ಎ.ಜಿ.ರತ್ನಕಾಳೇಗೌಡರು ಸಾಹಿತ್ಯ ಲೋಕದಲ್ಲಿ ಕವಿತೆ, ಕಥೆ, ಕಾದಂಬರಿ, ವಚನ, ವ್ಯಕ್ತಿ ಪರಿಚಯ, ಲೇಖನ, ಲಲಿತ ಪ್ರಬಂಧಗಳು ಹೀಗೆ ಹಲವಾರು ಪ್ರಕಾರಗಳ ಮೂಲಕ ಓದುಗರ ಗಮನ ಸೆಳೆದವರು. ಬರೆಯುವುದನ್ನು ಒಂದು ವ್ರತವಾಗಿ ಸ್ವೀಕರಿಸಿದವರು. ಸರಳ ಸೂಕ್ಷ್ಮ ಮನಸ್ಸಿನ ಸಹೃದಯಿ ಸ್ವಭಾವದ ಇವರು ಸುಮಾರು ಮೂವತ್ತೈದಕ್ಕೂ ಅಧಿಕ ಕೃತಿಗಳನ್ನು ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಇವರ ಕೃತಿಗಳಲ್ಲಿ ನನ್ನ ಗಮನ ಸೆಳೆದದ್ದು ‘ಜೀವ ನಕ್ಷತ್ರಗಳು’ ಎಂಬ ಕವನ ಸಂಕಲನ.
ಸನಾತನ ಕಾಲದಿಂದಲೂ ಮನುಷ್ಯತ್ವದ ಅಂತ:ಕರಣದಿಂದ ಹೊರದೂಡಲ್ಪಟ್ಟ ಅದೆಷ್ಟೋ ಜೀವಗಳು ಕಮರಿ ಹೇಳ ಹೆಸರಿಲ್ಲದಂತೆ ಅಳಿದು ಹೋಗಿವೆ. ಇಲ್ಲಿ ತಾಂಡವವಾಡಿಕೊಂಡು ಬಂದ ದೌರ್ಜನ್ಯ, ಅಟ್ಟಹಾಸ, ಶೋಷಣೆ, ಕ್ರೌರ್ಯ, ಹಿಂಸೆ, ತಾರತಮ್ಯ, ಅಮಾನವೀಯ ಘಟನೆಗಳು ಇನ್ನೂ ಜೀವಂತವಾಗಿದ್ದು ಸಮಾಜದ ಅಧೋಗತಿಗೆ ಕಾರಣವಾಗುತ್ತಿರುವ ಹಿನ್ನಲೆಯಲ್ಲಿ ರತ್ನಕಾಳೆಗೌಡರ ‘ಜೀವ ನಕ್ಷತ್ರಗಳು’ ನಮ್ಮೆದುರಿಗೆ ಸಾಕ್ಷಿಯಾಗಿ ನಿಲ್ಲುತ್ತದೆ.

ನೆಣದ ಒಗ್ಗರಣೆ
ಹಸಿ ಮಾಂಸ ಜಗ್ಗಿ ಚಪ್ಪರಿಸಿ
ತಿನ್ನುವ ಮಂದಿ
ಬೆವರನ್ನು ಗಟಗಟನೆ ಕುಡಿದು
ಮರುಳುಂಟೆ ಕರುಳುಂಟೆ
ರಕ್ತ ಸಂಬಂಧದ ಕೊಂಡಿಗೆ....
(ಸೊಂಟರಗಾಳಿಗೆ ಸೆಟೆದು ನಿಂತ)
ಸಮಾಜದಲ್ಲಿ ಮುಖವಾಡ ಧರಿಸಿದ ಗೋಮುಖ ವ್ಯಾಘ್ರಗಳು ಅದ್ಹೇಗೆ ಭ್ರಷ್ಟಾಚಾರದ ಕರಿನೆರಳಿನಲ್ಲಿ ದೀಪ ಹಚ್ಚಿಕೊಂಡು ಐಸಿರಿಯ ಬದುಕು ಸಾಗಿಸುವರು. ತಮ್ಮ ಹಿತಕ್ಕಾಗಿ ಸಮಾಜ ಕದಡಿ ಕೇಕೆ ಹಾಕಿ ಕುಪ್ಪಳಿಸುವರು ಎಂಬುದನ್ನು ಇಲ್ಲಿ ಕವಯತ್ರಿ ಮಾರ್ಮಿಕವಾಗಿ ಹೇಳಿದ್ದಾರೆ.
ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಪ್ರವರ್ಧಮಾನಕ್ಕೆ ಬಂದ ದಲಿತ ಬಂಡಾಯವೆಂಬ ಪದ್ಯ ಸಾಹಿತ್ಯ ಶೋಷಿತರ ಪರವಾಗಿ ಧ್ವನಿಸಿರುವುದರಲ್ಲಿ ಎರಡು ಮಾತಿಲ್ಲ.
ಸಾಹಿತ್ಯ ಎಂಬ ವೃಕ್ಷ ಭೂಮಿಯೊಳಗೆ ಆಳವಾಗಿ ಬೇರುಬಿಟ್ಟಂತೆ ಆಕಾಶಕ್ಕೆ ಮುಖಮಾಡಿ ತನ್ನ ಕೊಂಬೆ, ರೆಂಬೆ, ಮೊಗ್ಗು, ಹೂವು, ಈಚು, ಕಾಯಿ, ಹಣ್ಣುಗಳಿಂದ ಗರ್ಭಕೋಶ ನಳನಳಿಸುವಂತೆ, ಕಾಲಘಟ್ಟಗಳು ಸರಿದಂತೆ ಸಾಹಿತ್ಯ ನಾವಿನ್ಯವಾಗಿ ಚಿಗುರೊಡೆಯುತ್ತದೆ. ಗದ್ಯ ಸಾಹಿತ್ಯ, ಪದ್ಯ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ ಅಂತೆಯೇ ಕಥೆ, ಕಾದಂಬರಿ, ಲಲಿತ ಪ್ರಬಂಧ, ನಾಟಕ, ಮಹಿಳಾ ಸಾಹಿತ್ಯ, ಮಕ್ಕಳ ಸಾಹಿತ್ಯ ಹೀಗೆ ಹಲವು ಪ್ರಕಾರಗಳು ಮಾನವೀಯ ಮೌಲ್ಯಗಳ ನೆಲೆಯಲ್ಲಿ ಜನಿಸಿಬಂದವುಗಳು.
ಬೋಳು ಮರಗಳಿಗೂ ಬೆದೆ ಬರುವ ಕಾಲ
ಒಂದಕ್ಕೊಂದು ಮಸೆದು
ತೀಟೆ ತೀರಿಸಿಕೊಂಡ ಮೇಲೆ
ಬೆಂಕಿ ಕಾರಿ ಸ್ವಾರ್ಥಕ್ಕೆ ಬಲಿಯಾದವು
ಅವುಗಳಿಗೂ ಹಿಂದಿನ ನೆನಪಿಲ್ಲ
[ಋತುಗಳ ಶಪಿಸುತ್ತ]
ಸಮಾಜದ ಕೊಳುಕುತನ ಹಾಗೂ ಮುಂದಾಗುವ ಅನಾಹುತದ ಬಗ್ಗೆ ಕವಿತೆಯಲ್ಲಿ ಮಾರ್ಧನಿಸಿರುವುದನ್ನು ಕಾಣಬಹುದಾಗಿದೆ.
ಹಿಂದೂ ಸಮಾಜಿಕ ವ್ಯವಸ್ಥೆಯಲ್ಲಿ ಅನೇಕ ವರ್ಗಗಳು ಅನುಭವಿಸುತ್ತಿದ್ದ ಸಮಸ್ಯೆಗಳು ಅಸಂಖ್ಯಾತವಾದುವು. ಇವುಗಳಿಗೆ ದಿಕ್ಕು ತೋರಿಸಲಾರದೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾರತೀಯ ಸಮಾಜದ ಬದಲಾವಣೆಗಾಗಿ ಮೂರು ಮುಖ್ಯ ಸಂದೇಶಗಳನ್ನು ರವಾನಿಸಿದ್ದಾರೆ. ಅವು ಶಿಕ್ಷಣ, ಸಂಘಟನೆ, ಹೋರಾಟ.
ಭಾರತೀಯ ಸಮಾಜ ವ್ಯವಸ್ಥೆ ಕೆಳಸ್ಥರದಲ್ಲಿರುವ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಕಾರ್ಮಿಕರು, ಹಿಂದುಳಿದ ವರ್ಗದ ಎಲ್ಲಾ ಶೋಷಿತ ಸಮುದಾಯಗಳು ಅನುಭವಿಸುತ್ತಿರುವ ಶೋಷಣೆ, ದುಃಖ, ದುಗುಡ, ದುಮ್ಮಾನಗಳು, ತಲ್ಲಣಗಳೇ ರತ್ನಕಾಳೇಗೌಡರ ಕಾವ್ಯದ ವಸ್ತುಗಳಾಗಿರುವುದು ಸ್ವಾಗತಾರ್ಹ.
ಇವರ ಕಾವ್ಯದಲ್ಲಿ ಸಂಘಟನೆ ಹಾಗೂ ಹೋರಾಟದ ಕಿಚ್ಚಿದೆ, ಕೆಚ್ಚಿದೆ. ತಮ್ಮ ಹಕ್ಕುಗಳನ್ನು ಸಂವಿಧಾನಾತ್ಮಕ ಆಶಯಗಳನ್ನು ಗಳಿಸಿಕೊಳ್ಳುವ ಮೂಲಕ ಎಲ್ಲಾ ಶೋಷಿತ ವರ್ಗಗಳ ಸಬಲೀಕರಣ ಆಶಯ ವ್ಯಕ್ತವಾಗುತ್ತದೆ.
ನೀನೇ ನೀನೇ ಒಬ್ಬ ಕಾಷ್ಮೋರನಾಗಿ
ಬಡವರ ರಕ್ತ ಬೇಡುತ್ತಿರುವೆ
ಬೀದಿ ಬೀದಿಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ
ನಿನ್ನ ಹೊಲಿಸು ಬಾಷಣಗಳ
ಪ್ರವಾಹಕ್ಕೆ ......
ಬೆತ್ತಲೆ ನಿಂತ ಮಕ್ಕಳು, ಲಂಗೋಟಿ ಕಟ್ಟಿಕೊಂಡ
ನಿರ್ಗತಿಕರು ನಡುಗುತ್ತಿದ್ದಾರೆ
[ಕಾಷ್ಮೋರನಿಗೆ ಬೇಕು ರಕ್ತ]
ಪ್ರಾಣಿಗಳಲ್ಲಿ ಭಿನ್ನ ಭಿನ್ನವಾದ ಜಾತಿಗಳಿವೆ. ಆದರೆ ಅವುಗಳಲ್ಲಿ ಭೇದಭಾವಗಳಿಲ್ಲ ಒಗ್ಗಟ್ಟಿನಿಂದ ಬದುಕುತ್ತವೆ. ಇಲ್ಲಿ ಬಡತನದ ಬೇಯ್ಗೆ ಒಂದು ಕಡೆಯಾದರೇ ಅಂಥವರನ್ನು ರಾಜಕೀಯ ದಾಳವಾಗಿ ಬಳಸಿ ಮೆಟ್ಟಿಲುಗಳ ಮಾಡಿ ದಿನಂಪ್ರತಿ ಮೆಟ್ಟಿ ನಡೆಯುವ ಅಧಿಕಾರ ಶಾಹಿಗಳ ಅಟ್ಟಹಾಸ ಪ್ರತಿಧ್ವನಿಸಿದೆ.
ಎಲುಬುಗಳಿಗೆ ನೆಣದ ಬಟ್ಟೆಯ ಸುತ್ತಿ
ಮೋಜಿನ ಮಂಗನಾಟಕ್ಕೆ ಪಂಜು ಉರಿಸಿದ್ದಾರೆ..
ಧರ್ಮದ ಹೆಸರಿನಲ್ಲಿ
ದುರ್ಮಾರ್ಗದ ಸುರಂಗ ಕೊರೆದು
ಅನಾದಿ ಕಾಲದ ಆಚಾರಗಳಿಗೆ
ಸಂಸ್ಕಾರ ಮಾಡಿ ಪಲ್ಲವಿಯಿಲ್ಲದ
ಚರಣ ಹಾಡಿದ್ದಾರೆ....[ಪಾತಾಳ ಗರಡಿ]
ಸಮಾಜದ ವರ್ಣವ್ಯವಸ್ಥೆ ಸಾವಿರಾರು ವರ್ಷಗಳಿಂದ ತಳಸಮುದಾಯದವರ ಮೇಲೆ ಮೇಲ್ವರ್ಗದವರು ನಿರಂತರವಾಗಿ ಶೋಷಣೆ ಮಾಡುತ್ತಲೇ ಬರುತ್ತಿದ್ದಾರೆ. ಈಗಲೂ ಈ ಶೋಷಣೆಗೆ ಸಿಕ್ಕಿ ಅವಮಾನದಿಂದ ಪ್ರಾಣಿಗಳಿಗಿಂತಲೂ ಕಡೆಯಾಗಿ ಬದುಕು ಸಾಗಿಸುತ್ತಿರುವ ದೃಶ್ಯವನ್ನು ನೋಡುತ್ತಿದ್ದೇವೆ. ಪ್ರಶ್ನಿಸುವ ಧೈರ್ಯವಿಲ್ಲದೇ, ಸರಿಯಾದ ಜ್ಞಾನ ಅರಿವಿಲ್ಲದೇ ಇನ್ನೂ ತೊಳಲಾಡುತ್ತಿರುವುದು ವಿಷಾದನೀಯವಾದುದು.
ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿ
ಏಕಾಂತ ಮನಸ್ಸಿನ ಮೇಲೆ ದಾಳಿಮಾಡಿ
ಜೀವ ಥರಗುಟ್ಟಿ ಬೆವರು ಜಿನುಗಿ
ಯೋಚನೆಯ ಮುಳ್ಳು ತಿರುಗಲಾರಂಭಿಸಿ
ಡವಗುಡುವ ಹೃದಯದ ಬಡಿತ
ನಿಮಿಷದ ಮುಳ್ಳಿನೊಂದಿಗೆ ಸ್ನೇಹ ಬಳಸಿ
ಕಾಲ ನುಂಗಲು ಅಣಿಯಾಗಿತ್ತು
[ಆಕಾಶದಿಂದ ಅನಿಕದಂತೆ ದನಿ]
ನರನರಗಳ ನಡುವೆ ಬಿರುಕು ಬಿಗುಮಾನದ ಬಿಳಿಲುಗಳನ್ನು ಚಾಚಿ ಹೀರಿ ಹಿಪ್ಪೆಗೈಯುವ ಸನ್ನಿವೇಶ ತಾಂಡವವಾಡುತ್ತಿದೆ. ನೊಂದವರ ಒಡಲ ಅಳಿಲು ನೊಂದವರಿಗಷ್ಟೇ ಅರ್ಥವಾದೀತು ಬೆಂದವರ ಬೇಗುದಿ ಲೇಪ ಹಚ್ಚುವವರಿಗೆ ಹೇಗೆ ತಿಳಿಯಬೇಕು ಅಲ್ಲವೇ?
ಹೊಸ ಹೊಸ ಸಂದರ್ಭಕ್ಕೆ ಅನುಸಾರವಾಗಿ ಸಾಹಿತ್ಯವೂ ಹೊಸ ಹೊಸ ಆವಿಷ್ಕಾರಗಳನ್ನು ಪಡೆದುಕೊಳ್ಳುತ್ತಾ ಸೃಷ್ಠಿಯಾಗಬೇಕು. ಸಾಹಿತ್ಯ ಕೇವಲ ಹೊಗಳಿಕೆಗಾಗಿ ಸೃಷ್ಠಿಯಾಗಬಾರದು. ಕಾಲಮಾನಕ್ಕನುಸಾರವಾಗಿ ವಾಸ್ತವದ ನೆಲೆಗಟ್ಟಿನಲ್ಲಿ ಸತ್ಯದ ಅಭಿವ್ಯಕ್ತಿಯಲ್ಲಿ ಮೌಲ್ಯಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ರಚಿತವಾಗಬೇಕೆಂಬುದು ಕವಯತ್ರಿಯ ಆಶಯ.
ಒಂದಕ್ಕಿಂತ ಒಂದು ಭಿನ್ನವಾದ ಒಟ್ಟು 65 ಕವಿತೆಗಳನ್ನು ಒಳಗೊಂಡ 132 ಪುಟಗಳ ಈ ಕೃತಿಯು 100 ರೂಪಾಯಿ ಮುಖಬೆಲೆಯಲ್ಲಿ ಅವರದೇಯಾದ ತೃಪ್ತಿ ಪ್ರಕಾಶನದಿಂದ 2008ರಲ್ಲಿ ಮೊದಲಾವೃತ್ತಿಯಾಗಿ ಪ್ರಕಟಣೆಗೊಂಡಿದೆ. ಇದು ಇವರ ಐದನೇ ಕವನ ಸಂಕಲನವಾಗಿದೆ.
ಇವರ ಕವಿತೆಗಳಲ್ಲಿ ಬದುಕಿಗೊಂದು ಅರ್ಥವಿದೆ. ಸಮಾಜಕ್ಕೊಂದು ಮೌಲ್ಯವಿದೆ. ಜೀವನಕ್ಕೆ ಅನುಭವ ಸಿದ್ದಾಂತಗಳ ಬಂಧದ ಬೆಸುಗೆಯಿದೆ. ಈ ಎಲ್ಲಾ ಬೆಸುಗೆಗಳನ್ನು ಬೆಸೆಯುವ ಸಾಹಿತ್ಯವನ್ನು ಕವಯತ್ರಿ ಬಾಹ್ಯ ಪ್ರಪಂಚದ ಬಸುರಿನಿಂದ ಬಗೆದು ಹೊರತೆಗೆಯಬೇಕಾದ ತುರ್ತು ಈಗ ಇದೆ. ಈ ನಿಟ್ಟಿನಲ್ಲಿ ರತ್ನಕಾಳೇಗೌಡರ ಕವಿತೆಗಳು ಓದುಗರ ಹಿಡಿದಿಡುವಲ್ಲಿ ಸ್ವಲ್ಪ ಮಟ್ಟಿನ ಯಶಸ್ಸಿನ ದಾರಿಸವೆಸಿದೆಯೆಂದೇ ಹೇಳಬಹುದು. ಹಗಲು ಬೆಳಕಿನ ದ್ವೇಷ, ಧನಿಕರ ಕುಣಿಕೆ, ನಾಳೆಯ ಬೆಳಕು ಕತ್ತಲಾಗಿದೆ. ಪ್ರಣಾಳಿಕೆ, ಸತ್ಯ ಹೇಳಬೇಡಿ ಎಚ್ಚರ!, ನೂರಾರು ಗಾಂಧಿಗಳು, ಕರಿನೆರಳು, ಬದುಕು ಸಾಗಿತ್ತು ದೇಹ ಸೋತಿತ್ತು, ಯಜ್ಞ, ಜೀವ ನಕ್ಷತ್ರಗಳು ಮುಂತಾದ ಕವನಗಳು ಗಮನ ಸೆಳೆಯುತ್ತವೆ. ಇಲ್ಲಿ ಭಾವ, ಭಾವೋದ್ವೇಗ, ಸಾಮಾಜಿಕ ಕಳಕಳಿ ಸ್ಪಂದಿಸುವ ರೀತಿ ಓದುಗನ ಸೆಳೆಯುವ ನಿಟ್ಟಿನಲ್ಲಿ ಈ ಕವನ ಸಂಕಲನ ಜೀವಂತವಾಗಿದೆ.
ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
ಮೊ:-9483470794
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ