ಭಾನುವಾರ, ಜೂನ್ 29, 2014

ದಯವೇ -ಧರ್ಮವನ್ನಾಗಿಸಿದ, ಆತ್ಮವೇ-ವಿಶ್ವಾಸವನ್ನಾಗಿಸಿದ ಬಸವಣ್ಣನವರು

ದಯವೇ -ಧರ್ಮವನ್ನಾಗಿಸಿದ, ಆತ್ಮವೇ-ವಿಶ್ವಾಸವನ್ನಾಗಿಸಿದ ಬಸವಣ್ಣನವರು ಆಡಿಕೊಂಡಿಹರೆಂದು ಅಂಜಲದೇಕಯ್ಯಾ ನಾಸ್ತಿಕವಾಡಿಹರೆಂದು ನಾಚಲದೇಕಯ್ಯಾ ಆರಾದಡಾಗಲೀ ಶ್ರೀ ಮಹಾದೇವಂಗೆ ಶರಣೆನ್ನಿ ಏನೂ ಅರಿಯೆನೆಂದು ಮೌನಗೊಂಡಿರಬೇಡ ಲಿಂಗದೇವನ ಮುಂದೆ ದಂದಣವೆನ್ನಿ, ದತ್ತಣವೆನ್ನಿ . . . . ನಾವು ಯಾವುದಾದರೂ ಕಾರ್ಯ ಮಾಡಲು ತೊಡಗಿದರೆ ಹಿಂದೇಟು ಹಾಕಬಾರದು ಏಕೆಂದರೆ ಹಿಂಜರಿಕೆ ಎಂಬುದು ಮನುಷ್ಯನ ಒಂದು ದೌರ್ಬಲ್ಯ. ದೌರ್ಬಲ್ಯಗಳನ್ನು ನಾವು ಮೆಟ್ಟಿ ನಿಲ್ಲಬೇಕು. ಇಲ್ಲವಾದರೆ ಅತಿಯಾದ ಹಿಂಜರಿಕೆಯು ವ್ಯಕ್ತಿಯ ವ್ಯಕ್ತಿತ್ವವನ್ನೇ ಹಾಳು ಮಾಡುತ್ತದೆ. ಜ್ಞಾನಿಗಳಾದರೂ, ಪ್ರತಿಭಾವಂತರಾದರೂ ಅವರಲ್ಲಿ ಅಳುಕುತನ, ಹಿಂಜರಿಕೆ ಇದ್ದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಇಂತಹ ಸೂಕ್ಷ್ಮ ವಿಷಯ ಇಡೀ ಜೀವನದ ಮುನ್ನಡೆಗೆ ತಡೆಯೊಡ್ಡುವುದು. ಆದ್ದರಿಂದ ಪ್ರತಿಭೆಯ ಜೊತೆಗೆ ಮಾನಸಿಕ ಸ್ಥಿರತೆ ಬಹಳ ಮುಖ್ಯ. ಇನ್ನೊಬ್ಬರ ಸೇವೆ, ಸಮಾಜಪರ ಕಾರ್ಯಗಳನ್ನು ಮಾಡುವಾಗ ಸ್ಥಿರತೆ ಬೇಕೇ ಬೇಕು. ಮನುಷ್ಯನ ಏಳಿಗೆಗೆ ದಕ್ಕೆ ಯಾಗುವ ಹಲವಾರು ವಿಷಯಗಳ ಬಗ್ಗೆ ಬಸವಣ್ಣನವರು ತಮ್ಮ ವಚನಗಳಲ್ಲಿ ಬೆಳಕನ್ನು ಚೆಲ್ಲುವುದರ ಮೂಲಕ ಜನ ಜಾಗೃತಿ ಮೂಡಿಸಿದ್ದಾರೆ. ನಡೆಯ ಕಲಿಸಿದ ಬಸವ, ನುಡಿಯ ಕಲಿಸಿದ ಬಸವ ಎಂದು ಹರಿಹರ ಕವಿ ಬಸವಣ್ಣನನ್ನು ಹಾಡಿ ಹೊಗಳಿದ್ದಾರೆ. ಬಸವಣ್ಣನವರು ನಡೆ, ನುಡಿ, ಆಚಾರ, ವಿಚಾರ ಎಲ್ಲವನ್ನೂ ಕಲಿಸಿಕೊಟ್ಟರು. ಅವರಲ್ಲೊಬ್ಬ ಶ್ರೇಷ್ಠ ಮನಶಾಸ್ತ್ರಜ್ಞನಿದ್ದ. ಅವರಲ್ಲೊಬ್ಬ ಶ್ರೇಷ್ಠ ಚಿಂತ್ಸಕನಿದ್ದ. ಏಕೆಂದರೆ ಅವರು ಮನುಷ್ಯನ ಮನಸ್ಸಿನ ದೌರ್ಬಲ್ಯಗಳನ್ನು ಬಹಳ ಬೇಗನೇ ಗುರುತಿಸಿ ಅವುಗಳಿಗೆ ಸೂಕ್ತವಾದ ಪರಿಹಾರವನ್ನು ಕೊಡುವುದರ ಮೂಲಕ ಮನಸಿನ ದುಗುಡಗಳನ್ನು ದೂರ ಮಾಡುತ್ತಿದ್ದರು. ಅನ್ಯರ ಮನಸ್ಸಿನ ಅತೀ ಸೂಕ್ಷ್ಮ ರೀತಿಯ ಗುಣಗಳನ್ನು, ಹೊಯ್ದಾಟಗಳನ್ನು ಗುರುತಿಸಿ ಅಂತಹ ಮನವನ್ನು ಘನ ಮನವನ್ನಾಗಿ ಮಾಡಿ ವ್ಯಕ್ತಿಯಿಂದ ಉನ್ನತವಾದ ಪ್ರತಿಭೆ ಹೊರಹೊಮ್ಮುವಂತೆ ಮಾಡಿ ಹೊಸ ಬೆಳಕನ್ನು ನೀಡುತ್ತಿದ್ದರು. ಅಯ್ಯಾ ನಿಮ್ಮ ವಂಶಾವಳಿಯೊಳು ಒಬ್ಬ ತೊತ್ತಿನ ಮಗ ಹುಟ್ಟಿದ ಆತನ ತೊತ್ತಿನ ಮಗ ನಾನಯ್ಯಾ ಬಳಿದೊತ್ತು, ಬಳಗದೊತ್ತು, ವಂಶದೊತ್ತು ನಾನಯ್ಯಾ ನಿಮ್ಮ ಒಡೆತನಕ್ಕೆ ಕೇಡಿಲ್ಲವಯ್ಯ ಎನ್ನ ತೊತ್ತು ತನಕ್ಕೆ ಕೇಡಿಲ್ಲವಯ್ಯಾ . ಬಸವಣ್ಣನವರು ಈ ವಚನದಲ್ಲಿ ನಿನ್ನ ವಂಶದಲ್ಲೇ ಹುಟ್ಟಿನ ಆಳಿನ ಮಗ ನಾನು ಎಂದು ಪರಮಾತ್ಮನಿಗೆ ಹೇಳುತ್ತ, ಅತ್ಯಂತ ಕಿಂಕಿರತೆಯಿಂದ ಒಂದು ಮಹತ್ವದ ಸಂದೇಶವನ್ನು ಈ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಈ ವಚನದಲ್ಲಿ ಧನ್ಯ, ಶರಣಾಗತಿಯ ಭಾವ, ನೊಂದ ಮನಕ್ಕೆ ಹೃದಯತುಂಬಿ ಚೇತರಿಕೆ ನೀಡುವ ಜೊತೆಗೆ ನನ್ನ ಯಜಮಾನ ನೀನೇ ಆಗಿರಲು ನನಗಿನ್ನೇನು ಕೊರತೆ ? ಆಳಿನ ಕೆಲಸ ನಾನು ನಿಷ್ಠೆಯಿಂದ ಮಾಡ್ತಾ ಹೋಗ್ತೀನಿ, ನನಗೆ ಅದ್ಹೇಗೆ ಕೆಡಕಾಗಲಿಕ್ಕೆ ಸಾಧ್ಯ ಎಂಬ ಆತ್ಮವಿಶ್ವಾಸ ತುಂಬುವ ಕಳಕಳಿಯಿದೆ. ಕೇವಲ ತಂದೆ, ತಾಯಿ, ಬಂಧು ಮಿತ್ರರು ಇಲ್ಲದಿದ್ದವರು ಮಾತ್ರ ಅನಾಥರಲ್ಲ. ದೇವರ ಕಾರುಣ್ಯವನ್ನು ಪಡೆಯದಿದ್ದವರು ಕೂಡ ನಿಜಕ್ಕೂ ಅನಾಥರು. ಶರಣರ ಸಂಗವನ್ನು ಪಡೆಯದಿದ್ದವರು, ಆತ್ಮೀಯರ ಪ್ರೀತಿ, ವಿಶ್ವಾಸಾಧಾರಗಳನ್ನು ಉಳಿಸಿಕೊಳ್ಳದಿದ್ದವರೂ ಕೂಡ ಒಂದು ರೀತಿಯಲ್ಲಿ ಅನಾಥರ ಸಾಲಿನಲ್ಲಿಯೇ ನಿಲ್ಲುತ್ತಾರೆ. ಪರಮಾತ್ಮ ಎಲ್ಲರನ್ನು ಒಂದು ರೀತಿಯ ಅನಾಥಪ್ರಜ್ಞೆ ಕಾಡುವಂತೆಯೆ ಲೀಲೆಯಾಡಿಸುತ್ತಾನೆ. ದುಡ್ಡಿಲ್ಲದ ಅನಾಥರು ಒಂದು ಕಡೆಯಾದರೆ, ದುಡ್ಡಿದ್ದು ಅನುಭವಿಸಲಾಗದಿರುವ ಅನಾಥರು ಮತ್ತೊಂದೆಡೆ ! ಕರುಣೆ, ಪ್ರೇಮ, ವಾತ್ಸಲ್ಯದ ಮಹಾಪೂರವೇ ಹರಿಯುತ್ತಿದ್ದರೂ ಅದನ್ನು ಸ್ವೀಕರಿಸಲಾರದ ಅನಾಥರು. ಮತ್ತವುಗಳನ್ನು ಕೊಡಲಾಗದ ಅನಾಥರು ಹೀಗೆ ಒಂದೇ, ಎರಡೇ ಎಲ್ಲವೂ ಅನಾಥಮಯ., ಮಾಯಮಯ. ಭ್ರಾಂತಿಯ ತೆಕ್ಕೆಯಲ್ಲಿ ಸಿಲುಕಿಕೊಂಡು ಬಿಡಿಸಿಕೊಳ್ಳಲಾಗದ ಅಜ್ಞಾನಿಗಳೆಲ್ಲಾ ಅನಾಥರೇ ! ಎಲ್ಲಿಯವರೆಗೆ ಮಾಯೆಯ ಮುಸುಕಿನಿಂದ ಹೊರಬರಲಾಗುವುದಿಲ್ಲವೋ ಅಲ್ಲಿಯವರೆಗೆ ಪರಮಾತ್ಮನ ಇರುವಿಕೆಯ ಅರಿವು ಜೀವಾತ್ಮರಿಗಾಗುವುದಿಲ್ಲ. ಕೆಲವರಿಗೆ ಎಲ್ಲವೂ ಗೊತ್ತು, ಏನು ಮಾಡಬೇಕೆಂದೂ ಗೊತ್ತು, ಆದರೂ ಏನನ್ನು ಮಾಡಲಾಗುವುದಿಲ್ಲ. ಕೆಲವರಿಗೆ ಬಹುಶ: ಕಾಲ ಪಕ್ವವಾಗಿಲ್ಲವೇನೋ? ಅಥವಾ ಇಚ್ಛಾ ಶಕ್ತಿಯ ಕೊರೆತೆಯೇನೋ ಎಂಬ ಭಾವನೆ ಮೂಡುವುದು ಸಹಜ. ದಯವಿಲ್ಲದ ಧರ್ಮವು ಯಾವುದಯ್ಯಾ ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲಿ ದಯವೇ ಧರ್ಮದ ಮೂಲವಯ್ಯಾ ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯಾ. ಬಸವಣ್ಣನವರ ಮಹಾಮನೆಯಲ್ಲಿ ನಿತ್ಯ ಪಠಿಸುವ ಈ ವಚನ ಕಲ್ಯಾಣದ ಶರಣರ ಮನೆಯಲ್ಲೆಲ್ಲಾ ಅನುಕರಣಿಸುತ್ತದೆ. ಕಾಯ, ವಾಚ, ಮನಸಾ ಎಂದೂ ಯಾರನ್ನೂ ನೋಯಿಸಿದವರಲ್ಲ. ಹಿಂಸೆಗೊಳಗಾದವರ ಬಳಿ ತಾವೇ ಧಾವಿಸಿ, ಅವರ ಕಂಬನಿಗಳನ್ನು ತೊಡೆದು, ನೋವಿಗೆ ಸಾಂತ್ವಾನದ, ಪ್ರೀತಿಯ ಔಷಧಲೇಪನ ಮಾಡುತ್ತಾರೆ. ಬಸವಣ್ಣನವರಿಗೆ ಮನುಜರ ಸೇವೆಯಲ್ಲಿಯೇ ಮಹಾದೇವನ ಸೇವೆಯನ್ನು ಕಂಡುಂಡಷ್ಟು ತೃಪ್ತಿ. ಮನುಜರಷ್ಟೇ ಅಲ್ಲ, ಸಕಲ ಜೀವಾತ್ಮಗಳ ನೋವನ್ನು ಕಂಡು ಮರುಗುತ್ತಾರೆ. ತಾವು ಒರ್ವ ಸಾಮ್ರಾಜ್ಯವೊಂದರ ಸಚಿವರೆಂದು ಮರೆತು, ತಾವೊಂದು ಚಳುವಳಿಯ ನಾಯಕ ಎಂಬುದನ್ನು ಬದಿಗಿರಿಸಿ ಆ ನೊಂದ ಜೀವಿಗಳ ಸೇವೆಯನ್ನು ಕೇವಲ ಶರಣ ಮನಸ್ಕ ಸಾಮಾನ್ಯ ಮನುಷ್ಯರಾಗಿ ಮಡುವ ಮಾನವೀಯ ಸಾರ್ವಕಾಲಿಕವಾಗಿ ಉಳಿಯಬಲ್ಲ ವಿಶ್ವಮಾನವರಾಗಿದ್ದಾರೆ. ಜಾತಿ ಕಂತೆಗಳಿಂದ ಹೊರಬಂದು ಜಗವನ್ನು ಶ್ರೇಷ್ಟ ಕಾಯಕದಿಂದ ತಮ್ಮತ್ತ ಸೆಳೆದವರು. ಜನಮಾನಸದಲ್ಲಿ ಉಳಿದವರು ಸತ್ಯವಂತರ, ನೀತಿವಂತರ ಹೃದಯಂಗಮದಲ್ಲಿ ನೆಲೆನಿಂತವರು. ಅವರ ವಚನಗಳಲ್ಲಿ ಸ್ತುತಿಸಿದ ಆತ್ಮ-ವಿಶ್ವಾಸ, ಧಯೆಗಳು ಪ್ರತಿಯೊಬ್ಬರೂ ಅನುಸರಿಸಲೇ ಬೇಕಾದ ವ್ಯಕ್ತ್ತಿತ್ವ ರತ್ನಗಳಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು. ಕೊಟ್ರೇಶ್ ಎಸ್. ಉಪ್ಪಾರ್, ಆಲೂರು ??-9739878197

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ