ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲುದು, ಇದು ಹಳೆಯ ಮಾತಾಯಿತು. ಪ್ರಸ್ತುತ ಮಹಿಳೆಯು ಸರ್ವಾಂಗೀಣ ಕ್ಷೇತ್ರದಲ್ಲಿ ಐತಿಹಾಸಿಕ ಕುರುಹುಗಳನ್ನು ಒಡಮೂಡಿಸುತ್ತಿದ್ದಾಳೆ. ‘ಧೈರ್ಯಂ ಸರ್ವತ್ರ ಸಾಧನಂ” ಎಂಬಂತೆ ತನ್ನ ಸುತ್ತ ಹೆಣೆದಿದ್ದ ಮೌಢ್ಯದ ಜಾಲವನ್ನು ಕಿತ್ತೆಸೆದು ಸಾಧನೆಯ ಅದೆಷ್ಟೋ ಮೈಲುಗಲ್ಲುಗಳನ್ನು ಧಾಟಿ ಯಶಸ್ವೀ ಬಾಳುವೆ ಸಾಗಿಸುತ್ತಿದ್ದಾಳೆ. ಬೆರಳೆಣಿಕೆಯಷ್ಟಿದ್ದ ಇಂಥ ಸಾಧಕಿಯರ ಸಂಖ್ಯೆ ಸಹಸ್ರಾರು ದಾಟಿದೆ.
ಇಂತಹ ಸಾಲಿನಲ್ಲಿ ಆಲೂರಿನ ಎಚ್. ವೇದಾವತಿಯೂ ಒಬ್ಬರೆಂದರೆ ಅತಿಶಯೋಕ್ತಿಯಾಗಲಾರದು. ಸಂಗೀತ, ರಂಗಭೂಮಿ, ಸಾಹಿತ್ಯ, ಹೀಗೆ ಹಲವಾರು ಪ್ರವೃತ್ತಿಗಳನ್ನು ಮೈಗೂಡಿಸಿಕೊಂಡು ಸಾಧನಾ ಶಿಖರವೇರಿ ಪ್ರವೃತ್ತಿಯಲ್ಲಿ ಆಲೂರು ತಾಲ್ಲೂಕಿನ ಮರಸು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆದರ್ಶ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆಲೂರು ತಾಲ್ಲೂಕಿನ ಹಂತನಮನೆ ಗ್ರಾಮದ ಶ್ರೀ ಹನುಮಯ್ಯ ಹಾಗೂ ಶ್ರೀಮತಿ ರಂಗಮ್ಮನವರ ಪುಣ್ಯ ಗರ್ಭಾಂಬುಧಿಯಲ್ಲಿ ಆರು ಜನ ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದರು. ಮೂವರು ಸಹೋದರರು, ಇಬ್ಬರು ಸಹೋದರಿಯರನ್ನು ಹೊಂದಿದ ಇವರು ಚಿಕ್ಕ ವಯಸ್ಸಿನಿಂದಲೇ ಬಹುಮುಖ ಪ್ರತಿಭೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ರಸಗ್ರಹಣ ಕಾರ್ಯಕ್ರಮ, ಜಾನಪದ ಗೀತಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ತನ್ನಂತೆಯೇ ಶಾಲಾ ಮಕ್ಕಳಿಗೂ ಸಂಗೀತ ಕಲಿಸಿ ಹಾಡುಗಾರಿಕೆಯಲ್ಲಿ ಜಿಲ್ಲೆ ಹಾಗೂ ರಾಜ್ಯಮಟ್ಟಗಳಲ್ಲಿ ಸ್ಪರ್ಧಿಸುವಂತೆ ಮಾಡಿದ ಕೀರ್ತಿ ಇವರದು. ಅಷ್ಟೇ ಅಲ್ಲದೆ ವಚನಗಾಯನ, ತತ್ವಪದಗಳು, ಜೋಗುಳ ಹಾಡುಗಳು, ಹಲವಾರು ಪ್ರಕಾರದ ಹಾಡುಗಳನ್ನು ಇವರ ಸುಮಧುರ ಕಂಠ ಹಾಡಿದೆ. ಈ ಟಿವಿ ಹಾಗೂ ಉದಯ ದೂರದರ್ಶನ ಚಾನೆಲ್ಗಳಲ್ಲಿಯೂ ಹಾಡುಗಾರಿಕೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.
ರಂಗಗೀತೆಗಳನ್ನು ಹಾಡುವುದರ ಜೊತೆಗೆ ಹಲವಾರು ರಂಗಪ್ರಯೋಗಗಳಿಗೆ ತನ್ನ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಭಾರತೀಯ ರಂಗಭೂಮಿ ವಿನಾಶದ ಅಂಚಿಗೆ ಸರಿಯುತ್ತಿದೆ ಎನ್ನುವ ಘಳಿಗೆಯಲ್ಲಿ ಅದರ ಉದ್ಧಾರಕ್ಕೆ ಟೊಂಕ ಕಟ್ಟಿ ನಿಂತ ಪ್ರತಿಭಾನ್ವಿತ ಕಲಾವಿದೆ ವೇದಾವತಿಯವರು. ಇವರ ಅನೇಕ ಪಾತ್ರಗಳನ್ನು ನಾನು ನೋಡಿದ್ದೇನೆ. ಅದರಲ್ಲಿಯೂ ಕುಂತಿ, ಚಾಮುಂಡಿ, ದೇವಿ, ಗಾಂಧಾರಿ, ಕಯಾದು, ಮುಂತಾದ ಪಾತ್ರಗಳಲ್ಲಿ ಇವರ ಕಲಾತ್ಮಕ ಅಭಿನಯ ಅಪೂರ್ವವಾದುದು.
ವೇದಾವತಿಯವರು ಸಂಗೀತ, ಕಲೆ, ರಂಗಭೂಮಿಗಷ್ಟೇ ಸೀಮಿತವಾಗದೇ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅನೇಕ ಕವಿತೆಗಳನ್ನು ರಚಿಸಿದ ಇವರು ಸ್ಥಳೀಯ ಹಾಗೂ ತಾಲ್ಲೂಕು ಸಮ್ಮೇಳನಗಳ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದ್ದಾರೆ.
ಸ್ಥಳೀಯ ವ್ಯಕ್ತಿತ್ವ ವಿಕಸನ ಸಂಸ್ಥೆಯಾದ ಚೇತನ ಬಳಗದಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಚಿಣ್ಣರ ಬೇಸಿಗೆ ಶಿಬಿರ, ವೈದ್ಯಕೀಯ ಶಿಬಿರಗಳು ಹೀಗೆ ಹಲವಾರು ಕಾರ್ಯಕ್ರಮಗಳ ಯಶಸ್ಸಿಗೆ ದುಡಿಯುತ್ತಾ ಸಮಾಜಸೇವಾ ಕ್ಷೇತ್ರದಲ್ಲಿಯೂ ಸಾಧನೆಯ ಮೈಲುಗಲ್ಲನ್ನು ನೆಟ್ಟಿದ್ದಾರೆ. ಇವರ ಈ ಎಲ್ಲಾ ಸಾಧನೆಗೆ ಪತಿ ಶಿವಣ್ಣನವರ ಪ್ರೋತ್ಸಾಹ, ಪ್ರೇರಣೆಯೇ ಕಾರಣ. ಇವರ ಈ ಎಲ್ಲಾ ಸಾಧನೆಗೆ ‘ಕರ್ನಾಟಕ ಧೃವತಾರೆ’, ರಾಜ್ಯ ಪ್ರಶಸ್ತಿ, ಉತ್ತಮ ಗಾಯಕಿ ಪ್ರಶಸ್ತಿ, ಹಾಸನ ಜಿಲ್ಲಾ ಶಿಕ್ಷಕ ರತ್ನ ಪ್ರಶಸ್ತಿ, ಮುಂತಾದ ಪ್ರಶಸ್ತಿಗಳು ಸಂದಿವೆ. ಶಿಕ್ಷಣ ಕ್ಷೇತ್ರದಲ್ಲೊಂದು ಇಂತಹ ಬಹುಮುಖ ಪ್ರತಿಭೆಯಿರುವುದು ನಮ್ಮೆ ನಿಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಇವರ ಪ್ರತಿಭೆ ಇನ್ನಷ್ಟು ಅರಳಿ ಜಗದ ಸೊಬಗನ್ನು ಹೆಚ್ಚಿಸಲಿ ಎಂದು ಆಶಿಸುತ್ತೇನೆ.
ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ, ಹಾಸನ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ