ಯಾವುದೇ ಒಂದು ಪಕ್ಷಕ್ಕೆ ಮತದಾರ ತನ್ನ ಮತ ಹಾಕುವುದು ಅವನ ಸ್ವ
ವಿವೇಚನೆಗೆ ಬಿಟ್ಟ ವಿಚಾರ. ನಮ್ಮದು ಪ್ರಜಾಪ್ರಭುತ್ವ ಹೊಂದಿದ ದೇಶ. ಇಲ್ಲಿ ಪ್ರತಿಯೊಬ್ಬರಿಗೂ ಸ್ವತಂತ್ರ್ಯತೆ ಇದೆ. ಆದರೆ ಕೆಲವು ರಾಜಕಾರಣಿಗಳ ಎಲುಬಿಲ್ಲದ ನಾಲಿಗೆಗಳಿಂದ ಬೇಕಾಬಿಟ್ಟಿಯಾಗಿ ಭಯೋತ್ಪಾದಕರನ್ನು ಮೀರಿಸುವಂತಹ, ಕೋಮುಗಲಭೆಗೆ ಕಿಚ್ಚೆಬ್ಬಿಸುವ ಬೇಜವಾಬ್ದಾರಿ ಹೇಳಿಕೆಗಳು ಹೊರಬೀಳುತ್ತಲೇ ಇವೆ. ಆದರೆ ಇದಕ್ಕೆ ನಿಯಂತ್ರಣ ಎಂಬ ಪಾಶ ಬೀಳುವುದು ಯಾವಾಗ?
ರಾಜಕಾರಣಿಗಳ ಮೆದುಳು-ಮನಸಲ್ಲಿ ದೇಶಭಕ್ತಿ, ಭಾವೈಕ್ಯತೆ, ನೆಲೆಯೂರುವ ಬದಲು ಗೂಂಡಾಗಳಂತೆ ದೇಶದ್ರೋಹ, ಕೋಮುಗಲಭೆ, ಎಬ್ಬಿಸುವಂತಹ ಹಾಗೆಯೇ ಕತ್ತರಿಸಿ ಹಾಕುತ್ತೇನೆ. ಇಂಥವರು ಪ್ರಧಾನಿಯಾದರೆ ದೇಶಬಿಟ್ಟು ಹೋಗುತ್ತೇನೆ. ಎಂಬ ಕ್ರೂರ ಹೇಳಿಕೆಗಳು ಜನಸಾಮಾನ್ಯರ ನೆಮ್ಮದಿಗಳನ್ನು ಕೆಡಿಸುತ್ತಿವೆ.
ನಿಜಕ್ಕೂ ಹೇಳಬೇಕೆಂದರೆ ರಾಜಕಾರಣಿಗಳೇ ಭಾರತಕ್ಕಿಂದು ನಿಜವಾದ ಭಯೋತ್ಪಾದಕರಾಗಿದ್ದಾರೆ ಎಂದರೆ ತಪ್ಪಾಗಲಾರದೇನೋ, ಇಂತಹ ಅವಘಡಗಳಿಗೆ ಯಾವುದೇ ಪಕ್ಷ ಹೊರತಾಗಿಲ್ಲ! ನಿನ್ನೆ ಕೇಂದ್ರ ಸಚಿವ ಫಾರುಕ್ ಅಬ್ದುಲ್ಲಾ ‘ಮೋದಿಗೆ ಮತ ಹಾಕುವವರನ್ನು ಸಮುದ್ರಕ್ಕೆ ಎಸೆಯಬೇಕು’ ಎಂಬ ಜನಾಂಗೀಯ ಕಲಹ ಎಬ್ಬಿಸುವಂತಹ ಕ್ರೌರ್ಯ ಮಾತುಗಳನ್ನಾಡಿ ದೇಶದಾದ್ಯಂತ ಕೋಮುಗಲಭೆಗೆ ಪ್ರೇರೇಪಿಸಿದ್ದಾರೆ.
ಇಂಥವರಿಗೆ ಓಟು ಹಾಕಿ, ಇಂಥವರಿಗೆ ಬೇಡ ಅನ್ನಲಿಕ್ಕೆ ಇವರ್ಯಾರು? ಸಮುದ್ರಕ್ಕೆ ಎಸೆಯಲು ಇವನ್ಯಾರು? ಅದು ಪ್ರತಿ ಮತದಾರನ ವೈಯಕ್ತಿಕ ವಿವೇಚನೆ. ಇತ್ತ ವಿಶ್ವ ಹಿಂದೂ ಪರಿಷತ್ತಿನ ನಾಯಕ ಪ್ರವೀಣ್ ತೊಗಾಡಿಯ ನೀಡಿದ ಹೇಳಿಕೆಯೊಂದನ್ನು ಗಮನಿಸೋಣ ‘ಮೋದಿಗೆ ಮತ ಹಾಕದವರನ್ನು ಪಾಕಿಸ್ಥಾನಕ್ಕೆ ಅಟಿ’್ಟ ಇಡೀ ಭಾರತ ತೊಗಾಡಿಯ ಅಥವಾ ಫಾರುಖ್ ಅಬ್ದುಲ್ಲನಂಥವರ ಸ್ವಂತ ಸ್ವತ್ತೇ? ಬಾಬಾ ರಾಮ್ದೇವ್ ನೀಡಿದಂತಹ ದಲಿತ ವಿರೀದ ಹೇಳಿಕೆ ಈಗಾಗಲೇ ರಾಷ್ಟ್ರದಾದ್ಯಂತ ಚರ್ಚೆಯಾಗಿತಿದೆ. ಈ ಮೂರ್ಖರಿಗೆ ವಿಶಾಲ ಮನೋಭಾವವೇಕೆ ಮೂಡುತ್ತಿಲ್ಲ ನಿಜವಾಗಿಯೂ ಜನಸಾಮಾನ್ಯರ ನೆಮ್ಮದಿ ಕದಡಿ, ಕತ್ತಿ, ಚಾಕು, ಬಂದೂಕುಗಳನ್ನು ಕೊಟ್ಟು ರಕ್ತಹರಿಸಿ ತಾವು ಗದ್ದುಗೆಯಲಿ ಕೇಕೆ ಹಾಕುತ್ತಿರಬೇಕು ಎನ್ನುವ ನರಿಗುಣದ ರಾಜಕಾರಣಿಗಳೇ ಇಂದು ದೇಶಕ್ಕೆ ನಿಜವಾದ ಶತೃಗಳು.
ನಿಂತ ನೀರಿನಲ್ಲಿ ಕಲ್ಲನೆಸೆದು ಸೇಡಿನ ಅಲೆಗಳನೆಬ್ಬಿಸಿ ಆಟವಾಡುವ ಇಂಥಹ ಕೆಲ ರಾಜಕಾರಣಿಗಳಿಗೆ ಬುದ್ಧಿ ಕಲಿಸುವರ್ಯಾರು? ನಮ್ಮ ಸಂವಿಧಾನದಲ್ಲಿ ಇಂಥವರಿಗೆ ಶಿಕ್ಷೆಯಿಲ್ಲವೇ? ಜನಸಾಮಾನ್ಯರ ಸಣ್ಣ ಪುಟ್ಟ ತಪ್ಪುಗಳಿಗೂ ದೊಡ್ಡ ದೊಡ್ಡ ಶಿಕ್ಷೆ ನೀಡುವ ನ್ಯಾಯಾಂಗ ಇಂತಹ ದೇಶದ್ರೋಹಿ ಹೇಳಿಕೆ ನೀಡುವವರಿಗೆ ಯಾಕೆ ಕ್ರಮ ಕೈಗೊಳ್ಳಲಾಗುತ್ತಿಲ್ಲ? ಇದು ವಿಪರ್ಯಾಸವೇ ಸರಿ.
ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನನಿರಲಿ ಅಥವಾ ಪಾರ್ಸಿಯಿರಲಿ ಅವನು ಭಾರತದಲ್ಲಿ ವಾಸ ಮಾಡುತ್ತಿದ್ದನೆಂದರೆ. ಇಲ್ಲಿನ ಪ್ರಜಾಪ್ರಭುತ್ವ ಪಡೆದವನಾಗಿದ್ದರೆ ಅವನನ್ನೇಕೆ ಯಾವುದೇ ಒಂದು ಧರ್ಮ- ಜಾತಿಗೆ ಹೋಲಿಸುವುದು? ಅದರ ಬದಲಿಗೆ ಅವನೊಬ್ಬ ಭಾರತೀಯನೆಂದರಿತು, ಅವನಿಗೂ ತನ್ನದೇಯಾದ ಸ್ವತಂತ್ರ್ಯವಿದೆ ಎಂದು ಈ ಅವಿವೇಕಿಗಳಿಗೇಕೆ ಅರ್ಥವಾಗುತ್ತಿಲ್ಲ ತಿಳಿಯದು.
ರಾಷ್ಟ್ರೀಯ ಪಕ್ಷಗಳಿರಲಿ ಅಥವಾ ಸ್ಥಳೀಯ ಪಕ್ಷಗಳಿರಲಿ ಇನ್ನೊಬ್ಬರನ್ನು ಟೀಕಿಸುವ, ತೆಗಳುವುದರಲ್ಲೇ ಕಾಲಕಳೆಯುತ್ತಿವೆ. ತಾವು ಏನು ಮಾಡುತ್ತೇವೆ ಎನ್ನುವುದನ್ನು ಹೇಳುವ ಬದಲು ವಿರೋಧ ಪಕ್ಷದವರು ಏನು ಮಾಡಿದ್ದಾರೆ. ಅವರ ಹಗರಣಗಳ ಬಗೆಗೆ ಕೆದಕುವುದು, ಅವರು ಅಧಿಕಾರಕ್ಕೆ ಬಂದಾಗ ಇವರ ಹಗರಣಗಳ ಬಗೆಗೆ ಕೆದಕುವುದು. ಇವೇ ಇವರ ನಿತ್ಯದ ಕೆಲಸಗಳಾಗಿ ಹೋಗಿವೆ. ಆ ಧರ್ಮವನ್ನು ಬೈಯುವುದು, ಈ ಜಾತಿಯನ್ನು ಬೈಯುವುದು ಇದನ್ನೇ ದೊಡ್ಡ ಸುದ್ದಿಯಾಗಿಸಿ ಸದಾ ಸುದ್ದಿ ವಾಹಿನಿಗಳಲ್ಲಿ ಹರಿದಾಡ ಬಯಸುತ್ತಾರೆ. ನೂರು ಜನ ಭಯೋತ್ಪಾದಕರಿಗಿಂತ ಒಬ್ಬ ಕೋಮುವಾದಿ ರಾಜಕಾರಣಿ ದೇಶಕ್ಕೆ ಕಂಟಕವಾಗುತ್ತಾನೆ. ಅಂತೆಯೇ ದೇಶದಾದ್ಯಂತ ಅನೇಕ ರಾಜಕಾರಣಿಗಳು ತಮ್ಮ ನಾಲಿಗೆಗಳನ್ನು ಹದ್ದು ಬಸ್ತಿನಲ್ಲಿಟ್ಟುಕೊಳ್ಳದೇ ಬೇಕಾಬಿಟ್ಟಿ ಹರಿಯಬಿಟ್ಟು ಛೀ...ಥೂ... ಎಂದು ನಿತ್ಯ ಉಗುಳಿಸಿಕೊಳ್ಳತ್ತಿದ್ದಾರೆ. ಇದೊಂದು ವಿಪರ್ಯಾಸವೆನಿಸುತ್ತಿದೆ. ಇದಕ್ಕೆ ಇಡೀ ಸಮುದಾಯ ಎಚ್ಚೆತ್ತುಕೊಳ್ಳಬೇಕಾಗಿದೆ. ಪ್ರತಿಯೊಬ್ಬ ಪ್ರಜೆಯೂ ಚಿಂತಿಸಿ ಮುನ್ನಡೆಯಬೇಕಿದೆ.
ಕೊಟ್ರೇಶ್ ಎಸ್.ಉಪ್ಪಾರ್
ಹಾಸನ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ