ಮಂಗಳವಾರ, ಸೆಪ್ಟೆಂಬರ್ 23, 2014

ಆಚಾರ-ವಿಚಾರಗಳ ಮಂಥನವೇ ‘ವಚನ ಸಾನಿಕಾ’- ಸುಶೀಲಾ ಸೋಮಶೇಖರ್


ವಿಶ್ವಮಟ್ಟದಲ್ಲಿ ಕನ್ನಡ ಸಾಹಿತ್ಯದ ಘನತೆಯನ್ನು ಹೆಚ್ಚಿಸಿದ ಕೀರ್ತಿ ವಚನ ಸಾಹಿತ್ಯದ ವೈಶಿಷ್ಟ್ಯವೆ ಸರಿ. ವಚನ ಎಂದರೆ ಕೇವಲ ಮಾತಲ್ಲ. ಮಾತನ್ನು ಮೀರಿನಿಂತ ಅನುಭಾವಿಕ ಸಂಪತ್ತು. ತಾವು ಸಾಹಿತಿಗಳೆಂಬ ಕಿಂಚಿತ್ ಅರಿವೂ ಇಲ್ಲದ ಅನುಭವಗಳನ್ನು ಅನುಭಾವಿಕ ನೆಲೆಯಲ್ಲಿ ನಿಂತು ಬರೆದ ಅಂತರಾಳದ ಅದ್ಭುತ ಚಿಂತನ ಮಂಥನಗಳು. ಎಂದೆಂದಿಗೂ ಬತ್ತದ ಸೆಲೆಗಳು. ಈ ವಚನಗಳ ಸ್ವರೂಪವನ್ನೆ ಅನುಕರಿಸಿ ಬಂದ ಆಧುನಿಕ ವಚನಗನ್ನು ನಾವಿಂದು ಕಾಣುತ್ತೇವೆ. 12ನೇ ಶತಮಾನದ ವಚನಗಳು ಅಂದಿನ ಸಾಮಾಜಿಕ ಹುಳುಕುಗಳನ್ನು ಎತ್ತಿ ತೋರುತ್ತವೆ. ಅಂತೆಯೆ ಆ ಸಮಸ್ಯೆಗಳಿಗೆ ಪರಿಹಾರವನ್ನು ವಚನಕಾರರು ತಾವು ಬಾಳಿದ ರೀತಿಯಿಂದ ತೋರಿಸಿಕೊಟ್ಟಿದ್ದಾರೆ. ಆಧುನಿಕ ವಚನಗಳು ಕೂಡ ಪ್ರಸ್ತುತದಲ್ಲಿರುವ ಸಾಮಾಜಿಕ ವಿವೆಚನೆಯನ್ನು ಒಳಗೊಂಡಿವೆ.
ನಮ್ಮ ಹಾಸನ ಜಿಲ್ಲೆಯಲ್ಲಿ ಎಸ್.ವಿ. ರಂಗಣ್ಣನವರಿಂದ ಆರಂಭಗೊಂಡಿರುವ ಆಧುನಿಕ ವಚನ ಕ್ಷೇತ್ರಕ್ಕೆ ಹತ್ತು ಹಲವು ಮಂದಿ ತಮ್ಮದೇ ಆದ ಕಾಣಿಕೆ ನೀಡುತ್ತಾ ಬಂದಿದ್ದಾರೆ. ಅವರಲ್ಲಿ ಕೊಟ್ರೆಶ್ ಎಸ್.ಉಪ್ಪಾರ್ ಅವರು ಪ್ರಮುಖರು. ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಸಾಹಿತಿಯಾಗಿರುವ ಕೊಟ್ರೆಶ್ ಎಸ್.ಉಪ್ಪಾರ್ ಅವರು ನಮ್ಮ ಹಾಸನ ಜಿಲ್ಲೆಯ ಕವಿ ಬಳಗಕ್ಕೊಂದು ಸ್ಪೂರ್ತಿ. ಸಹನೆ, ವಿನಯ, ನಮ್ರತೆ, ಹಿರಿಯರ ಬಗ್ಗೆ ಗೌರವಾದರದ ಗುಣ ಹೊಂದಿರುವ ಕೊಟ್ರೆಶ್ ಎಸ್.ಉಪ್ಪಾರ್ ಅವರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕಾವ್ಯ, ವೈಚಾರಿಕತೆ, ಶೈಕ್ಷಣಿಕ, ವಿಜ್ಞಾನ, ವ್ಯಕ್ತಿ ಚಿತ್ರಣ, ಕಥೆಗಳು ಹೀಗೆ ಹಲವು ವಿಷಯಗಳನ್ನೊಳಗೊಂಡ 24 ಕೃತಿಗಳನ್ನು ಸಾಹಿತ್ಯ ಶ್ರೀದೇವಿಯ ಮಡಿಲಿಗಿಟ್ಟಿದ್ದಾರೆ. ಉಳಿದಂತೆ 10 ಕೃತಿಗಳು ಮುದ್ರಣದ ಹಂತದಲ್ಲಿದ್ದರೆ ಇದೀಗ ವಚನ ಸಾನಿಕ, ಮತ್ತು ವಚ ಮಾಣಿಕ್ಯ ಬಿಡುಗಡೆಯ ಹಂತದಲ್ಲಿವೆ. ಈ ಎರಡು ಕೃತಿಗಳನ್ನು ನನ್ನ ಕೈಗಿಟ್ಟಾಗ ವಚನ ಸಾನಿಕಾದ ಪುಟಗಳನ್ನು ತೆರೆದು ನೋಡಿದೆ. ಸುಂದರ ಮುಖಪುಟವುಳ್ಳ ಈ ಕೃತಿ ನೂರಾ ಒಂದು ಆಧುನಿಕ ವಚನ ಗುಚ್ಚವೆ ಸರಿ. “ಶ್ರ್ರೀಗುರು ಕೊಟ್ಟೂರೇಶ” ಎಂಬುದು ಇವರ ವಚನಗಳ ಅಂಕಿತ.
ನೋವಿನಲಿ ಸಾಂತ್ವನ ಕಾಣುವ
ಭಾವ ಉತ್ತಮವಯ್ಯಾ, ನೊಂದ ಹೃದಯದಲ್ಲಿಯೂ
ಕಾವ್ಯ ಹೊರಹೊಮ್ಮುವುದಯ್ಯ,
ನೋವು ನಲಿವುಗಳೆರಡು
ನಮ್ಮ ನಿತ್ಯ ಜೀವನದ
ಕ್ಷಣದ ಚಕ್ರಗಳು ಕಾಣಾ
ಶ್ರೀ ಗುರು ಕೊಟ್ಟೂರೇಶ
ಬೆಂದು ಬೇಂದ್ರೆಯಾದರು ಎನ್ನುತ್ತಾರೆ. ಕಾವ್ಯವೆಂಬುದು ನಲಿವಿನಲ್ಲಿ ಹೊರಹೊಮ್ಮುವಂತೆ ನೋವಿನಿಂದಲೂ ಭಾವ ಉಕ್ಕುತ್ತವೆ. ನೋವು ಅಂತಿಮವಲ್ಲ. ಅಂತೆಯೆ ನಲಿವು ಕೂಡ ಅಂತಿಮವಲ್ಲ. ಇವೆರಡನ್ನು ಒಳಗೊಂಡ ಮತ್ತೊಂದು ಅದೃಶ್ಯ ಕ್ರಿಯೆಯಿದೆಯಲ್ಲ ಅದೇ ನಿಜವಾದ ಬದುಕು. ಆ ಬದುಕಿಗೆ ಅಂತ:ಸಾಕ್ಷಿ ಮುಖ್ಯ. ಹೃದಯಾಂತರಾಳದಿಂದ ಚಿಮ್ಮಿ ಬಂದ ಭಾವಗಳೆಲ್ಲವು ಅಮೂಲ್ಯವೇ. ಈ ಸ್ವಾಂತನವೆಂಬುದು ಎಷ್ಟೋ ಕಷ್ಟಗಳನ್ನು ನೀಗಬಲ್ಲದು. ಏರುವಾಸೆಗಳಿಲ್ಲ ಬೀಳುವಳುಕಿಲ್ಲ. ಎನ್ನುವ ಬಿ.ಎಂ.ಶ್ರೀಯವರ ಮಾತು ಇಲ್ಲಿ ನೆನಪಾಗುತ್ತದೆ. ಸುಖ-ದುಃಖಗಳೆರಡು ನಮ್ಮ ಜೀವನದ ಕ್ಷಣದ ಚಕ್ರಗಳು ಎಂಬ ಕವಿಯ ಈ ಮಾತು ಸಮಚಿತ್ತತೆಯ ಮೌಲ್ಯವನ್ನು ತೋರುತ್ತಿವೆ. ಆದರೂ ಸಾಂತ್ವಾನವೆಂಬುದು ಬರೀ ನಟನೆಯ ಅಂಶವಾಗಬಾರದು.
ಜಾತ್ಯಾತೀತತೆ ಮೊಳಗಬೇಕಯ್ಯಾ
ಧರ್ಮ ಸಹಿಷ್ಣುತೆ ಸೂಸಬೇಕಯ್ಯಾ
ಜಗದಲಿ ಇಂಥ ಗುಣ ಸಂತತಿಯ
ದಿನೆ ದಿನೇ ಹೆಚ್ಚಿಸಾ ಪ್ರಭುವೆ.
ಜಾತಿಯೆಂಬ ಪೆಡಂಭೂತ ಒಂದು ಶಾಪದಂತೆ ಸಮಾಜಕ್ಕಂಟಿದೆ. ಜಾತಿ, ಕುಲ, ಧರ್ಮಗಳ ಕಟ್ಟುಕಟ್ಟಳೆಯನ್ನು ದಾಟಿ ಮನುಷ್ಯ ಮನುಷ್ಯರ ನಡುವೆ ಸಾಮರಸ್ಯ ಪ್ರೀತಿಯ ಬೆಸುಗೆಯಿರಲೆಂಬ ಹಂಬಲ ಕವಿಯದು. ವಿಶ್ವ ಬಾಂಧವ್ಯದ ಕನಸನ್ನು ಕಾಣುತ್ತಿರುವ ಒಳತೋಟಿ ಇಲ್ಲಿದೆ. ಜಾತಿಗಿಂತ ಗುಣ ಮುಖ್ಯವಲ್ಲವೇ. ಮೇಲು ಕೀಳು ಎಂಬ ಜಾತಿಯನೆ ಕೀಳು ಕೀಳು ಎಂದು ಸಿದ್ದಯ್ಯಪುರಾಣಿಕರು ಹೇಳಿದ್ದಾರೆ.
ಅನ್ಯಾಯ ಅನೀತಿಗಳ
ನಿತ್ಯ ರಾಜ್ಯ ಭಾರವಯ್ಯಾ
ಶೋಷಣೆ, ವಂಚನೆಗಳ
ನಿತ್ಯ ಅಟ್ಟಹಾಸವಯ್ಯಾ......

ಅಧರ್ಮದಾಡಳಿತಕ್ಕೆ
ಶಿರಬಾಗಿದೆ ಜನ-ಮನ
ನಾವೆಲ್ಲರು ಪ್ರಜಾಪ್ರಭುತ್ವದ ನೆರಳಿನಲ್ಲಿದ್ದೇವೆ ನಿಜ. ಆದರೆ ಆ ನೆರಳು ಯಾರಿಗೆ ದಕ್ಕುತ್ತಿದೆ. ಅಧಿಕಾರ ಬಲ, ಹಣಬಲ, ಜನಬಲ ರಾಜಕೀಯ ಬಲಕ್ಕೆ ಸಿಲುಕದ ಶ್ರಮಿಕರ ಬದುಕು ಶೋಷಣೆಗೆ ಒಳಗಾಗುತ್ತಿದೆ. ಇಲ್ಲಿ ವಿಡಂಬನೆಯ ಮೊನಚಿದೆ. ಅನ್ಯಾಯ ಅನೀತಿಯ ಕಾರುಬಾರಿನಲ್ಲಿ ಮಾನವೀಯ ಮೌಲ್ಯಗಳು ನಲುಗುತ್ತಿವೆಯೆಂಬ ಕೊರಗಿದೆ.
“ಮೂರ್ತಿ ಪೂಜೆ ಭಜನೆಗಳು
ತಾತ್ಕಾಲಿಕ ಆನಂದದ ಮಾರ್ಗಗಳಯ್ಯಾ”
ಎಂಬಲ್ಲಿ ಬಾಹ್ಯಾಡಂಬರದ ಪೂಜೆ-ಪುನಸ್ಕಾರ, ವ್ರತ, ನೇಮ, ನಿಷ್ಠೆಗಳು ಶಾಶ್ವತ ಆನಂದಕ್ಕೆ ಆತ್ಮಾನ್ವೇಷಣೆ ಬೇಕು. ಅಂತರಂಗದ ಬೆಳಕಿದ್ದಲ್ಲಿ ಮಾನವತೆ ಮೊಳಗುತ್ತದೆ. ಪ್ರೀತಿ, ದಯೆ ಕರುಣೆಗಳು ಪರಸ್ಪರ ಬದುಕನ್ನು ಗೌರವಿಸಬಲ್ಲವು.
ಬಿದ್ದವರ ಎತ್ತುವ
ಬುದ್ದಿ ನೀಡಯ್ಯಾ
ಬಳಲಿದವರ ಬಾಯಿಗೆ ನೀರಾಗಿಸಯ್ಯಾ
ಶೋಷಿತರ ನೋವಿಗೆ ದನಿಯಾಗಿಸಯ್ಯಾ
ಇಡೀ ಜಗತ್ತೆ ಕಷ್ಟದಲ್ಲಿರುವಾಗ ನಾನೊಬ್ಬ ಸುಖದಿಂದಿರಲು ಹೇಗೆ ಸಾಧ್ಯ...? ಇಲ್ಲಿ ತಾನು ಬದುಕುವುದಷ್ಟೆ ಶ್ರೇಷ್ಠವಲ್ಲ. ಕಷ್ಟ ಸುಖಗಳನ್ನು ಅನುಭವಿಸುವುದರಲ್ಲಿ ಮನುಕುಲದ ಸಾರ್ಥಕತೆಯಿದೆ. ಬದುಕಿ ಬದುಕಿಸುವ ಕಲೆಯನ್ನು ಹುರಿದುಂಬಿಸುವ ಈ ವಚನ ಬಹಳ ಮಹತ್ವವಾದುದು. ‘ಬಳಲಿದವರ ಬಾಯಿಗೆ ನೀರಾಗಿಸಯ್ಯಾ’ ಈ ಸಾಲು ಬಹು ಎತ್ತರದ ಆಲೋಚನೆಯುಳ್ಳದ್ದು. ನೀರು ಜೀವಂತಿಕೆಯ ಮೂಲ. ತಂಪು ಬದುಕಿಗೆ ಸಾಕ್ಷಿ. ದೇಹ ಮನಸ್ಸಿನ ಸ್ವಾಸ್ಥ್ಯಕ್ಕೆ ನೀರು ಬೇಕೆ ಬೇಕು. ನೀರಿಲ್ಲದೆ ಜಗವಿಲ್ಲ. ನೀರಡಿಕೆಯನ್ನು ನೀಗಲು ನೀರಿನಿಂದಲೇ ಸಾಧ್ಯ. ಈ ಲೋಕದಲ್ಲಿ ಬದುಕಿರುವವರ ಜೊತೆ ಜೊತೆಯಲಿ ಬಳಲಿದವರು ಇದ್ದಾರೆ. ಜೀವಂತಿಕೆಯಿಂದ ನಳನಳಿಸುತ್ತಿರುವವರು ಬಳಲಿದವರ ಬಾಯಿಗೆ ತಂಪಾಗಬೇಕೆ ವಿನಃ ಬಳಲಿದವರ ಬಾಳನ್ನು ಬೆಂಡಾಗಿಸಬಾರದು. ತಂಪೆರೆಯುವ ಮನೋಭಾವ ಮೂಡುವುದು ಹೃದಯವೈಶಾಲ್ಯವಿದ್ದವರಲ್ಲಿ ಮಾತ್ರ. ಅಂತಹ ಮನೋವೈಶಾಲ್ಯ ಬೆಳೆಯಬೇಕಾದರೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ಬೆಳಕು ಕತ್ತಲನ್ನು ದೂಡಬಹುದು.
ದುಂಭಿ ಪ್ರತಿ ಕುಸುಮದಿಂದ
ಮಕರಂದ ಹೀರುವಂತೆ
ಜ್ಞಾನಿಯಾದವನು ಪ್ರತಿಯೊಬ್ಬನಿಂದಲೂ
ಒಂದೊಂದ ಕಲಿಯುತ್ತಾನೆ
ಈ ವಚನ ಜ್ಞಾನ ಗಳಿಕೆಯ ಮಾರ್ಗವನ್ನು ತಿಳಿಸುತ್ತದೆ. ಕಲಿಕೆಗೆ ಇತಿಮಿತಿಯಿಲ್ಲ. ಈ ಲೋಕವೆ ಅನುಭವದ ಆಗರ. ಎಲ್ಲರಲ್ಲೂ ಗುರುತ್ವವಿರುತ್ತದೆ. ಆ ಗುರುತ್ವದೊಳಗೆ ಜ್ಞಾನವನ್ನು ಬಗೆದು ನೋಡುವ ತಾಳ್ಮೆ ಬೇಕಷ್ಟೆ. ಆಗ ಮಾತ್ರ ಸರ್ವಜ್ಞ ಹೇಳುವಂತೆ ಸರ್ವರೊಳಗೊಂದೊಂದು ನುಡಿ ಕಲಿತು ವಿದ್ಯದ ಪರ್ವತವೆ ಆಗಲು ಸಾಧ್ಯವಾದೀತು.
ಹೀಗೆ ಇವರ ವಚನಗಳಲ್ಲಿ ಕಾವ್ಯದ ಸೊಗಡಿದೆ. ಸಂವಾದಿತ ಸ್ವರೂಪದ ವಚನಗಳನ್ನು ಬಹುಮಟ್ಟಿಗೆ ಕಾಣುತ್ತೇವೆ. ಸರ್ವರ ಒಳಿತಿನ ಜೀವನ ಪರ ಧ್ವನಿಯು ಇಲ್ಲಿದೆ. ಆಚಾರ-ವಿಚಾರಗಳ ಮಂಥನವಿದೆ. ವರ್ತಮಾನದ ವಿವಿಧ ಮುಖಗಳನ್ನು ಇಲ್ಲಿಯ ಆಧುನಿಕ ವಚನಗಳು ದರ್ಶನ ಮಾಡಿಸುತ್ತವೆ. ಸಮಕಾಲೀನ ಜೀವನ ಚಿತ್ರಣವಿದೆ.
ಸಾಂಪ್ರದಾಯಿಕ ವಚನ ಸಾಹಿತ್ಯದಿಂದ ಪ್ರಭಾವಿತರಾಗಿರುವ ಕೊಟ್ರೇಶ್ ಅವರ ಆಧುನಿಕ ವಚನಗಳಲ್ಲಿ ಅಂತರಂಗ ಶುದ್ಧಿಯ ಹಂಬಲಿಕೆಯಿದೆ. ಇವರು ತಮ್ಮ ಅನೇಕ ವಚನಗಳಲ್ಲಿ ರೂಪಕಗಳನ್ನು ಸಮರ್ಥವಾಗಿ ಬಳಸಿದ್ದಾರೆ. ಕಿರಿದರಲ್ಲಿ ಹಿರಿಯರ್ಥ ನೀಡುವ ಇವರ ವಚನ ಸಾನಿಕ ಒಳ್ಳೆಯ ಕೃತಿ. ಪದಬಂಧÀಗಳ ಕಡೆ ಕವಿಮನ ಇನ್ನೂ ಹೆಚ್ಚು ವಾಲಲಿ. ಇವರಿಂದ ಇನ್ನೂ ಹೆಚ್ಚು ಸಾಹಿತ್ಯ ಕೃಷಿ ಸಾಗುತ್ತಿರಲಿ.


ಸುಶೀಲಾ ಸೋಮಶೇಖರ್, ಹಾಸನ
ಮೊ-9448997084



ಶನಿವಾರ, ಸೆಪ್ಟೆಂಬರ್ 20, 2014

ಬಹುಮುಖ ಬರಹಗಾರ್ತಿ ಪಾರ್ವತಿ ಕೃ.ನ.ಮೂರ್ತಿ- ಕೊಟ್ರೇಶ್ ಎಸ್.ಉಪ್ಪಾರ್, ಆಲೂರು


ಹಾಸನ ಪರಿಸರ ಹಸಿರು ಸಿರಿಯೊಂದಿಗೆ ಸಾಂಸ್ಕøತಿಕ ಹಾಗೂ ಸಾಹಿತ್ಯಕ್ಕೆ ಹೆಸರಾದುದು. ಸಾಹಿತ್ಯ ಎಂದಾಕ್ಷಣ ಕಥೆ, ಕವನ, ನಾಟಕ, ಲಲಿತ ಪ್ರಬಂಧ, ಕಾದಂಬರಿ ಮುಂತಾದ ಪ್ರಕಾರಗಳು ಪ್ರಮುಖವೆ£ಸುತ್ತವೆ. ಅದರಲ್ಲೂ ಕಾದಂಬರಿ ಪ್ರಕಾರಕ್ಕೆ ಹಾಸನ ಕೊಡುಗೆ ಅಪಾರವಾದುದು. ಕಥೆ, ಕಾದಂಬರಿ ಅನುವಾದ ಶಿಶು ಸಾಹಿತ್ಯ ಹೀಗೆ ಅನೇಕ ಪ್ರಕಾರದಲ್ಲಿ ಅಸಮಾನ್ಯ ಸಾಧನೆ ಮಾಡುತ್ತಿರುವ ಹಿರಿಯ ಜೀವ ಪಾರ್ವತಿ ಕೃ.ನ.ಮೂರ್ತಿಯವರು ಎಂದರೆ ಅತಿಶಯೋಕ್ತಿ ಯಾಗಲಾರದು.
ಕೆ.ಎನ್.ನಂಜಪ್ಪ ಮತ್ತು ಸಾವಿತ್ರಮ್ಮ ಬ್ರಾಹ್ಮಣ ದಂಪತಿಗಳ ಸುಪುತ್ರಿಯಾಗಿ ತುಮಕೂರಿನಲ್ಲಿ 1934 ಜನವರಿ 20 ರಂದು ಜ£ಸಿದರು. ಇಂಟರ್ ಮೀಡಿಯಟ್ ಉತ್ತೀರ್ಣಗೊಂಡು ರಾಷ್ಟ್ರಭಾಷಾ ವಿಚಾರದಲ್ಲಿ ಪದವಿ ಪಡೆದ ಇವರು ಹಿಂದಿ ಹಾಗೂ ಕನ್ನಡ ಭಾಷೆಗಳಲ್ಲಿ ಪ್ರಬುದ್ದತೆ ಬೆಳೆಸಿಕೊಂಡರು.
ಮುಂದೆ ಹಾಸನದ ಹೆಸರಾಂತ ಪತ್ರಿಕೆಯಾದ ‘ಜನಮಿತ್ರ’ ಸಂಸ್ಥಾಪಕರಾದ ಕೃ.ನ. ಮೂರ್ತಿಯವರೊಂದಿಗೆ ಬಾಳಿನ ದೀವಿಗೆ ಹಂಚಿಕೊಂಡ ಇವರು ಪತಿಯ ಪ್ರೋತ್ಸಾಹದಿಂದ ಸಾಹಿತ್ಯದ ವಿವಿಧ ಮಜಲುಗಳಲ್ಲಿ ಕಾರ್ಯಪ್ರವೃತ್ತವಾಗುತ್ತಾ ಸಾಗಿದರು. ಖ್ಯಾತ ಕಾದಂಬರಿಕಾರ ಸಂ.ಲಿಂ.ಭೈರಪ್ಪನವರ ಮೊದಲ ಕೃತಿ ‘ಬೆಳಕು ಮೂಡಿತು’
ಕೃ.ನ. ಮೂರ್ತಿಯವರ ಪ್ರಕಾಶನ ದಿಂದ ಬೆಳಕು ಕಂಡಿತು.
 ಈ ಸಮಯದಲ್ಲಿ ಮುದ್ರಣ ದೋಷಗಳನ್ನು ಸರಿಪಡಿಸುವ ಹೊಣೆಗಾರಿಕೆ ಪಾರ್ವತಿ ಯವರದು. ಆದ್ದರಿಂದಲೇ ಸಾಹಿತ್ಯ ದಿಗ್ಗಜರ £ಕಟ ಸಂಪರ್ಕ, ಮಾರ್ಗದರ್ಶನ ದೊರೆತದ್ದರಿಂದ ಇವರಲ್ಲಿದ್ದ ಸಾಹಿತ್ಯ ಚಿಗುರೊಡೆದು ಪಕ್ವಗೊಂಡಿತು.. ಪತಿಯ ಸಹಕಾರ, ಪ್ರೋತ್ಸಾಹದಿಂದ ಅವರದೇ ಪ್ರಕಾಶನವಾದ್ದರಿಂದ ಕೃತಿ ಹೊರಬರಲು ಕಷ್ಟವೆ£ಸಲಿಲ್ಲ.
‘ಸೆಳವಿನ ಸುಳಿ’ ‘ಬಿಡುಗಡೆಯ ಬಂಧನ’, ‘ಭಾವನ’ ಮುಂತಾದ ಕಾದಂಬರಿಗಳು, ‘ಮೂವರ ಕಥೆಗಳು-ಕಥಾಸಂಕಲನ’ ‘ಹ್ಯಾಮ್‍ಲೆಟ್’-ಶಿಶು ಸಾಹಿತ್ಯ, ‘ಗೃಹದೇವಿ’-ಅನುವಾದಿತ ಕೃತಿ ಹೀಗೆ ಹಲವಾರು ಕೃತಿಗಳ ಕರ್ತೃ ಪಾರ್ವತಿಯವರು.
ಕೇವಲ ಸಾಹಿತ್ಯಕ್ಕಷ್ಟೇ ಮೀಸಲಾಗಿರದ ಇವರು ಪೂರ್ಣಿಮಾ ಸಾಹಿತ್ಯ ಮಂದಿರ, ಕಲಾವಾರ ಪತ್ರಿಕೆ, ನಗೆಹೊಗೆ, ಹಾಸ್ಯಪತ್ರಿಕೆ, ಜನಮಿತ್ರ ಪ್ರಕಾಶನ ಹೀಗೆ ಸಂಘಟನೆ, ಪತ್ರಿಕಾರಂಗ, ಪ್ರಕಾಶನ, ಸಮಾಜಪರ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದುಡಿದಿದ್ದಾರೆ, ದುಡಿಯುತ್ತಿದ್ದಾರೆ.
ಹಾಸನ ಹಾಗೂ ಬೆಂಗಳೂರು ಆಕಾಶವಾಣಿಯಲ್ಲಿ ಇವರ ಹಲವಾರು ಚಿಂತನ, ನಾಟಕ, ರೂಪಕ, ಲೇಖನ, ಕಥೆಗಳು ಭಿತ್ತರಗೊಂಡು ಜನಮನ್ನಣೆ ಗಳಿಸಿವೆ.
ಇವರಿಗೆ ನಾಗೇಶ್ ಹಾಗೂ ಆನಂದ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಸ್ತ್ರೀಯರಿಗೆ ಸ್ಥಾನಮಾನ ಸಿಗದ ಸಂದರ್ಭದಲ್ಲಿ ಕೆಚ್ಚೆದೆಯಿಂದ ಸಾಧಿಸಿ ತೋರಿಸಿದವರು ಪಾರ್ವತಿಯವರು. ಇವರ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದ ಅನುಪಮ ಸೇವೆಗಾಗಿ ಶ್ರೀ ಶರತ್‍ಚಂದ್ರ ಶತಮಾನೋತ್ಸವ ಸಮಾರಂಭದ ಪ್ರಶಸ್ತಿ, ಸಾಹಿತ್ಯ ಪ್ರಶಸ್ತಿ, ಇನ್ನೂ ಹಲವು ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. 1998ರಲ್ಲಿ ರಾಮನಾಥಪುರದಲ್ಲಿ ನಡೆದ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು ತವರಿನ ಕಾಣಿಕೆ ಎಂದು ಈಗಲೂ ನೆನೆಯುತ್ತಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಇಂದಿಗೂ ಸಹ ಸೃಜನಶೀಲರಾಗಿ ಕಾರ್ಯೋನ್ಮುಖ ರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಾಸನದ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಪಸರಿಸುವಂತೆ ಮಾಡಿದವರಲ್ಲಿ ಪಾರ್ವತಿ ಕೃ.ನ.ಮೂರ್ತಿಯವರ ಪಾತ್ರವೂ ಹಿರಿದು.

 ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ, ಹಾಸನ
ಮೊ-9739878197


ನಾಟಕ ಸಾರ್ವಭೌಮ - ಬೇಲೂರು ಕೃಷ್ಣಮೂರ್ತಿ- ಕೊಟ್ರೇಶ್ ಎಸ್.ಉಪ್ಪಾರ್, ಆಲೂರು


ನಾಟಕವು ಪ್ರಪಂಚದ ಯಾವ ಭಾಗದಲ್ಲಿ, ಯಾವಾಗ ಪ್ರಾರಂಭವಾಯಿತು ಎಂದು ಹೇಳುವುದು ಸಾಧ್ಯವಿಲ್ಲ. ಅನುಕರಣೆ ಮನುಷ್ಯ£ಗೆ ಸಹಜ. ಕಥೆ ಕಟ್ಟುವುದು, ಕಥೆ ಹೇಳುವುದು ಮನುಷ್ಯ£ಗೆ ಪ್ರಿಯವಾದದ್ದು. ಆದುದರಿಂದ ಬಹುಹಿಂದೆಯೇ ಬೇರೆ ಬೇರೆ ಪ್ರದೇಶಗಳಲ್ಲಿ ನಾಟಕ ಕಾಣಿಸಿಕೊಂಡಿರಬೇಕು. ಧಾರ್ಮಿಕ ಆಚರಣೆಗಳಿಗೂ ನಾಟಕಕ್ಕೂ ನಂಟು. ರಾಮಾಯಣವು ರಚಿತವಾದ ಕಾಲದಲ್ಲಿಯೇ ಭಾರತದಲ್ಲಿ ನಾಟಕ ಇದ್ದಿರಬೇಕು. ಪ್ರಾಚೀನ ಗ್ರೀಸ್‍ನಲ್ಲಿ ಡಯೋಸೀಸ್ ಎನ್ನುವ ದೇವತೆಯ ಉತ್ಸವವು ನಾಟಕಕ್ಕೆ ಜನ್ಮ ಕೊಟ್ಟಿತೆನ್ನಬಹುದು. (ಕ್ರಿ.ಪೂ ಐದನೆಯ ಶತಮಾನ). ಕ್ರಿ.ಶ. ಆರನೆಯ ಶತಮಾನದ ಹೊತ್ತಿಗೆ ಹಾಡು – ಕುಣಿತಗಳೊಂದಿಗೆ ಕಥೆಯ ಅಂಶವೂ ಸೇರಿ ನಾಟಕದ ರೂಪ ಬಂದಿತೆಂದು ಹಿರಿಯ ಸಂಶೋಧಕರಾದ ಪ್ರೋ. ಎಲ್.ಎಸ್.ಶೇಷಗಿರಿರಾವ್ ಹೇಳುತ್ತಾರೆ.
ನಾಟಕ ಎಂದಾಕ್ಷಣ ನಮ್ಮ ಮುಂದೆ ಅನೇಕ ಪ್ರಕಾರಗಳು ಸುಳಿದು ಹೋಗುತ್ತವೆ. ಅವುಗಳಲ್ಲಿ ಪೌರಾಣಿಕ ನಾಟಕ, ಐತಿಹಾಸಿಕ ನಾಟಕ, ವಾಸ್ತವಿಕ ನಾಟಕ, ಸುಸಂಘಟಿತವಾದ ನಾಟಕ, ಅಸಂಗತ ನಾಟಕಗಳು ಪ್ರಮುಖವಾಗಿವೆ. ಹೀಗೆ ನಾಟಕ ಎಂದಾಕ್ಷಣ ನಮಗೆ ದುತ್ತನೇ ನೆನಪಿಗೆ ಬರುವುದು ಬೇಲೂರು ಕೃಷ್ಣಮೂರ್ತಿಯವರು.
ಕನ್ನಡ ಸಾರಸ್ವತ ಲೋಕದಲ್ಲಿ ‘ನಾಟಕ’ ಪ್ರಕಾರಕ್ಕೆ ಭದ್ರ ಅಡಿಪಾಯ ಹಾಕಿದವರಲ್ಲಿ ಇನ್ನರಿದ್ದೆಡೆಗೆ ಕೊಂಟೋಯ್ದವರಲ್ಲಿ ಕೃಷ್ಣಮೂರ್ತಿಯವರು ಮುಂಚೋಣಿಯಲ್ಲಿ £ಲ್ಲುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು.
ಇವರು 1931 ಆಗಸ್ಟ್ 08 ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಮಾದನಹಳ್ಳಿ ಗ್ರಾಮದ ಅನಂತರಾಮಯ್ಯ ಮತ್ತು ಲಕ್ಷ್ಮೀದೇವಮ್ಮ ಬ್ರಾಹ್ಮಣ ದಂಪತಿಗಳ ಪುತ್ರರಾಗಿ ಜನಿಸಿದರು.
110 ನಾಟಕಗಳು, 30 ಇತರ ಕೃತಿಗಳನ್ನು ಸೇರಿದಂತೆ ಸುಮಾರು 140ಕ್ಕೂ ಹೆಚ್ಚು ಕೃತಿರತ್ನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೃಷ್ಣಮೂರ್ತಿಯವರ ವ್ಯ್ಕತಿತ್ವ ಅಸಮಾನ್ಯವಾದುದು. ಹಾಸನ ಜಿಲ್ಲೇಗಷ್ಟೇ ಸೀಮಿತವಾಗದೆ ಕನ್ನಡ ಮನಸ್ಸುಗಳೆಲ್ಲೆಲ್ಲಿವೆಯೋ ರಾಜ್ಯ, ಅಂತರರಾಜ್ಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಇವರ ನಾಟಕಗಳು ಪ್ರದರ್ಶನ ಕಂಡಿವೆ.
1952 ರಿಂದ ವೃತ್ತಿಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ಇವರು ಸಹಸ್ರಾರು ಶಿಷ್ಯವೃಂದವನ್ನು ಹೊಂದಿದ್ದಾರೆ. ಒಳ್ಳೆಯ ನಟರೂ ಆಗಿದ್ದ ಇವರು ನಿರ್ದೇಶಕರಾಗಿಯೂ ಕಾರ್ಯಪ್ರವೃತ್ತಗೊಂಡು ಯಶಕಂಡಿದ್ದಾರೆ.
ದಿ. ಮುಸುರಿಕೃಷ್ಣಮುರ್ತಿಯವರು ಸ್ಥಾಪಿಸಿದ್ದ ದತ್ತಾತ್ರೇಯ ನಾಟಕ ಮಂಡಳಿಯಲ್ಲಿ ಸಹ ನಟರಾಗಿ ಅಭಿನಯಿಸುತ್ತಾ ರಂಗಭೂಮಿ ಹೊರ-ಒಳವುಗಳನ್ನು ಅರಿತು ತನ್ಮತೆಯಿಂದ ಮೈಗೂಡಿಸಿಕೊಂಡರು. ನಂತರ ‘ನಾಟಕ’ ರಚನೆಕಡೆಗೆ ವಾಲಿದ ಇವರ ಮನಸ್ಸು ಉತ್ಕøಷ್ಟ ಸಾಹಿತ್ಯ ಸೃಷ್ಠಿಸುವಲ್ಲಿ ಹಿಂದೆ ಬೀಳಲಿಲ್ಲ. ತತ್ಪರಿಣಾಮವಾಗಿಯೇ 1962 ರಲ್ಲಿ ‘ಬಲಿದಾನ’ ಎಂಬ ನಾಟಕ ಪ್ರಕಟವಾಯಿತು. ಅಂದಿ£ಂದ ಇಂದಿನವರೆಗೆ ಸುಮಾರು 110 ನಾಟಕಗಳನ್ನು ಕಟ್ಟಿಕೊಟ್ಟಿ ಹೃದಯ ಶ್ರೀಮಂತಿಕೆ ಕೃಷ್ಣಮೂರ್ತಿಯವರದು.
‘ತ್ಯಾಗಿ’ ಲಚ್ಚಿ, ಕಂಬನಿ, ಆಹುತಿ ಎಂಬ ನಾಟಕಗಳು ಬೇಲೂರು ಕೃಷ್ಣಮೂರ್ತಿಯವರಿಗೆ ಭದ್ರವಾದ ನೆಲೆ ತಂದುಕೊಟ್ಟವು. ಸಮಾಜದಲ್ಲಿ ನಡೆಯುತ್ತಿರುವ ಅ£ೀತಿ, ಅನ್ಯಾಯ, ಅತ್ಯಾಚಾರ, ಅಟ್ಟಹಾಸ, ಭ್ರಷ್ಟಚಾರ, ಕಂದಾಚಾರಗಳೇ ಇವರ ನಾಟಕದ ವಿಷಯ ವಸ್ತುಗಳಾಗಿವೆ. ಇವುಗಳಿಂದ ಸಮಾಜ ಯಾವ ರೀತಿ ಅಧೋಗತಿಗೆ ಈಡಾಗುತ್ತಿದೆ ಂದು ನವಿರಾಗಿ ಬಿಡಿಸಿಟ್ಟಿದ್ದಾರೆ.
ಇವರ ಹಲವಾರು ನಾಟಕಗಳು ನೂರಾರು ಪ್ರದರ್ಶನ ಕಂಡಿವೆ. ಕೃತಿಗಳು ಸಹ ಸಾಕಷ್ಟು ಪುನರ್‍ಮುದ್ರಣ ಕಂಡಿವೆ. ಕೇವಲ ನಾಟಕಕ್ಕೆ ಮಾತ್ರ ಸೀಮಿತವಾಗದೆ ಕಾದಂಬರಿ, ಬರಹಗಳನ್ನೊಳಗೊಂಡಂತೆ ಸುಮಾರು 30 ಕೃತಿಗಳನ್ನು £ೀಡಿದ್ದಾರೆ.
2010 ಮಾರ್ಚ್ 9 ಮತ್ತು 10 ರಂದು ಬೇಲೂರಿನಲ್ಲಿ ಹಾಸನ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಬೇಲೂರು ಕೃಷ್ಣಮೂರ್ತಿಯವರ ವ್ಯಕ್ತಿತ್ವ ಪ್ರಬುದ್ದಮಾನವಾದುದು. ಯಾವುದೇ ಆಡಂಬರ, ಅಹಂಕಾರಗಳಿಲ್ಲದ ಸಹೃದಯಿ, ಸರಳ ಜೀವನ ಉದಾತ್ತ ಚಿಂತನೆಯ ಮುರ್ತಿ ಎದರೆ ಅತಿಶಯೋಕ್ತಿಯಾಗಲಾರದು. 83ರ ಇಳಿವಯಸ್ಸಿನಲ್ಲಿಯೂ ಇವರ ಉತ್ಸಾಹದ ಸಾಹಿತ್ಯ ಚಿಲುಮೆ ಇನ್ನೂ ಪ್ರಜ್ವಲಿಸುತ್ತಲೇ ಇದೆ.
ರಂಗಭೂಮಿಗೆ ಮಾತ್ರ ಸೀಮಿತವಾಗದೆ ಇವರ ಸಾಹಿತ್ಯ ಕನ್ನಡ ಚಲನಚಿತ್ರರಂಗದತ್ತಲೂ ಮುಖಮಾಡಿ ನೋವು ನಲಿವುಗಳನ್ನು ಅನುಭವಿಸಿದೆ. ಬೇಲೂರು ಫಿಲಂಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ ಕೃಷ್ಣಮೂರ್ತಿಯವರು ಅವರದೇಯಾದ ‘ಕಂಬ£’ ಎಂಬ ನಾಟಕವನ್ನು ‘ತೀರದ ಬಯಕೆ’ ಎಂಬ ಚಲನಚಿತ್ರ £ರ್ಮಿಸಿ ಹೊರತಂದಿದ್ದಾರೆ. ಜುಗ್ಗಾಸ್ವಾಮಿ ಜುಗ್ಗಾ, ಬಾಡಿಗೆ ಬಿಡಾರ, ಪೊದಕುಲಡಾಯಿ, ಜ್ವಾಲೆ ಹೀಗೆ ಹತ್ತಾರು ಕಥೆಗಳನ್ನು ಕಿರುತೆರೆಗೆ ತಂದಿದ್ದಾರೆ.
1972ರಲ್ಲಿ ‘ತೀರದ ಬಯಕೆ’ ಚಲನಚಿತ್ರ ನಿರ್ಮಿಸಲು ಪ್ರಾರಂಭಿಸಿ 1982 ರಲ್ಲಿ ಚಿತ್ರ ಬಿಡುಗಡೆಮಾಡಿದರು. ಆಗಿನ ಕಾಲದಲ್ಲಿಯೇ 15 ಲಕ್ಷ ರೂ ಸಾಲ ಮಾಡಿ ಸಿನಿಮಾ ಮಾಡಿ ಕೈ ಸುಟ್ಟುಕೊಂಡರು. ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಕರಾಗಿದ್ದ ಇವರ ವರಮಾನ ಅಷ್ಟಕ್ಕಷ್ಟೇ. ಮಾಡಿದ ಸಾಲ ತೀರಿಸಲು ಸುಮಾರು ದಶಕಗಳೇ ಬೇಕಾಯಿತಂತೆ. ಆದರೆ ಸಾಲ ಕೊಟ್ಟವರಿಗೆ ಯಾರಿಗೂ ಒಂದು ಪೈಸೆ ಮೋಸ ಮಾಡಲಿಲ್ಲವೆಂದು ಸಂತಸದಿಂದಲೇ ಹೇಳುತ್ತಾರೆ.
ಇವರೊಬ್ಬ ಅಪ್ಪಟ ನಾಸ್ತಿಕವಾದಿ. ಮೂಡನಂಬಿಕೆ, ಮಾಟ-ಮಂತ್ರ ತಂತ್ರದ ವಿರುದ್ದ ಧ್ವ£ ಎತ್ತಿದ್ದಾರೆ. ವಿಜ್ಞಾನ ಮಾತ್ರ ಸತ್ಯ ಉಳಿದದ್ದು ಮಿಥ್ಯ ಎಂಬ ಸಿದ್ದಾಂತವನ್ನು ಬಲವಾಗಿ ನಂಬಿದವರು. ಇವರ ಸಾಹಿತ್ಯ, ಶಿಕ್ಷಣ, ರಂಗಭೂಮಿ, ಸಾಮಾಜಿಕ ಸಂಘಟನೆ ಸೇವೆಗಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದಿವೆ.
1993 ರಲ್ಲಿ ಕರ್ನಾಟಕ ಅಕಾಡೆಮಿಯ ಪ್ರಶಸ್ತಿ, 2005ರಲ್ಲಿ ದೆಹಲಿಯಲ್ಲಿ ನಡೆದ 22ನೇಯ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ಸನ್ಮಾನ, ತುಮಕೂರಿನ ಅಭಿಮಾ£ಗಳು ರಜತ ಕಿರೀಟದೊಂದಿಗೆ ‘ನಾಟಕ ಸಾರ್ವಭೌಮ’ ಎಂಬ ಕೃತಿ ಅರ್ಪಿಸಿ ಸನ್ಮಾ£ಸಿದ್ದಾರೆ. 1993ರಲ್ಲಿ ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಆಲೂರಿನ ಮಿತ್ರರು ‘ನಾಟಕಶ್ರೀ’ ಎಂಬ ಸಂಭಾವನಾ ಗ್ರಂಥ ಅರ್ಪಿಸಿದ್ದಾರೆ. ಕಲಾತಪಸ್ವಿ, ರಸಿಕ ಶಿಖಾಮಣಿ, ಸಾಹಸ ವೀರ, ಕಲಿಯುಗ ಪಾರ್ಥ, ಸಮಾಜ ಸೇವಾ ರತ್ನ, ಸಾಹಿತ್ಯ ಸಾರ್ವಭೌಮ, ಕಲಾಚತುರ ಮುಂತಾದ ಬಿರುದು ಸನ್ಮಾನಗಳು ಸಂದಿವೆ


ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ, ಹಾಸನ
ಮೊ-9739878197








ಗೊರೂರರ’ ನಂತರ ಗೊರೂರನ್ನು ಪ್ರತಿನಿಧಿಸಿದ ಸೋಮಶೇಖರ್- ಕೊಟ್ರೇಶ್ ಎಸ್.ಉಪ್ಪಾರ್, ಆಲೂರು


       ಗೊರೂರು ಎಂದಾಕ್ಷಣ ನಮ್ಮೆದುರಿಗೆ ಧಟ್ಟಂತ ಬಂದೆದುರಿಗೆ ನಿಲ್ಲುವವರು ಗೊರೂರು ರಾಮಸ್ವಮಿ ಅಯ್ಯಂಗಾರ್. ಅವರಿಂದಲೇ ಬಹುಶಃ ಹಾಸನದ ಈ ಗೊರೂರು ಊರು ಜಗತ್ಪ್ರಸಿದ್ಧಿ ಪಡೆದಿದ್ದು. ಅಂದಿನಿಂದಲೂ ಇಂದಿಗೂ ಅಲ್ಲಿಂದ ಅನೇಕ ಸಾಹಿತಿಗಳ ಹೊರಹೊಮ್ಮಿದ್ದಾರೆ. ಅಂಥವರಲ್ಲಿ ಶ್ರೀ ಗೋರೂರು ಸೋಮ ಶೇಖರ್ ರವಸದರೂ ಒಬ್ಬರು.
    ರಾಮಸ್ವಾಮಿ ಅಯ್ಯಂಗಾರರಿಗೆ ಗೊರೂರು, ಹೇಮಾವತಿ ನದಿ, ತೀರ ಮುಂತಾದ ಗ್ರಾವೀಣ ಬದುಕು, ಬವಣೆಗಳೇ ಸಾಹಿತ್ಯಾದ ಪ್ರತೀಕವಾಗಿದ್ದವು. ಅಂತೆಯೇ ಗೊರೂರು ಸೋಮಶೇಖರ್ ರವಸದರೂ ಸಹ ಗೊರೂರಿನ ಅನೇಕ ಘಟನೆಗಳನ್ನು ರಾಮಸ್ವಾಮಿ ಅಯ್ಯಂಗಾರ್, ಮುಂತಾದ ವಿಷಯಗಳ ಸುತ್ತಲೇ ಸಾಕಷ್ಟು ಬರೆದಿದ್ದಾರೆ.
ಶ್ರೀಯುತ ಗೊರೂರು ಸೋಮಶೇಖರ್ ರವರು 1934 ರ ಜೂನ್ 05 ರಂದು ಗೊರೂರಿನ ಶ್ರೀ ಅಪ್ಪಯ್ಯ ಶೆಟ್ಟಿ ಮತ್ತು ಶ್ರೀಮತಿ ಶಂಕರಮ್ಮ ದಂಪತಿಗಳ   ಪುತ್ರರಾಗಿ ಜನಿಸಿದರು.
       ಚಿಕ್ಕಂದಿನಿಂದಲೇ ರಮಸ್ವಾಮಿ ಅಯ್ಯಂಗರರಂಥ ಮರು ಸಾಹಿತಿಗಳ ಒಡನಾಡಿಯಾಗಿ, ಶಿಷ್ಯರಾಗಿ, ಆತ್ಮೀಯರಾಗಿ ಬೆಳೆದ ಸೋಮಶೇಖರ್ ರವರು, ಅವರ ಹಲವಾರು ಅನುಭವದ ರಸವತ್ತಾದ ಪ್ರಸಂಗಗಳನ್ನು ‘ಗೊರೂರು..........ನೆನಪುಗಳು’ ಪುಸ್ತಕದಲ್ಲಿ ಬರೆದಿದ್ದಾರೆ. ಗೊರೂರುರಂತೆ ಇವರೂ ತನ್ನೂರಿನ ಜನರು ಊರಿನ ಬಗೆಗೆ, ಬದುಕಿನ ವಿವಿಧ ಮೂಲಗಳನ್ನು ಹಾಸ್ಯಮಯವಾಗಿ ವಿಡಂಬಿಸಿದ್ದಾರೆ. ಈ ಕೃತಿಯಲ್ಲಿ ರಾಮಸ್ವಾಮಿ ಅಯ್ಯಂಗಾರ್ ಚಿತ್ರಣ, ಗೊರೂರು ಶಾಸನಗಳೂ, ಗೊರೂರಿನಲ್ಲಿನ ಅವರ ಬಾಲ್ಯ, ಅಲ್ಲಿ ನಡೆಯುತ್ತಿದ್ದ ಬಯಲಾಟಗಳು, ಜಾತ್ರೆ ಉತ್ಸವಗಳು, ದೇವರುಗಳು,ಮದುವೆ-ಆಚಾರ ವಿಚಾರಗಳು, ಹೇಮಾವತಿ ನದಿ ತೀರದ ಪ್ರಸಂಗಗಳು ಹೀಗೆ ಹಲವಾರು ವಿಷಯಗಳನ್ನೊಳಗೊಂಡತೆ ಇಡೀ ಗೊರೂರಿನ ಸಮಗ್ರ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಗೊರೂರು ಸೋಮಶೇಖರ್ ರವರು ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಅಮೂಲ್ಯ ಕೃತಿರತ್ನಗಳನ್ನು ನೀಡಿದ್ದಾರೆ. ಸಂಪಾದಿತವೂ ಒಂದು ಸಾಹಿತ್ಯದ ಶ್ರೇಷ್ಠ ಪ್ರಕಾರವೆಂದೇ ಹೇಳಬಹುದು. ‘ಹೇಮಾವತಿ ಜಲಾಶಯ’ ‘ಹೇಮಕೂಟ’ ಜಾಗೃತಿ-ಸಂಪಾದಿತ ಕೃತಿಗಳು; ‘ರಂಗ.....ಹುಷಾರ್(ನಾಟಕ): ‘ಗೊರೂರು......ನೆನಪುಗಳು’ ಇದು 2003 ಹಾಗೂ 2006 ರಲ್ಲಿ ದ್ವಿಮುದ್ರಣ ಕಂಡಿದೆ. ‘ಬಸವಣ್ಣನ ಪುರಾತದಾಸಿಮಯ್ಯ’-2014(ವೈಚಾರಿಕ ಲೇಖನಗಳು).
       ಚಿಕ್ಕವಯಸ್ಸಿನಿಂದಲೇ ಬಯಲಾಟ, ರಂಗಭೂಮಿಯನ್ನು ಹವ್ಯಾಸಮಾಡಿಕೊಂಡ ಸೋಮಶೆಖರ್ ರವರು ಹಲವರು ನಾಟಕಗಳಲ್ಲಿ ಅಭಿನಯಿಸಿದ್ದಾರೆ, ನಿರ್ದೇಶನ ಮಾಡಿದ್ದಾರೆ. ಪತ್ರಿಕಾ ವರದಿಗಾರರಾಗಿಯೂಆ ಕೆಲ ದಿನಗಳು ದುಡಿದ ಇವರು , ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಮ್ಮಿಕೊಂಡಿದ್ದ ‘ಆಡಳಿತದಲ್ಲಿ ಕನ್ನಡ’ ಎಂಬ ವಿಷಯದಡಿಯಲ್ಲಿ ಹಲವಾರು ಇಂಜಿನಿಯರ್ಗಳಿಗೆ, ಲೆಕ್ಕಿಗರಿಗೆ ತರಬೇತಿ ನೀಡಿದ ಕೀರ್ತಿ ಇವರದು.
      ಸಾಹಿತ್ಯ, ರಂಗಭೂಮಿ, ಸಾಮಾಜಿಕವಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಇವರು ನೇಕಾರ ರಾಷ್ಟ್ರೀಯ ವಿಶ್ವಸಂಸ್ಥೆ ಮಂಡಳಿಯ ಸಂಸ್ಥಾಪಕ ಗೌರವಾಧ್ಯಕ್ಷರಾಗಿ, ನಾಗರೀಕ ಸೇವಾ ಸಮಿತಿ, ಜೆ.ಪಿ. ನಗರದ ಹಾಲಿ ಗೌರವಾಧ್ಯಕ್ಷರಾಗಿ, ದೇವಾಂಗ ಮಹಾ ಮಂಡಲದ ಸಂಸ್ಥಾಪಕರಾಗಿ, ದೇವಾಂಗ ಸೇವಾ ಸಮಾಜದ ಮಾಜಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ಗೊರೂರು ಸೋಮಶೇಖರ್ ರವರು ವೃತ್ತಿಯಲ್ಲಿ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸುಚಿತ್ತದಿಂದ ದುಡಿಯುತ್ತಿರುವ ಬಹುಮುಖ ಕಲಾ ಪ್ರತಿಭೆ ಎಂದರೆ ಅತಿಶಯೋಕ್ತಿಯಾಗಲಾರದು. ವಸ್ತವತೆಯ ನೆಲೆಗಟ್ಟಿನಲ್ಲಿ ಬರೆದ ಇವರ ಸಾಹಿತ್ಯ ಓದುಗರನ್ನು ಬಹುಬೇಗ ಆಕರ್ಷಿಸುವಂಥದ್ದು. ಹಲವು ಬದುಕುಗಳು ಇವರ ಬರವಣೆಗೆಯಲ್ಲಿ ಜೀವ ಪಡೆದು ಕೊಂಡಿದೆ. ಹಾಸನ ಜಿಲ್ಲೆ ಕಂಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಸೋಮಶೇಖರ್ ರವರು ಪರಿಷತ್ತಿನ ಹಲವಾರು ಕಾರ್ಯಕ್ರಮಗಳ್ನು ಸುಸಂಘಟಿತವಗಿ ನಿರ್ವಹಿಸಿ ಯಶಸ್ವಿಗೊಳಿಸಿದ್ದಾರೆ.
      ಇಳಿ ವಯಸ್ಸಿನಲ್ಲಿಯೂ ಬಹುಮುಖಿ, ಜನಪರ ಚಟುವಟಿಗಳ ಜೊತೆಗೆ ಬರಹಗಳ ಮೂಲಕ ಬಡವರ್ಗಗಳ ದನಿಯಾಗುವ ಆಶಯ ಹೊಂದಿರುವ ಇವರು ಸದಾ ಕ್ರಿಯಾಶೀಲವಾದ ವ್ಯಕ್ತಿ.ಪ್ರಸ್ತುತ ಬೆಂಗಳೂರಿನ ಜೆ.ಪಿ.ನಗರದ 8ನೇ ಮೇನ್, 3ನೇ ಕ್ರಾಸ್ ಮ.ನಂ. 885 ರಲ್ಲಿ ವಾಸವಾಗಿರುವ ಇವರು ವೃತ್ತಿಯಿಂದ ವಿಶ್ರಾಂತ ಜೀವನ ನಡೆಸುತ್ತಿದ್ದರೂ, ಪ್ರವೃತ್ತಿಯಲ್ಲಿ ಸದಾ ಕ್ರಿಯಾಶೀಲರಾಗಿದ್ದಾರೆ.
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ, ಹಾಸನ
ಮೊ-9739878197

ಪುರಾಣೇತಿಹಾಸಗಳನ್ನೊಳಗೊಂಡ ವರ್ತಮಾನದ ಕೃತಿ- ‘ಶರ್ಮಿಷ್ಠೆ’- ಕೊಟ್ರೆಶ್ ಎಸ್. ಉಪ್ಪಾರ್, ಆಲೂರು


      ಕನ್ನಡ ನಾಡು ಕಂಡಂತಹ ವಿಶಿಷ್ಟ ಬರಹಗಾರ ಡಾ. ಮಳಲಿ ವಸಂತಕುಮಾರ್‍ರವರು. ‘ಗದ್ಯ ಮತ್ತು ಪದ್ಯ’ ಎರಡೂ ಪ್ರಕಾರಗಳಲ್ಲಿ ಪ್ರಾವಿಣ್ಯತೆ ಪಡೆದ ಘನ ವಿದ್ವಾಂಸರಾದ ಡಾ. ಮಳಲಿಯವರು ಅತ್ಯದ್ಬುತ ವಾಗ್ಮಿಗಳು ಹೌದು.
      ಕವಿತೆ, ಕಥೆ, ನಾಟಕ, ವಿಮರ್ಶೆ ಜಾನಪದ, ಸಂಶೋಧನೆ, ವಚನ, ಜೀವನ ಚರಿತ್ರೆ ಮತ್ತು ಸಂಪಾದಿತ ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸಾಧನೆ ಮಾಡಿರುವ ಇವರು ಸುಮಾರು ನಲವತ್ತಕ್ಕಿಂತಲೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
      ಈ ಹಿಂದೆ ‘ಯಮಧರ್ಮ’, ಲಂಕೇಶ್ವರ’ ನಾಟಕಗಳು ವಿಮರ್ಶಕರನ್ನು ಹಾಗೂ ಶೋತೃಗಳನ್ನು ಹೊಸ ಆಲೋಚನೆಗಳ ಸುಳಿಗೆ ಸಿಲುಕಿಸಿದ್ದವು. ಕಾರಣ ಬೇರೆಯವರ ವಸ್ತು ಸ್ಥಿತಿಯ ನಿರೂಪಣಾ ಶೈಲಿಗಿಂತ ಭಿನ್ನವಾದ ಇವರ ವೈಚಾರಿಕ ಹಾಗೂ ವೈಜ್ಞಾನಿಕ ಭಾವಗಳು. ಇದು ಹಲವಾರು ಯಶಸ್ವೀ ಪ್ರದರ್ಶನಗಳನ್ನು ಕಂಡಿದೆ.
      ರಾವಣನನ್ನು ಸಹಜವಾಗಿ ಸಾಮಾನ್ಯರು ಕಲ್ಪಿಸಿಕೊಳ್ಳುವುದಕ್ಕಿಂತ ವ್ಯತಿರಿಕ್ತವಾಗಿ ಈ ನಾಟಕದಲ್ಲಿ ರಾವಣನಲ್ಲಿನ ಯೋಗ ಸಿದ್ಧಿಯನ್ನು ಪುನರ್‍ವಿಮರ್ಶಿಸಿ ಪ್ರಖರತೆಯತ್ತ ಮುಖಮಾಡಿಸಿದ ಡಾ. ಮಳಲಿಯವರು ಒಂದು ಹೊಸ ಆಯಾಮವನ್ನು ಸೃಷ್ಟಿಸಿದ್ದಾರೆ.
      ಅರಿವಿನ ಪ್ರಜ್ಞೆಯ ದ್ಯೋತಕವಾಗಿ ಮೂಡಿ ಬಂದ ಈ ನಾಟಕದ ತಿರುಳು ಮಾನವೀಯತೆಯ ನವಚೈತನ್ಯ ತುಂಬಿ ವಿಕಾಸ
ಸಿದ್ದಾಂತದಂತೆ ಜ್ಞಾನಾರ್ಜನೆಗೊಂಡು ವ್ಯಕ್ತಿತ್ವದ ಹೊಳಪು ಪ್ರಜ್ವಲಿಸಿರುವುದನ್ನು ಕಾಣುತ್ತೇವೆ. ಇಲ್ಲಿನ ಅನೇಕ ಪ್ರಸಂಗಗಳು ಓದುಗನನ್ನು ಗಹನವಾದ ಚಿಂತನೆಗೆ ದೂಡುವುದರಲ್ಲಿ ಎರಡು ಮಾತಿಲ್ಲ.
      ಅಂತೆಯೇ ಇವರ ಮೂರನೇ ನಾಟಕ ‘ಶರ್ಮಿಷ್ಟೆ’. ತಲೆ ಬರಹದಡಿ ಸೂಚಿಸಿರುವಂತೆ ಪುರಾಣ, ಇತಿಹಾಸ ಮತ್ತು ಸಾಮಾಜಿಕ ಸಂಗತಿಗಳು ಏಕೀರ್ಭವಿಸಿರುವ ಮಹಾನಾಟಕವಿದು. ಗತಕಾಲದ ಇತಿಹಾಸ ಅದೆಷ್ಟೋ ಪ್ರಬುದ್ಧ ಪಾತ್ರಗಳು ಜೀವ ತಳೆಯದೆ ಕಮರಿಹೊಗುತ್ತವೆ. ಕೆಲವು ಸಂದರ್ಭದಲ್ಲಿ ಸಾಹಿತ್ಯದೆಡೆಗೆ ಬಂದರೂ ಸಪ್ಪೆಯಾಗಿ ಘನತೆ ಕಂಡುಕೊಳ್ಳುವಲ್ಲಿ ವಿಫಲವಾಗಿಬಿಡುತ್ತವೆ. ಇನ್ನೂ ಕೆಲವೊಮ್ಮೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತವೆ.
      ಶರ್ಮಿಷ್ಟೆ ಎಂದಾಕ್ಷಣ ನನ್ನ ನೆನಪಿಗೆ ಯಯಾತಿ, ದೇವಯಾನಿ, ಶುಕ್ರಚಾರ್ಯರು ಮುಂತಾದ ಐತಿಹಾಸಿಕ ಪಾತ್ರಗಳು ಸುಳಿದಾಡಿದವು. ಏಕೆಂದರೆ ಈ ಪಾತ್ರಗಳೆಲ್ಲಾ ಒಂದಕ್ಕೊಂದು ಬೆಸೆದುಕೊಂಡ ಅತ್ಯದ್ಭುತ ಕಥಾ ಪ್ರಸಂಗಗಳು. ಈ ಹಿಂದೆ ನಾನು ಪಿ.ಯು.ಸಿಯಲ್ಲಿದ್ದಾಗ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಡಾ. ಗಿರಿಶ್ ಕಾರ್ನಾಡರ ‘ಯಯಾತಿ’ ನಾಟಕ ಪಠ್ಯದಲ್ಲಿ ಓದಿದ್ದೆ.
      ಡಾ. ಮಳಲಿ ಹಾಗೂ ಡಾ. ಕಾರ್ನಾಡರ ಕಥಾ ವಸ್ತು ಒಂದೆಯಾದರೂ ಚಿಂತನ ಲಹರಿಗಳು ವಿಭಿನ್ನವಾಗಿವೆ. ಕಾರ್ನಾಡರ ನಾಟಕದಲ್ಲಿ ಇತಿಹಾಸ ಪ್ರಧಾನವಾದರೆ ಇಲ್ಲಿ ವೈಚಾರಿಕತೆಯ ಹೊಳವಿದೆ. ಹಳೆಯ ವಸ್ತುವಿನ ಕುರಿತ ನಾಟಕವಾದರೂ ನಾಟಕದುದ್ದಕ್ಕೂ ಹೊಸ ಹೊಳವುಗಳನ್ನು ಕಾಣುತ್ತೇವೆ. ತಮ್ಮ ಅಗಾಧ ಜ್ಞಾನದ ಅರ್ಥವಂತಿಕೆಯಿಂದ ಸನ್ನಿವೆಶಗಳಿಗೆ ಕೌತುಕತೆಯನ್ನು ತುಂಬಿ ಪರಿವರ್ತನಾ ಶೀಲತ್ವದೆಡೆಗೆ ಸಾಗಿಸಿದ ಡಾ. ಮಳಲಲಿಯವರ ಜಾಣ್ಮೆ ಅವಿಚಿನ್ನವಾದುದು ಎಂದರೆ ಅತಿಶಯೋಕ್ತಿಯಾಗಲಾರದು.
      ಈ ನಾಟಕದಲ್ಲಿ ದೇವಗುರುವಾಗಿ ಬೃಹಸ್ಪತಿ, ರಾಕ್ಷಸಗುರುವಾಗಿ ಶುಕ್ರಾಚಾರ್ಯರು ತಮ್ಮಗಳಲ್ಲಿನ ಅಹಂಮ್ಮಿಕೆಯಿಂದ ದೇವದಾನವರ ನಡುವೆ ಒಡಕು ತಂದಿಟ್ಟು ನೋಡುವ ಆಂತರಿಕ ಸಂವೇದನೆಯಿದ್ದರೆ, ದೇವಯಾನಿಯ ರಕ್ಕಸ ಮನೋಭಾವ ಹಾಗೂ ಶರ್ಮಿಷ್ಟೆಯ ಪ್ರತಿಷ್ಠೆಯ ಸಮರ ಬಾಹ್ಯಾ ಸಂವೇದನೆಯಾಗಿದೆ. ಇವೆರಡರ ಮಧ್ಯೆ ‘ಯಯಾತಿ’ ತತ್ತರಿಸಿ ಕಂಗಾಲಾದರೆ, ‘ಕಚ’ ನಿಜವಾದ ಆದರ್ಶ ವ್ಯಕ್ತಿತ್ವದ ಕೈಗನ್ನಡಿಯಾಗಿ ಒಡಮೂಡಿದ್ದಾರೆ.
     ಇಲ್ಲಿ ಬಹುಮುಖ್ಯವಾಗಿ ವರ್ಣಾಶ್ರಮದಲ್ಲಿ ಮೇಲುಸ್ತರದಲ್ಲಿ ಬರುವ ಬ್ರಾಹ್ಮಣ ಮತ್ತು ಕ್ಷತ್ರಿಯರ ನಡುವಿನ ಪ್ರತಿಷ್ಠೆಯ ಪ್ರಶ್ನೆ ಉದ್ಭವಿಸಿ, ಅಹಂವಿಕೆಯ ಹುಚ್ಚು ನೆತ್ತಿಗೇರಿ ಮಾನವೀಯತೆ ಮರೆಯಾಗುವುದನ್ನು ಕಾಣುತ್ತೇವೆ.
      ಶರ್ಮಿಷ್ಠೆ ಕ್ಷತ್ರಿಯ ವಂಶದ ರಾಜಕುಮಾರಿ ಹಾಗೆಯೇ ದೇವಯಾನಿ ಆಸ್ಥಾನ ಪುರೋಹಿತರ ಮಗಳು. ಬಾಲ್ಯದಿಂಲೂ ಉತ್ತಮ ಗೆಳೆತಿಯರಾಗಿದ್ದ ಇವರೀರ್ವರ ನಡುವೆ ಅದಲು ಬದಲು ಸೀರೆಯುಟ್ಟ ಪ್ರಸಂಗವೇ ಬಹುದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಕ್ಷತ್ರಿಯವಳು ತನ್ನ ಸೀರೆಯನ್ನುಟ್ಟು ಮಲೀನ ಮಾಡಿದಳೆಂಬ ಕ್ಷುಲ್ಲಕ ಕಾರಣ ದೇವಯಾನಿಯನ್ನು ಅವಿವೇಕದ ಕೂಪಕ್ಕೆ ತಳ್ಳಿ ಜಾತೀಯ ಬೀಜ ಮೊಳೆದು ಅವಘಡಕ್ಕೀಡಾಗುವುದನ್ನು ಕಾಣುತ್ತೇವೆ. ಇಲ್ಲಿ ಶರ್ಮಿಷ್ಟೆಯ ಪ್ರೀತಿಯ ನಿಜರೂಪಕ್ಕೆ ಬೆಲೆ ಸಿಗದೆ ದೇವಯಾನಿಯ ಕುಹಕ ಮನಸ್ಸಿನ ವಿಕಾರಕ್ಕೆ ತುತ್ತಾಗಿ ಕಾಲದ ರೂಪಕ್ಕೆ ಸಿಕ್ಕಿ ಅಚಾನಕ್ಕಾಗಿ ಬಾವಿಗೆ ಬೀಳಲು ಕಾರಣವಾಗುವ ರೀತಿ, ಹಾಗೆಯೇ ಯಯಾತಿ ಆಗಮನದಿಂದ ರಕ್ಷಣೆ, ನಂತರ ಪ್ರೇಮಾಂಕುರ, ಮದುವೆ ಹೀಗೆ ಮುಂದುವರೆದು ನಂತರ ಇದಕ್ಕ್ಕುತ್ತರವಾಗಿ ಶುಕ್ರ್ರಾಚಾರ್ಯರ ಅಜ್ಞಾನದಿಂದ ಹಾಗೂ ದೇವಯಾನಿಯ ಕುಬ್ಜ ಮನೋಧೋರಣೆಯಿಂದ ರಾಜಕುಮಾರಿ ಶರ್ಮಿಷ್ಟೆಯನ್ನು ದಾಸಿಯನ್ನಾಗಿ ಮಾಡುವುದು.
     ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಲೇಖಕರಲ್ಲಿ ಪೌರಾಣಿಕ ಹಾಗೂ ಐತಿಹಾಸಿಕ ಕಥನ ಪ್ರಸಂಗದಲ್ಲಿ ಪ್ರಸ್ತುತ ಸಾಮಾಜಿಕ ಸಂಗತಿಗಳು ಸುಳಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
     ಈ ಕಥಾ ಹಂದರ ಹೀಗೆ ಸಾಗುತ್ತಾ ‘ಯಯಾತಿ’ ಶರ್ಮಿಷ್ಟೆಯನ್ನು ವರಿಸಿ, ರಾಣಿ, ದಾಸಿಯರಿಗೆ ಸಾಮ್ರಾಟನಾಗುವ ಪರಿ, ನಂತರ ಶಂಕರಾಚಾರ್ಯರ ಸಂಚಿನಿಂದ ಜರ್ಜರಿತವಾಗುವ ಯಯಾತಿಯ ಮನೋಸ್ಥಿತಿ, ಮಧ್ಯೆ-ಮಧ್ಯೆ ‘ಕಚನ’ ಸಾಮಾಜಿಕ ಹಾಗೂ ಮಾನವೀಯ ಪ್ರಜ್ಞೆಯ ನಡೆಗಳು ನಾಟಕಕ್ಕೆ ತಿರುವು ನೀಡುತ್ತವೆ. ಅಂತ್ಯದಲ್ಲಿ ಸ್ವಯಂ ಅರಿವಿನ ನೆಲೆಯಲ್ಲಿ ಸಾಗುವ ಹಾಗೂ ಪಾಪ ಪ್ರಜ್ಞೆಯಿಂದ ಹೊರಬರಲು ಯತ್ನಿಸುವ ಪಾತ್ರಗಳು ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವ ಭಾವ ಚೇತನಮಯವಾಗಿ ಮೂಡಿ ಬಂದಿದೆ.
      ಒಟ್ಟಾರೆ ಹೆಳುವುದಾದರೆ ಡಾ. ಮಳಲಿ ವಸಂತಕುಮಾರ್‍ರವರ ಈ ‘ಶರ್ಮಿಷ್ಠೆÉ್ಟ’ ಓದುಗನನ್ನು ಬಿಟ್ಟು ಬಿಡದಂತೆ ಆಂತರಿಕವಾಗಿ ಸೆಳೆವ ನಾಟಕ. ಇಲ್ಲಿನ ಪಾತ್ರಗಳು ಓದುಗನ ಮನದಾಳಕ್ಕಿಳಿದು ಸುಳಿದಾಡುತ್ತವೆ. ಏಕೆಂದರೆ ಇಲ್ಲಿನ ಶಬ್ದಗಳ ಬಳಕೆ, ಭಾವ ತುಂಬಿದ ಬರಹ, ಅರ್ಥವತ್ತಾದ ನುಡಿಗಳನ್ನೊಳಗೊಂಡ ಸಂಭಾಷಣೆ ಹೊಂದಿದ ಪಾತ್ರಗಳು ಸಹಜವಾಗಿಯೇ ಓದುಗನ ಮನÀ ಪ್ರವೆಶ ಮಾಡುತ್ತವೆ. ಹಾಗೆಯೇ ಗಹನವಾದ ಚಿಂತನೆಗೀಡುಮಾಡುತ್ತವೆನ್ನಬಹುದು.
       ಪ್ರತಿಯೊಬ್ಬ ಕನ್ನಡಿಗನಿಗೂ ಓದಲೇ ಬೇಕಾದ ನಾಟಕ ‘ಶರ್ಮಿಷ್ಠೆ’. ಇವರ ಈ ಹಿಂದಿನ ನಾಟಕಗಳಾದ ‘ಯಮಧರ್ಮ’ ಹಾಗೂ ‘ಲಂಕೇಶ್ವರ’ ನಾಟಕಗಳ ಕುರಿತು ನಾಡಿನ ಖ್ಯಾತ ಸಾಹಿತಿಗಳಾದ ಪು.ತಿ. ನರಸಿಂಹಚಾರ್, ಎಚ್,ತಿಪ್ಪೇರುದ್ರಸ್ವಾಮಿ, ರಾಮಸ್ವಾಮಿ ಅಯ್ಯಂಗಾರ್, ಹಾ.ಮಾ. ನಾಯಕ, ಡಾ. ಬಿ. ರಾಮಚಂದ್ರರಾವ್ ಮುಂತಾದ ಸಾಹಿತ್ಯ ದಿಗ್ಗಜರು ಮೆಚ್ಚಿಕೊಂಡು, ಶ್ಲಾಘಿಸಿರುವುದೇ ಡಾ. ಮಳಲಿಯವರ ಸಾಹಿತ್ಯ ದೀವಿಗೆಯ ಪ್ರಬುದ್ಧತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.
ಕೊಟ್ರೆಶ್ ಎಸ್. ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
                                  ಮೊ-9483470794




ಕನ್ನಡ ‘ಕೀರ್ತನಾಚಾರ್ಯ’-ಬೇಲೂರು ಕೇಶವದಾಸರು- ಕೊಟ್ರೆಶ್ ಎಸ್. ಉಪ್ಪಾರ್,ಆಲೂರು


  ದಾಸ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ಒಂದು ಪ್ರಮುಖ ಘಟ್ಟ. ತಾವು ಹರಿದಾಸರೆಂದು ಕರೆದುಕೊಂಡವರು, ದೇವರ ಸೆÉೀವಕರೆಂದು ಭಾವಿಸಿದವರು ರಚಿಸಿದ ಸಾಹಿತ್ಯವೇ ದಾಸ ಸಾಹಿತ್ಯ.
  ಇದನ್ನು 13ನೆಯ ಶತಮಾನದಲ್ಲಿ ನರಹರಿ ತೀರ್ಥರು ಪ್ರಾರಂಭಿಸಿದರೆಂದು ಕಲ್ಪಿಸಿಕೊಳ್ಳಲಾಗಿದೆ. ತದನಂತರ ಶ್ರೀಪಾದರಾಜರು, ವ್ಯಾಸರಾಯರು ಇದರ ಘನತೆಯನ್ನು ಹೆಚ್ಚಿಸಿದರು. ದಾಸ ಶೇಷ್ಠರೆನಿಸಿಕೊಂಡ ಪುರಂದರ ದಾಸ ಮತ್ತು ಕನಕ ದಾಸರು ಗುರುಗಳಾದ ವ್ಯಾಸರಾಯರ ಮಾರ್ಗದರ್ಶನದಲ್ಲಿ ಈ ಸಾಹಿತ್ಯ ಪ್ರಕಾರವನ್ನು ಉನ್ನತ ಶಿಖರಕ್ಕೇರಿಸಿದರು.
    ವಾದಿರಾಜ, ವೈಕುಂಟದಾಸ, ಪ್ರಸನ್ನ ವೆಂಕಟದಾಸ, ವಿಜಯದಾಸ, ಗೋಪಾಲದಾಸ, ಜಗನ್ನಾಥ ದಾಸ ಮೊದಲಾಗಿ ಅನೇಕರು ದಾಸ ಸಾಹಿತ್ಯವನ್ನು ರಚಿಸಿದರು ಹಾಗೂ ಬೆಳೆಸಿದರು. ಅಂತಹವರ ಸಾಲಿನಲ್ಲಿ ಬೇಲೂರು ಕೇಶವದಾಸರು ಪ್ರಮುಖವಾಗಿ ನಮ್ಮೆದುರಿಗೆ ನಿಲ್ಲುತ್ತಾರೆ.
   ಶ್ರೀಯುತರು ಸು 1807 ರಲ್ಲಿ ಬೇಲೂರಿನ ಶ್ರೀ ವೆಂಕಟಸುಬ್ಬುದಾಸÀರ ಸುಪುತ್ರರಾಗಿ ಜನಿಸಿದರು. ಚಿಕ್ಕಂದಿನಿಂದಲೆ ಉತ್ತಮ ಸಂಸ್ಕಾರದೊಂದಿಗೆ ಬೆಳೆದ ಕೇಶವದಾಸರು ಕೀರ್ತನ ಕ್ಷೇತ್ರದತ್ತ ಮನಹೊರಳಿಸಿ ಶ್ರದ್ಧಾಸಕ್ತಿಯಿಂದ ಕಾಯಕಗೈದವರು. ಕನ್ನಡ ಕೀರ್ತನ ಕ್ಷೇತ್ರಕ್ಕೆ ತಮ್ಮದೇ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಕನ್ನಡ ನಾಡಿನಾದ್ಯಾಂತ ಕಾಲು ನಡಿಗೆಯಲ್ಲಿಯೇ ಸಂಚರಿಸಿ, ಕೀರ್ತನೆಗಳ ಹಾಡುತ್ತಾ ಜನ ಸಾಮಾನ್ಯರಿಗೆ ಜ್ಞಾನದ ತಿರುಳ ಉಣಬಡಿಸುತ್ತಾ ನಡೆದಾಡುವ ಜ್ಞಾನಕೋಶದಂತೆ ಪಸರಿಸಿದರು.
   ಆದ್ದರಿಂದಲೇ ‘ಕೀರ್ತನಾಚಾರ್ಯ’ ಎಂಬ ಪ್ರಶಸ್ತಿಗೆ ಭಾಜನರಾದರು. ‘ಕರ್ನಾಟಕ ಭಕ್ತ ವಿಜಯ’ ಎರಡು ಭಾಗಗಳಲ್ಲಿ ಬಂದ ಕೇಶವ ದಾಸರ ಅತ್ಯಮೂಲ್ಯವಾದ ಕೃತಿ. ಕರ್ನಾಟಕದಲ್ಲಿ ಬಾಳಿ ಬದುಕಿದ ದಾಸರು, ಅವರ ಸಾಹಿತ್ಯ, ಆಚಾರ ವಿಚಾರಗಳ ಕುರಿತು ಬೆಳಕು ಚೆಲ್ಲುತ್ತದೆ. ಇದು ಸುಮಾರು 680 ಪುಟಗಳ ಬೃಹತ್ ಕೃತಿಯಾಗಿದೆ. ಇವರ ಮರಣಾನಂತರ ಈ ಕೃತಿಯು 1937ರಲ್ಲಿ ಪ್ರಥಮ ಮುದ್ರಣವಾಗಿ ಬಂದಿದ್ದು. ನಂತರ 1967ರಲ್ಲಿ ಪುನರ್‍ಮುದ್ರಣಗೊಂಡಿದೆ.
    ಕೀರ್ತನ ಸಾಹಿತ್ಯರೆಂದೇ ಖ್ಯಾತಿ ಪಡೆದಿದ್ದ ಬೇಲೂರಿನ ಹರಿಕಥಾ ವಿದ್ವಾನ್ ಉಪಾಧ್ಯಕೃಷ್ಣಮೂರ್ತಿಗಳು ಕೇಶವದಾಸರನ್ನು ಕುರಿತು ಈ ರಿತಿ ಹೆಳಿದ್ದಾರೆ. “ಶ್ರೀ ಬೇಲೂರು ಕೇಶವದಾಸರು ಬೇಲೂರಿನ ಒಂದು ಅಮೋಘ ‘ಕೀರ್ತನ ರತ್ನ’ ಎಂದರೆ ಅತಿಶಯೋಕ್ತಿಯಲ್ಲ; ಇವರು ಕೀರ್ತನೆಗೆ ನಿಲ್ಲುವ ಠೀವಿ, ಕಥಾ ನಿರೂಪಣೆ ಮಾಡುವಾಗ, ಭಕ್ತಿಯ ಆವೇಶ ಮುನ್ನುಗ್ಗಿ ಬಂದಾಗ ಹನಿಹನಿಯಾಗಿ ಮೈಮರೆಸುವಂತ ವಾಚಾಳತ್ವ, ಜನಾಕರ್ಷಣೆ ಮುಂತಾದವು ಇಂದಿಗೂ ಮರೆಯದಂತಿವೆ”.
   ಕೃಷ್ಣಮೂರ್ತಿಯವರ ಮಾತುಗಳಲ್ಲಿ ಕೇಶವದಾಸರ ವ್ಯಕ್ತಿತ್ವವೇ ರೂಪು ಪಡೆದುಕೊಂಡಿದೆ ಎನ್ನಬಹುದು. ಕೇಶವದಾಸರು ‘ಹರಿದಾಸ ಸಾಹಿತ್ಯ’, ‘ಕನ್ನಿಕಾ ಪುರಾಣ’, ‘ರಾಘವೇಂದ್ರ ವಿಜಯ’ ಮುಂತಾದ ಗ್ರಂಥಗಳನ್ನು ರಚಿಸಿ ಕನ್ನಡಿಗರಿಗೆ ದಾಸ ಸಾಹಿತ್ಯದ ರಸ ಸ್ವಾದಗಳನ್ನು ಉಣಬಡಿಸಿದ್ದಾರೆ.
  ಇವರನ್ನು ಒಳಗೊಂಡಂತೆ ಹರಿದಾಸರೆಲ್ಲ ದ್ವೈತ ಮತಸ್ಥಾಪನಾಚಾರ್ಯರಾದ ಮಧ್ವಾಚಾರ್ಯರ ಅನುಯಾಯಿಗಳು. ಹರಿಯೇ ಸರ್ವೋತ್ತಮ ಎಂದು ನಂಬಿದವರು. ಭಕ್ತಿ ಮಾರ್ಗವನ್ನು ಬೋಧಿಸಿದವರು. “ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವವು” ಎಂದು ದಾಸರು ಹಾಡಿದರು. ತರ್ಕ ತಿಳಿಯದ ತಪಸ್ಸು ಮಾಡಲಾರೆ, ಜ್ಞಾನ ಮಾರ್ಗ ತಿಳಿಯದು ಎಂದೆಲ್ಲ ಚಿಂತಿಸಬೇಕಾಗಿಲ್ಲ ಶ್ರೀಹರಿಯಲ್ಲಿ ಮನಸ್ಸನ್ನು ನಿಲ್ಲಿಸಿದರೆ, ಭಕ್ತಿಯಿಂದ ಧ್ಯಾನ ಮಾಡಿದರೆ ಮುಕ್ತಿ ಲಭ್ಯವಾಗುವುದು ಎಂದು ಬೋಧಿಸಿದರು.
    ಬೇಲೂರಿನ ಕೇಶವದಾಸರು ಸಹ ಅಂತೆಯೇ ಬದುಕಿ ಬಾಳಿದವರು. ಇವರು ಕೀರ್ತನಾ ಸಾಹಿತ್ಯಕ್ಕಷ್ಟೆ ಮೀಸಲಾಗಿರದೇ ಸ್ವತ: ತಬಲ ನುಡಿಸುವುದರಲ್ಲಿ ಪ್ರಾವಿಣ್ಯಹೊಂದಿದ್ದರು. ಆದ್ದರಿಂಧಲೇ ಇವರಿಗೆ ‘ತಾಳಬ್ರಹ್ಮ’ ಎಂಬ ಬಿರುದು ಸಹ ಅನ್ವರ್ಥವಾಗಿ ಬಂದಿತ್ತು.
    ಕೀರ್ತನಾಕಾರರು ಸಹಜವಾಗಿಯೇ ಬಹುಭಾಷಾ ಪಾಂಡಿತ್ಯ ಹೊಂದಿದ್ದರೆನ್ನಬಹುದು. ಏಕೆಂದರೆ ಸಂಸ್ಕøತದಲ್ಲಿದ್ದ ಅನೇಕ ಅಂಶಗಳನ್ನು ಸರಳವಾಗಿ ಕನ್ನಡಿಕರಿಸಿದ್ದಾರೆ. ದಾಸರೆಲ್ಲರೂ ಮಹಾವಿದ್ವಾಂಸರಾಗಿದ್ದರು. ಹಿಂದೂಗಳ ಧರ್ಮಗ್ರಂಥಗಳೆಲ್ಲ ಸಂಸ್ಕøತದಲ್ಲಿದ್ದವು. ವೇದಗಳು, ಉಪನಿಷತ್ತುಗಳು, ಭಗವದ್ಗೀತೆ ಎಲ್ಲ ಸಂಸ್ಕøತ ಗ್ರಂಥಗಳು. ಸಂಸ್ಕøತ ಬಾರದ ಜನ ತಮ್ಮ ಧರ್ಮದ ಮೂಲಗಳಿಂದ ದೂರ ಉಳಿಯುವ ಸ್ಥಿತಿಯಲ್ಲಿದ್ದಾಗ ಶರಣರು ‘ವಚನ ಸಾಹಿತ್ಯ’ದ ಮೂಲಕ ಜೀವ ತುಂಬಿದಂತೆ ಮುಂದೆ ದಾಸರು ಕೀರ್ತನೆಗಳ ಮೂಲಕ ಸರಳವಾದ ಕನ್ನಡದಲ್ಲಿ ನಿರೂಪಿಸಿದರು.
   ಸಂಸ್ಕøತ ಹಾಗೂ ಕನ್ನಡ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯವನ್ನು ಸಾಧಿಸಿದ್ದ ಕೇಶವದಾಸರು ಕೀರ್ತನೆ ಮಾಡುವಾಗ ನಾನಾ ಭಾಷೆಗಳ ಪ್ರಯೋಗದಿಂದ ಎಲ್ಲಾ ವರ್ಗದವರನ್ನು ಆಕರ್ಷಿಸುವಲ್ಲಿ ಸಫಲರಗುತ್ತಿದ್ದರೆಂದು ಒಂದು ಕಡೆ ಪಂಡಿತ ಸ್ವಾಮಿಗೌಡ ಹೇಳುತ್ತಾರೆ.
ಇನ್ನೊಂದು ಕಡೆ ಪ್ರೊ. ಎಲ್.ಎಸ್. ಶೇಷಗಿರಿರಾವ್ ಹೀಗೆ ಹೇಳಿದ್ದಾರೆ-“ದಾಸ ಸಾಹಿತ್ಯದಲ್ಲಿ ಈ ಜಗತ್ತಿನ ಬದುಕನ್ನು ಕಾಣುವ ರೀತಿ ಆಧುನಿಕ ಮನಸ್ಸಿಗೆ ಹಿಡಿಸದೇ ಹೋಗಬಹುದು. ಆದರೆ ಅವರು ಡಂಭಾಚಾರವನ್ನು, ಕಪಟತನವನ್ನು ಖಂಡಿಸಿದ್ದು, ಮನುಷ್ಯನ ಬದುಕು ಶುಭ್ರವಾಗಿರಬೇಕು ಎಂದದ್ದು ಎಂದಿಗೂ ಸಲ್ಲುವ ಉಪದೇಶ. ಜೊತೆಗೆ ಅವರು ಕೃಷ್ಣನನ್ನು ವರ್ಣಿಸುವ ರೀತಿ, ಅವನೊಡನೆ ಅವರ ಸಲಿಗೆ-ಹಾಸ್ಯ-ಆಕ್ಷೇಪಣೆ ಇವೆಲ್ಲ ಅವರ ಕೀರ್ತನೆಗಳಿಗೆ ಮಾನವೀಯ ಲೇಪನವನ್ನು ಕೊಡುತ್ತವೆ.”
ಅಂತೆಯೇ ಕೇಶವದಾಸರು ಸುಸಮಾಜದ ನಿರ್ಮಾಣಕ್ಕಾಗಿ ತಮ್ಮ ಕೀರ್ತನ ಸಾಹಿತ್ಯದ ಮೂಲಕ ಶ್ರಮಿಸಿದ್ದಾರೆ. ತಮ್ಮ ಅತ್ಯುಪಯುಕ್ತ ಗ್ರಂಥಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.
ಕೊಟ್ರೆಶ್ ಎಸ್. ಉಪ್ಪಾರ್,ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794

ಕನ್ನಡ ಸಾಹಿತ್ಯದ ಗದ್ಯ ಶಿಲ್ಪಿ- ನಾಡೋಜ ದೇಜಗೌ- ಕೊಟ್ರೇಶ್ ಎಸ್. ಉಪ್ಪಾರ್, ಆಲೂರು

ಕನ್ನಡ ಸಾಹಿತ್ಯದ ಗದ್ಯ ಶಿಲ್ಪಿ- ನಾಡೋಜ ದೇಜಗೌ
    ಕನ್ನಡ ಸಾಹಿತ್ಯದಲ್ಲಾದ ನವೊದಯ ಕ್ರಾಂತಿ ನಮಗೆ ನಿಚ್ಚಳವಾಗಿ ಕಾಣುವುದು ಇಪ್ಪತ್ತೇಳನೆಯ ಶತಮಾನದ ಆದಿಭಾಗದಿಂದ. ಈ ಕ್ರಾಂತಿ ಹನ್ನೆರಡನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಿಂದ ಸಂಪೂರ್ಣವಾಗಿ ಭಿನ್ನವಾದುದು. ಅಂದಿನ ಕ್ರಾಂತಿ ಬಹುಮುಖ್ಯವಾಗಿ ಧರ್ಮಮೂಲವಾದುದಾಗಿದ್ದರೆ ಇಲ್ಲಿ ನಡೆದದ್ದು ವಿಶ್ವ ವಿಶಾಲವಾದ ಲೌಕಿಕ ಜ್ಞಾನ ಸಾಧನೆಯನ್ನು ಹೆಗ್ಗುರಿಯಾಗಿಟ್ಟುಕೊಂಡಿತು. ಇಲ್ಲಿಯ ಮುಖ್ಯ ಲಕ್ಷಣ ವೈಜ್ಞಾನಿಕ ಮನೋಭಾವನೆ. ಈ ಮನೋಭಾವನೆಗೆ ಬೀಜ ಭೂತವಾದುದು ಸ್ವತಂತ್ರ ವಿವೇಚನೆ. ಬುದ್ಧಿಗೆ ಇಲ್ಲಿ ಪ್ರಾಧಾನ್ಯ. ಮತಸೂಚಕ ಭಾವನೆಗಳಿಗೆ ಪ್ರಾಧಾನ್ಯತೆ ತಗ್ಗಿ ವಿಶಾಲ ಭಾವನೆಗಳಿಗೆ ಇಂಬು ದೊರಕಿತು.
    ಕುವೆಂಪುರಾದಿಯಾಗಿ ಅವರ ಪರಂಪರೆಯಲ್ಲಿಯೇ ಬೆಳೆದು ಬಂದ ಜಿ.ಎಸ್.ಎಸ್, ಹಾ.ಮ. ನಾಯಕ, ಸಿದ್ಧಯ್ಯ ಪುರಾಣಿಕ, ದೇ.ಜ. ಗೌ, ಡಾ. ಸಿ.ಪಿ.ಕೆ, ಜ.ಹೊ.ನಾ, ಡಾ. ಮಳಲಿ ಮುಂತದ ಹಲವಾರು ಸಾಹಿತ್ಯ ದಿಗ್ಗಜರು ವೈಚಾರಿಕತೆಯ ಹರಿಕಾರರಾಗಿ ವಿಶ್ವ ಮಾನವೀಯ ನೆಲೆಯಲ್ಲಿ ಚಿಂತನಾಶೀಲರಾಗಿ ಸಾಹಿತ್ಯ ಕಾಯಕಯೋಗಿಗಳಾಗಿದ್ದು ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮವನ್ನೇ ಸೃಷ್ಟಿಸಿತೆನ್ನಬಹುದು.
    ಅದರಲ್ಲೂ ದೇ.ಜವರೇಗೌಡರು ಕುವೆಂಪು ಕಂಡ ಅನೇಕ ಕನಸುಗಳನ್ನು ನನಸು ಮಾಡಿದ ಅಪೂರ್ವ ವ್ಯಕ್ತಿ. ನೂರಾರು ವಿಭಿನ್ನ ರೀತಿಯ ಸಾಹಿತ್ಯ ರತ್ನಗಳು ನಾಡು ನುಡಿಗೆ ನೀಡುವುದರ ಜೊತೆಗೆ ‘ಗೋಕಾಕ ಚಳುವಳಿ’, ಗಡಿವಿವಾದ ಚಳುವಳಿ, ಕಾವೇರಿ ಚಳುವಳಿ ಹೀಗೆ ಹತ್ತು ಹಲವು ಭಾಷಾ ಸಂಘಟನೆಗಾಗಿ ತನು ಮನವರ್ಪಿಸಿದ ಧೀಮಂತ ವ್ಯಕ್ತಿತ್ವ ದೇ.ಜ.ಗೌ ಅವರದು. ಇವರು 1918 ಜುಲೈ 6ರಂದು ಚನ್ನಪಟ್ಟಣ ತಾಲ್ಲೂಕಿನ ಚಕ್ಕರೆ ಗ್ರಾಮದಲ್ಲಿ ಜನಿಸಿದರು. ತಂದೆ ದೇವೇಗೌಡ ತಾಯಿ ಚೆನ್ನಮ್ಮ. ಕಡು ಬಡತನದಲ್ಲಿ ಬೆಳೆದು ಬಂದ ದೇ.ಜ.ಗೌ ತಮ್ಮಲ್ಲಿಯ ಉತ್ಸಾಹ, ಕ್ರೀಯಾಶಿಲತೆ, ಕಲ್ಪನಾ ಶಕ್ತಿಗಳಿಂದ ಒಂದೊಂದೆ ಮೆಟ್ಟಿಲುಗಳನ್ನು ಏರಿ ಉನ್ನತ ಸ್ಥಾನವನ್ನು ಪಡೆದುಕೊಂಡವರು. ಕನ್ನಡದ ಬೆಳವಣಿಗೆಗಾಗಿ ಇವರು ನಡೆಸಿದ ಪ್ರಯತ್ನಗಳು, ರೂಪಿಸಿದ ಯೋಜನೆಗಳು ಇವರಿಗೆ ಕನ್ನಡ ನಾಡಿನಾದ್ಯಂತ ಒಳ್ಳೆಯ ಕೀರ್ತಿ, ಗೌರವಗಳನ್ನು ತಂದು ಕೊಟ್ಟವು.
      ದೇಜಗೌ ಸ್ನಾತಕೊತ್ತರ ಕನ್ನಡ ಪದವಿ ಪಡೆದ ನಂತರ ಮೂರು ವರ್ಷ ಸೆಕ್ರೆಟರಿಯೆಟ್‍ನಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿ ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಉಪನ್ಯಾಸ ವೃತ್ತಿ ಮಾಡಿ, 1949ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆಗೆ ಸೇರಿ, 1955ರಲ್ಲಿ ಉಪಪ್ರಾಧ್ಯಾಪಕರಾದರು. 1957ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪರೀಕ್ಷಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, 1960ರಲ್ಲಿ ಶಿವಮೊಗ್ಗ ಸಹ್ಯಾದ್ರಿ ಕಾಲೇಜ್ ಪ್ರಾಂಶುಪಾಲರಾದರು. 1964ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇರಿದರು. 1966ರಲ್ಲಿ ಕುವೆಂಪುರಂತಹ ಮಹಾನ್ ಚೇತನಗಳೊಂದಿಗೆ ಕನ್ನಡ ಅಧ್ಯಯನ ಸಂಸ್ಥೆಯ ಸ್ಥಾಪನೆಗೆ ಕಾರಣರಾದರು.
      1969ರ ನವೆಂಬರ್ 1ರಂದು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಆಯ್ಕೆಯಾದ ಇವರು ವಿಶ್ವ ವಿದ್ಯಾನಿಲಯವನ್ನು ಜಾಗತಿಕವಾಗಿ ಹೆಸರಾಗುವಂತೆ ಮಾಡಿದರು. 1994ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಗೆ ‘ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ’ ಎಂದು ಪುನರ್ ನಾಮಕರಣ ಮಾಡಿದರು.
     ಜಾಗತಿಕ ಮಹಾನ್ ಲೇಖಕರಾದ ಟಾಲ್‍ಸ್ಟಾಯ್ ಅವರ ‘ವಾರ್ ಅಂಡ್ ಪೀಸ್’ ಎಂಬ ಕೃತಿಯನ್ನು ‘ಯುದ್ಧ ಮತ್ತು ಶಾಂತಿ’ ರೂಪದಲ್ಲಿ ಕನ್ನಡಕ್ಕೆ ತಂದು ಕೊಟ್ಟ ಕೀರ್ತಿ ದೇ.ಜ.ಗೌ ಅವರಿಗೆ ಸಲ್ಲುತ್ತದೆ. ಹಾಗೆಯೇ ಕನ್ನಡ ಜಾನಪದ ಅಧ್ಯಯನ ಬೆಳವಣಿಗೆಯಲ್ಲಿ ಹೊಸ ಆಯಾಮವನ್ನು ಸೃಷ್ಠಿಸಿದವರಲ್ಲಿ ಇವರು ಪ್ರಮುಖರು.
       ಅದರಲ್ಲೂ ಸ್ನಾತಕೋತ್ತರ ಹಂತದಲ್ಲಿ ಜಾನಪದವನ್ನು ಕಲಿಯಲು ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದರು. ಕರ್ನಾಟಕ ಜಾನಪದ ಪರಿಷತ್ತು, ಜಾನಪದ ವಸ್ತು ಸಂಗ್ರಹಾಲಯ ಇವುಗಳ ಹುಟ್ಟಿಗೂ ಕಾರಣರಾಗಿ ಪರಂಪರೆಯ ಮಹೋನ್ನತಿಯನ್ನು ಬಯಸಿದ, ಶ್ರಮಿಸಿದ ಅಪ್ರತಿಮ ವ್ಯಕ್ತಿತ್ವ ದೇಜಗೌ ಅವರದು.
    ಕನ್ನಡ ಜಾನಪದ ಸಾಹಿತ್ಯ ಸಾರಸ್ವತ ಲೋಕಕ್ಕೆ ‘ಜಾನಪದ ಅಧ್ಯಯನ’, ‘ಜಾನಪದ ಸೌಂದರ್ಯ’, ‘ಜಾನಪದ ವಾಹಿನಿ’ ಮುಂತಾದ ಮಹತ್ವದ ಕೃತಿ ರತ್ನಗಳನ್ನು ನೀಡಿದ್ದಾರೆ. ಜಾನಪದ ವ್ಯಾಪಕತೆ, ಸಂಗ್ರಹ, ಸಂಪಾದನೆ, ವೈಜ್ಞಾನಿಕ ದೃಷ್ಠಿ ಮುಂತಾದ ನಿಟ್ಟಿನಲ್ಲಿ ಕಾಯಕಗೈದು ಈ ಕ್ಷೇತ್ರಕ್ಕೆ ನವ ಚೈತನ್ಯವನ್ನುಂಟು ಮಾಡಿದರು.
      ತಮ್ಮ ಗುರುಗಳಾದ ಕುವೆಂಪುರವರು ಕಟ್ಟಿಕೊಂಡ ಕನಸುಗಳನ್ನು ನನಸು ಮಾಡಿ ವಿಶ್ವದಲ್ಲೇ ಉನ್ನತ ವಿಶ್ವವಿದ್ಯಾಲಯವೆಂದು ಖ್ಯಾತಿ ಗಳಿಸುವಂತೆ ಮೈಸೂರು ವಿಶ್ವವಿದ್ಯಾಲಯವನ್ನು ರೂಪಿಸಿದ ಕೀರ್ತಿ ದೇಜಗೌ ಅವರದು. ವಿಚಾರ, ವಿಮರ್ಶೆ, ಸಂಪಾದನೆ, ಅನುವಾದ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಬೃಹತ್ ಪ್ರಮಾಣದಲ್ಲಿ ಕೃಷಿಗೈದ ಇವರು ‘ಹೋರಾಟದ ಬದುಕು’ ಎಂಬ ವಿಶಿಷ್ಟ ರೀತಿಯ ಆತ್ಮ ಕಥನವನ್ನು ಬರೆದಿದ್ದಾರೆ. ಆದ್ದರಿಂದಲೇ ಇವರನ್ನು ಖ್ಯಾತ ವಿಮರ್ಶಕ, ಸಂಶೋಧಕರಾದ ಡಾ.ಜಿ.ಆರ್. ತಿಪ್ಪೇಸ್ವಾಮಿಯವರು ‘ಪರಂಪರೆಯ ಪ್ರತಿನಿಧಿ’ ಎಂದು ಮನದುಂಬಿ ಹಾಡಿ ಹೊಗಳಿದ್ದಾರೆ.
     ಗದ್ಯ ಶೈಲಿ, ಗದುಗಿನ ಭಾರತ, ನಂಜುಂಡಕವಿ, ಕುವೆಂಪು ಕೆಲವು ಅಧ್ಯಯನಗಳು, ನೂರೆಂಟು ಪುಸ್ತಕಗಳು, ಬೆರೆಕೆ ಸೊಪ್ಪುಗಳು, ಮುನ್ನುಡಿಗಳು, ಶರಣಪಥ, ಷಡಕ್ಷರದೇವ, ಸಾಹಿತಿಗಳ ಸಂಗದಲ್ಲಿ, ನಿರಂತರ, ಸಾಹಿತ್ಯ ಮಾರ್ಗ, ಭಾಷಾಂತರ ಕಲೆ, ಜಾನಪದ ಸೌಂದರ್ಯ, ಕುವೆಂಪು ದರ್ಶನ ಮತ್ತು ಸಂದೇಶ, ಜಾನಪದ ಅಧ್ಯಯನ, ‘ಆಂಡಯ್ಯ ಕವಿ’ ಮುಂತಾದ ವಿಚಾರ ವಿಮರ್ಶೆ ಕೃತಿರತ್ನಗಳನ್ನು ಕನ್ನಡ ಸಾಹಿತ್ಯದೊಡಲಿಗೆ ನೀಡಿದ್ದಾರೆ.
      ದೇಜಗೌರವರು ಆಕರ್ಷಣೆಯ ಬರವಣಿಗೆಯ ಮಹತ್ವದ ಗದ್ಯ ಶಿಲ್ಪಿ. ಆದ್ದರಿಂದಲೇ ಕುವೆಂಪುರವರ ‘ಶ್ರೀ ರಾಮಾಯಣದರ್ಶನಂ’ ಮಹಾಕಾವ್ಯವನ್ನು ‘ವಚನ ಚಂದ್ರಿಕೆ’ ಎಂಬ ಗದ್ಯ ರೂಪದ ಕೃತಿಗೆ ಇಳಿಸಿದರು. ಟಾಲ್‍ಸ್ಟಾಯ್‍ನ ‘ರೆನಾಸೆನ್ಸ್’ ಕೃತಿಯನ್ನೂ ‘ಪುನರುತ್ಥಾನ’ ಎಂಬುದಾಗಿಯೂ ಜೆನ್ ಆಸ್ಟಿನ್‍ರವರ ‘ಪ್ರೈಡ್ ಎಂಡ್ ಪ್ರೆಜುಡಿಸ್’ ಕೃತಿಯನ್ನು ‘ಹಮ್ಮು ಬಿಮ್ಮು’ ಎಂಬ ಹೆಸರಿನಿಂದ ಕನ್ನಡಕ್ಕೆ ತಂದ ಕೀರ್ತಿ ಇವರದು. ರಾಷ್ಟ್ರ ಕವಿ ಕುವೆಂಪು, ಅಂಬೇಡ್ಕರ್, ಗೋಖಲೆ, ನಂಜುಂಡ ಕವಿ, ಮೇರಿ ಕ್ಯೂರಿ, ಋಷಿಕವಿ ರವಿಂದ್ರರು, ಕರ್ನಾಟಕದ ರೂವಾರಿ, ಕನ್ನಡ ನಾಡಿನ ಕಲಿ, ನಾರಾಯಣ ಗುರು ಮುಂತಾದ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ವಿದೇಶದಲ್ಲಿ ನಾಲ್ಕು ವಾರ, ಪ್ರವಾಸಿಯ ದಿನಚರಿ, ಆಫ್ರಿಕಾ ಯಾತ್ರೆ ಮುಂತಾದ ಅತ್ಯುತ್ತಮ ಪ್ರವಾಸ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.
    ಸೃಜನಶೀಲ ಹಾಗೂ ಸೃಜನೇತರ ಸಾಹಿತ್ಯಗಳೆರಡರಲ್ಲಿಯೂ ಸಿದ್ಧಿ ಪಡೆದಿದ್ದ ದೇ.ಜ.ಗೌ ರವರು ‘ಅಜಿತ ತೀರ್ಥಂಕರ ಪುರಾಣ ತಿಲಕಂ’, ಕಬ್ಬಿಗರ ಕಾವ್ಯಂ, ಗಿರಿಜಾ ಕಲ್ಯಾಣ, ಲಿಲಾವತಿ ಪ್ರಬಂಧಂ, ಜೈಮಿನಿ ಭಾರತ ಸಂಗ್ರಹ, ಧರ್ಮಾಮೃತ ಸಂಗ್ರಹ, ಬಸವ ಸಂಹಿತೆ ಮುಂತಾದ ಸಂಪಾದಿತ ಕೃತಿಗಳನ್ನು ನೀಡುವುದರ ಮೂಲಕ ಗ್ರಂಥ ಸಂಪಾದನಾ ಕ್ಷೇತ್ರದಲ್ಲಿಯೂ ಅನೇಕ ಉತ್ತಮೋತ್ತಮ ಕೃತಿಗಳನ್ನು ಸಂಪಾದಿಸಿದ್ದಾರೆ.
    ಇವರು ಉಪಕುಲಪತಿಗಳಾಗಿದ್ದ ಕಾಲದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ‘ಜಾನಪದ ವಸ್ತು ಸಂಗ್ರಹಾಲಯ’ ವನ್ನು ಸ್ಥಾಪಿಸಿ ಸಾವಿರಾರು ಸಂಶೋಧಕ ವಿದ್ಯಾರ್ಥಿಗಳಿಗೆ ಬೆಳಕಾದರು. ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಸ್ಥಾಪಿಸಿ ಮಕ್ಕಳಿಗಾಗಿ ಶಾಲೆ ಸ್ಥಾಪಿಸಿ ಶಿಕ್ಷಣ ಕ್ರಾಂತಿಯನ್ನು ಮಾಡಿದ್ದಾರೆ. ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷರಾಗಿ ಶಿಶು ಸಾಹಿತಿಗಳಿಗೆ ಪ್ರೇರಕರಾಗಿ ಮಾರ್ಗದರ್ಶನ ನೀಡುತ್ತಾ ಸಾಹಿತ್ಯ ಪೋಷಕರಾಗಿದ್ದಾರೆ.
     ದೇಹಕ್ಕೆ ಮಾತ್ರ ವಯಸ್ಸು ಮನಸ್ಸಿಗಲ್ಲ ಎಂಬಂತೆ ಶತಮಾನದ ಹೊಸ್ತಿಲಲ್ಲಿರುವ ಇವರು ಇಂದಿಗೂ ಸತತವಾಗಿ ಬರವಣಿಗೆ, ಕನ್ನಡ ಸಮಸ್ಯೆಗಳಿಗೆ ಸ್ಪಂದಿಸುವುದು, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕಾಗಿ ಹೋರಾಟ, ಕಾವೇರಿ ವಿವಾದ, ಬೆಳಗಾವಿ ಗಡಿ ವಿವಾದ ಹೀಗೆ ಹತ್ತು ಹಲವು ಚಳವಳಿಗಳಲ್ಲಿ ಭಾಗಿಯಾಗಿ ನವಯುವಕರಂತೆ ಕಾಯಕಯೋಗಿಗಳಾಗಿರುವುದು ಅನುಕರಣೀಯ ಹಾಗೂ ಶ್ಲಾಘನೀಯವಾದುದು.
ಕನ್ನಡದ ಪುರೋಭಿವೃದ್ಧಿಗಾಗಿ ದುಡಿದ ದೇಜೆಗೌ ಅವರ ಪರಿಶ್ರಮವನ್ನು ಮತ್ತು ಅಪಾರ ಸಂಖ್ಯೆಯ ಅಮೂಲ್ಯ ಕೃತಿಗಳನ್ನು, ಕಾರ್ಯಕ್ಷಮತೆಯನ್ನು ಮೆಚ್ಚಿ 1970ರಲ್ಲಿ ಬೆಂಗಳೂರಿನಲ್ಲಿ ನಡೆದ 42ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷಗಿರಿ ಪಟ್ಟ ಅಲಂಕರಿಸಿತ್ತು.
ಕನ್ನಡದ ಕಟ್ಟಾಳುವೆಂದೇ ಹೆಸರಾದ ಇವರಿಗೆ ನೂರಾರು ಗೌರವಾದರ ಪ್ರಶಸ್ತಿಗಳು, ಪುರಸ್ಕಾರಗಳು ಸಂದಿವೆ.
* 1975 -ಗೌರವ ಡಾಕ್ಟರೇಟ್- ಕರ್ನಾಟಕ ವಿಶ್ವವಿದ್ಯಾಲಯ
* 1998 -ಪಂಪ ಪ್ರಶಸ್ತಿ- ಸಮಗ್ರ ಸಾಹಿತ್ಯ
ಸೇರಿದಂತೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕರ್ನಾಟಕ ರತ್ನ, ಕನಕ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ಪ್ರಶಸ್ತಿ ಮುಂತಾದ ಪ್ರಶಸ್ತಿ ಸಲ್ಲುವುದರ ಮೂಲಕ ಈ ಪ್ರಶಸ್ತಿಗಳು ದೇಜಗೌರವರಿಗೆ ಮುಡಿಪಾಗುವುದರ ಮೂಲಕ ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿವೆ ಎಂದರೆ ಅತಿಶಯೋಕ್ತಿಯಾಗಲಾರದು.
ಕನ್ನಡ ಭಾಷೆಯ ಹಿತಚಿಂತಕರಾದ ಇವರು ಕುವೆಂಪು ಅವರ ವಿಚಾರ ಧಾರೆಯನ್ನು ಕರಗತ ಮಾಡಿಕೊಂಡು ಕನ್ನಡತ್ವದ ನೆಲೆಯಲ್ಲಿ ಜೀವಿಸುತ್ತಿದ್ದಾರೆ.
ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
                                                                                         ಹಾಸನ-573201, ಮೊ-9483470794


ಕನ್ನಡದ ಅಸಾಧ್ಯ ಪತ್ರಿಕೋದ್ಯಮಿ-ಪಾಟೀಲ ಪುಟ್ಟಪ್ಪ-ಕೊಟ್ರೆಶ್ ಎಸ್. ಉಪ್ಪಾರ್, ಆಲೂರು


    ಓರ್ವ ಅಪ್ರತಿಮ ಮಾತುಗಾರರಾಗಿ, ನಾಡು ನುಡಿಯ ಹೋರಾಟಗಾರರಾಗಿ, ಸಾಹಿತಿಯಾಗಿ ಎಲ್ಲದಕ್ಕೂ ಮಿಗಿಲಾಗಿ ಕನ್ನಡದ ಅಸಾಧ್ಯ ಪತ್ರಕರ್ತರಾಗಿ ಪಾಪು ಕನ್ನಡಿಗರ ಹೃನ್ಮನಗಳಲ್ಲಿ ಬೆರೆತುಹೋಗಿದ್ದಾರೆ.
    ಪಾಪು ಎಂಬ ಕಾವ್ಯನಾಮದಿಂದಲೇ ಮನೆಮಾತಾಗಿರುವ ಪಾಟೀಲ ಪುಟ್ಟಪ್ಪನವರು ಜನಿಸಿದ್ದು 1921 ಜನವರಿ 21 ರಂದು ಹಾವೇರಿ ತಾಲ್ಲೂಕಿನ ಕುರುಬಗೊಂಡದಲ್ಲಿ. ಕುರುಬಗೊಂಡ, ಬ್ಯಾಡಗಿ ಹಾವೇರಿಗಳಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪಡೆದ ಪಾಪು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಮುಗಿಸಿ ಬೆಳಗಾವಿಯ ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ ಮುಗಿಸಿದರು.
    ಆಗ ಭಾರತದಲ್ಲಿ ಗಾಂಧಿ ಹಾಗೂ ಹಲವಾರು ರಾಷ್ಟ್ರ ನಾಯಕರ ನೇತೃತ್ವದಲ್ಲಿ ಸ್ವಾತಂತ್ರ ಹೋರಾಟ ತೀವ್ರ ಸ್ವರೂಪ ಪಡೆದಿತ್ತು. ಚಲೇಜಾವ್ ಚಳುವಳಿಯ ಕಾವು ತೀವ್ರಗೊಂಡು ಯುವಕರನ್ನೆಲ್ಲ ತನ್ನತ್ತ ಸೆಳೆದುಕೊಂಡಿತು. ನಾಡು ನುಡಿ ರಾಷ್ಟ್ರ ಪ್ರೇಮದ ವಿಷಯದಲ್ಲಿ ಸದಾ ತುಡಿಯುತ್ತಿದ್ದ ಪಾಪು ಈ ಹೋರಾಟದಲ್ಲಿ ಪಾಲ್ಗೊಂಡರು. ಚಲೇಜಾವ್ ಚಳುವಳಿ ಕಾಲದಲ್ಲಿ ವಿದ್ಯಾರ್ಥಿ ಸಂಘಟನೆ ಮಾಡಿದ ಆಪಾದನೆಯಲ್ಲಿ ಬಂದಿತರಾದರು. ನಂತರ ಜಾಗೃತರಾದ ‘ಪಾಪು’ ಸ್ವಾತಂತ್ರ ಚಳವಳಿ ವಿಷಯವಾಗಿ ಒಂದು ವರ್ಷಗಳ ಕಾಲ ಭೂಗತವಾಗಿಯೇ ಪರಿಣಾಮಕಾರಿಯಾಗಿ ಸಂಘಟಿಸಿ ಕಾರ್ಯ ನಿರ್ವಹಿಸಿದರು.
   ಒಮ್ಮೆ ಇವರು ಶಾಲಾ ವಿದ್ಯಾರ್ಥಿಯಾಗಿ ಸ್ವಯಂ  ಸೇವಕರಾಗಿ ಗಾಂಧೀಜಿಯನ್ನು ಸ್ವಾಗತಿಸಿದಾಗ ಅವರಿಂದ ಬೆನ್ನುತಟ್ಟಿಸಿಕೊಂಡ ಕೀರ್ತಿ ಪಾಟೀಲ ಪುಟ್ಟಪ್ಪನವರದು.
   ಕ್ರಿ.ಶ 1945ರಲ್ಲಿ ವಕೀಲಿ ಕೆಲಸಕ್ಕೆಂದು ಮುಂಬೈಗೆ ತೆರಳಿದ ಪಾಪು ವೃತ್ತಿ ಮಾಡುತ್ತಲೇ ಅಲ್ಲಿಯ ಪತ್ರಿಕೆಗಳಿಗೆ ಸ್ವಾತಂತ್ರ ಚಳವಳಿ ಹಾಗೂ ಜಾಗೃತಿ ಬಗ್ಗೆ, ದೇಶ ಪ್ರೇಮ ಮೊಳೆತದ ಬಗ್ಗೆ ಆಂಗ್ಲಭಾಷೆಯಲ್ಲಿಯೇ ವಿಚಾರಪೂರಿತ ಲೇಖನಗಳನ್ನು ಬರೆದರು. ಇವರ ಅತ್ಯಾಕರ್ಷಕ ಬರಹಗಳು ಭಾರತದ ಉಕ್ಕಿನ ಮನುಷ್ಯರೆಂದೇ ಖ್ಯಾತಿವೆತ್ತ ಸರ್ದಾರ್ ವಲ್ಲಭಾಯಿ ಪಟೇಲರ ಗಮನ ಸೆಳೆದವು.
    ತತ್ಪರಿಣಾಮ ಪಾಪು ಹಾಗೂ ಪಟೇಲರ ಸಂಪರ್ಕವೇರ್ಪಟ್ಟಿತು. ಆಗ ವಲ್ಲಬಾಯಿ ಪಟೇಲರು ಪಾಪುರವರಿಗೆ ‘ತಮ್ಮ ಹರಿತವಾದ, ದೇಶಪ್ರೇಮ ಜಾಗೃತೆಗೊಳಿಸುವ ಚಿಂತನೆಗಳು ಅವಶ್ಯಕವಾಗಿರುವುದರಿಂದ ಪತ್ರಿಕೋದ್ಯಮಿಯಾಗಿಯೇ ಕಾರ್ಯ ನಿರ್ವಹಿಸಿ’ಎಂದು ಸಲಹೆ ನೀಡಿದ ಹಿನ್ನೆಲೆಯಲ್ಲಿ ಪಾಪುರವರ ದೃಷ್ಟಿ ಪತ್ರಿಕೋದ್ಯಮದತ್ತ ಹರಿಯಿತು. ಆಗ ಅಲ್ಲಿನ ಅನೇಕ ಪ್ರತಿಷ್ಠಿತ ಪತ್ರಿಕೆಗಳು ಪಾಪುರವರಿಗೆ ಆಹ್ವಾನವಿತ್ತರೂ ಅವರು ಒಪ್ಪದೆ ಕರ್ನಾಟಕದಲ್ಲಿಯೇ ತನ್ನ ಪತ್ರಿಕಾ ವೃತ್ತಿ ಆರಂಭಿಸಬೇಕೆಂಬ ಹಂಬಲದಿಂದ ತಾಯ್ನಾಡಿಗೆ ಹಿಂದಿರುಗಿದರು. ಆಗ ಕರ್ನಾಟಕದಲ್ಲಿ ತುಂಬ ಹೆಸರು ಮಾಡಿದ್ದ ಪ್ರಚಲಿತ ಪತ್ರಿಕೆಯಾಗಿದ್ದ ‘ವಿಶಾಲ ಕರ್ನಾಟಕ’ ವಾರ ಪತ್ರಿಕೆಗೆ ಸೇರಿಕೊಂಡರು. ನಂತರ ಹಂತಹಂತವಾಗಿ ಪ್ರಗತಿ ಸಾಧಿಸುತ್ತಾ ಅದನ್ನು ದಿನ ಪತ್ರಿಕೆಯನ್ನಾಗಿ ಮಾಡಿದರು.
    ಪತ್ರಿಕೋದ್ಯಮದ ಬಗ್ಗೆ ಇನ್ನೂ ಆಳ ಅರಿವುಗಳನ್ನು ಪಡೆಯಬೇಕೆಂಬ ಹಂಬಲದಿಂದ 1949ರಲ್ಲಿ ಕ್ಯಾಲಿಫೋರ್ನಿಯಾಗೆ ತೆರಳಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಮೇರಿಕದಿಂದ ಹಿಂದಿರುಗಿ ಬಂದನಂತರ ‘ನವಯುಗ’ ಎಂಬ ಮಾಸಪತ್ರಿಕೆಯನ್ನು ತಮ್ಮ ಸಂಪಾದಕತ್ವದಲ್ಲಿ ಪ್ರಾರಂಭಿಸಿದರು. ನವೀನ ವಿಚಾರ, ಚಿಂತನ ಮಂಥನಗಳನ್ನೊಳಗೊಂಡಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಹಗಲಿರುಳು ದುಡಿದರು.
       ಕರ್ನಾಟಕದ ಏಕೀಕರಣ ಕುರಿತಂತೆ ನಾಡು ನುಡಿ ಚಿಂತನೆಗಳ ಬಗ್ಗೆ ಬರೆಯುತ್ತಾ ಕನ್ನಡಿಗರನ್ನು ಒಂದು ಗೂಡಿಸುವ ಕಾಯಕ ಮಾಡಿದರು. ನಂತರ 1954ರಲ್ಲಿ ‘ಪ್ರಪಂಚ’ ಎಂಬ ಹೊಸ ಮಾಸಿಕ ಪತ್ರಿಕೆಯನ್ನು ಸ್ಥಾಪನೆ ಮಾಡಿದರು. 1957ರಲ್ಲಿ ‘ಸಂಗಮ’ಎಂಬ ಕನ್ನಡದ ಪ್ರಥಮ ಡೈಜೆಸ್ಟ ಹೊರ ತಂದರು.
   ಸದಾ ಹೊಸತನದತ್ತ ತುಡಿಯುತ್ತಿದ್ದ ಪಾಪು ಮನಸ್ಸು ನಾಡು-ನುಡಿಯ ವಿಷಯದಲ್ಲಿ ಸದಾ ಚಿಂತನಶೀಲವಾಗಿರುತ್ತಿತ್ತು. ಆದ್ದರಿಂದಲೆ ಅವರ ಪ್ರಾಯೋಗಿಕ ಮನಸ್ಸು ಒಂದಿಲ್ಲೊಂದು ಕಾರ್ಯದಲ್ಲಿ ತಲ್ಲಿನವಾಗಿರುತ್ತಿತ್ತು.
   ಇವರು 1959ರಲ್ಲಿ ಆರಂಭಿಸಿದ ‘ವಿಶ್ವವಾಣಿ’ ಎಂಬ ಮತ್ತೊಂದು ದಿನಪತ್ರಿಕೆ ಪ್ರಮುಖವಾದುದು. ಚಲನಚಿತ್ರ ಮಾಸಿಕವಾಗಿ ಆರಂಭಿಸಿದ ಇವರ ‘ಮನೋರಮಾ’ ತುಂಬಾ ಹೆಸರು ಮಾಡಿತು. ತದನಂತರ ‘ಸ್ತ್ರೀ’ ಎಂಬ ಮಾಸಿಕವನ್ನು ಹೊರ ತಂದರು. ಹುಬ್ಬಳ್ಳಿ ಇವರ ಪತ್ರಿಕಾ ರಂಗದ ಕರ್ಮಭೂಮಿಯಾಯಿತು. ಹೀಗೆ ಪಾಪು ಐದಾರು ದಶಕಗಳಿಗೂ ಹೆಚ್ಚು ಕಾಲ ಪತ್ರಿಕೊದ್ಯಮಿಯಾಗಿಯೇ ದುಡಿದರು. ಇನ್ನೂ ಈ 94ರ ಪ್ರಾಯದಲ್ಲಿ ಕಾರ್ಯನಿರತರಾಗಿರುವುದು ಇವರ ದಕ್ಷತೆಗೆ ಹಿಡಿದ ಕನ್ನಡಿಯಾಗಿದೆ.
ಪಾಪು ಎಂದರೆ ಕನ್ನಡಿಗರು ಬರಹಗಾರರೆಂದೆ ಪರಿಭಾವಿಸುವುದು ಹೆಚ್ಚು. ಇಷ್ಟೆ ಅಲ್ಲದೆ ಹಲವಾರು ಬರಹಗಳು ಸಂಕಲನಗಳಾಗಿ ಹೊರಬಂದಿವೆ.

ಸಾಹಿತ್ಯ ಕ್ಷೇತ್ರ ಃ
   ಪಾಪು ಕೇವಲ ಪತ್ರಿಕಾ ರಂಗಕ್ಕೆ ಮಾತ್ರ ಸೀಮಿತಗೊಳ್ಳಲಿಲ್ಲ. ಅವರಲ್ಲೊಬ್ಬ ಉತ್ತಮ ಬರಹಗಾರ, ಮಾತುಗಾರ, ಹೋರಾಟಗಾರ ಹೀಗೆ ಹಲವು ವ್ಯಕ್ತಿತ್ವದ ನೆಲೆ ನೋಡಬಹುದು.
  ಕರ್ನಾಟಕದ ಕಥೆ, ನಮ್ಮ ದೇಶ ನಮ್ಮ ಜನ, ನನ್ನದು ಕನ್ನಡ ನಾಡು, ಪಾಪು ಪ್ರಪಂಚ, ಶಿಲಾ ಬಾಲಿಕೆ ನುಡಿದಳು, ಗವಾಕ್ಷಿ ತೆರೆಯಿತು, ಸಾವಿನ ಮೇಜವಾನಿ, ಕಲಾ ಸಂಗಮ, ನೆಲದ ನಕ್ಷತ್ರಗಳು, ಪ್ರಪಂಚದ ಪುಟಗಳು, ಉಸಿರಾಗಲಿ ಸಮಗ್ರ ಕನ್ನಡ ಮುಂತಾದ ಅಮೂಲ್ಯ ಕೃತಿಗಳನ್ನು ಪಾಪು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅಲ್ಲದೇ ‘ಸೋವಿಯತ್ ದೇಶ ಕಂಡೆ’ ಎಂಬ ಪ್ರವಾಸ ಕಥನವನ್ನು ಬರೆದಿದ್ದಾರೆ.
ರಾಜಕೀಯ ಕ್ಷೇತ್ರ ಃ
    1962ರಿಂದ 1974ರವರೆಗೆ ಎರಡು ಅವಧಿಗೆ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ತನ್ಮೂಲಕ ಜನರ ಆಶೋತ್ತರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದರ ಮೂಲಕ ಸಾಮಾನ್ಯರ ಸೇವೆ ಮಾಡಿದ್ದಾರೆ. ಗ್ರಾಮಿಣ ಸೊಗಡಿನ ನಾಡು -ನುಡಿ ಪ್ರಗತಿಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರು.
ಶಿಕ್ಷಣ ಕ್ಷೇತ್ರ ಃ
     ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ಪಾಪು ಮಾಡದ ಕ್ಷೇತ್ರವಿಲ್ಲ ಎನ್ನುವಂತೆ ಪತ್ರಿಕಾರಂಗ, ರಾಜಕೀಯ, ಸಾಹಿತ್ಯ, ಸಂಘಟನೆ ಮುಂತಾದವುಗಳಲ್ಲಿ ಗಣನೀಯ ಸೇವೆ ಮಾಡಿದಂತೆ ಶಿಕ್ಷಣ ಕ್ಷೇತ್ರದಲ್ಲಿಯೂ ಛಾಪು ಮೂಡಿಸಿದ್ದಾರೆ.
    ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಧಾರವಾಡ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗಾಗಿ ಚಿಂತನೆ ನಡೆಸಿ ಹಲವಾರು ವಿಷಯಗಳನ್ನು ಸಾಕಾರಗೊಳಿಸಿದ್ದಾರೆ. ಕರ್ನಾಟಕ ವಿಧ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಹಲವಾರು ಜನಾನುರಾಗಿ ಕಾರ್ಯ ಮಾಡಿದ್ದಾರೆ. ಧಾರವಾಡದಲ್ಲಿ ದೊಡ್ಡ ರಂಗ ಮಂದಿರ ನಿರ್ಮಿಸಿದ ಕೀರ್ತಿ ಪಾಪುರವರಿಗೆ ಸಲ್ಲುತ್ತದೆ.
     ಅಂದಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆ ಅಧಿಕಾರದ ಸಂದರ್ಭದಲ್ಲಿ ‘ಕನ್ನಡ ಕಾವಲು ಸಮಿತಿ’ ರಚಿಸಿದಾಗ ಪಾಪು ಅದರ ಮೊದಲ ಅಧ್ಯಕ್ಷರಾದರು. ನಂತರ ದಿನಗಳಲ್ಲಿ ರಾಜ್ಯಾದ್ಯಾಂತ ಪ್ರವಾಸ ಮಾಡಿ ಬೃಹತ್ ಕರ್ನಾಟಕದ ಉಳಿವಿಗೆ ಶ್ರಮಿಸಿದರು. ಆಗ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ ಎಂಬ ಕೂಗು ಬಂದಾಗ ‘ಕನ್ನಡ ನಾಡಿನ ವಿಭಜನೆಯಾಗುವುದಾದರೆ ಅದು ನನ್ನ ಶವದ ಮೇಲೆ ಆಗಲಿ’ ಎಂಬ ಖಡಕ್ ಹೇಳಿಕೆ ನೀಡಿ ಕನ್ನಡದ ಬಗ್ಗೆ ಜಾಗೃತೆ ಮೂಡಿಸಿ ಹೋರಾಟ ನಡೆಸಿದರು.
     ಧರ್ಮಾತೀತ, ಜಾತ್ಯಾತೀತ ನೆಲೆಗಟ್ಟಿನಲ್ಲಿ ಬದುಕಿ ಬಾಳಿದ ಪಾಪುರವರ ನಾಡು-ನುಡಿಯ ಕುರಿತಾದ ಅವಿಸ್ಮರಣೀಯ ಕೊಡುಗೆಗಳನ್ನು ಪರಿಗಣಿಸಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಜನತೆ 2003ರಲ್ಲಿ ಬೆಳಗಾವಿಯಲ್ಲಿ ನಡೆದ 70ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.
    ಪಾಪುರವರ ಅಧ್ಯಕ್ಷತೆಯಲ್ಲಿ ಸಮ್ಮೇಳನವು ಅರ್ಥಪೂರ್ಣವಾಗಿ ಮೂಡಿಬಂದಿತ್ತು. ಇವರ ವಿದ್ವತ್ತನ್ನು, ನಾಡು-ನುಡಿಯ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇದಲ್ಲದೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿ, ಪ್ರತಿಷ್ಠಿತ ನಾಡೋಜ ಪ್ರಶಸ್ತಿ, ಟಿ.ಎಸ್ಸಾರ್ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಮುಂತಾದ ಹಲವಾರು ಮೌಲ್ಯಭರಿತ ಪ್ರಶಸ್ತಿ - ಪುರಸ್ಕಾರಗಳು ಸಂದಿವೆ. ಶತಾಯುಷ್ಯದ ಹೊಸ್ತಿಲಲ್ಲಿರುವ ಪಾಪುರವರ ಅಮೂಲ್ಯ ಸೇವೆ ಕನ್ನಡ ನಾಡು ನುಡಿಗೆ ಸಲ್ಲುತ್ತಿರುವುದು ಕನ್ನಡಿಗರ ಪುಣ್ಯವೇ ಸರಿ.
ಕೊಟ್ರೆಶ್ ಎಸ್. ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794

ಮಂಗಳವಾರ, ಸೆಪ್ಟೆಂಬರ್ 2, 2014

ಆತ್ಮ ಮತ್ತು ಪರಮಾತ್ಮ ಮನುಷ್ಯ ಜೀವನದ ಮಹಾ ಚೇತನಗಳು-ಕೊಟ್ರೇಶ್ ಎಸ್.ಉಪ್ಪಾರ್

ಹಾಸನಃ ಆತ್ಮ ಮತ್ತು ಪರಮಾತ್ಮ ಮನುಷ್ಯ ಜೀವನದ ಮಹಾ ಚೇತನಗಳು. ಆತ್ಮ ಎಂದರೆ ಭೌತಿಕವಾದ ನಾನು, ಪರಮಾತ್ಮ ಎಂದರೆ ಅಗೋಚರ ಶಕ್ತಿಯ ಆಧ್ಯಾತ್ಮಿಕತೆಯ ಅನಿಕೇತನ, ಸುಪ್ತ ಚೇತನವಾಗಿದೆ ಎಂದು ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್ ಹೇಳಿದರು.
ಅವರು ಹಾಸನದ ಬಸವ ಕೇಂದ್ರದ ವತಿಯಿಂದ ನಡೆದ ಮನೆ ಮನೆ ಬಸವ ಜ್ಯೋತಿ ಕಾರ್ಯಕ್ರಮದ ನಿಮಿತ್ತ ಹಾಸನದ ಜಯನಗರ ಬಡಾವಣೆಯ ವಕೀಲರಾದ ಜಗದೀಶ್ ಅವರ ಸಮೃದ್ಧ ನಿವಾಸದಲ್ಲಿ ನಡೆದ ಚಿಂತನ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯದಲ್ಲಿ ಪರಿಪೂರ್ಣ ಜೀವನ ಎಂಬ ವಿಷಯದಡಿ ಉಪನ್ಯಾಸ ನೀಡಿದರು.
ಮನುಷ್ಯ ಜಾಗತಿಕ ತೊಳಲಾಟಗಳಾಚೆಗಿರುವ ಮಾನವೀಯ ನೆಲೆಯ ಸಂಬಂಧದಲ್ಲಿ ಲೀನವಾಗಿ ಆತ್ಮನೇ ಪರಮಾತ್ಮ, ಪರಮಾತ್ಮನೇ ಆತ್ಮನೆಂದರಿತು ವ್ಯಕ್ತಿತ್ತ್ವ ನಿರ್ಮಾಣದ ಆಗಿವಿಕೆಯಲ್ಲಿ ನಿರಂತರತೆಯನ್ನು ಕಂಡುಕೊಳ್ಳುತ್ತಾ ಹೋದಂತೆಲ್ಲಾ ಸೂಕ್ಷ್ಮಗೊಳ್ಳುತ್ತಾ ಸಾಗುತ್ತಾನೆ, ಪ್ರಖರತೆ ಬೀರುತ್ತಾ ಹೋಗುತ್ತಾನೆ. ಬುದ್ಧ, ಬಸವ, ಮಹಾವೀರ, ಕ್ರಿಸ್ತ, ಪರಮಹಂಸರು, ವಿವೇಕಾಂದರು ಮುಂತಾದ ಮಹಾನೀಯರು ಇದೇ ದಾರಿಯಲ್ಲಿ ಸಾಗಿ ಜಗಕ್ಕೆ ಬೆಳಕಾದರು.
ಅನುಭಾವಿಗಳಾದ ಶರಣರು ನೀಡಿದ ವಚನ ಸಾಹಿತ್ಯವು ಜಾಗತಿಕ ಅನುಭಾವ ಸಾಹಿತ್ಯದಲ್ಲಿ ಆಧ್ಯಾತ್ಮಿಕ ಸಾಧನೆ-ಸಿದ್ಧಿಯ ಮಹೋನ್ನತಿಯನ್ನು ಮನಮೆಚ್ಚುವಂತೆ ತೆರೆದು ತೋರುವ ಶ್ರೇಷ್ಠ ಸಾಹಿತ್ಯರಾಶಿ. ಇದು ಉಜ್ವಲ ಆಧ್ಯಾತ್ಮ ಪ್ರತಿಭೆಯ ಉತ್ತುಂಗ ಶಿಖರದಿಂದ ಇಳಿದು ಬಂದ ಆತ್ಮ ಸಾಕ್ಷತ್ಕಾರದ ಅಮೃತವಾಹಿನಿ. ಮತ್ತೆ ಮತ್ತೆ ಮೊಗೆದು ಸವಿದರೂ ಮುಗಿಸಲಾಗದ ಅನುಭಾವದ ರಸದುಣಿಸಿದ ಸವಿಪಾಕ ಎಂದರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿದ್ದ ಚಿತ್ರದುರ್ಗಾ ಮರುಘಾ ಶರಣರು ಮಾತನಾಡಿ ಸಂಸಾರ ಸಾಕಾಗಿದೆ ಸಾವು ಬೇಕಾಗಿದೆ ಎಂದು ಹಲವರು ಅಂದುಕೊಳ್ಳುತ್ತಾರೆ ಆದರೆ ಸಾಯುವುದೇ ಮಕ್ತಿಯಲ್ಲ, ಬದುಕುವುದೇ ನಿಜವಾದ ಮುಕ್ತಿ. ಕಬ್ಬಿನ ಆಳದಲ್ಲಿರುವ ರಸವನ್ನು ಸವಿಯಲಾರದೆ ಮೇಲಿರುವ ತೋಂಟೆಯನ್ನು ಸವಿದಂತೆ ಬದುಕಿನ ಅರ್ಥ ತಿಳಿದುಕೊಂಡಿದ್ದಾರೆ. ಜೀವ,ಭಾವ ಎರಡು ಸೇರಿದಾಗ ಶಿವನಾಗುತ್ತಾನೆ. ಇದ್ದಾಗ ಶಿವನಾಗದವನು ಸತ್ತಾಗ ಆಗಲಾರ. ಮಾನವನಿಗೆ ಜೀವನವನ್ನು ಬಿಟ್ಟು ಮುಕ್ತಿಯಿಲ್ಲ. ನಾವು ಇದ್ದಾಗಲೇ ಪರಿಪೂರ್ಣತೆಯನ್ನು ಸಾಧಿಸಬೇಕು. ಬದುಕು ಕೆಡುಕು ಕೊಳಕಾಗದೇ ಬೆಳಕಾಗಿಸಬೇಕು, ಚುಳುಕಾಗಿಸಬೇಕು. ನಮ್ಮಲ್ಲಿ ಒಳ್ಳೆಯ ಆಲೋಚನೆ ಇದ್ದರೆ ಒಳ್ಳೆಯ ವರ್ತನೆ ಬರುತ್ತದೆ.
ನಮ್ಮಲ್ಲಿನ ಪ್ರಾಮಾಣಿಕತೆಯು ನಮ್ಮನ್ನು ಪರಿಪೂರ್ಣತೆಯೆಡೆಗೆ ಕೊಂಡೊಯ್ಯುತ್ತದೆ. ನಾವು ಸದಾ ಪ್ರಾಮಾಣಿಕತೆಯ ದೃಷ್ಠಿಕೋನದಿಂದ, ಕಾಯಕದಿಂದ ಪರಿಪೂರ್ಣತೆಯೆಡೆಗೆ ಸಾಗಬೇಕು ಎಂದರು.
 ಬಸವ ಕೇಂದ್ರದ ಅಧ್ಯಕ್ಷರಾದ ಬಸವರಾಜ್ ಮಾತನಾಡಿ ಶರಣರ ಜಾತ್ಯಾತೀತ ಚಿಂತನಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಪುಣ್ಯದ ಕಾಯಕವನ್ನು ನಮ್ಮ ಬಸವ ಕೇಂದ್ರ ಮಾಡಿತ್ತಿದೆ. ಅನೇಕ ವಿಚಾರವಂತರಿಂದ, ಸಾಹಿತಿಗಳಿಂದ ಶರಣರ ಬದುಕಿನ ರಸವತ್ತಾದ ಮಾನವೀಯ ನೆಲೆಗಳನ್ನು ತಿಂಗಳುದ್ದಕ್ಕೂ ಆಸ್ವಾದಿಸಿದ್ದೇವೆ. ಅಷ್ಟಕ್ಕೆ ಸೀಮಿತವಾಗದೇ ನಮ್ಮ ಬದುಕಿನಲ್ಲಿ ಅಕ್ಷರಶಃ ಅಳವಡಿಸಿಕೊಂಡಲ್ಲಿ ಜೀವನ ಪಾವನವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಜ.ಹೊ.ನಾ, ಚಂದ್ರಕಾಂತ ಪಡೆಸೂರ, ಜಯದೇವಪ್ಪ, ಟಿ.ಪಿ.ನಾಗರಾಜ ಮುಂತಾದ ನೂರೈವತ್ತಕ್ಕೂ ಹೆಚ್ಚಿನ ವಚನ ಸಾಹಿತ್ಯಾಸಕ್ತರು ಹಾಜರಿದ್ದರು.
ಬಸವ ಕೇಂದ್ರದ ಕಾರ್ಯದರ್ಶಿಗಳಾದ ಸೋಮಶೇಖರ್ ಅವರು ಸ್ವಾಗತಿಸಿದರು, ಚೇತನ್ ಗುರೂಜಿ ನಿರೂಪಿಸಿದರು, ಶ್ರೀಮತಿ ರತ್ನ ಸೋಮಶೇಖರ್ ಪ್ರಾರ್ತಿಸಿದರು.