ಸೋಮವಾರ, ಜೂನ್ 30, 2014

ನಾಡು ನುಡಿಯ ದಿಟ್ಟ ಹೋರಾಟಗಾರ ಕೈಯ್ಯಾರ ಕಿಞ್ಞಣ್ಣ ರೈ

ಶತಾಯುಷಿ ಕೈಯ್ಯಾರ ಕಿಞ್ಞಣ್ಣ ರೈ ರವರ ಜನುಮದಿನ ಜೂನ್-8

     ಕನ್ನಡ ನಾಡಿನ ನೆಲ, ಜಲ, ಭಾಷೆಗಾಗಿ ಇಡೀ ಬದುಕನ್ನು ಮುಡಿಪಾಗಿಟ್ಟ ಕನ್ನಡ ಸಾಹಿತ್ಯದ ಮೇರು ಕವಿ ಕೈಯ್ಯಾರ ಕಿಞ್ಞಣ್ಣ ರೈ. ಬಹುಭಾಷಾ ವಿಧ್ವಾಂಸರು, ಸಾಹಿತಿಯೂ ಆದ ರೈರವರು ಸ್ವಾತಂತ್ರ್ಯ ಹೋರಾಟಗಾರರೂ, ಕರ್ನಾಟಕ ಏಕೀಕರಣ ಚಳವಳಿಯ ಮುಂಚೂಣಿ ಪ್ರಮುಖ ನಾಯಕರೂ ಹೌದು.
ಕಾಸರಗೋಡಿನ ಭಾಗದಲ್ಲಿ ಕನ್ನಡದ ಹಣತೆಯನ್ನು ನಿರಂತರವಾಗಿ ಪ್ರಜ್ವಲಿಸಲು ಕಾರಣೀಭೂತರಾದವರು. ಕನ್ನಡ ನುಡಿಯನ್ನೆ ಉಸಿರಾಗಿಸಿಕೊಂಡು ಬದುಕುತ್ತಿರುವ ಕಾಯಕ ಯೋಗಿ ಕೈಯ್ಯಾರರು ಎಂದರೆ ಅತಿಶಯೋಕ್ತಿಯಾಗಲಾರದು.
ಇವರು ಕೇರಳ ರಾಜ್ಯದ ಕಾಸರಗೋಡು ತಾಲ್ಲೂಕಿನ ‘ಪೆರಡಾಲ’ ಗ್ರಾಮದಲ್ಲಿ 1915 ಜೂನ್ 08 ರಂದು ಶ್ರೀ ದುಗ್ಗಪ್ಪ ರೈ ಹಾಗೂ ಶ್ರೀಮಂತ ದೈಯಕ್ಕೆ ದಂಪತಿಗಳ ಮಗನಾಗಿ ಜನಿಸಿದರು.
ಮುಂದೆ ಕೈಯ್ಯಾರರು ಉಞ್ಞಕ್ಕ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿ ತುಂಬು ಕುಟುಂಬದ ಬದುಕಿನ ಸವಿಯುಂಡರು. ಆರು ಜನ ಗಂಡು ಮಕ್ಕಳು ಇಬ್ಬರು ಪುತ್ರಿಯರನ್ನು ಹೊಂದಿದ ಇವರು ಬದಿಯಡ್ಕ ಪೆರಡಾಲದ ಕವಿತಾ ಕುಟೀರದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಕೈಯ್ಯಾರರದು ತುಳು ಮಾತೃಭಾಷಾ ಕುಟುಂಬವಾದರೂ ‘ಕನ್ನಡ’ದ  ಕಸ್ತೂರಿಯನ್ನು ಅಪ್ಪಿಕೊಂಡಿಯೇ ಬೆಳೆದವರು. ಕನ್ನಡ ಮಾತೃಭಾಷಿಕರು ಕೊಡಲಾಗದ ಅಮೂಲ್ಯ ಕೊಡುಗೆಯನ್ನು ಕೈಯ್ಯಾರರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿ ಸಿರಿವಂತಗೊಳಿಸಿದ್ದಾರೆ. ಅದರಲ್ಲಿಯೂ ಗಡಿನಾಡ ಭಾಗದಲ್ಲಿ ಭಾಷೆಯ ಉಳಿವು-ಬೆಳವಣಿಗೆಗೆ ಸತತ ಹೋರಾಟ ಮಾಡುತ್ತ ಗಟ್ಟಿತನ ತಂದುಕೊಡುವಲ್ಲಿ ಅವಿರತವಾಗಿ ಹಿಂದಿನಿಂದಲೂ ದುಡಿಯುತ್ತಾ ಬಂದಿದ್ದಾರೆ.
ಕೈಯ್ಯಾರರು ಸಂಸ್ಕøತ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ವಿದ್ವಾನ್ ಪದವಿ ಪಡೆದರು. ಬಿ.ಎ. ಪದವಿ ನಂತರ ಶಿಕ್ಷಕ ತರಬೇತಿ ಪಡೆದು ರೈರವರು ತದನಂತರ ಸ್ನಾತಕೊತ್ತರ ಪದವಿ ಪಡೆದು ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಹರಿಜನ ಸೇವಕ ಸಂಘಟನೆಯಲ್ಲಿ ಹಗಲಿರುಳು ದುಡಿದು ಜನಾಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಹುಟ್ಟು ಸ್ವಾತಂತ್ರ್ಯ ಹೋರಾಟಗಾರರಾದ ಕೈಯ್ಯಾರರು ಸದಾ ಸಾಮಾಜಿಕ ಕಳಕಳಿಯ ಚಳವಳಿಗಳಲ್ಲಿ ಪಾಲ್ಗೊಂಡು ಸಮುದಾಯದ ಉನ್ನತಿಗಾಗಿ ದುಡಿಯುತ್ತಾ ಬಂದಿದ್ದಾರೆ.
ಸ್ಥಳೀಯ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೈಯ್ಯಾರರು ಜನರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ, ದೀನ-ದಲಿತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಸಾಕಾರಗೊಳಿಸಿದ್ದಾರೆ. ಕೇರಳ ರಾಜ್ಯದ ಸಂಗೀತ ಅಕಾಡೇಮಿಯ ಸದಸ್ಯರೂ ಆಗಿದ್ದ ರೈರವರು ಸಾಹಿತ್ಯವಷ್ಟೇ ಅಲ್ಲದೇ ಸಂಗೀತ ಕ್ಷೇತ್ರದ ಬೆಳವಣಿಗೆಗೂ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಕೈಯ್ಯಾರÀರು ಕಾಸರಗೋಡು ತಾಲ್ಲೂಕನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಲು ಅತಿರಥ ಹೋರಾಟ ಮಾಡುತ್ತಾ ಬಂದಿದ್ದಾರೆ. ಅವರ ತಾಯ್ನುಡಿ ತುಳುವಾದರೂ ‘ಕನ್ನಡ’ ಅವರ ಉಸಿರು.
ಕನ್ನಡ ಸಾಹಿತ್ಯದ ಮಡಿಲಿಗೆ ‘ಶ್ರೀಮುಖ’, ‘ಐಕ್ಯಗಾನ’, ‘ಪುನರ್ನವ’, ‘ಚೇತನ’, ‘ಕೊರಗ’, ‘ಶತಮಾನದ ಗಾನ’, ‘ಗಂಧವತಿ’, ‘ಪ್ರತಿಭಾ ಪಯಸ್ವಿನಿ’ ಮುಂತಾದ ಅಮೂಲ್ಯ ಕವನ ಸಂಕಲನಗಳನ್ನು ನೀಡಿದ್ದಾರೆ. ಅಲ್ಲದೇ ಒಂದು ತುಳು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಪರಿವು ಕುಟ್ಟಾಜಿ, ರಟ್ಟೆ ಕಣ್ಣ್‍ಡ್, ಸಾರೋ ಎಸೆಳ್ದ ತಾಮರೆ, ಲೆಪ್ಪುನ್ಯೇರ್?, ಬತ್ತನೋ ಈ ಬರ್ಪನೋ ಮುಂತಾದವು ರೈರವರ ಪ್ರಮುಖ ತುಳು ಕವಿತೆಗಳು.
ಕಾರ್ನಾಡ ಸದಾಶಿವರಾವ, ರತ್ನರಾಜಿ, ಎ.ಬಿ.ಶೆಟ್ಟಿ ಮೊದಲಾದವರ ಜೀವನ ಚರಿತ್ರೆಗಳನ್ನು, ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ.
ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ ಅವರ ಕುರಿತಾಗಿ ಮೂರು ಕೃತಿಗಳನ್ನು ಹೊರತಂದಿದ್ದಾರೆ. ಪಂಚಮಿ ಮತ್ತು ಆಶಾನ್ ಇವು ಇವರ ಅನುವಾದಿತ ಖಂಡ ಕಾವ್ಯ ಕೃತಿಗಳಾಗಿವೆ. ‘ಸಾಹಿತ್ಯ ಧೃಷ್ಟಿ’ ಎನ್ನುವ ಇವರ ಲೇಖನ ಸಂಗ್ರಹ ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ‘ಪದ್ಯಮಂಜರಿ’ ಇವರ ಮಕ್ಕಳ ಕವನ ಸಂಕಲನವಾಗಿದೆ. ‘ಭಾರತ ಭಾರತಿ’ ಪುಸ್ತಕ ಸಂಪದ ಮಾಲೆಯಲ್ಲಿ ಎಳೆಯರಿಗಾಗಿ ‘ಪರಶುರಾಮ’ ಎಂಬ ಕಥಾ ಪ್ರಸಂಗವನ್ನು ಮನಮುಟ್ಟುವಂತೆ ಬರೆದುಕೊಟ್ಟಿದ್ದಾರೆ. 
ಮಕ್ಕಳ ಸಾಹಿತ್ಯಕ್ಕೆ ಕೈಯ್ಯಾರರ ಕೊಡುಗೆ ಅಪಾರ. ವಿದ್ಯಾರ್ಥಿಗಳಿಗಾಗಿ ನವೋದಯ, ವಾಚನಮಾಲೆ, ಶಿರ್ಷೀಕೆಯಡಿಯಲ್ಲಿ ಎಂಟು ಪಠ್ಯಪುಸ್ತಕಗಳನ್ನು ರಚಿಸಿದ್ದಾರೆ. ಅಲ್ಲದೆ ವ್ಯಾಕರಣ ಮತ್ತು ಪ್ರಭಂದ ಶೀರ್ಷೀಕೆಯಡಿಯಲ್ಲಿ ನಾಲ್ಕು ಕೃತಿಗಳನ್ನು ಹೊರತಂದಿದ್ದಾರೆ. ಕೈಯ್ಯಾರರು ಕಾವ್ಯ, ವ್ಯಕ್ತಿ ಚಿತ್ರಣ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯಕ್ಕಷ್ಟೇ ಸೀಮಿತವಾಗದೇ ನಾಟಕ ಕ್ಷೇತ್ರದಲ್ಲಿಯೂ ವಿಸ್ತರಿಸಿಕೊಂಡು ‘ವಿರಾಗಿಣಿ’ ಎಂಬ ನಾಟಕ ಬರೆದಿದ್ದಾರೆ. ಅಲ್ಲದೇ ‘ದುಡಿತವೆ ನನ್ನ ದೇವರು’ ಎನ್ನುವ ಆತ್ಮಕಥನವನ್ನು ಬರೆದಿದ್ದಾರೆ.
ಇವರು ಕನ್ನಡ ಸಾಹಿತ್ಯ, ಜಾಗೃತಿ ಕುರಿತಾಗಿ ಇದುವರೆಗೂ ಸುಮಾರು ಐದು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ವಿವಿಧ ಪತ್ರಿಕೆಗಳಿಗೆ ಬರೆದಿದ್ದಾರೆ. ಸಾಹಿತಿಯಾಗಿ ಎಷ್ಟು ಪರಿಚಿತರೋ ಕೈಯ್ಯಾರರು ಪತ್ರಿಕಾ ಮಾಧ್ಯಮದಲ್ಲೂ ಅಷ್ಟೇ ಪ್ರಸಿದ್ಧರು. ರೈರವರು ಪ್ರಭಾತ, ರಾಷ್ಟ್ರಬಂಧು, ಸ್ವದೇಶಾಭಿಮಾನಿ ಎನ್ನುವ ಕನ್ನಡ ದಿನ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕೈಯ್ಯಾರರು ಸಾಹಿತಿಯಾಗಿ, ಪತ್ರಿಕಾ ಸಂಪಾದಕರಾಗಿ, ಕನ್ನಡ ನಾಡು, ನುಡಿಗಾಗಿ ಬೆಟ್ಟದಷ್ಟು ಕೊಡುಗೆ ನೀಡಿದ್ದಾರೆ. ಇವರ ಕನ್ನಡ ಕೈಂಕರ್ಯಕ್ಕಾಗಿ ಹಲವಾರು ಗೌರವ ಪ್ರಶಸ್ತಿಗಳು ರೈ ಅವರನ್ನು ್ಧಲಂಕೃತಗೊಂಡಿವೆ.
 1969 ರಲ್ಲಿ ಶ್ರೇಷ್ಠ ಅಧ್ಯಾಪಕ ರಾಷ್ಟ್ರ ಪ್ರಶಸ್ತಿ, 1969 ರಲ್ಲಿ ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, 1985 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2006 ರಲ್ಲಿ ಹಂಪಿ ವಿವಿಯಿಂದ ನಾಡೋಜ ಪ್ರಶಸ್ತಿ, ಕರ್ನಾಟಕ ಸರ್ಕಾರದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ, 2013 ರಲ್ಲಿ ಪಂಪ ಪ್ರಶಸ್ತಿ ಸಂದಿವೆ.
ಕೈಯ್ಯಾರರಿಗೆ 2005 ರಲ್ಲಿ ಮಂಗಳೂರು ವಿ.ವಿ.ಯು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ರೈರವರು 1997 ರಲ್ಲಿ ಮಂಗಳೂರಿನಲ್ಲಿ ನಡೆದ 66ನೆಯ  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು. ಕನ್ನಡ ತುಳು ಸಾಂಸ್ಕøತಿಕ ಬದುಕಿನ ಭಾವೈಕ್ಯತೆಯ ಪ್ರತಿಬಿಂಬವಾದ ಕೈಯ್ಯಾರರಿಗೆ 2014 ಜೂನ್ 8ಕ್ಕೆ ನೂರು ವರ್ಷ ತುಂಬಿತು. ಈ ಶತಾಯುಷಿ ಸಾಹಿತಿಯು ಇನ್ನೂ ನಮ್ಮೆಲ್ಲರಿಗೂ ಆದರ್ಶಮಯವಾಗಿರುವುದೇ ನಮ್ಮೇಲ್ಲರ ಭಾಗ್ಯ.

ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9739878197

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ