೆ. ಶತಾಯುಷ್ಯದ ಹೊಸ್ತಿಲಲ್ಲಿರುವ ಪಾಪುರವರ ಅಮೂಲ್ಯ ಸೇವೆ ಕನ್ನಡ ನಾಡು ನುಡಿಗೆ ಸಲ್ಲುತ್ತಿರುವುದು ಕನ್ನಡಿಗರ ಪುಣ್ಯವೇ ಸರಿ.
ಕೊಟ್ರೆಶ್ ಎಸ್. ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ