ಕನ್ನಡ ಭಾಷೆಯು ಎರಡು ಸಾವಿರ ವರ್ಷಗಳ ಭವ್ಯ ಪರಂಪರೆಯನ್ನು ಒಳಗೊಂಡು ವಿಶಿಷ್ಟ, ವಿಭಿನ್ನ, ವಿನೂತನ, ವೈವಿಧ್ಯ, ಆಳ-ವಿಸ್ತಾರಗಳನ್ನು ಸದಾಕಾಲವೂ ಪ್ರತಿಬಿಂಬಿಸುತ್ತಾ, ಮೌಲಿಕ ಸಾಹಿತ್ಯ, ಸಾಹಿತಿ, ಪೋಷಕರಿಂದ ಪ್ರಜ್ವಲಿಸುತ್ತಾ ಮುನ್ನುಗ್ಗುತ್ತಿದೆ.
ಹಾಸನ ಮಾದರಿಯಾಗಬೇಕೆಂದು, ನನ್ನ ಉಸಿರಿರುವ ತನಕ ಈ ನಗರದ ಬದಲಾವಣೆಗೆ, ಇಲ್ಲಿನ ಕಲೆ, ಸಾಹಿತ್ಯ ಪರಂಪರೆಯ ಉಳಿವಿಗೆ ಹೋರಾಡುತ್ತೇನೆಂದು ನುಡಿದಂತೆ, ನಡೆಯುತ್ತಾ ಸಾಧಿಸಿದ ವ್ಯಕ್ತಿ ಎಚ್.ಬಿ ಜ್ವಾಲಯ್ಯನವರೆಂದರೆ ಅತಿಶಯೋಕ್ತಿಯಾಗಲಾರದು.

1942ರಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಇವರು ತಮ್ಮ ಮಿತ್ರರೊಡಗೂಡಿ ‘ಭಗತ್ ಪಾರ್ಟಿ’ ಎಂಬ ಯುವ ಸೈನ್ಯ ಕಟ್ಟಿ ಅವಿರತವಾಗಿ ಹೋರಾಡಿದರು.
ಹಿಡಿದ ಕಾರ್ಯವ ಸಾದಿಸದ ಹೊರತು ಮುಂದೆ ಸಾಗದ ಹಠವಾದಿ ವ್ಯಕ್ತಿತ್ತ್ವ ಜ್ವಾಲಯ್ಯನವರದು. ಜ್ಯಾತ್ಯಾತೀತವಾದಿಯಾಗಿ, ಉತ್ತಮ ರೈತಾಪಿ ಜೀವನದ ಮೂಸೆಯಲ್ಲಿ ತಿದಿಯೊತ್ತಿ ಬಂದಿದ್ದ ಜ್ವಾಲಯ್ಯನವರು ಎಲ್.ಟಿ ಕಾರ್ಲೆಯವರೊಂದಿಗೆ ಹಾಸನದಲ್ಲಿ ದನಗಳ ಜಾತ್ರೆ, ಕೈಗಾರಿಕೆ ಮತ್ತು ವ್ಯವಸಾಯಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನದ ಆರಂಭಕ್ಕೆ ದುಡಿದರು. ಆದ್ದರಿಂದಲೇ ಮುಂದೆ ಹಾಸನದ ಪಾಲಿಗೆ ಕೈಗಾರಿಕಾ ಕ್ರಾಂತಿಕಾರರಾದರು.
ಪ. ನಾಗರಾಜಯ್ಯನವರು ಒಂದು ಕಡೆ ಹೀಗೆ ಹೇಳಿದ್ದಾರೆ, “ಜ್ವಾಲಯ್ಯನವರು ಮಿತಭಾಷಿ, ಕಾರ್ಯತತ್ಪರ, ಕಾರ್ಯ ಸಾಧಕ, ಸದಾ ಉತ್ಸಾಹದ ಚಿಲುಮೆ, ಸಜ್ಜನ, ನಿರುಪದ್ರವಿ, ಸ್ನೇಹ ಜೀವಿ, ಜನಪ್ರಿಯ ವ್ಯಕ್ತಿ, ಪರೋಪಕಾರಿ, ಒಳ್ಳೆಯ ವಾಗ್ಮಿ, ಗುಣಗ್ರಾಹಿ, ಬಡವರ ಬಂಧು, ದಕ್ಷ ಆಡಳಿತಗಾರ, ಯಾವುದನ್ನೂ ಯೋಜನಾಬದ್ಧವಾಗಿಯೇ ನಿರ್ವಹಿಸುವ ಧ್ಯೇಯವುಳ್ಳವ, ಸೃಜನಶೀಲ ಪ್ರತಿಭೆ, ಇತಿಹಾಸ ಪ್ರಜ್ಞೆಗಳನ್ನುಳ್ಳವ, ಜೀವನದಲ್ಲಿ ಒಂದು ಶಿಸ್ತನ್ನು ರೂಢಿಸಿಕೊಂಡವರು, ತನಗಾಗಿ ತನ್ನವರಿಗಾಗಿ ಎಂದೂ ಏನೂ ಮಾಡಿಕೊಂಡವರಲ್ಲ”.
ಜ್ವಾಲಣ್ಣನವರೆಂದೇ ಪ್ರಸಿದ್ಧರಾದ ಇವರು ಮನೆಗೆ ಮಾತ್ರ ಹಿರಿಮಗನಾಗದೆ ಹಾಸನಕ್ಕೆ ಅಗ್ರಜ ಸ್ಥಾನವನ್ನು ತುಂಬಿದವರಾಗಿದ್ದರು. ಕುಸ್ತಿಪಟುವಾಗಿ, ಈಜುಗಾರನಾಗಿ, ಬ್ಯಾಡ್ಮಿಂಟನ್ ಆಟಗಾರನಾಗಿ ಖ್ಯಾತಿವೆತ್ತಿದ್ದರು. ಪೋಷಕರ ಸಂಸ್ಕಾರದಿಂದ, ಜೈನ ಪುರಾಣ ಪುಣ್ಯ ಕಥೆಗಳಿಂದ ಉತ್ತಮ ಜೈನಾಚಾರರಾಗಿ ರೂಪಗೊಂಡು, ಸಮಾಜದಲ್ಲಿನ ಮಾನವೀಯ ನೆಲೆಗಳೊಟ್ಟಿಗೆ ಜೀವಿಸಿ, ಅನುಭವಿಸಿ, ಒಡಗೂಡಿ ಉದಾತ್ತ ಚಿಂತನಕಾರರಾಗಿ, ಜ್ಯಾತ್ಯಾತೀತ ಖಣಜವಾಗಿ ರೂಪುಗೊಂಡರು.
ರಾಜಕೀಯ ಪ್ರವೇಶ
ಸಾಮಾಜಿಕವಾಗಿ ಸದಾ ಮುಂಚೂಣಿಯಲ್ಲಿದ್ದ ಜ್ವಾಲಯ್ಯನವರು ಜನರ ಒತ್ತಾಯಕ್ಕೆ ಮಣಿದು 1952-53ರಲ್ಲಿ ಮೊದಲ ಸಲ ಪುರಸಭಾ ಅಧ್ಯಕ್ಷರಾಗಿ ಆಯ್ಕೆಗೊಂಡು ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಉತ್ತಮ ಕಾರ್ಯಗಳನ್ನು ಮಾಡಿದರು. ಇವರ ಕರ್ತವ್ಯ ನಿಷ್ಠೆ, ಸಮಾಜ ಪರ ಚಿಂತನೆಗಳು, ನಿಸ್ವಾರ್ಥ ರಾಜಕಾರಣ 1974-75ರಲ್ಲಿ ಪುನಃ ಪುರಸಭಾ ಅಧ್ಯಕ್ಷರಾಗಲು ಕಾರಣವಾಯಿತು.
ಇವರ ಅಧಿಕಾರವಧಿಯಲ್ಲಿ ಬೀರನಹಳ್ಳಿ ಕೆರೆಯ ಜೀರ್ಣೋದ್ಧಾರ. ದೇವಿಗೆರೆಗೆ ಮೂರ್ತರೂಪ ಕೊಟ್ಟು ಸುಂದರಮಯವಾಗುವಂತೆ ಮಾಡಿದ್ದು, ಜೈಲು ಎದುರಿನ ಬಾರಿ ಅಗಗಳನ್ನು ಮುಚ್ಚಿಸಿ ಉತ್ತಮ ರಸ್ತೆ ನಿರ್ಮಿಸಿ, ಬಸವ ಮೂರ್ತಿ ನಿರ್ಮಾಣ ಮಾಡಿಸಿ ಅದು ‘ಬಸವ ಸರ್ಕಲ್’ ಎಂದೇ ಪ್ರಸಿದ್ದವಾಗಲು ಕಾರಣವಾಗಿದ್ದು ಜ್ವಾಲನಯ್ಯನವರೇ.... ಆದರೆ ಅದು ಈಗಿಲ್ಲ! ನಗರದಲ್ಲಿ ಕುಡಿಯುವ ನೀರಿನ ತೊಂದರೆಯಿದ್ದುದರಿಂದ ಹೇಮಾವತಿ ನದಿಯಿಂದ ಹಾಸನಕ್ಕೆ ನೀರು ಸರಬರಾಜು ಮಾಡುವ ಬೃಹತ್ ಯೋಜನೆಯನ್ನು ಕೈಗೊಂಡರು. ಆಗಿನ ಕೇಂದ್ರ ಸರಕಾರದ ಗಮನ ಸೆಳೆದು ಅನುದಾನ ತರುವಲ್ಲಿ ಯಶಸ್ವಿಯಾದರು.
ತಮ್ಮ ಆಪ್ತರಾಗಿದ್ದ ಆಗಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಸಹಕಾರದಿಂದ ನಗರಕ್ಕೆ ಒಳಚರಂಡಿ ವ್ಯವಸ್ಥೆ, ಸಿಮೆಂಟ್ ರಸ್ತೆಗಳು, ವಿಶಾಲ ರಸ್ತೆಗಳು, ಪುರಸಭಾ ಕಟ್ಟಡಗಳು, ಮಹಾರಾಜ ಉದ್ಯಾನವನದ ಸೌಂದರ್ಯ, ಈಜುಕೊಳದ ನಿರ್ಮಾಣ ಯೋಜನೆ, ಸುಭಾಷ್ ಚೌಕ, ಪಾಳುಬಿದ್ದ ಕಟ್ಟಿನ ಕೆರೆಯನ್ನು ಅಗತ್ಯವಿದ್ದ ಸಾರಿಗೆ ಬಸ್ ನಿಲ್ದಾಣವಾಗಿ (ಈಗಿನ ಹಳೇಬಸ್ ನಿಲ್ದಾಣ) ರೂಪಿಸಿದ್ದು, ಮಾರುಕಟ್ಟೆ ಸಂಕೀರ್ಣಗಳನ್ನು ನಿರ್ಮಿಸಿದ್ದು, ಇವರ ಆಡಳಿತದ ಮಹತ್ತರ ಅಂಶಗಳಾಗಿವೆ. ಇವೆಲ್ಲವುಗಳ ಪರಿಣಾಮದಿಂದಲೇ ಕೆಂಗಲ್ ಹನುಮಂತಯ್ಯರವರಿಂದ ‘ಹಾಸನದ ಮಿರ್ಜಾ’ ಎಂದು ಬಿರುತಾಂಕಿತಗೊಂಡ ಖ್ಯಾತಿ ಜ್ವಾಲನಯ್ಯನವರದು.
ಮುಸ್ಲಿಂ-ಕ್ರೈಸ್ತರ ಸ್ಮಶಾನಗಳಿಗೆ ಜಾಗ ಕಲ್ಪಿಸಿದ್ದು, ಬೀದಿ ಕಸಗುಡಿಸುವವರಿಗೆ ನೆಲೆ ಒದಗಿಸಿದ ಕೀರ್ತಿ ಜ್ವಾಲಯ್ಯನವರಿಗೆ ಸಲ್ಲುತ್ತದೆ.
1962ರಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಶ್ರೀಮತಿ ಯಶೋದಮ್ಮ ಅವರ ವಿರುದ್ದ ಸೋಲುತ್ತಾರೆ. ಆದರೆ ತಮ್ಮ ಸಾಮಾಜಿಕ ಕಳಕಳಿಯಿಂದ ವಿಮುಖರಾಗದ ಇವರು 1966 ರಲ್ಲಿ ರಾಜಗೋಪಾಲಚಾರಿಯವರ ಸ್ವತಂತ್ರ ಪಕ್ಷವನ್ನು ಸೇರಿ ಪುನ: ಸ್ಪರ್ಧಿಸಿ ಬಹುಸಂಖ್ಯಾತ ಜನಾಂಗದ ಅಂದಿನ ಪ್ರಭಾವಿ ರಾಜಕಾರಣಿಯಾಗಿದ್ದ ಎಲ್.ಟಿ. ಕಾರ್ಲೆ ಅವರನ್ನು ಸೋಲಿಸಿ ನಾಲ್ಕನೆಯ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು.
ಸಾಹಿತ್ಯ ಪರಿಷತ್ತು
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಜಿ. ನಾರಾಯಣರವರ ಅವಧಿಯಲ್ಲಿ ಇಲ್ಲಿ ರೂಪುಗೊಂಡ ನವ ಸಮಿತಿ 1969 ಜೂನ್ 15 ರಂದು ಜ್ವಾಲಯ್ಯನವರನ್ನು ಹಾಸನ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷರನ್ನಾಗಿ ನೇಮಿಸಿತು.
ಕನ್ನಡ ಭಾಷಾಭಿಮಾನಿಯೂ, ಸಾಹಿತಿಯೂ, ನಾಟಕಕಾರರು, ಆಗಿದ್ದ ಜ್ವಾಲಯ್ಯನವರು ಸುಮಾರು ಎರಡು ದಶಕಗಳ ಕಾಲ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದರು.
1971ರ ನವಂಬರ್ 8 ಮತ್ತು 9 ರಂದು ಚನ್ನರಾಯಪಟ್ಟಣದಲ್ಲಿ ಹೆಸರಾಂತ ಗದ್ಯ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅಧ್ಯಕ್ಷತೆಯಲ್ಲಿ ಪ್ರಥಮ ಜಿಲ್ಲಾ ಸಮ್ಮೇಳನವನ್ನು ಯಶಸ್ವಿಯಾಗಿ ನೆರವೇರಿಸಿದರು. 1981ರಲ್ಲಿ ಹಾಸನದಲ್ಲಿ ನಡೆದ 2 ನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಡಾ.ಎಸ್.ಎಲ್.ಬೈರಪ್ಪನವರ ಅಧ್ಯಕ್ಷತೆಯಲ್ಲಿ, 1985ರಲ್ಲಿ ಅರಸೀಕೆರೆ ತಾಲ್ಲೂಕಿನ ಮಾಲೆಕಲ್ಲು ತಿರುಪತಿಯಲ್ಲಿ ನಡೆದ ಮೂರನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಡಾ.ಎಸ್.ಕೆ.ಕರೀಂಖಾನ್ ಅಧ್ಯಕ್ಷತೆಯಲ್ಲಿ ನಡೆಸಿದ ಕೀರ್ತಿ ಇವರದು.
1976ರ ಜನವರಿ 17 ರಂದು ಜಿಲ್ಲಾ ಮಟ್ಟದ ಬೃಹತ್ ಜಾನಪದ ಕಲಾಮೇಳವನ್ನು ನಡೆಸಿದರು. ಇವರ ಅವಿರತ ಪ್ರಗತಿಪರ ಹೋರಾಟದ ಫಲವಾಗಿ 1986ರವರೆಗೂ ಹಾಸನ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾಗಿ ನಾಡು-ನುಡಿ ಶ್ರೇಯೋಭಿವೃದ್ಧಿಗಾಗಿ ದುಡಿದರು.
ಬಹುಮುಖ್ಯವಾಗಿ ಕ.ಸಾ.ಪ ಭವನಕ್ಕೆ 1981 ಆಗಸ್ಟ್ 4 ರಂದು ನಿವೇಶನ ದೊರಕಿಸಿಕೊಟ್ಟರು. ಇವರ ಕಾರ್ಯತತ್ಪರತೆಯಿಂದ ರಾಜ್ಯ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡ ಇವರು 1989 ಫೆ 16 ರಂದು ಅಧ್ಯಕ್ಷರ ಚುಣಾವಣೆಯಲ್ಲಿ ಆರಿಸಿಬಂದು ರಾಜ್ಯ ಕ.ಸಾ.ಪ. ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇವರ ಕಾಲದಲ್ಲಿಯೇ 1987 ಅಕ್ಟೋಬರ್ 29, 30, 31 ರಂದು ಕಲ್ಬುರ್ಗಿಯಲ್ಲಿ ಡಾ.ಸಿದ್ಧಯ್ಯ ಪುರಾಣಿಕರ ಅಧ್ಯಕ್ಷತೆಯಲ್ಲಿ 58ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಹಾಗೆಯೇ ಹಲವಾರು ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ನಡೆದವು.
ಸಾಹಿತ್ಯ ಕ್ಷೇತ್ರ
ಬಹುಮುಖ ಪ್ರತಿಭೆಯ ಚಿಂತನಾಶೀಲರಾದ ಜ್ವಾಲನಯ್ಯನವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಹಾಶಿಲ್ಪಿ, ರಾಜಲಾ, ಅಮಿತಾ, ಮಹಾಪರಿವರ್ತನೆ, ರಾಣಿ ರತ್ನಾಜಿ, ಪುರಸ್ಕಾರ, ನಯನ ಬಂಧನ, ಆರ್ಯ ಚಾಣಕ್ಯ ಮುಂತಾದ ಸುಮಾರು 17 ನಾಟಕಗಳನ್ನು ರಚಿಸಿದ ಕೀರ್ತಿ ಇವರದು. ಸಂಕೇತ, ಇವರ ಕವನ ಸಂಕಲನ. ಇವರ ‘ಮಹಾಶಿಲ್ಪಿ’ ನಾಟಕ ಮುಂದೆ ಇವರ ನಿರ್ದೇಶನದಲ್ಲಿಯೇ ಚಲನಚಿತ್ರವಾಗಿ ಮೂಡಿಬರುವುದರ ಜೊತೆಗೆ ಬೆಳ್ಳಿತೆರೆಯಲ್ಲಿ ತಾವೇ ಅಭಿನಯಿಸಿದರು. ಆಕಾಶವಾಣಿಯಲ್ಲಿ ಇವರ ಹಲವಾರು ನಾಟಕಗಳು ಪ್ರಸಾರವಾಗಿವೆ.ಕನ್ನಡದ ಜೊತೆಗೆ ಉತ್ತಮ ಹಿಂದಿ ಪಾಂಡಿತ್ಯ ಹೊಂದಿದ್ದ ಇವರು ಸ್ವತಃ ತಮ್ಮ ನಾಟಕಗಳನ್ನು ಹಿಂದಿಗೆ ಅನುವಾದಿಸಿದ್ದಾರೆ. ಇವರ ಬಹುಪಾಲು ನಾಟಕಗಳು ಐತಿಹಾಸಿಕವಾದವುಗಳೇ. ಅವುಗಳಲ್ಲಿ ಅಮಿತ, ಸಾಮ್ರಾಟ ಅಶೋಕ ಪ್ರಮುಖವಾದವುಗಳು. ‘ದಿವ್ಯಧ್ವನಿ’ ಇವರ ಸಂಪಾದಿತ ಕೃತಿ. ‘ಜೈನ ಸಾಹಿತ್ಯದಲ್ಲಿ ನಾಟಕಗಳು’ ಇವರ ಪ್ರಬಂಧ ಲೇಖನ. ಇಷ್ಟೇ ಅಲ್ಲದೆ ನೂರಾರು ಚಿಂತನ, ಭಾಷಣ ಕಾರ್ಯಕ್ರಮಗಳನ್ನು ಆಕಾಶವಾಣಿಯಲ್ಲಿ ಪ್ರಸ್ತುತಪಡಿಸಿದ್ದಾರೆ.
ಇವರು ನಾಟಕಾರರಷ್ಟೇ ಅಲ್ಲದೇ ಉತ್ತಮ ಅಭಿನಯ ಚತುರರಾಗಿದ್ದರು. ಆದ್ದರಿಂದಲೇ ಇವರಿಗೆ ಬರವಣಿಗೆಯ ಜೊತೆಗೆ, ಅಭಿನಯ, ನಿರ್ದೇಶನಗಳು ಸಿದ್ಧಿಸಿದ್ದವು. ಧುರ್ಯೋಧನ, ಶಕುನಿ ಪಾತ್ರಗಳು ಇವರಿಗೆ ಖ್ಯಾತಿ ತರುವುದರ ಜೊತೆಗೆ ಅಭಿನಯದಾಳಕ್ಕೆ ಇಳಿಯುವಂತೆ ಮಾಡಿದವು.
ಶಿಕ್ಷಣ ಕ್ಷೇತ್ರ
ಸಮುದಾಯದ ಪ್ರಗತಿ ಶಿಕ್ಷಣ ಕ್ಷೇತ್ರದಿಂದಲೇ ಎಂದು ಅರಿತಿದ್ದ ಜ್ವಾಲನಯ್ಯನವರು ಜನರಿಗೆ ಶಿಕ್ಷಣ ಮೂಲಭೂತ ಹಕ್ಕಾಗಬೇಕೆಂದು ಅಂದಿನ ಕಾಲದಲ್ಲಿಯೇ ಅರಿತು ಹೋರಾಡಿದರು. ಅಲ್ಲದೆ ಅನೇಕ ಶಿಕ್ಷಣ ಸಂಸ್ಥೆಗಳ ಉದಯಕ್ಕೆ ಕಾರಣರಾದರು. ಈಗಿನ ‘ಭಾರತಿ ವಿದ್ಯಾಮಂದಿರ’ ಜ್ವಾಲನಯ್ಯನವರ ಕನಸಿನ ಕೂಸು. ಅದೀಗ ಚಂದ್ರಕಾಂತ ಪಡೆಸೂರು ಅವರ ವಿವೇಕಯುಕ್ತ ಆಡಳಿತದಿಂದ ಹೆಮ್ಮರವಾಗಿ ಬೆಳೆಯುತ್ತಿದೆ.
ಅದರಲ್ಲೂ ಹಿಂದಿ ಪ್ರಚಾರ ಮಿತ್ರವೃಂದಗಳ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದುದು. ಹಾಸನಕ್ಕೆ ನೂತನ ಬಾಲಿಕಾ ಪ್ರೌಢಶಾಲೆ, ಶಿಕ್ಷಕರ ತರಬೇತಿಯ ಸಂಜೆ ಕಾಲೇಜು, ಹಿಂದಿ ಬಿ.ಇಡಿ ಕಾಲೇಜು ಮುಂತಾದವುಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿದರು.
ಜ್ವಾಲನಯ್ಯನವರು ಅರಕಲಗೂಡು ವರದರಾಜುಲು ಕಾಂತಮ್ಮ ಮಹಿಳಾ ಕಾಲೇಜು ಹಾಗೂ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರಾಗಿ ಇವುಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.
ಎಚ್.ಬಿ.ಜ್ವಾಲನಯ್ಯನವರೆಂದರೆ ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಲ್ಲ. ಸಾಮಾಜಿಕ, ರಾಜಕೀಯ, ಶಿಕ್ಷಣ, ಸಾಹಿತ್ಯ, ಸಂಘಟನೆ, ರಂಗಭೂಮಿ ಹೀಗೆ ಹಲವಾರು ಮೈಲಿಗಲ್ಲುಗಳ ಸಾಧಕ, ಛಲಗಾರ, ಹೋರಾಟಗಾರ. ಇವುಗಳೆಲ್ಲವುಗಳ ಫಲವಾಗಿಯೇ 1993ರಲ್ಲಿ ಹಾಸನದಲ್ಲಿ ನಡೆದ ನಾಲ್ಕನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪಟ್ಟ ಇವರನ್ನಲಂಕರಿಸಿತ್ತು.
ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ – 573201
ಮೊ-9483470794, 9739878197
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ