ಪ್ರಸ್ತುತ ಸಂದರ್ಭದಲ್ಲಿ ಸ್ವತಂತ್ರ್ಯತೆ ಮತ್ತು ಆಧುನೀಕರಣವು ಹೇಗೆ ಬಲಿಯಾಗುತ್ತದೆಯೋ.... ಅದೋಗತಿಗೆ ತಲುಪುತ್ತಿದೆಯೋ ಅದೇ ರೀತಿ ಮಾನವನು ಹೆಚ್ಚು ಪಾಶವಿ ಸ್ವಭಾವದವನಾಗುತ್ತಿದ್ದಾನೆ. ದಿನನಿತ್ಯ ದಿನಪತ್ರಿಕೆಗಳಾಗಲೀ, ದೃಶ್ಯ ಮಾಧ್ಯಮಗಳ ಮೇಲಾಗಲೀ ಒಮ್ಮೆ ಕಣ್ಣಾಯಿಸಿದರೆ ಅತ್ಯಾಚಾರ ಎಂಬ ಶಬ್ದ ಹೊರತುಪಡಿಸಿ ಹೂಯಿಸಿಕೊಳ್ಳಲಾಗದಷ್ಟು ಹೀನಾಯ ಸ್ಥಿತಿಗೆ ಬಂದುಬಿಟ್ಟಿದ್ದೇವೆ. ಕಾಮುಕರ ದೃಷ್ಠಿಯಲ್ಲಿ ಹಸೂಗೂಸಿನಿಂದ ಹಿಡಿದು ಎಂಬತ್ತರ ವೃದ್ದೆಯವರೆಗಿನ ಹೆಂಗಸು ಇದ್ದಾಳೆ. ಕಾನೂನು ಕಟ್ಟಳೆಗಳು ದಿನದಿಂದ ದಿನಕ್ಕೆ ತಿದ್ದುಪಡಿಯಾಗುತ್ತಿದ್ದು ಸ್ತ್ರೀ ಮತ್ತೆ ಮತ್ತೆ ಬಲತ್ಕಾರಕ್ಕೆ ಬಲಿಯಾಗುತ್ತಿದ್ದಾಳೆ.
ಇಂದು ಪುರುಷ ಸಮಾಜ ಸಮಾನತೆ, ಅಧಿಕಾರ ಹಾಗೂ ರಕ್ಷಣೆಯ ನೆಪದಲ್ಲಿ ಪರೋಕ್ಷವಾಗಿ ಶೋಷಣೆ ಮಾಡುತ್ತಿದ್ದಾನೆ ಎಂದರೆ ತಪ್ಪಾಗಲಾರದು. ಏಕೆಂದರೆ ದಿನಂಪ್ರತಿ ನಡೆಯುವ ವರದಕ್ಷಿಣೆ ಕಿರುಕುಳ, ಅತ್ಯಾಚಾರಗಳು ಬರ್ಬರವಾಗಿ ನಡೆಯುವ ಹತ್ಯೆಗಳು, ಆಸಿಡ್ ದಾಳಿಗಳು ಅತಿರೇಕ ಮಟ್ಟಕ್ಕೆ ತಲುಪಿ ಸಾಮಾಜಿಕ ಮೌಲ್ಯವನ್ನೇ ಶೂನ್ಯವಾಗಿಸುತ್ತಿವೆ.
ಈ ಹಿಂಧೆ ಸರ್ವೋಚ್ಚ ನ್ಯಾಯಾಲಯವು ಗುರ್ಜೀತ್ ಸಿಂಗ್ಳ ದಾವೆಯಲ್ಲಿ ಸ್ಪಷ್ಟವಾಗಿ ಹೀಗೆ ಹೇಳಿದೆ “ಒಬ್ಬ ಕೊಲೆಗಾರನು ಯಾರಾದರೊಬ್ಬರನ್ನು ಕೊಲ್ಲುತ್ತಾನೆ. ಆದರೆ ಬಲತ್ಕರಿಸುವವನೊಬ್ಬನು ಪೀಡಿತಳ ಆತ್ಮವನ್ನು ನಿತ್ಯ ಸಾಯಿಸುವ ಮನೋ ನೆಲೆಗೆ ತಳ್ಳುತ್ತಾನೆ”.
ಅತ್ಯಾಚಾರ ಕುರಿತು ಸೂಸನ್ ಬ್ರೌನ್ ಎಂಬ ವಿಚಾರವಾದಿ ಹೀಗೆ ಹೇಳುತ್ತಾನೆ “ಬಲತ್ಕಾರದ ಮೂಲಕ ಪುರುಷನು ಹೆಂಗಸರನ್ನು ಭೀತಿಯ ಲೋಕಕ್ಕೆ ತಳ್ಳಿ, ಸಮಸ್ತ ಸ್ತ್ರೀ ಸಮಾಜದ ಮೇಲೆ ನಿಯಂತ್ರಣ ಹೊಂದುವ ಷಡ್ಯಂತ್ರ ಮಾಡುತ್ತಾನೆ”.
ಭಾರತೀಯ ದಂಡ ಸಂಹಿತೆ 1960 ರ 375ನೇ ವಿಧಿಯಲ್ಲಿ ಬಲತ್ಕಾರದ ವಿವರಣೆ ಹೀಗಿದೆ-“ಯಾರಾದರೂ, ವ್ಯಕ್ತಿಯು ಯಾವುದಾದರೂ ಸ್ತ್ರೀಯೊಂದಿಗೆ ಆಕೆಯ ಇಚ್ಚೆಗೆ ವಿರುದ್ದವಾಗಿ ಆಕೆಯ ಸಮ್ಮತಿ ಇಲ್ಲದೆ ಅಥವಾ ಕೊಲ್ಲುವ ಬೆದರಿಕೆ ಹಾಕಿ, ಇಲ್ಲವೇ ಗಂಡನಾಗುವ ಹುಸಿ ಆಶ್ವಾಸನೆ ನೀಡಿ ವಿಶ್ವಾಸ ದ್ರೋಹದಿಂದ ಆಕೆಯ ಸಂಪತ್ತು ಪ್ರಾಪ್ತಿ ಮಾಡಿಕೊಂಡು ಅಥವಾ ಸ್ತ್ರೀ ಮಾನಸಿಕ ರೋಗಿಯಾಗಿರುವುದನ್ನು ದುರುಪಯೋಗಪಡಿಸಿಕೊಂಡು ಇಲ್ಲವೇ ಆಕೆ ಮಾದಕ ವಸ್ತುಗಳಿಂದಾಗಿ ಅರೆ ಪ್ರಜ್ಞೆ ಅವಸ್ಥೆಯಲ್ಲಿರುವ ಅಥವಾ ಹದಿನಾರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯೊಂದಿಗೆ ಆಕೆಯ ಸಮ್ಮತಿ ಅಥವಾ ಅಸಮ್ಮತಿಯಿಂದ ವರ್ತಿಸಿದಲ್ಲಿ ಅದು ಬಲತ್ಕಾರವೆನಿಸಿ, ಸಂಬಂಧಿತನು ದೋಷಿಯೆನಿಸಿಕೊಳ್ಳುತ್ತಾನೆ”.
ನಿತ್ಯ ಒಂದಲ್ಲ ಒಂದು ರೀತಿಯ ಶೋಷಣೆಯ ಸುಳಿಗೆ ಸನಾತನ ಕಾಲದಿಂದಲೂ ಸ್ತ್ರೀಯರನ್ನು ಪುರುಷ ತಳ್ಳುತ್ತಲೇ ಬಂದಿದ್ದಾನೆ. ಹೆಂಗಸು ಮನೆಯೊಳಗೆ ಅದರಲ್ಲೂ ಅಡುಗೆ ಮನೆಯೊಳಗೆ ಮಾತ್ರ ಸೀಮಿತ ಎಂದು ಮನುವಾದಶಾಸ್ತ್ರ ವಾದಿಸಿದ್ದೂ ಉಂಟು! ಅವಳಿಗೂ ಒಂದು ಮನಸ್ಸಿದೆ, ಅದೂ ನಮ್ಮಂತೆ ಸ್ವತಂತ್ರ್ಯ ಜೀವ ಎಂದು ಏಕೆ ಈ ಕೊಳಕು ಮನಗಳಿಗೆ ಅನ್ನಿಸಲಿಲ್ಲವೋ ಅರಿಯೇ.... ಆದರೆ ಇಂದು ಅನೇಕ ಕಡೆ ಬದಲಾವಣೆಗಳಾಗುತ್ತಿರುವುದು ಸಂತಸ. ಏಕೆಂದರೆ ಅವಳು ನೀರಿನಲ್ಲಿ ಮೀನಿನಂತೆ ಈಜಬಲ್ಲಳು, ಆಕಾಶದಲ್ಲಿ ಹಾರಬಲ್ಲಳು, ಸೈನ್ಯದಲ್ಲಿ ಹೋರಾಡಬಲ್ಲಳು, ಪುರುಷರಂತೆ ನಾವೂ ಸಶಕ್ತರೆಂದು ಸಾಧಿಸಿ ತೋರಿಸಿದ್ದಾಳೆ. ಹಲವು ವಿಚಾರಗಳಲ್ಲಿ ಪುರುಷ ವರ್ಗವನ್ನು ಹಿಮ್ಮೆಟ್ಟಿಸಿದ್ದಾಳೆ. ಹಳ್ಳಿಗಳಲ್ಲಿ ಮಾತ್ರ ಇನ್ನೂ ಅಜ್ಜ ಹಾಕಿದ ಆಲದ ಮರಕ್ಕೆ ಜೋತು ಬಿದ್ದಿರುವುದು ವಿಷಾದನೀಯವಾಗಿದೆ.
ಇಂದಿನ ಕಂಪ್ಯೂಟರ್ ಯುಗದಲ್ಲಿ ವೈಜ್ಞಾನಿಕ, ಮನೋವೈಚಾರಿಕತೆ ಬೆಳೆದಂತೆಲ್ಲಾ ಮನುಷ್ಯನೇಕೆ ಕ್ರೂರತನದ ವ್ಯಾಘ್ರನಾಗುತ್ತಿದ್ದಾನೆ. ಸಾಮಾಜಿಕ ಅನಿಷ್ಟ ಪಿಡುಗುಗಳು, ಮನುಷ್ಯನ ಅಂಧಾಚರಣೆಗಳು, ಜಾತಿ, ಧರ್ಮದ ಕಟ್ಟುಪಾಡುಗಳ ಹೆಸರಿನಡಿಯಲ್ಲಿ ಇಂದು ಮಹಿಳೆ ಚಿತ್ರಹಿಂಸೆ ಅನುಭವಿಸುತ್ತಿದ್ದಾಳೆ. ವರದಕ್ಷಿಣೆ ಕಿರುಕುಳ, ನೇಣು, ಸೀಮೆಎಣ್ಣೆ, ಪೇಟ್ರೋಲ್ ಸುರಿದು ಬೆಂಕಿ ಹಚ್ಚುವುದು, ಹೊಡೆದು ಸಾಯಿಸುವುದು, ಆ್ಯಸಿಡ್ ದಾಳಿ ಇನ್ನೂ ಅನೇಕ ರೀತಿಯಲ್ಲಿ ನಿತ್ಯ ಮಹಿಳೆ ಸಾಯುತ್ತಿರುವುದು ಒಂದು ಕಡೆಯಾದರೆ, ಇನ್ನೊಂದೆಡೆ ಜಾತೀಯತೆ, ಮೇಲು-ಕೀಳು, ದೇವದಾಸಿ, ಬೆತ್ತಲಸೇವೆ ಮುಂತಾದ ಗೊಡ್ಡು ಸಂಪ್ರಾದಾಯಗಳು ಇನ್ನೂ ಜೀವಂತಿಕೆ ಪಡೆದು ಶೋಷಣಾ ಸಮಾಜವಾಗಿ ರೂಪುಗೊಳ್ಳುತ್ತಿರುವುದು ದುರಂತದ ಸಂಗತಿಯಾಗಿದೆ.
ರಾಜ್ಯದಲ್ಲಿ ಇತ್ತೀಚಿನ ಎರಡ್ಮೂರು ತಿಂಗಳಿನಲ್ಲಿ ನೂರಾರು ಘಟನೆಗಳು ಸರದಿಯೋಪಾದಿಯಲ್ಲಿ ಜರುಗಿದವು. ಇನ್ನೂ ಜರುಗುತ್ತಲೇಯಿವೆ. ಶೇ 10ರಿಂದ 15 ಮಾಧ್ಯಮಗಳ ಮೂಲಕ ಸಮಾಜಕ್ಕೆ ಗೊತ್ತಾದರೆ ಉಳಿದ ಶೆ 85ರಷ್ಟು ಇಂತಹ ಪ್ರಕರಣಗಳು ಬೆಳಕಿಗೆ ಬರದೆ ಮುಚ್ಚಿ ಹೋಗುತ್ತವೆ.
‘ಕ್ರೈಮ್ ಇನ್ ಇಂಡಿಯಾ’ದ 2002ರ ವರದಿಯಂತೆ ನಮ್ಮ ದೇಶದಲ್ಲಿ ಪ್ರತಿದಿನ 50 ಬಲತ್ಕಾರಗಳು ನಡೆಯುತ್ತಿದ್ದವು. ಅಂದರೆ ಪ್ರತಿಯೊಂದು ಗಂಟೆಯಲ್ಲಿ ಕನಿಷ್ಠ ಎರಡು ಬಲತ್ಕಾರಗಳಾಗುತ್ತವೆ. ಇದರಲ್ಲಿ ಶೇ 2.2 ಸಂದರ್ಭದಲ್ಲಿ ಅಪರಾಧಿಯು ತನ್ನ ಮನೆಯ ಮಹಿಳೆ ಇಲ್ಲವೇ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ವೆಸಗುತ್ತಿರುತ್ತಾನೆ. ಆದರೆ ಈ ಅಂಕಿ ಅಂಶ ಪ್ರಸ್ತುತ ಸಂದರ್ಭದಲ್ಲಿ ಮೂರ್ಪಟ್ಟು ಹೆಚ್ಚಾಗಿದೆ ಎಂದು ಖಾಸಗಿ ಸಂಸ್ಥೆಗಳು ಅಧ್ಯಯನ ಮಾಡಿ ವರದಿ ಮಾಡಿರುವುದನ್ನು ಗಮನಿಸಿದರೆ ದಿನದಿಂದ ದಿನಕ್ಕೆ ಕ್ರೌರ್ಯ ಅಧಿಕಗೊಳ್ಳುತ್ತಿರುವುದು ಆಘಾತಕಾರಿ ವಿಷಯ.
ಇಂದು ಕಾನೂನು ರಕ್ಷಕರಾದ ಪೋಲಿಸರ ಮೇಲೆ ಮಹಿಳೆಯರಿಗೆ ನಂಬಿಕೆಯೇ ಉಳಿದಿಲ್ಲ. ಪೋಲೀಸರೇ ಮಹಿಳೆಯರ ಮೇಲಿನ ಅತ್ಯಾಚಾರದಲ್ಲಿ ಶಾಮೀಲಾದ ಪ್ರಕರಣಗಳು ಹಲವಾರಿವೆ. ಪೋಲೀಸರೇ ಮಾನಭಂಗ ಕೃತ್ಯ ಎಸಗಿದ್ದೂ ಇದೆ.
ಈ ಅನಾಚಾರಕ್ಕೆ ಶಿಕ್ಷಣ ಕ್ಷೇತ್ರವೇನೂ ಹೊರತಾಗಿಲ್ಲ! ಏಕೆಂದರೆ “ಬೇಲಿಯೇ ಎದ್ದು ಹೋಲ ಮೇಯ್ದಂತೆ’ ಉಪಾಧ್ಯಾಯನೇ ತನ್ನ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗುತ್ತಿರುವುದು ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ.
ಸಂವಿಧಾನ ಮತ್ತು ಸಮಾನತೆ
ಸಂವಿಧಾನದಲ್ಲಿ ಸ್ತ್ರೀ-ಪುರುಷರಿಗೆ ಸಮಾನ ಅಧಿಕಾರ ನೀಡಲಾಗಿದೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಮೊದಲುಗೊಂಡು ಸರಕಾರಿ ನೌಕರಿಯವರಿಗೆ ಧರ್ಮ, ಜಾತಿ, ವರ್ಗ, ವರ್ಣಭೇದದ ಆಧಾರದ ಮೇಲೆ ಯಾರಲ್ಲೂ ಯಾವುದೇ ಬಗೆಯ ಪಕ್ಷಪಾತ ತೋರಿಸುವಂತಿಲ್ಲ. ಸಂವಿಧಾನದಲ್ಲಿ ಮಹಿಳೆಯರ ಕುರಿತು ಕೆಲವು ವಿಧಿಗಳನ್ನು ಗಮನಿಸೋಣ
• ಅನುಚ್ಛೇದ – 14, ವಿಧಿಬದ್ದ ಸಮಗ್ರ ಸಮಾನತೆ
• ಅನುಚ್ಛೇದ - 15, ಧರ್ಮ, ಮೂಲ, ವಂಶ, ಜಾತಿ, ಲಿಂಗ ಇಲ್ಲವೇ ಜನ್ಮಸ್ಥಾನದ ಆಧಾರದ ಮೇಲೆ ಭೇದ ಮಾಡುವುದಕ್ಕೆ ತಡೆ.
• ಅನುಚ್ಛೇದ – 16, ಲೋಕ ನಿಯೋಜನೆಯ ವಿಷಯ ಹಾಗೂ ಅವಕಾಶಗಳಲ್ಲಿ ಸಮಾನತೆ
• ಅನುಚ್ಛೇದ – 23, ಮಾನವನ ದುರ್ವ್ಯಾಪಾರ, ಬಲವಂತದ ಶ್ರಮದ ಪ್ರತಿಬಂಧ.
• ಅನುಚ್ಛೇದ – 39, ರಾಜ್ಯಗಳ ಮೂಲಕ ಅನುಸರಿಸಬೇಕಾಗಿರುವ ಕೆಲವು ನೀತಿ ನಿರ್ದೇಶಕ ತತ್ವಗಳು.
• ಅನುಚ್ಛೇದ – 42, ಕೆಲಸದಲ್ಲಿ ನ್ಯಾಯ ಸಲ್ಲಿಕೆ, ಮಾನವೋಚಿತ ನಡೆ ಹಾಗೂ ಪ್ರಸೂತಿ ಸಹಾಯದ ನೀತಿ ನಿಯಮಗಳು.
• ಅನುಚ್ಛೇದ – 325, ಧರ್ಮ, ಮೂಲ, ವಂಶ, ಜಾತಿ, ಅಥವಾ ಲಿಂಗ ಅಲ್ಲದೆ ಇವುಗಳಲ್ಲಿ ಯಾವುದೇ ಆಧಾರದ ಮೇಲೆ ಯಾರನ್ನೇ ಆಗಲಿ ನಿಂದಿಸುವುದು ಸಲ್ಲತಕ್ಕದಲ್ಲ.
376ರ ನಿಯಮದಂತೆ ಬಲತ್ಕಾರಗೈದ ದೋಷಿಗೆ ಜೀವಾವಧಿ ಶಿಕ್ಷೆ ಇಲ್ಲವೇ 10 ವರ್ಷದ ಜೈಲು ಶಿಕ್ಷೆಯೊಂದಿಗೆ ಜುಲ್ಮಾನೆ ವಿಧಿಸಬಹುದು. ಕಡಿಮೆ ಎಂದರೆ ಏಳು ವರ್ಷ ಸಜೆ ಇದಕ್ಕಿದೆ
ಪೋಲಿಸರು, ಸರೆಮನೆ ಅಧಿಕಾರಿ, ಆಸ್ಪತ್ರೆಯವರು. ಮಹಿಳಾ
ಸಂಸ್ಥೆಯ ನಿರ್ಧೇಶಕರಂಥವರು ಅನುಚಿತವಾಗಿ ವರ್ತಿಸಿದರೆ, ಕ್ರೌರ್ಯ ಮೆರೆದರೆ, ಭಕ್ಷಕರಾದರೆ 1983ರಲ್ಲಿ ಸಂಸತ್ತಿನಲ್ಲಿ ಪಾಸಾದ 376(ಬಿ) 376(ಸಿ), 376(ಡಿ) ನಿಯಮಗಳಂತೆ ದೋಷಿಗೆ ಕಠಿಣ ಶಿಕ್ಷೆ ಇದೆ. ಭಾರತೀಯ ದಂಡ ಸಂಹಿತೆ 292 ರಿಂದ 294ರ ವರೆಗಿನಂತೆಯೂ ಕೂಡ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ತಡೆ ಹಾಕಲಾಗಿದೆ.
ಅತ್ಯಾಚಾರ ಪ್ರಮುಖ ಅಂಶಗಳು
• ಬಲತ್ಕಾರದ ಶೇ 16ರಷ್ಟು ಪ್ರಕರಣಗಳು ಮಾತ್ರ ಪೋಲೀಸ್ ಠಾಣೆಗೆ ಬರುತ್ತವೆ. ಬಲತ್ಕಾರಕ್ಕೀಡಾದ ಹೆಣ್ಣುಗಳಲ್ಲಿ ಮೂರನೇ ಒಂದಂಶಕ್ಕಿಂತ ಹೆಚ್ಚಿನವರ ವಯಸ್ಸು 16 ವರ್ಷಕ್ಕಿಂತ ಕಡಿಮೆ ಇರುವುದು ಶೋಚನೀಯ.
• ಗ್ರಾಮೀಣ ಪ್ರದೇಶದಲ್ಲಿನ ಇಂಥಹ ಬಹುತೇಕ ಘಟನೆಗಳು ಶೇ1 ರಷ್ಟು ಮಾತ್ರ ಬೆಳಕಿಗೆ ಬರುತ್ತವೆ.
• ಶೇ 4ರಷ್ಟು ಆರೋಪಿಗಳಿಗೆ ಮಾತ್ರ ನ್ಯಾಯಾಲಯದಲ್ಲಿ ಶಿಕ್ಷೆಯಾಗುತ್ತಿದೆ,
• ಶೇ 30ರಷ್ಟು ಬಲತ್ಕಾರಗಳು ಪೀಡಿತಳ ನೆರೆಹೊರೆಯವರೆ ಆಗಿರುತ್ತಾರೆ.
• ಶೇ 3ರಷ್ಟು ಅತ್ಯಾಚಾರಗಳು ಕುಟುಂಬದ ಸದಸ್ಯರಿಂದಲೇ ಆಗಿರುತ್ತದೆ.
ಅತ್ಯಾಚಾರಕ್ಕೆ ಪ್ರಮುಖ ಕಾರಣಗಳು
ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶಾದಾದ್ಯಂತ ಪ್ರತಿನಿತ್ಯ ಹಲವಾರು ಬಲತ್ಕಾರಗಳು, ಹತ್ಯೆಗಳ ಸಂಖ್ಯೆ ದಿನೇ ದಿನೇ ದ್ವಿಗುಣಗೊಳ್ಳುತ್ತಿರುವುದು ಬೆಚ್ಚಿ ಬೀಳಿಸುವ ಸಂಗತಿಯಾಗಿದೆ. ಇದಕ್ಕೆ ಸಾಮಾಜಿಕ ಹಾಗೂ ಕಾನೂನಾತ್ಮಕ ಕಾರಣಗಳು, ಅಂತರ್ಜಾಲ ತಾಣಗಳು ಪ್ರಮುಖ ಕಾರಣಗಳಾಗಿವೆ ಎನ್ನಬಹುದು.
• ಕೆಲವೊಂದು ಸಂದರ್ಭದಲ್ಲಿ ಜಾತಿಬಲ, ಸಂಬಂಧಗಳನ್ನು ಬೆಸೆದುಕೊಂಡ ಪೋಲಿಸರ ಪಾತ್ರವೂ ಬಲತ್ಕಾರಗಳಿಗೆ ಪೋಷಕವಾಗಿರುವುದು.
• ಭಾರತದಲ್ಲಿ ಅತ್ಯಾಚಾರಿಗೆ ಕಠಿಣ ಶಿಕ್ಷೆಯ ಭಯವಿಲ್ಲದಿರುವುದು. ಆತನು ಅಡ್ಡದಾರಿಯಲ್ಲಿ ಮುಂದುವರಿಯಲು ಸಹಕಾರಿಯಾಗಿದೆ.
• ಉಪಭೋಗ್ಯದ ಸಂಸ್ಕøತಿ ಹೆಚ್ಚುತ್ತಿದೆ. ಬಹುರಾಷ್ಟ್ರೀಯವಾದವು ನಗರ ಪ್ರದೇಶಗಳನ್ನು ಆಕರ್ಷಿಸುತ್ತಿದೆ. ಇದು ತಾಯಿ , ತಂಗಿ, ಮಗಳು, ಸ್ನೇಹಿತೆ, ಹಾಗೂ ನೆರೆಹೊರೆಯವಳೆಂಬ ಸಂಬಂಧಗಳನ್ನೆಲ್ಲಾ ಸಂಪೂರ್ಣವಾಗಿ ಬದಲಿಸಿದೆ. ದೇಶ, ವಿದೇಶದ ಅಶ್ಲೀಲ ಸಿನಿಮಾ, ಅಂತರ್ಜಾಲ ಲೈಂಗಿಕ ಮಾಹಿತಿ, ಇತ್ಯಾದಿಗಳು ಬಲತ್ಕಾರಿಗಳಿಗೆ ಪ್ರೋತ್ಸಾಹಕವಾಗಿವೆ.
• ಸಾಮಾಜಿಕ ಅಸ್ಥಿರತೆಯ ಸ್ಥಿತಿಯಲ್ಲಿ ಕಾಮುಕರು ತನ್ನ ಬಲಿಯನ್ನು ಸುಲಭದಲ್ಲಿ ಪಡೆಯುತ್ತಾನೆ. ಅಮೇರಿಕಾದಲ್ಲಿ ಇಂತಹ ತಪ್ಪಿಗೆ ಮರಣದಂಡನೆಯಿಂದ 99 ವರ್ಷ ಜೈಲು ಶಿಕ್ಷೆಯವರೆಗೂ ನೀಡಿಯಾಗಿದೆ. ಆದರೆ ಇಲ್ಲಿ ಅತ್ಯಾಚಾರಿಗಳು ಸುಲಭವಾಗಿ ನ್ಯಾಯಾಲಯ ಖುಲಾಸೆಗೊಳ್ಳುತ್ತಾರೆ.
• ಕೋರ್ಟು-ಖಟ್ಲೆ ತುಂಬ ಕಾಲ ಎಳೆಯುತ್ತದೆ. ಕರ್ನಾಟಕದಲ್ಲಿ ಇಂತಹ ಒಂದು ಕೇಸು 15 ವರ್ಷಗಳ ಕಾಲ ನಡೆದಿರುವ ಸಂಗತಿಗಳು ಇವೆ. ಇಂಥ ಸ್ಥಿತಿಯಲ್ಲಿ ಪೀಡಿತಳು ಹೈರಾಣಾಗುತ್ತಾಳೆ. ಹಾಗಾಗಿ ಅಪರಾಧಿಗೆ ಒಂದು ಕಾಲ ಮಿತಿಯೊಳಗೆ ಶಿಕ್ಷೆಯಾಗುವುದಿಲ್ಲ.
ಆಗಬೇಕಾದ ಬದಲಾವಣೆಗಳು
• ಪೋಲೀಸ್ ವ್ಯವಸ್ಥೆ ಹಾಗೂ ದಂಡನಾ ವಿಧಾನದ ಸಂಶೋಧನೆಯ ಜೊತೆಗೆ ನಮ್ಮವರು ಆದರ್ಶಗಳನ್ನು ವಿಶ್ಲೇಷಿಸಬೇಕು. ನಮ್ಮ ಆಯೋಜನಾ ವಿಧಾನ ಬದಲಾಗಬೇಕಿದೆ.
• ಸ್ತ್ರೀಯರ ಸಾಮಾಜಿಕ ಪ್ರತಿಷ್ಠೆಯನ್ನು ಅವರ ಕ್ರೌರ್ಯದ ಆಧಾರದ ಮೇಲೆ ನೋಡದೆ ಸಫಲತೆ, ಉಪಲಭ್ಯತೆ ಮೇಲೆ ನೋಡುವುದರಿಂದ ಅತ್ಯಾಚಾರಿಗಳನ್ನು ದಂಡಿಸುವುದು ಸುಲಭವಾಗುತ್ತದೆ.
• ನಮ್ಮ ಶಾಲೆಗಳಲ್ಲಿ ಆತ್ಮರಕ್ಷಣೆಯ ಶಿಕ್ಷಣ ವ್ಯವಸ್ಥೆ ಇಲ್ಲ. ಹಾಗಾಗಿ ಹೆಣ್ಣು ಅತ್ಯಾಚಾರದ ವಿರುದ್ದ ತನ್ನನ್ನು ತಾನು ರಕ್ಷಿಸಿಕೊಳ್ಳಲು ವಿಫಲವಾಗುತ್ತಾಳೆ. ಹುಡುಗಿಯರಿಗೆ ಶಾಲೆಯಲ್ಲಿ ಆತ್ಮರಕ್ಷಣೆ ಟೆಕ್ವಾಂಡೋ, ಜೂಡೋ, ಕರಾಟೆಯಂತಹ ಆತ್ಮರಕ್ಷಣೆಯ ಶಿಕ್ಷಣವೂ ಸಹ ಸಿಗಬೇಕಾಗಿದೆ.
• ಅತ್ಯಾಚಾರಿಗೆ ಗಲ್ಲುಶಿಕ್ಷೆ ನೀಡಲು ಸಹಮತ ಮೂಡಿದಲ್ಲಿ ಅಂತಹ ಕಾನೂನು ಮಾಡಬೇಕೆಂದು 2002ರಲ್ಲಿಯೇ ಆಗಿನ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಘೋಷಿಸಿದ್ದರು. ಆದರೆ ಶಿಕ್ಷೆ ಕಡಿಮೆ ಮಾಡಬೇಕೆಂಬ ಕೂಗು ಎಲ್ಲೆಡೆಯಿಂದ ಧ್ವನಿಸುತ್ತಿರುವುದು ದುರಂತ. ಆಪಾದಿತನ ಅಪರಾದ ಖಚಿತವಾದರೆ ಮೇಲಿನ ಕೋರ್ಟ್ಗೆ ಹೋಗುದಕ್ಕೂ ಕೂಡ ಅವನಿಗೆ ಜಾಮೀನು ನೀಡಬಾರದು. ಎಲ್ಲಾ ಮಹಿಳಾ ಜನಪರ ಸಂಘಟನೆಗಳು ಈ ನಿಟ್ಟಿನಲ್ಲಿ ಧ್ವನಿ ಎತ್ತಿ ಹೋರಾಡಬೇಕಿದೆ.
• ಸ್ವಾತಂತ್ರ್ಯ ಬಂದು 65 ವರ್ಷ ದಾಟಿದರೂ ನ್ಯಾಯಾಂಗ, ಶಾಸಕಾಂಗ ಮತ್ತು ಮಾಧ್ಯಮಗಳು ಪುರುಷರ ಹಿಡಿತದಲ್ಲೇ ಇವೆ. ಮಹಿಳೆಯರನ್ನು ಎಲ್ಲಾ ಕ್ಷೇತ್ರಗಳಲ್ಲಿ ಇನ್ನಷ್ಟು ಸಶಕ್ತರನ್ನಾಗಿ ಮಾಡಬೇಕಾದ ಅನಿವಾರ್ಯತೆಯಿದೆ.
ಒಮ್ಮೊಮ್ಮೇ ಅತ್ಯಾಚಾರವೆಂಬ ಈ ಕ್ರೌರ್ಯಕ್ಕೆ ಹೆಣ್ಣೇ ಮಾರಕವಾಗುವುದನ್ನು
ಅಲ್ಲಗಳೆಯುವಂತಿಲ್ಲ. ಹೆಣ್ಣು ಇನ್ನೊಂದು ಹೆಣ್ಣಿನ ಬಗ್ಗೆ ತಾತ್ಸಾರ ಮನೋಭಾವನೆ ತಾಳುವುದು ನಿಲ್ಲಬೇಕು. ಸ್ತ್ರೀ ಸಮಾಜದಲ್ಲಿ ಒಗ್ಗಟ್ಟು ಕಂಡು, ಸ್ತ್ರೀ ಶಕ್ತಿ ಸಂಘಗಳು ಹಾಗೂ ಸ್ತ್ರೀ ಪರ ಸಂಘಟನೆಗಳು ಕಟುವಾಗಿ ಖಂಡಿಸಿ, ಸ್ವಾತಂತ್ರ್ಯ, ಸಮಾನತೆಯಿಂದ ದಿಟ್ಟ ಹೆಜ್ಜೆ ಇಡಬೇಕಾಗಿದೆ. ಹಾಗೆಯೇ ಪುರುಷ ಸಂಕುಲವೂ ಸಹ ಸ್ತ್ರೀ ಬಗ್ಗೆ ಅಪಾರ ಕಾಳಜಿ ವಹಿಸಬೇಕಾಗಿದೆ. ಅವಳು ನಮ್ಮ ತಾಯಿಯಾಗಿ, ಸಹೋದರಿಯಾಗಿ, ಬಾಳ ಸಂಗಾತಿಯಾಗಿ ಅತ್ತಿಗೆಯಾಗಿ, ಸ್ನೇಹಿತೆಯಾಗಿ, ಗುರುವಾಗಿ ಇನ್ನೂ ಮುಂತಾದ ಸಂಬಂಧಗಳಲ್ಲಿ ಬೆಸೆದುಕೊಂಡು ಪುರುಷ ಕುಲಕ್ಕೆ ಬೆಳಕಾಗುವವಳು. ಅಂತಹ ಮಹತ್ತರವಾದವಳನ್ನು ನಾವಿಂದು ಹೇಗೆ ಕಾಣಬೇಕಾಗಿದೆ ಎಂದು ಸ್ವಲ್ಪ ಚಿಂತಿಸಿ ಆ ನಿಟ್ಟಿನಲ್ಲಿ ಎಲ್ಲರೂ ಸಾಗಿದರೆ ಈ ಅತ್ಯಾಚಾರವೆಂಬ ಕ್ರೌರ್ಯಕ್ಕೆ ಕಡಿವಾಣ ಹಾಕಬಹುದಾಗಿದೆ. ಹಾಗೆಯೇ ದಿನದಿಂದ ದಿನಕ್ಕೆ ಮಹಿಳಾ ಪರ ಕಾನೂನು ಜಾರಿಗೆ ಬರುತ್ತಿರುವುದು ಸಂತಸದಾಯಕವಾದುದು, ಹಾಗೆಯೇ ಹೋರಾಟದ ಫಲವಾಗಿದೆ. ಆದರೆ ಬೆರಳೆಣಿಕೆಯ ದಾವೆಗಳು ಕಾನೂನುಗಳನ್ನು ದುರುಪಯೋಗಪಡಿಸಿಕೊಂಡಿದ್ದು ಉಂಟು. ಅದಾಗಬಾರದು ತಪ್ಪಿತಸ್ತರು ಯಾರೇಯಾಗಲೀ ಸರಿಯಾದ ಶಿಕ್ಷೆಯಾದರೆ ಅವಘಡಗಳು ಮರುಕಳಿಸುವುದಿಲ್ಲವೆಂಬುದು ನನ್ನ ಭಾವನೆ.
ಕೊಟ್ರೇಶ್ ಎಸ್. ಉಪ್ಪಾರ್,ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ