ಮಂಗಳವಾರ, ಸೆಪ್ಟೆಂಬರ್ 2, 2014

ಆತ್ಮ ಮತ್ತು ಪರಮಾತ್ಮ ಮನುಷ್ಯ ಜೀವನದ ಮಹಾ ಚೇತನಗಳು-ಕೊಟ್ರೇಶ್ ಎಸ್.ಉಪ್ಪಾರ್

ಹಾಸನಃ ಆತ್ಮ ಮತ್ತು ಪರಮಾತ್ಮ ಮನುಷ್ಯ ಜೀವನದ ಮಹಾ ಚೇತನಗಳು. ಆತ್ಮ ಎಂದರೆ ಭೌತಿಕವಾದ ನಾನು, ಪರಮಾತ್ಮ ಎಂದರೆ ಅಗೋಚರ ಶಕ್ತಿಯ ಆಧ್ಯಾತ್ಮಿಕತೆಯ ಅನಿಕೇತನ, ಸುಪ್ತ ಚೇತನವಾಗಿದೆ ಎಂದು ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್ ಹೇಳಿದರು.
ಅವರು ಹಾಸನದ ಬಸವ ಕೇಂದ್ರದ ವತಿಯಿಂದ ನಡೆದ ಮನೆ ಮನೆ ಬಸವ ಜ್ಯೋತಿ ಕಾರ್ಯಕ್ರಮದ ನಿಮಿತ್ತ ಹಾಸನದ ಜಯನಗರ ಬಡಾವಣೆಯ ವಕೀಲರಾದ ಜಗದೀಶ್ ಅವರ ಸಮೃದ್ಧ ನಿವಾಸದಲ್ಲಿ ನಡೆದ ಚಿಂತನ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯದಲ್ಲಿ ಪರಿಪೂರ್ಣ ಜೀವನ ಎಂಬ ವಿಷಯದಡಿ ಉಪನ್ಯಾಸ ನೀಡಿದರು.
ಮನುಷ್ಯ ಜಾಗತಿಕ ತೊಳಲಾಟಗಳಾಚೆಗಿರುವ ಮಾನವೀಯ ನೆಲೆಯ ಸಂಬಂಧದಲ್ಲಿ ಲೀನವಾಗಿ ಆತ್ಮನೇ ಪರಮಾತ್ಮ, ಪರಮಾತ್ಮನೇ ಆತ್ಮನೆಂದರಿತು ವ್ಯಕ್ತಿತ್ತ್ವ ನಿರ್ಮಾಣದ ಆಗಿವಿಕೆಯಲ್ಲಿ ನಿರಂತರತೆಯನ್ನು ಕಂಡುಕೊಳ್ಳುತ್ತಾ ಹೋದಂತೆಲ್ಲಾ ಸೂಕ್ಷ್ಮಗೊಳ್ಳುತ್ತಾ ಸಾಗುತ್ತಾನೆ, ಪ್ರಖರತೆ ಬೀರುತ್ತಾ ಹೋಗುತ್ತಾನೆ. ಬುದ್ಧ, ಬಸವ, ಮಹಾವೀರ, ಕ್ರಿಸ್ತ, ಪರಮಹಂಸರು, ವಿವೇಕಾಂದರು ಮುಂತಾದ ಮಹಾನೀಯರು ಇದೇ ದಾರಿಯಲ್ಲಿ ಸಾಗಿ ಜಗಕ್ಕೆ ಬೆಳಕಾದರು.
ಅನುಭಾವಿಗಳಾದ ಶರಣರು ನೀಡಿದ ವಚನ ಸಾಹಿತ್ಯವು ಜಾಗತಿಕ ಅನುಭಾವ ಸಾಹಿತ್ಯದಲ್ಲಿ ಆಧ್ಯಾತ್ಮಿಕ ಸಾಧನೆ-ಸಿದ್ಧಿಯ ಮಹೋನ್ನತಿಯನ್ನು ಮನಮೆಚ್ಚುವಂತೆ ತೆರೆದು ತೋರುವ ಶ್ರೇಷ್ಠ ಸಾಹಿತ್ಯರಾಶಿ. ಇದು ಉಜ್ವಲ ಆಧ್ಯಾತ್ಮ ಪ್ರತಿಭೆಯ ಉತ್ತುಂಗ ಶಿಖರದಿಂದ ಇಳಿದು ಬಂದ ಆತ್ಮ ಸಾಕ್ಷತ್ಕಾರದ ಅಮೃತವಾಹಿನಿ. ಮತ್ತೆ ಮತ್ತೆ ಮೊಗೆದು ಸವಿದರೂ ಮುಗಿಸಲಾಗದ ಅನುಭಾವದ ರಸದುಣಿಸಿದ ಸವಿಪಾಕ ಎಂದರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿದ್ದ ಚಿತ್ರದುರ್ಗಾ ಮರುಘಾ ಶರಣರು ಮಾತನಾಡಿ ಸಂಸಾರ ಸಾಕಾಗಿದೆ ಸಾವು ಬೇಕಾಗಿದೆ ಎಂದು ಹಲವರು ಅಂದುಕೊಳ್ಳುತ್ತಾರೆ ಆದರೆ ಸಾಯುವುದೇ ಮಕ್ತಿಯಲ್ಲ, ಬದುಕುವುದೇ ನಿಜವಾದ ಮುಕ್ತಿ. ಕಬ್ಬಿನ ಆಳದಲ್ಲಿರುವ ರಸವನ್ನು ಸವಿಯಲಾರದೆ ಮೇಲಿರುವ ತೋಂಟೆಯನ್ನು ಸವಿದಂತೆ ಬದುಕಿನ ಅರ್ಥ ತಿಳಿದುಕೊಂಡಿದ್ದಾರೆ. ಜೀವ,ಭಾವ ಎರಡು ಸೇರಿದಾಗ ಶಿವನಾಗುತ್ತಾನೆ. ಇದ್ದಾಗ ಶಿವನಾಗದವನು ಸತ್ತಾಗ ಆಗಲಾರ. ಮಾನವನಿಗೆ ಜೀವನವನ್ನು ಬಿಟ್ಟು ಮುಕ್ತಿಯಿಲ್ಲ. ನಾವು ಇದ್ದಾಗಲೇ ಪರಿಪೂರ್ಣತೆಯನ್ನು ಸಾಧಿಸಬೇಕು. ಬದುಕು ಕೆಡುಕು ಕೊಳಕಾಗದೇ ಬೆಳಕಾಗಿಸಬೇಕು, ಚುಳುಕಾಗಿಸಬೇಕು. ನಮ್ಮಲ್ಲಿ ಒಳ್ಳೆಯ ಆಲೋಚನೆ ಇದ್ದರೆ ಒಳ್ಳೆಯ ವರ್ತನೆ ಬರುತ್ತದೆ.
ನಮ್ಮಲ್ಲಿನ ಪ್ರಾಮಾಣಿಕತೆಯು ನಮ್ಮನ್ನು ಪರಿಪೂರ್ಣತೆಯೆಡೆಗೆ ಕೊಂಡೊಯ್ಯುತ್ತದೆ. ನಾವು ಸದಾ ಪ್ರಾಮಾಣಿಕತೆಯ ದೃಷ್ಠಿಕೋನದಿಂದ, ಕಾಯಕದಿಂದ ಪರಿಪೂರ್ಣತೆಯೆಡೆಗೆ ಸಾಗಬೇಕು ಎಂದರು.
 ಬಸವ ಕೇಂದ್ರದ ಅಧ್ಯಕ್ಷರಾದ ಬಸವರಾಜ್ ಮಾತನಾಡಿ ಶರಣರ ಜಾತ್ಯಾತೀತ ಚಿಂತನಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಪುಣ್ಯದ ಕಾಯಕವನ್ನು ನಮ್ಮ ಬಸವ ಕೇಂದ್ರ ಮಾಡಿತ್ತಿದೆ. ಅನೇಕ ವಿಚಾರವಂತರಿಂದ, ಸಾಹಿತಿಗಳಿಂದ ಶರಣರ ಬದುಕಿನ ರಸವತ್ತಾದ ಮಾನವೀಯ ನೆಲೆಗಳನ್ನು ತಿಂಗಳುದ್ದಕ್ಕೂ ಆಸ್ವಾದಿಸಿದ್ದೇವೆ. ಅಷ್ಟಕ್ಕೆ ಸೀಮಿತವಾಗದೇ ನಮ್ಮ ಬದುಕಿನಲ್ಲಿ ಅಕ್ಷರಶಃ ಅಳವಡಿಸಿಕೊಂಡಲ್ಲಿ ಜೀವನ ಪಾವನವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಜ.ಹೊ.ನಾ, ಚಂದ್ರಕಾಂತ ಪಡೆಸೂರ, ಜಯದೇವಪ್ಪ, ಟಿ.ಪಿ.ನಾಗರಾಜ ಮುಂತಾದ ನೂರೈವತ್ತಕ್ಕೂ ಹೆಚ್ಚಿನ ವಚನ ಸಾಹಿತ್ಯಾಸಕ್ತರು ಹಾಜರಿದ್ದರು.
ಬಸವ ಕೇಂದ್ರದ ಕಾರ್ಯದರ್ಶಿಗಳಾದ ಸೋಮಶೇಖರ್ ಅವರು ಸ್ವಾಗತಿಸಿದರು, ಚೇತನ್ ಗುರೂಜಿ ನಿರೂಪಿಸಿದರು, ಶ್ರೀಮತಿ ರತ್ನ ಸೋಮಶೇಖರ್ ಪ್ರಾರ್ತಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ