ಶನಿವಾರ, ಆಗಸ್ಟ್ 23, 2014

ವರ್ತಮಾನ ವಿಚಾರವಂತಿಕೆಯ ರತ್ನ ದೀಪ-ಕೊಟ್ರೇಶ್ ಎಸ್.ಉಪ್ಪಾರ್

ಕನ್ನಡ ಸಾಹಿತ್ಯ ರಾಜಕೀಯ ಸೇವೆ, ಸಾಂಸ್ಕøತಿಕ ಮತ್ತು ಶೈಕ್ಷಣಿಕ ಸಂಘಟನೆ, ನಾಡು-ನುಡಿಗಾಗಿ ಹೋರಾಟ ಹೀಗೆ ಅನೇಕ ಸ್ತರಗಳಲ್ಲಿ ಕಳೆದ ಮೂರು ದಶಕಗಳಿಂದ ದುಡಿಯುತಾ ಸಾಧನೆಯ ಮೆಟ್ಟಿಲುಗಳನ್ನು ಹಂತಹಂತವಾಗಿ ಏರಿದ ಎ.ಜಿ.ರತ್ನಕಾಳೇಗೌಡರು ಒಬ್ಬ ದಿಟ್ಟ ನೇರವಾದಿ ಹಾಗೆಯೇ ಹೃದಯ ವೈಶಾಲ್ಯತೆ ಹೊಂದಿರುವ ಸ್ನೇಹ ಜೀವಿ. ಅವರ ಸ್ನೇಹಿತರ ಅಭಿಮಾನಿಗಳ ಪರಿಚಿತ ಸಾಹಿತ್ಯ ಬಂಧುಗಳ ಬಳಗ ರಾಜ್ಯದ ಮೂಲೆಮೂಲೆಯಲ್ಲಿಯೂ ಇದೆ ಎಂದರೆ ಅತಿಶಯೋಕ್ತಿಯಾಗಲಾರದು.
    1956 ರಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬಿದಿರೆ ಗ್ರಾಮದ ಗೌಡಯ್ಯ ಹಾಗೂ ಜವರಮ್ಮ ದಂಪತಿಗಳ ಪತ್ರಿಯಾಗಿ ಜನಿಸಿದ ರತ್ನಕಾಳೇಗೌಡರು ರತ್ನ ದೀಪ ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ದೇಶಾದ್ಯಾಂತ ಹಲವಾರು ಸಭೆ, ಸಮ್ಮೇಳನ, ಕಮ್ಮಟಗಳಲ್ಲಿ ಭಾಗವಹಿಸಿ ಅನುಭವಗಳಿಸಿಕೊಂಡ ಇವರು ಹಲವಾರು ಕಮ್ಮಟಗಳಿಗೆ ಸ್ವತಃ ನಿರ್ದೇಶಕರಾಗಿ ದುಡಿದಿದ್ದಾರೆ.
ದೂರದರ್ಶನ ಚಂದನ ಬೆಳಗು ಕಾರ್ಯಕ್ರಮದಲ್ಲಿ ಇವರ ಸಂದರ್ಶನ ಪ್ರಸಾರವಾಗಿದ್ದು, ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಜೊತೆಗೆ ಕನ್ನಡ ಪರ ನೆಲ.ಜಲ ನಾಡು-ನುಡಿಯ ಹೋರಾಟಗಳಲ್ಲಿ ನಿರಂತರವಾಗಿ ದುಡಿಯುತ್ತಾ ಬಂದಿದ್ದಾರೆ.
ಸಾಹಿತ್ಯ, ರಾಜಕೀಯ, ಸಂಘಟನೆ  ಮೊದಲಾದ ಎಲ್ಲಾ ಮಾಧ್ಯಮಗಳಲ್ಲಿ ಪರಿಣಿತಿ ಪಡೆದಿರುವ ಎ.ಜಿ ರತ್ನಕಾಳೇಗೌಡ ಮೊದಲ ಆಸಕ್ತಿ ಕಥೆ, ನಂತರ ಕಾದಂಬರಿ, ಕಾವ್ಯ ರಚನೆ ಇವರ ಕಥೆಗಳನ್ನು ಓದುತ್ತಾ ಹೋದರೆ, ವಾಸ್ತವದ ನೆಲೆಗಟ್ಟಿನಲ್ಲಿ ವೈಚಾರಿಕತೆಯ ಮೂಸೆಯಲ್ಲಿ ಮಿಂದೇಳುವುದು ಖಂಡಿತ. ಇವರು ಮುಖ್ಯವಾಗಿ ಹೊಲ, ಹರಕೆ, ಪ್ರಾಣಬಿಂದು, ಭರವಸೆಗಳ ನಡುವೆ, ಒಂದು ಪೆಗ್, ಯಾತ್ರೆ, ಮಳೆ ಬರುವ ಹಾಗಿದೆ ಕಥಾ ಸಂಕಲನಗಳಾಗಿವೆ. ಎಂಟು ಕಾದಂಬರಿಗಳು ಇತರೆ ಹತ್ತು ಕೃತಿಗಳು ಹಾಗೂ ಎಂಟು ಕವನ ಸಂಕಲನಗಳನ್ನು ಒಳಗೊಂಡಂತೆ ಸುಮಾರು ನಲವತ್ತೈದಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
ಇವರ ಸಾಹಿತ್ಯ ಪ್ರಕಾರಗಳಲ್ಲಿ ನನಗೆ ಇಷ್ಟವಾದದ್ದು ಹಾಗೂ ಮನ ಕಲಕಿದ್ದು, ನನ್ನನ್ನು ಭಾವುಕನನ್ನಾಗಿ ಮಾಡಿದ್ದು ಇವರ ಕಾವ್ಯ. ಆದ್ದರಿಂದಲೇ ನಾನಿಲ್ಲಿ ಇವರ ಕಾವ್ಯದ ಬಗ್ಗೆ ಮಾತ್ರ ಚರ್ಚಿಸಲು ಇಚ್ಛೆ ಪಡುತ್ತೇನೆ. 
ಕವಿ ಅಡಿಗರು ಮಾತಿನೊಳಗೆಯೋ ಮೌನ ಇಲ್ಲದೆ ಹೋದರೆ ಅದರಾಚೆಗೂ ಇದು ಇರುವುದಿಲ್ಲ ಎಂದಿದ್ದಾರೆ. ಕಾವ್ಯದಲ್ಲಿ ಮಾತು ಮೌನದ ಮೂಲಕ, ಮೌನ ಮಾತಿನ ಮೂಲಕ ಪ್ರತೀತಿಗೆ ಬರುತ್ತಿರುತ್ತದೆ. ಪು.ತಿ.ನ ಅವರ ಅನೇಕ ಕವನಗಳಲ್ಲಿ ಮಾತಿನ ಮೂಲಕವೇ ಮೌನ, ಶಾಂತತೆ, ಚಿನ್ಮಾನ ಭಾವಗಮ್ಯವಾಗಿ ಅನುಭವವಾಗುತ್ತದೆ. 
ಇವರ ಕಾವ್ಯ ನಿಧಿ ಕವನ ಸಂಕಲನ 19ನೇ ಶತಮಾನದ ಅಂತ್ಯ ಹಾಗೂ 20ನೇ ಶತಮಾನದ ಉದಯಗಳ ನಡುವಿನ ಪರ್ವಕಾಲವೆಂದೇ ಹೇಳಬಹುದು.
ನನ್ನೂರ ಆಲದ ಮರಗಳು 
ಮದುವೆ ತಿಥಿ ಅಡುಗೆಗಳಿಗೆ 
ಒಂದೊಂದೇ ಮರ ಸೌದೆಯಾದವು (ನನ್ನೂರು)
ಇಲ್ಲಿ ಕವಯತ್ರಿಯ ಗತದ ಬದುಕಿನ, ಪೂರ್ವಜರ ಕರುವಿನ ಬಗೆಗಿನ ಜಾಗ್ರತೆ, ಕಾಳಜಿ ಈಗಿನವರಿಗಿಲ್ಲದಿರುವುದನ್ನು ಈ ಸಾಲುಗಳು ಸ್ತುತಿಸುತ್ತವೆ.
ಹೊಸ ಶತಮಾನದ ಸುಂದರ ಕನಸು
ಮೈ ಪುಳಕಗೊಳಿಸುತ್ತಿದೆ ಅವನಾನದ 
ಅಂಚಿನಿಂದ ಪಾರಾಗಿ ಹೊಸಯುಗದ ಮಡಿಲಲಿ 
ಜೋಗುಳ ಕೇಳಲು ಬರಲಿ ಹೊಸಗಾಳಿ ಬೆಳಕು...
(ಬರುವ ಶತಮಾನಕ್ಕೆ ಸ್ವಾಗತ)
ನಜಾನಾಯಿ ಶಬ್ದಂ ನಜಾನಾಯಿ ಚಾರ್ಥಂ 
ನಜಾನಾಮಿ ಪದ್ಯಂ ನಜಾನಾಮಿ ಗದ್ಯಾಂ 
ಚಿದೇತಾ ಷಡಖ್ಯಾ ಹೃದಿದ್ಯೋತತೇಮೋ
ಮುಪಾನ್ನಿಸ್ಸರಂತೆ ಗಿರಾಶ್ವಾಪಿ ಚಿತ್ರಮ್
ನಾನು ಶಬ್ದ ಅರ್ಥ ಪದ್ಯ, ಗದ್ಯಗಳನ್ನು ತಿಳಿದಿಲ್ಲ. ಆದರೆ ನನ್ನ ಅಂತರಂಗದಿಂದ ಅದ್ವಿತೀಯವಾದ ಆರು ಮುಖಗಳ ಜೀವನದ ಜ್ಞಾನ ಜ್ಯೋತಿಯು ಬೆಳಗುತ್ತಿದೆ. ಆ ಪ್ರತಿಭೆಯಿಂದ ನನ್ನ ಮುಖದಿಂದ ಈ ವಾಕ್ಯಗಳು ನುಡಿಯುತ್ತಿವೆ, ಎಂಬ ಸೂಕ್ತಿಯು ಸುಬ್ರಹ್ಮಣ್ಯ ಭುಜಂಗ ಸ್ತೋತ್ರದಿಂದ ಹೇಳಲ್ಪಟ್ಟಿದೆ.
ಪ್ರಸ್ತುತ ಕಾವ್ಯ ಸಂದರ್ಭದಲ್ಲಿ ನಿಂತುಕೊಂಡಿರುವ ಕವಿಯ ರವನೆಗೆ ನೂರಾರು ಮಿತಿಗಳು, ಇತಿಗಳು, ಸಂಕಷ್ಟಗಳು ಕಾಣಿಸಬಹುದು. ಕವಿ ಬರೆದಾಗಲೆಲ್ಲಾ ಎಲ್ಲೋ ಗುಹಾಧ್ವನಿಯಂತೆ ಅನಿಸಿ ಒಮ್ಮೊಮ್ಮೆ ಕೀಳರಿಮೆ ಕಾಡಬಹುದು. ನಿಜವಾಗಿರಲೂ ಹೊಸದನ್ನು ತಡಕಿ ಹುಡುಕುವ, ವಿಶಿಷ್ಟವಾದುದನ್ನು ಬಗೆದು ತೆಗೆಯುವುದು ಪ್ರಯಾಸದ ಮಾತೇ ಸರಿ!
ಈ ಹಿನ್ನಲೆಯಲ್ಲಿ ಎ.ಜಿ.ಕಾಳೇಗೌಡರ ಅನೇಕ ಕವನಗಳಲ್ಲಿ ಸಾಮಾಜಿಕ ಸ್ಥಿತಿಯನ್ನು, ದುರಾಡಳಿತವನ್ನು, ಶೋಷಣೆಯನ್ನು ಜಾತಿಯ ವ್ಯವಸ್ಥೆಯ ಧಿಕ್ಕರಿಸುವ ಮಿಂಚು, ಕಿಡಿ, ಉದ್ವೇಗ, ಆವೇಶ ಹೊಮ್ಮಿ ಬಂದಿದೆ. ಆದ್ದರಿಂದಲೇ ನಾಣು ಇವರನ್ನು ಬಂಡಾಯ ಹಾಗೂ ವೈಚಾರಿಕ ಸಾಹಿತ್ಯ ವಲಯಕ್ಕೆ ಸೇರಿಸಬಯುಸುತ್ತೇನೆ. ಏಕೆಂದರೆ ಪ್ರಸ್ತುತ ಸಂದರ್ಭಗಳಲ್ಲಿ ಈ ರೀತಿಯ ಕಚ್ಚೆದೆಯ ಬರಹಗಳು ವಿರಳ. ಇವು ಅನಗತ್ಯವಾಗಿ ಹೆಚ್ಚಲೆಬೇಕಾಗಿದೆ. ಸಾಮಜಿಕ ಕೊಳೆಯನ್ನು ಶುಭ್ರಗೊಳಿಸುವ ನಿಟ್ಟಿನಲ್ಲಿ ನೇರ ಹಾಗೂ ದಿಟ್ಟ ಸಾಹಿತ್ಯವೆಂದರೆ ಬಂಡಾಯ ಹಾಗೂ ವೈಚಾರಿಕ ಸಾಹಿತ್ಯ.
ಇಂತಹ ನೂರಾರು ವಿಚಾರಗಳು ರತ್ನಕಾಳೆಗೌಡರ ಕವನಗಳು ಸುಔಗತೆಯಿಂದ ಎದ್ದು ಕಾಣುತ್ತವೆ.
ಕವಿ ಅಡಿಗರ ‘ಒಂದು ಹದ್ದಿನ ರೆಕ್ಕೆಯೊಳಗೆ ನೂರಾರಕ್ಕೆ ಹದ್ದು’ ಎಂಬಲ್ಲಿ ಕಾಣುವ ಧೀಮಂತ, ಅನಾಯಾಸ, ಧ್ವನಿಪೂರ್ಣ ಶ್ಲೇಷ ನನಗೆ ಇವರ ಅನೇಕ ಕವನಗಳಲ್ಲಿ ಕಂಡಿತು. ಹೋಲಿಕೆ ತಪ್ಪಿರಬಹುದು ಆದರೆ ಮೌಲಿಕತೆಯ ನಿರ್ಣಯ ನವಿರಾದ ತೌಲನಿಕ ನೆಲೆಯಿಂದಲೇ ಚಿಮ್ಮುತ್ತದೆ.
ಒಂದು ಸಂದರ್ಶನದಲ್ಲಿ ಬೇಂದ್ರೆ ಹೀಗೆ ಹೇಳಿದ್ದಾರೆ. ನನ್ನ ಒಳಗಿನ ವ್ಯಕ್ತಿ ಎಚ್ಚರಗೊಂಡಾಗಲೇ ಕಾವ್ಯ ಒಡಮೂಡಿ ಬರುತ್ತದೆ. ನನ್ನದು ಅವಶ್ಯವಾಗಿ ಹೃದಯದ ಪ್ರತಿಕ್ರಿಯೆ. ನನ್ನ ಭಾವಗಳು ಒಳಗೊಳಗೆ ಮಿಥಿಸುತ್ತಿರುವಂತೆ ಕಾಣುತ್ತದೆ. ಅನಂತರ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಗರ್ಭದಂತೆ ಇನ್ನು ಒಳಗೆ ಉಳಿಯಲಾಗದ ಹೊರಹೊಮ್ಮುತ್ತದೆ. ಇದೇ ರೀತಿ ನಿತ್ಯ ನಡೆಯುವ ಅನೇಕ ಶೋಷಣೆ, ಭ್ರಷ್ಟಾಚಾರ, ಮೂಢನಂಬಿಕೆ ಹಗಲು ದರೋಡೆ ಇವೆಲ್ಲವುಗಳದರ ವಿರುದ್ದ ಬೆಂಕಿಯ ಜ್ವಾಲೆಯಂತೆ ರತ್ನ ಕಾಳೇಗೌಡರ ಕವನಗಳು ಹೊರಹೊಮ್ಮಿವೆ. ಇವರ ಕಾವ್ಯಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಕಾಣಬಹುದು. ಏಕೆಂದರೆ ಕಾವ್ಯವು ಕವಿಯದೇ ಆದ ವಿಶಿಷ್ಟವಾದ ಅನುಭವಗಳ ಅತ್ಯಂತ ವೈಯಕ್ತಿಕವಾದ ಭೀನ್ನಭಾವದ ಅಭಿವ್ಯಕ್ತಿ. ಸಾಮಾಜಿಕ ಪ್ರಜ್ಞೆಯು ಈ ಭಾಷಾ ಶರೀರದ ಪರಿಪೂರ್ಣತೆಗಳಾಗುವ ಅನುಭವ ವಿಶಿಷ್ಟತೆಗಾಗಲೀ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು; ಅಲ್ಲದೇ ರತ್ನಕಾಳೇಗೌಡರು ಕಾವ್ಯ ರಚೆನೆಗೆ ಆರಂಭಿಸಿದ್ದು ಬಂಡಾಯದ ಕಾಲವಾಗಿತ್ತು. ಆ ಸಂದರ್ಭದಲ್ಲಿ ಭ್ರಷ್ಟಾಚಾರ, ಜಾತಿವ್ಯವಸ್ಥೆ, ದುರಾಡಳಿತ, ಸಾಮಾಜಿಕ ಅನಿಷ್ಟಗಳು, ವರದಕ್ಷಿಣೆ, ಬಾಲ್ಯವಿವಾಹ ಹೀಗೆ ಹತ್ತಾರು ಸಾಮಾಜಿಕ ಕಾದಂಬರಿಗಳನ್ನು ಸ್ವ ಅನುಭವಿಸಿ ಬರೆದವರು, ವಿಚಾರವಂತಿಕೆಯ ಉತ್ತುಂಗಕ್ಕೇರಿ ಅನುಭವದ ನೆಲೆಗಟ್ಟಿನಲ್ಲಿ ಲೇಖನಿ ಬಳಸಿದವರೆಂದರೆ ತಪ್ಪಾಗಬಾರದು.
ಹೊಸಗನ್ನಡ ಕಾವ್ಯದ ಮೂಲವನ್ನು ರತ್ನಕಾಳೇಗೌಡು ಕರ್ನಾಟಕದ ಗರತಿಯ ಹಾಡುಗಳಲ್ಲಿ, ಲಾವಣಿಗಳಲ್ಲಿ, ಹನ್ನೇರಡನೇ ಶತಮಾನದ ಶಿವಶರಣರ ವಚನಗಳಲ್ಲಿ ಹರಿದಾಸರ ಕೀರ್ತನೆಗಳಲ್ಲಿ ಕಂಡುಕೊಂಡು ಬಹುಶಃ ಅವರ ಯುಗ ಪ್ರವರ್ತಕ ಪ್ರತಿಭೆಯನ್ನು ಮತ್ತು ನೂತನ ಕಾವ್ಯದ ಮೂಲವನ್ನು ಹುಡುಕಿ ಪಡದಿದ್ದಾರೆ ಎನ್ನಬಹುದು. ಅಲ್ಲದೇ ದಾಸ್ಯರ ನೋವು, ಸ್ವಾತಂತ್ರ್ಯದ ಕನಸು , ಬಡತನದ, ದುರ್ದೈವದ, ಹಸಿವೆಯ, ಅಜ್ಞಾನದ ಶತಮಾನದ ಕೊರಗು, ಕ್ರಾಂತಿಯ ಮುನ್ನೋಟದ ರುದ್ರ ತಾಂಡರ, ಆತ್ಮ ಚಿಂತನ, ಮಾನವ ಧರ್ಮದ ಪುನರುತ್ಥಾನ, ಪ್ರೀತಿ, ಪ್ರಕ್ರಿಯೆ, ವಿರಹ, ವಿಷಾದ, ದಾಂಪತ್ಯ, ಹೆಣ್ಣು-ಗಂಡಿನ ಸಮಸ್ಯೆ, ಕನ್ನಡತೇರು ಮುನ್ನಡೆಸಲು ಆಸೆ. ಉತ್ಸಾಹ, ಕನಸು, ರಾಷ್ಟ್ರಧರ್ಮದ ಭೂತ ಭವಿಷ್ಯ, ವರ್ತಮಾನಗಳ ಸಾಮೀಕರಣದ ಅನ್ವಯದ ಸಾಹಸ, ಮಹಾತೀತ ಅದೃಶ್ಯ ಲೋಕಕ್ಕೆ ದಾಳಿ, ಕನಸುಗಳ ಮಿಂಚುಗಳ ಅನುಸರಣ, ಲೀಲೆ ಹೀಗೆ ರತ್ನಕಾಳೇಗೌಡರಲ್ಲಿ ನುಡಿಯದ ಮಿಡಿಯದ ಭಾವವಿಲ್ಲ. ರೂಪುಗೊಳ್ಳದ ಆಕಾಂಕ್ಷೆಗಳಲ್ಲಿ, ಕಾದುಕೊಳ್ಳುವ ನೋವಿಲ್ಲ, ನಲಿವಿಲ್ಲ, ಎಷ್ಷಡತ್ತ ಕನ್ನಡದ ಆರು ಕೋಟಿ ಚಿತ್ತ ತರಂಗಗಳ ಕ್ಷೀರ ಸಾಗರದಂತೆ ರತ್ನಕಾಳೇಗೌಡರ ಕಾವ್ಯ ಭೋರ್ಗರೆಯುತ್ತಿದೆ”.
ವೇದಗಳ ಕಾಲದಿಂದ ಇಂದಿನವರೆಗೂ ಜಾತಿ ಪದ್ದತಿ ಬದಲಾವಣೆಗಳಿಗೆ ಒಳಪಟ್ಟಿದೆ. ಅದರ ರಚನೆಯಲ್ಲಿ ಬದಲಾವಣೆಗಳಾಗಿವೆ. ಅದರ ಕಾರ್ಯದಲ್ಲಿ ಪರಿವರ್ತನೆಗಳಾಗಿವೆ. ಅನೇಕ ಮಂದಿ ಸಮಾಜ ಸುಧಾರಕರು ಜಾತಿ ಪದ್ದತಿಯ ಸುಧಾರಣೆ ಮಾಡಲು ಸತತವಾಗಿ ಶ್ರಮಿಸಿದ್ದಾರೆ. ಜಾತಿ ಜಾತಿಗಳ ನಡುರಿನ ಅಸಮಾನತೆಯನ್ನು ಕಿತ್ತು ಹಾಕಲು ಹೋರಾಡಿದ್ದಾರೆ. ವಚನಕಾರರು, ಹರಿದಾಸರು, ಶೂದ್ರರು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೂ ಇನ್ನೂ ಅನೇಕ ಕಡೆಗಳಲ್ಲಿ ಅಟ್ಟಹಾಸಗಳಡಿಯಲ್ಲಿ ಶೋಷಿತರು ನರಳಾಡುತ್ತಿದ್ದಾರೆ. 
ಈ ದಿಸೆಯಲ್ಲಿ ಹಾಸನದ ಹೆಸರಾಂತ ಲೇಖಕಿಯಾದ ಶ್ರೀಮತಿ ರತ್ನಕಾಳೇಗೌಡರು ತಮ್ಮ ಜೀವ ನಕ್ಷತ್ರಗಳು ಕವನ ಸಂಕಲನದಲ್ಲಿ ವೈಚಾರಿಕತೆಯ ನೆಲೆಗಟ್ಟಿನಲ್ಲಿ ಶೋಷಿತರು, ಧೀನರು ಹೊರಡಿಸಲಾಗದಂತಹ ಆಕ್ರಂದನಗಳನ್ನು ತಮ್ಮ ಕವಿತೆಗಳಲ್ಲಿ ಧ್ವನಿಸಿದ್ದಾರೆ.
ಬಸಿದ ಬೆವರಿಗೆ
ನೆಣದ ಒಗ್ಗರಣೆ
ಹಸಿಮಾಂಸ ಜಗ್ಗಿ ಚಪ್ಪರಿಸಿ
ತನ್ನುವ ಮಂದಿ 
ಬೆವರನ್ನು ಗಟಗಟನೆ ಕುಡಿದು 
ಮರಳುಂಟೆ ಕರುಳುಂಟೆ 
ರಕ್ತಸಂಬಂಧದ ಕೊಂಡಿಗೆ (ಸುಂಟರಗಾಳಿಗೆ ಸೆಟೆದು ನಿಂತ)
ಕವಿಯತ್ರಿಯ ಸಾಮಾಜಿಕ ಪ್ರಜ್ಞೆ ಇಲ್ಲಿಯ ಸಾಲುಗಳಲ್ಲಿ ಜೀವ ಪಡೆದುಕೊಂಡಿದೆ. ಜಾತಿ, ಸಿರಿವಂತಿಕೆ ಮಾನವ ಕೃತ ವಿಕಲ್ಪ ಎಂಬುದನ್ನು ಮನದಟ್ಟು ಮಾಡುತ್ತಾರೆ. ಬಂಡಾಯದ ಧ್ವನಿಯ ಮೂಲಕವೇ ಉತ್ತರಿಸುವ, ಚಿಂತಿಸುವ, ಮಂಥಿಸುವ ರತ್ನಕಾಳೇಗೌಡರು ಪ್ರತಿಭಟನೆಯ ಕತ್ತಿಯನ್ನು ತಮ್ಮ ಕಾವ್ಯದಲ್ಲಿ ಜಳಪಿಸಿದ್ದಾರೆ. ತಮ್ಮ ಸುತ್ತಲೂ ಸುತ್ತುವ ಭಾನೆಗಳ ತೆಕ್ಕೆಯಿಂದ ಬಿಡಿಸಿಕೊಂಡು ವೈಚಾರಿಕ ಹಾಗೂ ಸಾಮಾಜಿಕ ಪ್ರಜ್ಞೆಯ ಸಂವೇದನೆಗಳು ಬದುಕಿನ ಕುರಿತ ಸೂಕ್ಷ್ಮ ನೋಟಗಳು. ಸತ್ಯದರ್ಶನಗಳು, ಕಳಚಿ ಬಿದ್ದ ಭಾವಗಳನ್ನು ಎತ್ತುವಲ್ಲಿ ಕವಯತ್ರಿ ಸಫಲರಾಗಿದ್ದಾರೆ.
ಹಗಲುಗಳ್ಳರ ಬೇಟೆಯಾಡುವ ನೆಪದಲ್ಲಿ 
ಸಂಬಂಧ ಪಟ್ಟ ಇಲಾಖೆಗಳು ಪರ್ಸೆಂಟೇಜು...
***
ಮೌಢ್ಯ ತುಂಬಿದ ಮತಗಳು 
ಹೆಂಡದ ಹೊಳೆಯಲ್ಲಿ ಈಜುತ್ತಿವೆ
ಮತಕ್ಕೆ ಇವರ ಇನ್ನಾರದೋ ಹೆಬ್ಬೆಟ್ಟು
ಓಟು ಒತ್ತಿ ಗೆಲ್ಲಿಸಿದ
ಆಶ್ವಾಸನೆಯ ಅಂಗಡಿಯಿಟ್ಟುಕೊಂಡಿದ್ದ
ರಾಜಕಾರಣಿ ಬಡವವರಿಗೆ ಗಗನ ಕುಸುಮವಾಗಿದ್ದಾನೆ...
(ನಾಳೆಯ ಬೆಳಕು ಕತ್ತಲಾಗಿದೆ)
ಪ್ರಸ್ತುತ ಸಂದರ್ಭದ ದುಸ್ಥಿತಿಗೀಡಾದ ನಾಗರೀಕತೆ, ರಾಜಕೀಯ ಸ್ಥಿತಿ, ಮೌಲ್ಯ ಕಳೆದುಕೊಂಡ ಮತದಾರರ ಬಗ್ಗೆ ಕವಯತ್ರಿ ಆಕ್ರೋಶಗೊಳ್ಳುತ್ತಾರೆ. ತಾವೂ ಒಬ್ಬ ರಾಜಕೀಯ ವ್ಯಕ್ತಿಯಾಗಿ ಪ್ರಸ್ತುತ ಸ್ಥಿತಿಯನ್ನು ನಿಭಾಯಿಸುತ್ತಾರೆ, ಹೆಂಡ, ತುಂಡು, ಹಣಕ್ಕಾಗಿ ಓಟು ಹಾಕಿದ ಖರ್ಚು ಮಾಡಿದ ವ್ಯಕ್ತಿ ಆ ಹಣವನ್ನು ಯಾವ ಮೂಲದಿಂದ ಭರಿಸಿಕೊಳ್ಳುತ್ತಾನೆ? ಅನ್ಯ ಮಾರ್ಗವಿಲ್ಲದೇ ಭ್ರಷ್ಟಾಚಾರದ ಹಾದಿಯನ್ನೇ ತುಳಿಯಬೇಕಾಗುತ್ತದೆ. ಇದಕ್ಕೆ ಮತದಾರನೇ ಅಂದರೆ ಸಮುದಾಯವೇ ಮೂಲ ಅಂಶ ಎಂಬ ನಿಲುವಿಗೆ ಕವಯತ್ರಿ ಬಂದು ನಿಲ್ಲುತ್ತಾರೆ.
ಅರ್ಧ ರಾತ್ರಿಯಲ್ಲಿ ಕಣ್ಣು ಬಿಟ್ಟ
ಸ್ವಾತಂತ್ರ್ಯ ಅರೆ ನಿದ್ರೆಯಲ್ಲಿ ಬಿಕ್ಕುತ್ತಿದೆ
ನರಸತ್ತ ಸರ್ಕಾರ ಧನಿಕರ ಕುಣಿಕೆಗೆ ಸಿಕ್ಕಿ 
ವಿಷದ ಜ್ವಾಲೆ ಉಗುಳುತ್ತ ಮೀಸೆ ತಿರುವತ್ತಿದೆ
(ಧ್ವನಿಕರ ಕುಣಿಕೆ)
ನಮಗೆ ಸ್ವಾತಂತ್ರ್ಯ ಬಂದು ಮುಕ್ಕಾಲು ಶತಮಾನದಂಚಿಗೆ ಬಂದರೂ ಅದಿನ್ನೂ ಪೂರ್ಣ ಕಣ್ತೆರೆದಿಲ್ಲ! ಪ್ರಜಾಪ್ರಭುತ್ವದ ಸೋಗಿನಲ್ಲಿ  ಶುರುವಾದ ರಾಜಕಾರಣ ಉಳ್ಳವರ ಪಾಲಾಗಿ ಬಡವರು, ದೀನ ದಲಿತರು ಇನ್ನೂ ಅದೇ ಸ್ಥಿತಿಯಲ್ಲಿದ್ದರೆ ಬಂಡವಾಳಶಾಹಿಗಳು ಮಾತ್ರ ರಾಜಕೀಯ ವ್ಯಕ್ತಿಗಳಿಗೆ ಬಿಸ್ಕೇಟ್ ಹಾಕಿ ಮೇಯಿಸುತ್ತಾ ತಮ್ಮ ಹಿಡಿತದಲ್ಲಿ ಮೂಗುದಾರ ಹಾಕಿ ಇಟ್ಟುಕೊಂಡಿದ್ದಾರೆ. ಪ್ರಸ್ತುತ ಸಮಾಜವನ್ನು ಆಳುತ್ತಿರುವುದು ರಾಜಕಾರಣಿಗಳು ಎನ್ನುವುದಕ್ಕಿಂತಲೂ ಕೆಲವು ಬಂಡವಾಳಶಾಹಿಗಳೆಂದರೆ ತಪ್ಪಾಗಲಾರದು.
ತಲೆಮಾರುಗಳಿಂದ ಬೆಳೆದು ಬೀಗುತ್ತಿದ್ದ
ಅರಣ್ಯ ಸಂಕುಲವೇ ಹಗಲುಗಳ್ಳರ ಪಾಲಾಗಿದೆ
ಬೆಲೆ ತುಟ್ಟಿಯಾಗಿ ಕಾಳಸಂತೆಯಲಿ
ಕುದುರಿತು ವ್ಯಾಪಾರ ಬೀಟೆ, ತೇಗ, ಗಂಧ
ಶ್ರೀಮಂತರ ಮಹಲುಗಳ ಬಾಗಿಲು, ಕಿಟಕಿ
ಸಿಂಹಾಸನಗಳಾಗಿ ರೂಪಾಂತರಗೊಂಡಿವೆ... (ನಾಳೆಯ ಬೆಳಕು ಕತ್ತಲಾಗಿದೆ)
ಜಗತ್ತಿನಾದ್ಯಾಂತ ಚರ್ಚಿತವಾಗುತ್ತಿರುವ ಭೂಮಿಯ ತಾಪ! ಪರಿಸರ ನಾಶ ಇಂದು ಜೀವ ಸಂಕುಲಕ್ಕೆ ಗಂಡಾಂತರ ತಂದಿದೆ ಎಂದರೆ ಅರಿವಾಗದಿರದು. ರತ್ನಕಾಳೇಗೌಡರು ಅವರ ಕವಿತೆಗಳಲ್ಲಿ ಏನೆಲ್ಲಾ ಚಿಂತಿಸಿದ್ದಾರೆ ಎನ್ನುವುದಕ್ಕಿಂತ ಏನನ್ನು ಬಿಟ್ಟಿದ್ದಾರೆ ಎಂದು ತಡಕಬೇಕಾಗಿದೆ. ಅಂದರೆ ಪ್ರಪಂಚದ ಸಾಧ್ಯವಾದಷ್ಟು ಗೋಚರವಾಗುವ ಎಲ್ಲಾ ಸಮಸ್ಯೆಗಳ ಮಧ್ಯೆ ಅವರ ಮನ ತುಡಿದಿದೆ. ಅವರ ಭಾವ ಚಿಲುಮೆ ಹೊಮ್ಮಿದೆ, ಅವು ಪದಗಳಾಗಿ, ಸಾಲುಗಳಾಗಿ, ಕವಿತೆಗಳಾಗಿ ನಮ್ಮೆದರು ನಿಂತಿವೆ.
‘ಬೇಲಿಯೇ ಎದ್ದು ಹೊಲ ಮೇಯ್ದರೆ’ ಎಂಬ ಗಾದೆಯಂತೆ ಅರಣ್ಯ ಕಾವಲುಗಾರರೇ ಅರಣ್ಯವ ನಾಶ ಮಾಡಿ ಅಲ್ಲಿನ ಬೆಲೆ ಬಾಳುವ ಬೀಟೆ, ತೇಗ, ಗಂಧದಂತಹ ಮರಗಳನ್ನು ಕಡಿದು ತಮ್ಮ ಮನೆಗೆ, ನೆಂಟರಿಷ್ಟರ ಮನೆಗೆ, ಮಹಲುಗಳಿಗೆ ಕಿಟಕಿ, ಬಾಗಿಲು, ಬೆಂಚು, ಮಂಚ, ಸೋಫಾ ಇನ್ನಾವುದಕ್ಕೋ ಬಳಸಿ ಸುಪ್ಪತ್ತಿಗೆಯಲ್ಲಿ ಬೀಗುವ ಮಂದಿ ಹಲವರು. ಹೀಗೆ ದೇಶದ ಸ್ಥತಿಯೂ ಹೌದು. ಇಲ್ಲಿ ಕವಯತ್ರಿಯ ಭಾವಗಳು ಅರಣ್ಯಕ್ಕೆ ಮಾತ್ರ ಸೀಮಿತವಾಗಿಲ್ಲ ಅದರೆಲ್ಲೆ ದಾಟಿ ಅದರಿಂದಾಚೆಗೆ ನಾವು ಯೋಚಿಸಿದಾಗ ಪ್ರತಿಯೊಂದು ಕ್ಷೇತ್ರಕ್ಕೆ ನೇಮಿಸಿದಂತಹ ಪ್ರಜಾಪ್ರತಿನಿಧಿ  ಅವನ ಕಾಯಕ ಮರೆತು ಸ್ವಚ್ಛಂದದಾಟ, ದುರಾಸೆಯಿಂದ ಹಗಲು ದರೋಡೆ ಮಾಡುತ್ತಿದ್ದಾನೆ. ಆದ್ದರಿಂದಲೇ ಭೂಮಂಡಲ ದುಸ್ಥಿತಿಯ ಹೊಸ್ತಿಲಲ್ಲಿ ಬಂದು ನಿಂತಿದೆ. ಇನ್ನಾದರೂ ನಾಗರಿಕರು ಈ ನಿಟ್ಟಿನಲ್ಲಿ ಆಲೋಚಿಸಬೇಕಿದೆ. 
ರತ್ನಕಾಳೇಗೌಡರ ಕಾವ್ಯ ಸಮಾಜ ಮುಖಿ ಯಾಗಿ, ಸುತ್ತಣ ಬದುಕಿನ ವಿಷಮತೆ, ನಗರ ಜೀವನದ ಪರಕೀಯ ಪ್ರಜ್ಞೆ, ಮೌಢ್ಯಗಳು, ಸಾಮಾಜಿಕ ಅನಿಷ್ಠಗಳು, ಭ್ರಷ್ಟಾಚಾರ, ಜಾತೀಯತೆ, ಶೋಷಣೆ, ಸಂಕಷ್ಟ, ಸಂಕೀರ್ಣತೆ, ಜಗದ ನಾಶ, ಉಳ್ಳವರ ದಬ್ಬಾಳಿಕೆ ಇವರ ಕವಿ ಚೇತನವನ್ನು ಗಾಢವಾಗಿ ಮೀಟುತ್ತದೆ.
ಪಾತಾಳ ಗರಡಿ, ಸತ್ಯ ಹೇಳಬೇಡಿ ಎಚ್ಚರಿಕೆ!, ಸುಂಟರಗಾಳಿಗೆ ಸೆಟೆದು ನಿಂತ, ಕಾಷ್ಮೋರನಿಗೆ ಬೇಕು ರಕ್ತ, ನಿಮಗೆ ಗೊತ್ತೇ?, ಮುಂತಾದ ಕವಿತೆಗಳಲ್ಲಿ ಸೃಜನಕ್ರಿಯೆಯನ್ನು ಕುರಿತಾದ, ಜಗದ ಉಳಿವಿನ, ನಾಗರಿಕತೆಯ ಬಗೆಗಿನ ಗಂಭೀರ ಚಿಂತನೆಯಿದೆ. ಕಾವ್ಯಾವತಾರದ ನಿಗೂಢತೆಯನ್ನು ಅನ್ವೇಷಿಸುವ ಪ್ರಯತ್ನವನ್ನು ಕವಯತ್ರಿ ನಿಷ್ಠೆಯಿಂದ ಮಾಡಿದ್ದಾರೆ ಎನ್ನಬಹುದು.
ಇವರ ಸಾಹಿತ್ಯ ಕೃಷಿಯ ತೇರು ನಿರಂತರವಾಗಿ ಸಾಗಲಿ, ಇನ್ನೂ ಅನೇಕ ಕೃತಿ ರೂಪದ ಭಾವುಟಗಳನ್ನು ಇವರ ಸಾಹಿತ್ಯ ರಥ ಹೊಂದಲಿ ಎಂದು ಆಶಿಸುತ್ತೇನೆ.


ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
ಮೊ-9483470794
 

ಸೋಮವಾರ, ಆಗಸ್ಟ್ 18, 2014

ಹಾಸನ ಜಿಲ್ಲೆಯ ಅಮೂಲ್ಯ ಕೊಡುಗೆ – ಡಾ. ಡಿ.ಬಿ.ಬಸವೇಗೌಡ


ಹಾಸನ ಸಾಹಿತ್ಯ, ಸಾಂಸ್ಕøತಿಕ, ರಂಗಭೂಮಿ, ಕ್ರೀಡೆ, ರಾಜಕಾರಣ ಹೀಗೆ ಹಲವಾರು ವಿಷಯಗಳಲ್ಲಿ ಉತ್ಕøಷ್ಟತೆ ಮೆರೆದ ಜಲ್ಲೆ. ಇವೆಲ್ಲವುಗಳಂತೆ ಕನ್ನಡ ಚಲನಚಿತ್ರ ರಂಗದಲ್ಲೂ ತನ್ನದೆಯಾದ ದಾಪುಗಾಲಿರಿಸಿದೆ. ಗೊರೂರು, ಕರೀಂಖಾನ್, ಜ್ವಾಲನಯ್ಯ ಮುಂತಾದವರ ಸಾಹಿತ್ಯ ಚಿತ್ರಕಥೆಗಳಾದರೆ, ನಿರ್ಮಾಣದ ಜವಾಬ್ದಾರಿ ಹೊತ್ತು, ಕಥೆ, ನಿರ್ದೇಶನ ಇತ್ಯಾದಿ ವಿಭಾಗಗಳಲ್ಲಿಯೂ ಪ್ರಭಾವ ಬೀರಿ ಕನ್ನಡ ಚಲನಚಿತ್ರ ಕ್ಷೇತ್ರವನ್ನು ನಿತ್ಯ ಚಲನಶೀಲವಾಗಿಟ್ಟ ಕೀರ್ತಿ ಡಿ.ವಿ.ಬಸವೇಗೌಡರಿಗೆ ಸಲ್ಲುತ್ತದೆ.
ಇವರು ಹಾಸನ ಜಿಲ್ಲೆಯ ದೊಡ್ಡಕರಡೆ ಗ್ರಾಮದಲ್ಲಿ 1934 ರಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ಅಂತಮುರ್ಖಿಯಾಗಿದ್ದ ‘ದೇಶಭಕ್ತಿ’ ಎಂಬ ಕಿಡಿ ಮುಂದೆ ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕುವಂತೆ ಮಾಡಿತು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಿದರು. ತದನಂತರ ಹಾಸನಕ್ಕೆ ಬಂದು 1960 ರಲ್ಲಿ ಹಾಸನ ಜಿಲ್ಲೆಯ ಖ್ಯಾತ ರಾಜಕಾರಣಿ ಹಾಗೂ ನ್ಯಾಯವಾದಿಗಳಾಗಿದ್ದ ಹಾರನಹಳ್ಳಿ ರಾಮಸ್ವಾಮಿಯವರಲ್ಲಿ ಕಿರಿಯ ವಕೀಲರಾಗಿ ತಮ್ಮ ತಮ್ಮ ವೃತತಿ ಜೀವನ ಆರಂಭಿಸಿದರು.
ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರ
ಹಾಸನ ಜಿಲ್ಲಾ ಗ್ರಾಮೋದ್ಯೋಗ ಸಂಘದ ಅಧ್ಯಕ್ಷರಾಗಿ, ರೈತ ಮತ್ತು ಕಾರ್ಮಿಕ ಸಂಘದ ಅಧ್ಯಕ್ಷರಾಗಿ, ಯುವ ಜನ ಸೇವಾ ಮಂಡಳಿಯ ಸದಸ್ಯರಾಗಿ, ಸ್ಕೌಟ್ಸ್ ಕಮಿಷನರ್ ಆಗಿ, ಯಗಚಿ ವಿದ್ಯಾಪೀಠ ಉಪಾಧ್ಯಕ್ಷರಾಗಿ, ವಕೀಲರ ಸಂಘದ ಕಾರ್ಯದರ್ಶಿಯಾಗಿ, ಅಂಧ ಸಂಸ್ಥೆಯ ಸದಸ್ಯರಾಗಿ, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾಗಿ, ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾಗಿ, ಮೈಸೂರು ವಿಭಾಗೀಯ ಮಾರುಕಟ್ಟೆ ಸಲಹಾ ಸಮಿತಿಯ ಸದಸ್ಯರಾಗಿ ತಮ್ಮ ತನು, ಮನ, ಧನವನರ್ಪಿಸಿ ಸಮಾಜದ ಏಳ್ಗೆಗಾಗಿ ಶ್ರಮಿಸಿದ್ದಾರೆ.
ನಂತರ ಇವರನ್ನು ಕೈಬೀಸಿ ಕರೆದದ್ದು ಕನ್ನಡ ಚಲನಚಿತ್ರರಂಗ. ಬೆಂಗಳೂರಿಗೆ ಹೋದನಂತರ ಅಲ್ಲಿಯೂ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಕಾಯಕಗೈಯುತ್ತಾ ಸಾಗಿದರು.
ಬೆಂಗಳೂರಿನ ಸ್ವರ್ಣಭಾರತಿ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸದಸ್ಯರಾಗಿ, ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಸದಸ್ಯರಾಗಿ, ರಾಜ್ಯ ಸಹಕಾರಿ ಮಾರಾಟ ಮಹಾ ಮಂಡಳದ ಸದಸ್ಯರಾಗಿ, ರಾಜ್ಯ ಕಾರ್ಮಿಕ ವಿಮೋಚನಾ ಜಾಗೃತಿ ಸಮಿತಿಯ ಸದಸ್ಯರಾಗಿ, ರಾಜ್ಯ ಕಿಸಾನ್ ಸೆಲ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ರಾಜ್ಯ ಪ್ಲೇಯಿಂಗ್ ಶಿಕ್ಷಣ ಶಾಲೆ ಜಕ್ಕೂರು ಏರೋಡ್ರೊಮ್ಮಿನ ನೇಮಕಾತಿ ಸಮಿತಿಯ ಸದಸ್ಯರಾಗಿ, ಬೆಂಗಳೂರಿನ ಕೆಂಪೇಗೌಡ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿಯ ಛೇರ್‍ಮನ್‍ರಾಗಿ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ, ರಾಜ್ಯ ಆಶಕ್ತ ಕಲಾವಿದರ ಕಲ್ಯಾಣ ಸಂಘದ ಕಾರ್ಯಾಧ್ಯಕ್ಷರಾಗಿ, ರಾಜ್ಯ ಕೇಂದ್ರ ಸಹಕಾರಿ ತೆಂಗಿನ ನಾರಿನ ಉತ್ಪಾದನಾ ಮಾರಾಟ ಅಭಿವೃದ್ಧಿ ನಿಗಮದ ಛೇರ್‍ಮನ್‍ರಾಗಿ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಮಾಪಕ ವಲಯದ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಹರಿಜನ ಸೇವಾ ಸಂಘದ ಬೆಂಗಳೂರು ಪ್ರದೇಶ ಸಮಿತಿಯ ಸದಸ್ಯರಾಗಿ, ಕೇರಳ ರಾಜ್ಯದ ಕೊಚ್ಚಿನ್‍ನಲ್ಲಿರುವ ತೆಂಗಿನ ನಾರಿನ ಮಂಡಳಿಯ ಸದಸ್ಯರಾಗಿ, ಕೇಂದ್ರ ಸೆನ್ಸಾರ್ ಬೋರ್ಡ್‍ನ ಅಂಗಸಂಸ್ಥೆಯಾದ ಬೆಂಗಳೂರಿನ ಪ್ರಾದೇಶಿಕ ಸೆನ್ಸಾರ್ ಬೋರ್ಡ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಚಲನಚಿತ್ರ ರಂಗ
ಇವರು ಹುಟ್ಟು ಕಲಾವಿದರಾಗಿದ್ದು ಬಾಲ್ಯದಿಂದಲೇ ರಂಗಭೂಮಿ, ನಟನೆ, ನಿರ್ದೇಶನ ಎಂದರೆ ಎಲ್ಲಿಲ್ಲದ ಆಸಕ್ತಿ. ಹಾಗೆಯೇ ಹಲವು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಹಲವು ಕನ್ನಡದಿಂದ ತಮಿಳು, ತೆಲುಗು, ಹಿಂದಿ ಮುಂತಾದ ಭಾಷೆಗಳಿಗೆ ಭಾಷಾಂತರಗೊಂಡಿವೆ. ಹಾಗೆಯೇ ಹಲವಾರು ಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವುದಲ್ಲದೇ, ಕೆಲವು ಸಾಕ್ಷ್ಯ ಚಿತ್ರಗಳಿಗೆ ನಿರೂಪಣೆ ನೀಡಿದ ಕೀರ್ತಿ ಇವರದು.
ಸಾಹಿತ್ಯ ಕ್ಷೇತ್ರ
ಬಸವೇಗೌಡರು ಸಾಮಾಜಿಕ, ರಾಜಕೀಯ, ಸಾಂಸ್ಕøತಿಕ, ಚಲನಚಿತ್ರ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗದೇ ಸಾಹಿತ್ಯ ಕ್ಷೇತ್ರದಲ್ಲೂ ದುಡಿದಿದ್ದಾರೆ.
1985 ರಲ್ಲಿ ‘ನಾ ಕಂಡ ಪುಟ್ಟಣ್ಣ ಕಣಗಾಲ್’ ಎಂಬ ಬೃಹತ್ ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದರು. ಈ ಕೃತಿಯು ಮುಂದೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಪರಿಷತ್ ಪ್ರಶಸ್ತಿಗೆ ಭಾಜನವಾಯಿತು.
ನಂತರ ‘ನೀವೇಕೆ ನಗಬಾರದು?’ ಎಂಬ ಹಾಸ್ಯ ನಾಟಕವನ್ನೂ ಬರೆದು ರಂಗ ಪ್ರಯೋಗ ಮಾಡಿದರು. ನಂತರ ಈ ಕನ್ನಡ ನಾಟಕವನ್ನು ಸ್ವತಃ ಬಸವೇಗೌಡರೇ Whಥಿ ಅಚಿಟಿ’ಣ ಙou ಐಚಿugh?  ಎಂಬ ಇಂಗ್ಲೀಷ್ ನಾಟಕವಾಗಿ ಭಾಷಾಂತರಗೊಳಿಸಿದ್ದು ವಿಶೇಷ.
2001 ರಲ್ಲಿ ಬಂದ ಇವರ ‘ಬೆಳ್ಳಿತೆರೆಯ ಭಾವಶಿಲ್ಪಿ’ ಎಂಬ ಸಂಶೋಧನಾ ಗ್ರಂಥ ಕನ್ನಡ ಚಲನಚಿತ್ರರಂಗದ ನಿರ್ದೇಶನದ ದಿಗ್ಗಜರೆಂದೇ ಗುರ್ತಿಸಿಕೊಂಡ ಪುಟ್ಟಣ್ಣ ಕಣಗಾಲ್ ಅವರನ್ನು ಕುರಿತದ್ದಾಗಿದ್ದು ಮುಂದೆ ಇದು ಗೊರೂರು ಪ್ರತಿಷ್ಠಾನ ಪ್ರಶಸ್ತಿಯನ್ನು ಪಡೆಯಿತು.
2008ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಮಂಡಿಸಿದ “ಕನ್ನಡ ಚಲನಚಿತ್ರಗಳಲ್ಲಿ ಹಲವು ನಿರೂಪಣಾ ಮಾದರಿಗಳು” ಎಂಬ ಮಹಾಪ್ರಬಂಧ ಇವರಿಗೆ ಡಾಕ್ಟರೇಟ್ ಪದವಿಯನ್ನು ತಂದುಕೊಟ್ಟಿತು. ಇದು ಇವರ 74ನೆಯ ವಯಸ್ಸಿನಲ್ಲಿ ಸಿಕ್ಕ ಗೌರವ.
ಇದಲ್ಲದೇ ಪುಟ್ಟಣ್ಣ ಕಣಗಾಲರು 1968ರಲ್ಲಿ ನಿರ್ದೇಶಿಸಲು ಪ್ರಾರಂಭಿಸಿ ಅರ್ಧಕ್ಕೆ ನಿಂತು ಹೋಗಿದ್ದ ‘ಸಾವಿರ ಮೆಟ್ಟಿಲು’ ಕನ್ನಡ ಚಲನಚಿತ್ರವನ್ನು 38 ವರ್ಷಗಳ ಮೇಲೆ 2006ನೆಯ ಸಾಲಿನಲ್ಲಿ ನಿರ್ಮಿಸಿ, ನಿರ್ದೇಶಿಸಿ, ಪೂರ್ಣಗೊಳಿಸಿ ಬಿಡುಗಡೆ ಮಾಡಿ ವಿಶ್ವದಾಖಲೆ ಸ್ಥಾಪಿಸಿದ ಕೀರ್ತಿ ಡಾ. ಡಿ.ಬಿ.ಬಸವೇಗೌಡರಿಗೆ ಸಲ್ಲುತ್ತದೆ.
ಹಲವಾರು ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಬಹುಮುಖ ಪ್ರತಿಭೆ ಡಿ.ಬಿ.ಬಸವೇಗೌಡರೆಂದರೆ ಅತಿಶಯೋಕ್ತಿಯಾಗಲಾರದು. ಕಲೆ, ಸಾಹಿತ್ಯ, ರಂಗಭೂಮಿ, ಚಲನಚಿತ್ರ, ಸಾಮಾಜಿಕ. ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಅಧಿಪಥ್ಯ ಸ್ಥಾಪಿಸುವುದು ಸುಲಭದ ಮಾತೇನಲ್ಲ. ಇಂಥ ವ್ಯಕ್ತಿಗಳ ಹುಟ್ಟಿಗೆ ಕಾರಣವಾದ ಹಾಸನ ಮಣ್ಣಿನ ಗುಣ ಸರ್ವಶ್ರೇಷ್ಠವಾದುದು. 80ರ ಗಡಿ ದಾಟಿದರೂ ಯುವಕರಂತೆ ಕಾರ್ಯನಿರ್ವಹಿಸುವ ಇವರ ಮನೋವಾಂಛಲ್ಯ ಅಮೋಘವಾದುದು.

                                ಕೊಟ್ರೇಶ್ ಎಸ್ ಉಪ್ಪಾರ್ , ಆಲೂರು 
                                                    ಮೊ-9483470794

ಬುಧವಾರ, ಆಗಸ್ಟ್ 13, 2014

ವಾಸ್ತವಾಂಶದ ನೆಲೆಯ ಜೀವ ನಕ್ಷತ್ರಗಳು- ಕೊಟ್ರೇಶ್ ಎಸ್. ಉಪ್ಪಾರ್


ಎ.ಜಿ.ರತ್ನಕಾಳೇಗೌಡರು ಸಾಹಿತ್ಯ ಲೋಕದಲ್ಲಿ ಕವಿತೆ, ಕಥೆ, ಕಾದಂಬರಿ, ವಚನ, ವ್ಯಕ್ತಿ ಪರಿಚಯ, ಲೇಖನ, ಲಲಿತ ಪ್ರಬಂಧಗಳು ಹೀಗೆ ಹಲವಾರು ಪ್ರಕಾರಗಳ ಮೂಲಕ ಓದುಗರ ಗಮನ ಸೆಳೆದವರು. ಬರೆಯುವುದನ್ನು ಒಂದು  ವ್ರತವಾಗಿ ಸ್ವೀಕರಿಸಿದವರು. ಸರಳ ಸೂಕ್ಷ್ಮ ಮನಸ್ಸಿನ ಸಹೃದಯಿ ಸ್ವಭಾವದ ಇವರು ಸುಮಾರು ಮೂವತ್ತೈದಕ್ಕೂ ಅಧಿಕ ಕೃತಿಗಳನ್ನು ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಇವರ ಕೃತಿಗಳಲ್ಲಿ ನನ್ನ ಗಮನ ಸೆಳೆದದ್ದು ‘ಜೀವ ನಕ್ಷತ್ರಗಳು’ ಎಂಬ ಕವನ ಸಂಕಲನ.
ಸನಾತನ ಕಾಲದಿಂದಲೂ ಮನುಷ್ಯತ್ವದ ಅಂತ:ಕರಣದಿಂದ ಹೊರದೂಡಲ್ಪಟ್ಟ ಅದೆಷ್ಟೋ ಜೀವಗಳು ಕಮರಿ ಹೇಳ ಹೆಸರಿಲ್ಲದಂತೆ ಅಳಿದು ಹೋಗಿವೆ. ಇಲ್ಲಿ ತಾಂಡವವಾಡಿಕೊಂಡು ಬಂದ ದೌರ್ಜನ್ಯ, ಅಟ್ಟಹಾಸ, ಶೋಷಣೆ, ಕ್ರೌರ್ಯ, ಹಿಂಸೆ, ತಾರತಮ್ಯ, ಅಮಾನವೀಯ ಘಟನೆಗಳು ಇನ್ನೂ ಜೀವಂತವಾಗಿದ್ದು ಸಮಾಜದ ಅಧೋಗತಿಗೆ ಕಾರಣವಾಗುತ್ತಿರುವ ಹಿನ್ನಲೆಯಲ್ಲಿ ರತ್ನಕಾಳೆಗೌಡರ ‘ಜೀವ ನಕ್ಷತ್ರಗಳು’ ನಮ್ಮೆದುರಿಗೆ ಸಾಕ್ಷಿಯಾಗಿ ನಿಲ್ಲುತ್ತದೆ.
ಬಸಿದ ಬೆವರಿಗೆ
ನೆಣದ ಒಗ್ಗರಣೆ
ಹಸಿ ಮಾಂಸ ಜಗ್ಗಿ ಚಪ್ಪರಿಸಿ
ತಿನ್ನುವ ಮಂದಿ
ಬೆವರನ್ನು ಗಟಗಟನೆ ಕುಡಿದು
ಮರುಳುಂಟೆ ಕರುಳುಂಟೆ
ರಕ್ತ ಸಂಬಂಧದ ಕೊಂಡಿಗೆ....
(ಸೊಂಟರಗಾಳಿಗೆ ಸೆಟೆದು ನಿಂತ)
ಸಮಾಜದಲ್ಲಿ ಮುಖವಾಡ ಧರಿಸಿದ ಗೋಮುಖ ವ್ಯಾಘ್ರಗಳು ಅದ್ಹೇಗೆ ಭ್ರಷ್ಟಾಚಾರದ ಕರಿನೆರಳಿನಲ್ಲಿ ದೀಪ ಹಚ್ಚಿಕೊಂಡು ಐಸಿರಿಯ ಬದುಕು ಸಾಗಿಸುವರು. ತಮ್ಮ ಹಿತಕ್ಕಾಗಿ ಸಮಾಜ ಕದಡಿ ಕೇಕೆ ಹಾಕಿ ಕುಪ್ಪಳಿಸುವರು ಎಂಬುದನ್ನು ಇಲ್ಲಿ ಕವಯತ್ರಿ ಮಾರ್ಮಿಕವಾಗಿ ಹೇಳಿದ್ದಾರೆ.
ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಪ್ರವರ್ಧಮಾನಕ್ಕೆ ಬಂದ ದಲಿತ ಬಂಡಾಯವೆಂಬ ಪದ್ಯ ಸಾಹಿತ್ಯ ಶೋಷಿತರ ಪರವಾಗಿ ಧ್ವನಿಸಿರುವುದರಲ್ಲಿ ಎರಡು ಮಾತಿಲ್ಲ.
ಸಾಹಿತ್ಯ ಎಂಬ ವೃಕ್ಷ ಭೂಮಿಯೊಳಗೆ ಆಳವಾಗಿ ಬೇರುಬಿಟ್ಟಂತೆ ಆಕಾಶಕ್ಕೆ ಮುಖಮಾಡಿ ತನ್ನ ಕೊಂಬೆ, ರೆಂಬೆ,  ಮೊಗ್ಗು, ಹೂವು, ಈಚು, ಕಾಯಿ, ಹಣ್ಣುಗಳಿಂದ ಗರ್ಭಕೋಶ ನಳನಳಿಸುವಂತೆ, ಕಾಲಘಟ್ಟಗಳು ಸರಿದಂತೆ ಸಾಹಿತ್ಯ ನಾವಿನ್ಯವಾಗಿ ಚಿಗುರೊಡೆಯುತ್ತದೆ. ಗದ್ಯ ಸಾಹಿತ್ಯ, ಪದ್ಯ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ ಅಂತೆಯೇ ಕಥೆ, ಕಾದಂಬರಿ, ಲಲಿತ ಪ್ರಬಂಧ, ನಾಟಕ, ಮಹಿಳಾ ಸಾಹಿತ್ಯ,  ಮಕ್ಕಳ ಸಾಹಿತ್ಯ ಹೀಗೆ ಹಲವು ಪ್ರಕಾರಗಳು ಮಾನವೀಯ ಮೌಲ್ಯಗಳ ನೆಲೆಯಲ್ಲಿ ಜನಿಸಿಬಂದವುಗಳು.
ಬೋಳು ಮರಗಳಿಗೂ ಬೆದೆ ಬರುವ ಕಾಲ
ಒಂದಕ್ಕೊಂದು ಮಸೆದು
ತೀಟೆ ತೀರಿಸಿಕೊಂಡ ಮೇಲೆ
ಬೆಂಕಿ ಕಾರಿ ಸ್ವಾರ್ಥಕ್ಕೆ ಬಲಿಯಾದವು
ಅವುಗಳಿಗೂ ಹಿಂದಿನ ನೆನಪಿಲ್ಲ
[ಋತುಗಳ ಶಪಿಸುತ್ತ]
ಸಮಾಜದ ಕೊಳುಕುತನ ಹಾಗೂ ಮುಂದಾಗುವ ಅನಾಹುತದ ಬಗ್ಗೆ ಕವಿತೆಯಲ್ಲಿ ಮಾರ್ಧನಿಸಿರುವುದನ್ನು ಕಾಣಬಹುದಾಗಿದೆ.
ಹಿಂದೂ ಸಮಾಜಿಕ ವ್ಯವಸ್ಥೆಯಲ್ಲಿ ಅನೇಕ ವರ್ಗಗಳು ಅನುಭವಿಸುತ್ತಿದ್ದ ಸಮಸ್ಯೆಗಳು ಅಸಂಖ್ಯಾತವಾದುವು. ಇವುಗಳಿಗೆ ದಿಕ್ಕು ತೋರಿಸಲಾರದೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾರತೀಯ ಸಮಾಜದ ಬದಲಾವಣೆಗಾಗಿ ಮೂರು ಮುಖ್ಯ ಸಂದೇಶಗಳನ್ನು ರವಾನಿಸಿದ್ದಾರೆ. ಅವು ಶಿಕ್ಷಣ, ಸಂಘಟನೆ, ಹೋರಾಟ.
ಭಾರತೀಯ ಸಮಾಜ ವ್ಯವಸ್ಥೆ ಕೆಳಸ್ಥರದಲ್ಲಿರುವ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಕಾರ್ಮಿಕರು, ಹಿಂದುಳಿದ ವರ್ಗದ ಎಲ್ಲಾ ಶೋಷಿತ ಸಮುದಾಯಗಳು ಅನುಭವಿಸುತ್ತಿರುವ ಶೋಷಣೆ, ದುಃಖ, ದುಗುಡ, ದುಮ್ಮಾನಗಳು, ತಲ್ಲಣಗಳೇ ರತ್ನಕಾಳೇಗೌಡರ ಕಾವ್ಯದ ವಸ್ತುಗಳಾಗಿರುವುದು ಸ್ವಾಗತಾರ್ಹ.
ಇವರ ಕಾವ್ಯದಲ್ಲಿ ಸಂಘಟನೆ ಹಾಗೂ ಹೋರಾಟದ ಕಿಚ್ಚಿದೆ, ಕೆಚ್ಚಿದೆ. ತಮ್ಮ ಹಕ್ಕುಗಳನ್ನು ಸಂವಿಧಾನಾತ್ಮಕ ಆಶಯಗಳನ್ನು ಗಳಿಸಿಕೊಳ್ಳುವ ಮೂಲಕ ಎಲ್ಲಾ ಶೋಷಿತ ವರ್ಗಗಳ ಸಬಲೀಕರಣ ಆಶಯ ವ್ಯಕ್ತವಾಗುತ್ತದೆ.
ನೀನೇ ನೀನೇ ಒಬ್ಬ ಕಾಷ್ಮೋರನಾಗಿ
ಬಡವರ ರಕ್ತ ಬೇಡುತ್ತಿರುವೆ
ಬೀದಿ ಬೀದಿಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ
ನಿನ್ನ ಹೊಲಿಸು ಬಾಷಣಗಳ
ಪ್ರವಾಹಕ್ಕೆ ......
ಬೆತ್ತಲೆ ನಿಂತ ಮಕ್ಕಳು, ಲಂಗೋಟಿ ಕಟ್ಟಿಕೊಂಡ
ನಿರ್ಗತಿಕರು ನಡುಗುತ್ತಿದ್ದಾರೆ
[ಕಾಷ್ಮೋರನಿಗೆ ಬೇಕು ರಕ್ತ]
ಪ್ರಾಣಿಗಳಲ್ಲಿ ಭಿನ್ನ ಭಿನ್ನವಾದ ಜಾತಿಗಳಿವೆ. ಆದರೆ ಅವುಗಳಲ್ಲಿ ಭೇದಭಾವಗಳಿಲ್ಲ ಒಗ್ಗಟ್ಟಿನಿಂದ ಬದುಕುತ್ತವೆ. ಇಲ್ಲಿ ಬಡತನದ ಬೇಯ್ಗೆ ಒಂದು ಕಡೆಯಾದರೇ ಅಂಥವರನ್ನು ರಾಜಕೀಯ ದಾಳವಾಗಿ ಬಳಸಿ ಮೆಟ್ಟಿಲುಗಳ ಮಾಡಿ ದಿನಂಪ್ರತಿ ಮೆಟ್ಟಿ ನಡೆಯುವ ಅಧಿಕಾರ ಶಾಹಿಗಳ ಅಟ್ಟಹಾಸ ಪ್ರತಿಧ್ವನಿಸಿದೆ.
ಎಲುಬುಗಳಿಗೆ ನೆಣದ ಬಟ್ಟೆಯ ಸುತ್ತಿ
ಮೋಜಿನ ಮಂಗನಾಟಕ್ಕೆ ಪಂಜು ಉರಿಸಿದ್ದಾರೆ..
ಧರ್ಮದ ಹೆಸರಿನಲ್ಲಿ
ದುರ್ಮಾರ್ಗದ ಸುರಂಗ ಕೊರೆದು
ಅನಾದಿ ಕಾಲದ ಆಚಾರಗಳಿಗೆ
ಸಂಸ್ಕಾರ ಮಾಡಿ ಪಲ್ಲವಿಯಿಲ್ಲದ
ಚರಣ ಹಾಡಿದ್ದಾರೆ....[ಪಾತಾಳ ಗರಡಿ]
ಸಮಾಜದ ವರ್ಣವ್ಯವಸ್ಥೆ ಸಾವಿರಾರು ವರ್ಷಗಳಿಂದ ತಳಸಮುದಾಯದವರ ಮೇಲೆ ಮೇಲ್ವರ್ಗದವರು ನಿರಂತರವಾಗಿ ಶೋಷಣೆ ಮಾಡುತ್ತಲೇ ಬರುತ್ತಿದ್ದಾರೆ. ಈಗಲೂ ಈ ಶೋಷಣೆಗೆ ಸಿಕ್ಕಿ ಅವಮಾನದಿಂದ ಪ್ರಾಣಿಗಳಿಗಿಂತಲೂ ಕಡೆಯಾಗಿ ಬದುಕು ಸಾಗಿಸುತ್ತಿರುವ ದೃಶ್ಯವನ್ನು ನೋಡುತ್ತಿದ್ದೇವೆ. ಪ್ರಶ್ನಿಸುವ ಧೈರ್ಯವಿಲ್ಲದೇ, ಸರಿಯಾದ ಜ್ಞಾನ ಅರಿವಿಲ್ಲದೇ ಇನ್ನೂ ತೊಳಲಾಡುತ್ತಿರುವುದು ವಿಷಾದನೀಯವಾದುದು.
ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿ
ಏಕಾಂತ ಮನಸ್ಸಿನ ಮೇಲೆ ದಾಳಿಮಾಡಿ
ಜೀವ ಥರಗುಟ್ಟಿ ಬೆವರು ಜಿನುಗಿ
ಯೋಚನೆಯ ಮುಳ್ಳು ತಿರುಗಲಾರಂಭಿಸಿ
ಡವಗುಡುವ ಹೃದಯದ ಬಡಿತ
ನಿಮಿಷದ ಮುಳ್ಳಿನೊಂದಿಗೆ ಸ್ನೇಹ ಬಳಸಿ
ಕಾಲ ನುಂಗಲು ಅಣಿಯಾಗಿತ್ತು
[ಆಕಾಶದಿಂದ ಅನಿಕದಂತೆ ದನಿ]
ನರನರಗಳ ನಡುವೆ ಬಿರುಕು ಬಿಗುಮಾನದ ಬಿಳಿಲುಗಳನ್ನು ಚಾಚಿ ಹೀರಿ ಹಿಪ್ಪೆಗೈಯುವ ಸನ್ನಿವೇಶ ತಾಂಡವವಾಡುತ್ತಿದೆ. ನೊಂದವರ ಒಡಲ ಅಳಿಲು ನೊಂದವರಿಗಷ್ಟೇ ಅರ್ಥವಾದೀತು ಬೆಂದವರ ಬೇಗುದಿ ಲೇಪ ಹಚ್ಚುವವರಿಗೆ ಹೇಗೆ ತಿಳಿಯಬೇಕು ಅಲ್ಲವೇ?
ಹೊಸ ಹೊಸ ಸಂದರ್ಭಕ್ಕೆ ಅನುಸಾರವಾಗಿ ಸಾಹಿತ್ಯವೂ ಹೊಸ ಹೊಸ ಆವಿಷ್ಕಾರಗಳನ್ನು ಪಡೆದುಕೊಳ್ಳುತ್ತಾ ಸೃಷ್ಠಿಯಾಗಬೇಕು. ಸಾಹಿತ್ಯ ಕೇವಲ ಹೊಗಳಿಕೆಗಾಗಿ ಸೃಷ್ಠಿಯಾಗಬಾರದು. ಕಾಲಮಾನಕ್ಕನುಸಾರವಾಗಿ ವಾಸ್ತವದ ನೆಲೆಗಟ್ಟಿನಲ್ಲಿ ಸತ್ಯದ ಅಭಿವ್ಯಕ್ತಿಯಲ್ಲಿ ಮೌಲ್ಯಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ರಚಿತವಾಗಬೇಕೆಂಬುದು ಕವಯತ್ರಿಯ ಆಶಯ.
ಒಂದಕ್ಕಿಂತ ಒಂದು ಭಿನ್ನವಾದ ಒಟ್ಟು 65 ಕವಿತೆಗಳನ್ನು ಒಳಗೊಂಡ 132 ಪುಟಗಳ ಈ ಕೃತಿಯು 100 ರೂಪಾಯಿ ಮುಖಬೆಲೆಯಲ್ಲಿ ಅವರದೇಯಾದ ತೃಪ್ತಿ ಪ್ರಕಾಶನದಿಂದ 2008ರಲ್ಲಿ ಮೊದಲಾವೃತ್ತಿಯಾಗಿ ಪ್ರಕಟಣೆಗೊಂಡಿದೆ. ಇದು ಇವರ ಐದನೇ ಕವನ ಸಂಕಲನವಾಗಿದೆ.
ಇವರ ಕವಿತೆಗಳಲ್ಲಿ ಬದುಕಿಗೊಂದು ಅರ್ಥವಿದೆ. ಸಮಾಜಕ್ಕೊಂದು ಮೌಲ್ಯವಿದೆ. ಜೀವನಕ್ಕೆ ಅನುಭವ ಸಿದ್ದಾಂತಗಳ ಬಂಧದ ಬೆಸುಗೆಯಿದೆ. ಈ ಎಲ್ಲಾ ಬೆಸುಗೆಗಳನ್ನು ಬೆಸೆಯುವ ಸಾಹಿತ್ಯವನ್ನು ಕವಯತ್ರಿ ಬಾಹ್ಯ ಪ್ರಪಂಚದ ಬಸುರಿನಿಂದ ಬಗೆದು ಹೊರತೆಗೆಯಬೇಕಾದ ತುರ್ತು ಈಗ ಇದೆ. ಈ ನಿಟ್ಟಿನಲ್ಲಿ ರತ್ನಕಾಳೇಗೌಡರ ಕವಿತೆಗಳು  ಓದುಗರ ಹಿಡಿದಿಡುವಲ್ಲಿ ಸ್ವಲ್ಪ ಮಟ್ಟಿನ ಯಶಸ್ಸಿನ ದಾರಿಸವೆಸಿದೆಯೆಂದೇ ಹೇಳಬಹುದು. ಹಗಲು ಬೆಳಕಿನ ದ್ವೇಷ, ಧನಿಕರ ಕುಣಿಕೆ, ನಾಳೆಯ ಬೆಳಕು ಕತ್ತಲಾಗಿದೆ. ಪ್ರಣಾಳಿಕೆ, ಸತ್ಯ ಹೇಳಬೇಡಿ ಎಚ್ಚರ!, ನೂರಾರು ಗಾಂಧಿಗಳು, ಕರಿನೆರಳು, ಬದುಕು ಸಾಗಿತ್ತು ದೇಹ ಸೋತಿತ್ತು, ಯಜ್ಞ, ಜೀವ ನಕ್ಷತ್ರಗಳು ಮುಂತಾದ ಕವನಗಳು ಗಮನ ಸೆಳೆಯುತ್ತವೆ. ಇಲ್ಲಿ ಭಾವ, ಭಾವೋದ್ವೇಗ, ಸಾಮಾಜಿಕ ಕಳಕಳಿ ಸ್ಪಂದಿಸುವ ರೀತಿ ಓದುಗನ ಸೆಳೆಯುವ ನಿಟ್ಟಿನಲ್ಲಿ ಈ ಕವನ ಸಂಕಲನ ಜೀವಂತವಾಗಿದೆ.


ಕೊಟ್ರೇಶ್ ಎಸ್. ಉಪ್ಪಾರ್, ಆಲೂರು 
ಮೊ:-9483470794

ಬುಧವಾರ, ಆಗಸ್ಟ್ 6, 2014

ಪಾಶವಿ ಸ್ವಭಾವಿಗಳ ಮಧ್ಯೆ ಕಮರುವ ಸ್ತ್ರೀ.....- ಕೊಟ್ರೇಶ್ ಎಸ್. ಉಪ್ಪಾರ್


ಪ್ರಸ್ತುತ ಸಂದರ್ಭದಲ್ಲಿ ಸ್ವತಂತ್ರ್ಯತೆ ಮತ್ತು ಆಧುನೀಕರಣವು ಹೇಗೆ ಬಲಿಯಾಗುತ್ತದೆಯೋ.... ಅದೋಗತಿಗೆ ತಲುಪುತ್ತಿದೆಯೋ ಅದೇ ರೀತಿ ಮಾನವನು ಹೆಚ್ಚು ಪಾಶವಿ ಸ್ವಭಾವದವನಾಗುತ್ತಿದ್ದಾನೆ. ದಿನನಿತ್ಯ ದಿನಪತ್ರಿಕೆಗಳಾಗಲೀ, ದೃಶ್ಯ ಮಾಧ್ಯಮಗಳ ಮೇಲಾಗಲೀ ಒಮ್ಮೆ ಕಣ್ಣಾಯಿಸಿದರೆ ಅತ್ಯಾಚಾರ ಎಂಬ ಶಬ್ದ ಹೊರತುಪಡಿಸಿ ಹೂಯಿಸಿಕೊಳ್ಳಲಾಗದಷ್ಟು ಹೀನಾಯ ಸ್ಥಿತಿಗೆ ಬಂದುಬಿಟ್ಟಿದ್ದೇವೆ. ಕಾಮುಕರ ದೃಷ್ಠಿಯಲ್ಲಿ ಹಸೂಗೂಸಿನಿಂದ ಹಿಡಿದು ಎಂಬತ್ತರ ವೃದ್ದೆಯವರೆಗಿನ ಹೆಂಗಸು ಇದ್ದಾಳೆ. ಕಾನೂನು ಕಟ್ಟಳೆಗಳು ದಿನದಿಂದ ದಿನಕ್ಕೆ ತಿದ್ದುಪಡಿಯಾಗುತ್ತಿದ್ದು ಸ್ತ್ರೀ ಮತ್ತೆ ಮತ್ತೆ ಬಲತ್ಕಾರಕ್ಕೆ ಬಲಿಯಾಗುತ್ತಿದ್ದಾಳೆ. 
ಇಂದು ಪುರುಷ ಸಮಾಜ ಸಮಾನತೆ, ಅಧಿಕಾರ ಹಾಗೂ ರಕ್ಷಣೆಯ ನೆಪದಲ್ಲಿ ಪರೋಕ್ಷವಾಗಿ ಶೋಷಣೆ ಮಾಡುತ್ತಿದ್ದಾನೆ ಎಂದರೆ ತಪ್ಪಾಗಲಾರದು. ಏಕೆಂದರೆ ದಿನಂಪ್ರತಿ ನಡೆಯುವ ವರದಕ್ಷಿಣೆ ಕಿರುಕುಳ, ಅತ್ಯಾಚಾರಗಳು ಬರ್ಬರವಾಗಿ ನಡೆಯುವ ಹತ್ಯೆಗಳು, ಆಸಿಡ್ ದಾಳಿಗಳು ಅತಿರೇಕ ಮಟ್ಟಕ್ಕೆ ತಲುಪಿ ಸಾಮಾಜಿಕ ಮೌಲ್ಯವನ್ನೇ ಶೂನ್ಯವಾಗಿಸುತ್ತಿವೆ. 
ಈ ಹಿಂಧೆ ಸರ್ವೋಚ್ಚ ನ್ಯಾಯಾಲಯವು ಗುರ್ಜೀತ್ ಸಿಂಗ್‍ಳ ದಾವೆಯಲ್ಲಿ ಸ್ಪಷ್ಟವಾಗಿ ಹೀಗೆ ಹೇಳಿದೆ “ಒಬ್ಬ ಕೊಲೆಗಾರನು ಯಾರಾದರೊಬ್ಬರನ್ನು ಕೊಲ್ಲುತ್ತಾನೆ. ಆದರೆ ಬಲತ್ಕರಿಸುವವನೊಬ್ಬನು ಪೀಡಿತಳ ಆತ್ಮವನ್ನು ನಿತ್ಯ ಸಾಯಿಸುವ ಮನೋ ನೆಲೆಗೆ ತಳ್ಳುತ್ತಾನೆ”.
ಅತ್ಯಾಚಾರ ಕುರಿತು ಸೂಸನ್ ಬ್ರೌನ್ ಎಂಬ ವಿಚಾರವಾದಿ ಹೀಗೆ ಹೇಳುತ್ತಾನೆ “ಬಲತ್ಕಾರದ ಮೂಲಕ ಪುರುಷನು ಹೆಂಗಸರನ್ನು ಭೀತಿಯ ಲೋಕಕ್ಕೆ ತಳ್ಳಿ, ಸಮಸ್ತ ಸ್ತ್ರೀ ಸಮಾಜದ ಮೇಲೆ ನಿಯಂತ್ರಣ ಹೊಂದುವ ಷಡ್ಯಂತ್ರ ಮಾಡುತ್ತಾನೆ”.
ಭಾರತೀಯ ದಂಡ ಸಂಹಿತೆ 1960 ರ 375ನೇ ವಿಧಿಯಲ್ಲಿ ಬಲತ್ಕಾರದ ವಿವರಣೆ ಹೀಗಿದೆ-“ಯಾರಾದರೂ, ವ್ಯಕ್ತಿಯು ಯಾವುದಾದರೂ ಸ್ತ್ರೀಯೊಂದಿಗೆ ಆಕೆಯ ಇಚ್ಚೆಗೆ ವಿರುದ್ದವಾಗಿ ಆಕೆಯ ಸಮ್ಮತಿ ಇಲ್ಲದೆ ಅಥವಾ ಕೊಲ್ಲುವ ಬೆದರಿಕೆ ಹಾಕಿ, ಇಲ್ಲವೇ ಗಂಡನಾಗುವ ಹುಸಿ ಆಶ್ವಾಸನೆ ನೀಡಿ ವಿಶ್ವಾಸ ದ್ರೋಹದಿಂದ ಆಕೆಯ ಸಂಪತ್ತು ಪ್ರಾಪ್ತಿ ಮಾಡಿಕೊಂಡು ಅಥವಾ ಸ್ತ್ರೀ ಮಾನಸಿಕ ರೋಗಿಯಾಗಿರುವುದನ್ನು ದುರುಪಯೋಗಪಡಿಸಿಕೊಂಡು ಇಲ್ಲವೇ ಆಕೆ ಮಾದಕ ವಸ್ತುಗಳಿಂದಾಗಿ ಅರೆ ಪ್ರಜ್ಞೆ ಅವಸ್ಥೆಯಲ್ಲಿರುವ ಅಥವಾ ಹದಿನಾರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯೊಂದಿಗೆ ಆಕೆಯ ಸಮ್ಮತಿ ಅಥವಾ ಅಸಮ್ಮತಿಯಿಂದ ವರ್ತಿಸಿದಲ್ಲಿ ಅದು ಬಲತ್ಕಾರವೆನಿಸಿ, ಸಂಬಂಧಿತನು ದೋಷಿಯೆನಿಸಿಕೊಳ್ಳುತ್ತಾನೆ”.
ನಿತ್ಯ ಒಂದಲ್ಲ ಒಂದು ರೀತಿಯ ಶೋಷಣೆಯ ಸುಳಿಗೆ ಸನಾತನ ಕಾಲದಿಂದಲೂ ಸ್ತ್ರೀಯರನ್ನು ಪುರುಷ ತಳ್ಳುತ್ತಲೇ ಬಂದಿದ್ದಾನೆ. ಹೆಂಗಸು ಮನೆಯೊಳಗೆ ಅದರಲ್ಲೂ ಅಡುಗೆ ಮನೆಯೊಳಗೆ ಮಾತ್ರ ಸೀಮಿತ ಎಂದು ಮನುವಾದಶಾಸ್ತ್ರ ವಾದಿಸಿದ್ದೂ ಉಂಟು! ಅವಳಿಗೂ ಒಂದು ಮನಸ್ಸಿದೆ, ಅದೂ ನಮ್ಮಂತೆ ಸ್ವತಂತ್ರ್ಯ ಜೀವ ಎಂದು ಏಕೆ ಈ ಕೊಳಕು ಮನಗಳಿಗೆ ಅನ್ನಿಸಲಿಲ್ಲವೋ ಅರಿಯೇ.... ಆದರೆ ಇಂದು ಅನೇಕ ಕಡೆ ಬದಲಾವಣೆಗಳಾಗುತ್ತಿರುವುದು ಸಂತಸ. ಏಕೆಂದರೆ ಅವಳು ನೀರಿನಲ್ಲಿ ಮೀನಿನಂತೆ ಈಜಬಲ್ಲಳು, ಆಕಾಶದಲ್ಲಿ ಹಾರಬಲ್ಲಳು, ಸೈನ್ಯದಲ್ಲಿ ಹೋರಾಡಬಲ್ಲಳು, ಪುರುಷರಂತೆ ನಾವೂ ಸಶಕ್ತರೆಂದು ಸಾಧಿಸಿ ತೋರಿಸಿದ್ದಾಳೆ. ಹಲವು ವಿಚಾರಗಳಲ್ಲಿ ಪುರುಷ ವರ್ಗವನ್ನು ಹಿಮ್ಮೆಟ್ಟಿಸಿದ್ದಾಳೆ. ಹಳ್ಳಿಗಳಲ್ಲಿ ಮಾತ್ರ ಇನ್ನೂ ಅಜ್ಜ  ಹಾಕಿದ ಆಲದ ಮರಕ್ಕೆ ಜೋತು ಬಿದ್ದಿರುವುದು ವಿಷಾದನೀಯವಾಗಿದೆ.
ಇಂದಿನ ಕಂಪ್ಯೂಟರ್ ಯುಗದಲ್ಲಿ ವೈಜ್ಞಾನಿಕ, ಮನೋವೈಚಾರಿಕತೆ ಬೆಳೆದಂತೆಲ್ಲಾ ಮನುಷ್ಯನೇಕೆ ಕ್ರೂರತನದ ವ್ಯಾಘ್ರನಾಗುತ್ತಿದ್ದಾನೆ. ಸಾಮಾಜಿಕ ಅನಿಷ್ಟ ಪಿಡುಗುಗಳು, ಮನುಷ್ಯನ ಅಂಧಾಚರಣೆಗಳು, ಜಾತಿ, ಧರ್ಮದ ಕಟ್ಟುಪಾಡುಗಳ ಹೆಸರಿನಡಿಯಲ್ಲಿ ಇಂದು ಮಹಿಳೆ ಚಿತ್ರಹಿಂಸೆ ಅನುಭವಿಸುತ್ತಿದ್ದಾಳೆ. ವರದಕ್ಷಿಣೆ ಕಿರುಕುಳ, ನೇಣು, ಸೀಮೆಎಣ್ಣೆ, ಪೇಟ್ರೋಲ್ ಸುರಿದು ಬೆಂಕಿ ಹಚ್ಚುವುದು, ಹೊಡೆದು ಸಾಯಿಸುವುದು, ಆ್ಯಸಿಡ್ ದಾಳಿ ಇನ್ನೂ ಅನೇಕ ರೀತಿಯಲ್ಲಿ ನಿತ್ಯ ಮಹಿಳೆ ಸಾಯುತ್ತಿರುವುದು ಒಂದು ಕಡೆಯಾದರೆ, ಇನ್ನೊಂದೆಡೆ  ಜಾತೀಯತೆ, ಮೇಲು-ಕೀಳು, ದೇವದಾಸಿ, ಬೆತ್ತಲಸೇವೆ ಮುಂತಾದ ಗೊಡ್ಡು ಸಂಪ್ರಾದಾಯಗಳು ಇನ್ನೂ ಜೀವಂತಿಕೆ ಪಡೆದು ಶೋಷಣಾ ಸಮಾಜವಾಗಿ ರೂಪುಗೊಳ್ಳುತ್ತಿರುವುದು ದುರಂತದ ಸಂಗತಿಯಾಗಿದೆ.
ರಾಜ್ಯದಲ್ಲಿ ಇತ್ತೀಚಿನ ಎರಡ್ಮೂರು ತಿಂಗಳಿನಲ್ಲಿ ನೂರಾರು ಘಟನೆಗಳು ಸರದಿಯೋಪಾದಿಯಲ್ಲಿ ಜರುಗಿದವು. ಇನ್ನೂ ಜರುಗುತ್ತಲೇಯಿವೆ. ಶೇ 10ರಿಂದ 15 ಮಾಧ್ಯಮಗಳ ಮೂಲಕ ಸಮಾಜಕ್ಕೆ ಗೊತ್ತಾದರೆ ಉಳಿದ ಶೆ 85ರಷ್ಟು ಇಂತಹ ಪ್ರಕರಣಗಳು ಬೆಳಕಿಗೆ ಬರದೆ ಮುಚ್ಚಿ ಹೋಗುತ್ತವೆ.
‘ಕ್ರೈಮ್ ಇನ್ ಇಂಡಿಯಾ’ದ 2002ರ ವರದಿಯಂತೆ ನಮ್ಮ ದೇಶದಲ್ಲಿ ಪ್ರತಿದಿನ 50 ಬಲತ್ಕಾರಗಳು ನಡೆಯುತ್ತಿದ್ದವು. ಅಂದರೆ  ಪ್ರತಿಯೊಂದು ಗಂಟೆಯಲ್ಲಿ ಕನಿಷ್ಠ ಎರಡು ಬಲತ್ಕಾರಗಳಾಗುತ್ತವೆ. ಇದರಲ್ಲಿ ಶೇ 2.2 ಸಂದರ್ಭದಲ್ಲಿ ಅಪರಾಧಿಯು ತನ್ನ ಮನೆಯ ಮಹಿಳೆ ಇಲ್ಲವೇ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ವೆಸಗುತ್ತಿರುತ್ತಾನೆ. ಆದರೆ ಈ ಅಂಕಿ ಅಂಶ ಪ್ರಸ್ತುತ ಸಂದರ್ಭದಲ್ಲಿ ಮೂರ್ಪಟ್ಟು ಹೆಚ್ಚಾಗಿದೆ ಎಂದು ಖಾಸಗಿ ಸಂಸ್ಥೆಗಳು ಅಧ್ಯಯನ ಮಾಡಿ ವರದಿ ಮಾಡಿರುವುದನ್ನು ಗಮನಿಸಿದರೆ ದಿನದಿಂದ ದಿನಕ್ಕೆ ಕ್ರೌರ್ಯ ಅಧಿಕಗೊಳ್ಳುತ್ತಿರುವುದು ಆಘಾತಕಾರಿ ವಿಷಯ.
ಇಂದು ಕಾನೂನು ರಕ್ಷಕರಾದ ಪೋಲಿಸರ ಮೇಲೆ ಮಹಿಳೆಯರಿಗೆ ನಂಬಿಕೆಯೇ ಉಳಿದಿಲ್ಲ. ಪೋಲೀಸರೇ ಮಹಿಳೆಯರ ಮೇಲಿನ ಅತ್ಯಾಚಾರದಲ್ಲಿ ಶಾಮೀಲಾದ ಪ್ರಕರಣಗಳು ಹಲವಾರಿವೆ. ಪೋಲೀಸರೇ ಮಾನಭಂಗ ಕೃತ್ಯ ಎಸಗಿದ್ದೂ ಇದೆ.
ಈ ಅನಾಚಾರಕ್ಕೆ ಶಿಕ್ಷಣ ಕ್ಷೇತ್ರವೇನೂ ಹೊರತಾಗಿಲ್ಲ! ಏಕೆಂದರೆ “ಬೇಲಿಯೇ ಎದ್ದು ಹೋಲ ಮೇಯ್ದಂತೆ’ ಉಪಾಧ್ಯಾಯನೇ ತನ್ನ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗುತ್ತಿರುವುದು ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ.
ಸಂವಿಧಾನ ಮತ್ತು ಸಮಾನತೆ
ಸಂವಿಧಾನದಲ್ಲಿ ಸ್ತ್ರೀ-ಪುರುಷರಿಗೆ ಸಮಾನ ಅಧಿಕಾರ ನೀಡಲಾಗಿದೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಮೊದಲುಗೊಂಡು ಸರಕಾರಿ ನೌಕರಿಯವರಿಗೆ ಧರ್ಮ, ಜಾತಿ, ವರ್ಗ, ವರ್ಣಭೇದದ ಆಧಾರದ ಮೇಲೆ ಯಾರಲ್ಲೂ ಯಾವುದೇ ಬಗೆಯ ಪಕ್ಷಪಾತ ತೋರಿಸುವಂತಿಲ್ಲ. ಸಂವಿಧಾನದಲ್ಲಿ ಮಹಿಳೆಯರ ಕುರಿತು ಕೆಲವು ವಿಧಿಗಳನ್ನು ಗಮನಿಸೋಣ 
ಅನುಚ್ಛೇದ – 14, ವಿಧಿಬದ್ದ ಸಮಗ್ರ ಸಮಾನತೆ 
ಅನುಚ್ಛೇದ - 15, ಧರ್ಮ, ಮೂಲ, ವಂಶ, ಜಾತಿ, ಲಿಂಗ ಇಲ್ಲವೇ ಜನ್ಮಸ್ಥಾನದ                ಆಧಾರದ ಮೇಲೆ ಭೇದ ಮಾಡುವುದಕ್ಕೆ ತಡೆ.
ಅನುಚ್ಛೇದ – 16, ಲೋಕ ನಿಯೋಜನೆಯ ವಿಷಯ ಹಾಗೂ ಅವಕಾಶಗಳಲ್ಲಿ ಸಮಾನತೆ
ಅನುಚ್ಛೇದ – 23, ಮಾನವನ ದುರ್ವ್ಯಾಪಾರ, ಬಲವಂತದ ಶ್ರಮದ ಪ್ರತಿಬಂಧ.
ಅನುಚ್ಛೇದ – 39, ರಾಜ್ಯಗಳ ಮೂಲಕ ಅನುಸರಿಸಬೇಕಾಗಿರುವ ಕೆಲವು ನೀತಿ ನಿರ್ದೇಶಕ ತತ್ವಗಳು.
ಅನುಚ್ಛೇದ – 42, ಕೆಲಸದಲ್ಲಿ ನ್ಯಾಯ ಸಲ್ಲಿಕೆ, ಮಾನವೋಚಿತ ನಡೆ ಹಾಗೂ ಪ್ರಸೂತಿ ಸಹಾಯದ ನೀತಿ ನಿಯಮಗಳು. 
ಅನುಚ್ಛೇದ – 325, ಧರ್ಮ, ಮೂಲ, ವಂಶ, ಜಾತಿ, ಅಥವಾ ಲಿಂಗ ಅಲ್ಲದೆ ಇವುಗಳಲ್ಲಿ ಯಾವುದೇ ಆಧಾರದ ಮೇಲೆ ಯಾರನ್ನೇ ಆಗಲಿ ನಿಂದಿಸುವುದು ಸಲ್ಲತಕ್ಕದಲ್ಲ.
376ರ ನಿಯಮದಂತೆ ಬಲತ್ಕಾರಗೈದ ದೋಷಿಗೆ ಜೀವಾವಧಿ ಶಿಕ್ಷೆ ಇಲ್ಲವೇ 10 ವರ್ಷದ ಜೈಲು ಶಿಕ್ಷೆಯೊಂದಿಗೆ ಜುಲ್ಮಾನೆ ವಿಧಿಸಬಹುದು. ಕಡಿಮೆ ಎಂದರೆ ಏಳು ವರ್ಷ ಸಜೆ ಇದಕ್ಕಿದೆ
ಪೋಲಿಸರು, ಸರೆಮನೆ ಅಧಿಕಾರಿ, ಆಸ್ಪತ್ರೆಯವರು. ಮಹಿಳಾ 
ಸಂಸ್ಥೆಯ ನಿರ್ಧೇಶಕರಂಥವರು ಅನುಚಿತವಾಗಿ ವರ್ತಿಸಿದರೆ, ಕ್ರೌರ್ಯ ಮೆರೆದರೆ, ಭಕ್ಷಕರಾದರೆ 1983ರಲ್ಲಿ ಸಂಸತ್ತಿನಲ್ಲಿ ಪಾಸಾದ 376(ಬಿ) 376(ಸಿ), 376(ಡಿ) ನಿಯಮಗಳಂತೆ ದೋಷಿಗೆ ಕಠಿಣ ಶಿಕ್ಷೆ ಇದೆ. ಭಾರತೀಯ ದಂಡ ಸಂಹಿತೆ 292 ರಿಂದ 294ರ ವರೆಗಿನಂತೆಯೂ ಕೂಡ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ತಡೆ ಹಾಕಲಾಗಿದೆ.
ಅತ್ಯಾಚಾರ ಪ್ರಮುಖ ಅಂಶಗಳು
ಬಲತ್ಕಾರದ ಶೇ 16ರಷ್ಟು ಪ್ರಕರಣಗಳು ಮಾತ್ರ ಪೋಲೀಸ್ ಠಾಣೆಗೆ ಬರುತ್ತವೆ. ಬಲತ್ಕಾರಕ್ಕೀಡಾದ ಹೆಣ್ಣುಗಳಲ್ಲಿ ಮೂರನೇ ಒಂದಂಶಕ್ಕಿಂತ ಹೆಚ್ಚಿನವರ ವಯಸ್ಸು 16 ವರ್ಷಕ್ಕಿಂತ ಕಡಿಮೆ ಇರುವುದು ಶೋಚನೀಯ.
ಗ್ರಾಮೀಣ ಪ್ರದೇಶದಲ್ಲಿನ ಇಂಥಹ ಬಹುತೇಕ ಘಟನೆಗಳು ಶೇ1 ರಷ್ಟು ಮಾತ್ರ ಬೆಳಕಿಗೆ ಬರುತ್ತವೆ.
ಶೇ 4ರಷ್ಟು ಆರೋಪಿಗಳಿಗೆ ಮಾತ್ರ ನ್ಯಾಯಾಲಯದಲ್ಲಿ ಶಿಕ್ಷೆಯಾಗುತ್ತಿದೆ,
ಶೇ 30ರಷ್ಟು ಬಲತ್ಕಾರಗಳು ಪೀಡಿತಳ ನೆರೆಹೊರೆಯವರೆ ಆಗಿರುತ್ತಾರೆ.
ಶೇ 3ರಷ್ಟು ಅತ್ಯಾಚಾರಗಳು ಕುಟುಂಬದ ಸದಸ್ಯರಿಂದಲೇ ಆಗಿರುತ್ತದೆ.


ಅತ್ಯಾಚಾರಕ್ಕೆ ಪ್ರಮುಖ ಕಾರಣಗಳು
ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶಾದಾದ್ಯಂತ ಪ್ರತಿನಿತ್ಯ ಹಲವಾರು ಬಲತ್ಕಾರಗಳು, ಹತ್ಯೆಗಳ ಸಂಖ್ಯೆ ದಿನೇ ದಿನೇ ದ್ವಿಗುಣಗೊಳ್ಳುತ್ತಿರುವುದು ಬೆಚ್ಚಿ ಬೀಳಿಸುವ ಸಂಗತಿಯಾಗಿದೆ. ಇದಕ್ಕೆ ಸಾಮಾಜಿಕ ಹಾಗೂ ಕಾನೂನಾತ್ಮಕ ಕಾರಣಗಳು, ಅಂತರ್ಜಾಲ ತಾಣಗಳು ಪ್ರಮುಖ ಕಾರಣಗಳಾಗಿವೆ ಎನ್ನಬಹುದು.
ಕೆಲವೊಂದು ಸಂದರ್ಭದಲ್ಲಿ ಜಾತಿಬಲ, ಸಂಬಂಧಗಳನ್ನು ಬೆಸೆದುಕೊಂಡ ಪೋಲಿಸರ ಪಾತ್ರವೂ ಬಲತ್ಕಾರಗಳಿಗೆ ಪೋಷಕವಾಗಿರುವುದು. 
ಭಾರತದಲ್ಲಿ ಅತ್ಯಾಚಾರಿಗೆ ಕಠಿಣ ಶಿಕ್ಷೆಯ ಭಯವಿಲ್ಲದಿರುವುದು. ಆತನು ಅಡ್ಡದಾರಿಯಲ್ಲಿ ಮುಂದುವರಿಯಲು ಸಹಕಾರಿಯಾಗಿದೆ.
ಉಪಭೋಗ್ಯದ ಸಂಸ್ಕøತಿ ಹೆಚ್ಚುತ್ತಿದೆ. ಬಹುರಾಷ್ಟ್ರೀಯವಾದವು ನಗರ ಪ್ರದೇಶಗಳನ್ನು ಆಕರ್ಷಿಸುತ್ತಿದೆ. ಇದು ತಾಯಿ , ತಂಗಿ, ಮಗಳು, ಸ್ನೇಹಿತೆ, ಹಾಗೂ ನೆರೆಹೊರೆಯವಳೆಂಬ ಸಂಬಂಧಗಳನ್ನೆಲ್ಲಾ ಸಂಪೂರ್ಣವಾಗಿ ಬದಲಿಸಿದೆ. ದೇಶ, ವಿದೇಶದ ಅಶ್ಲೀಲ ಸಿನಿಮಾ, ಅಂತರ್ಜಾಲ ಲೈಂಗಿಕ ಮಾಹಿತಿ, ಇತ್ಯಾದಿಗಳು ಬಲತ್ಕಾರಿಗಳಿಗೆ ಪ್ರೋತ್ಸಾಹಕವಾಗಿವೆ. 
ಸಾಮಾಜಿಕ ಅಸ್ಥಿರತೆಯ ಸ್ಥಿತಿಯಲ್ಲಿ ಕಾಮುಕರು ತನ್ನ ಬಲಿಯನ್ನು ಸುಲಭದಲ್ಲಿ ಪಡೆಯುತ್ತಾನೆ. ಅಮೇರಿಕಾದಲ್ಲಿ ಇಂತಹ ತಪ್ಪಿಗೆ ಮರಣದಂಡನೆಯಿಂದ 99 ವರ್ಷ ಜೈಲು ಶಿಕ್ಷೆಯವರೆಗೂ ನೀಡಿಯಾಗಿದೆ. ಆದರೆ ಇಲ್ಲಿ ಅತ್ಯಾಚಾರಿಗಳು ಸುಲಭವಾಗಿ ನ್ಯಾಯಾಲಯ ಖುಲಾಸೆಗೊಳ್ಳುತ್ತಾರೆ.
ಕೋರ್ಟು-ಖಟ್ಲೆ ತುಂಬ ಕಾಲ ಎಳೆಯುತ್ತದೆ. ಕರ್ನಾಟಕದಲ್ಲಿ ಇಂತಹ ಒಂದು ಕೇಸು 15 ವರ್ಷಗಳ ಕಾಲ ನಡೆದಿರುವ ಸಂಗತಿಗಳು ಇವೆ. ಇಂಥ ಸ್ಥಿತಿಯಲ್ಲಿ ಪೀಡಿತಳು ಹೈರಾಣಾಗುತ್ತಾಳೆ. ಹಾಗಾಗಿ ಅಪರಾಧಿಗೆ ಒಂದು ಕಾಲ ಮಿತಿಯೊಳಗೆ ಶಿಕ್ಷೆಯಾಗುವುದಿಲ್ಲ.



ಆಗಬೇಕಾದ ಬದಲಾವಣೆಗಳು
ಪೋಲೀಸ್ ವ್ಯವಸ್ಥೆ ಹಾಗೂ ದಂಡನಾ ವಿಧಾನದ ಸಂಶೋಧನೆಯ ಜೊತೆಗೆ ನಮ್ಮವರು ಆದರ್ಶಗಳನ್ನು ವಿಶ್ಲೇಷಿಸಬೇಕು. ನಮ್ಮ ಆಯೋಜನಾ ವಿಧಾನ ಬದಲಾಗಬೇಕಿದೆ. 
ಸ್ತ್ರೀಯರ ಸಾಮಾಜಿಕ ಪ್ರತಿಷ್ಠೆಯನ್ನು ಅವರ ಕ್ರೌರ್ಯದ ಆಧಾರದ ಮೇಲೆ ನೋಡದೆ ಸಫಲತೆ, ಉಪಲಭ್ಯತೆ ಮೇಲೆ ನೋಡುವುದರಿಂದ ಅತ್ಯಾಚಾರಿಗಳನ್ನು ದಂಡಿಸುವುದು ಸುಲಭವಾಗುತ್ತದೆ.
ನಮ್ಮ ಶಾಲೆಗಳಲ್ಲಿ ಆತ್ಮರಕ್ಷಣೆಯ ಶಿಕ್ಷಣ ವ್ಯವಸ್ಥೆ ಇಲ್ಲ. ಹಾಗಾಗಿ ಹೆಣ್ಣು ಅತ್ಯಾಚಾರದ ವಿರುದ್ದ ತನ್ನನ್ನು ತಾನು ರಕ್ಷಿಸಿಕೊಳ್ಳಲು ವಿಫಲವಾಗುತ್ತಾಳೆ. ಹುಡುಗಿಯರಿಗೆ ಶಾಲೆಯಲ್ಲಿ ಆತ್ಮರಕ್ಷಣೆ ಟೆಕ್ವಾಂಡೋ, ಜೂಡೋ, ಕರಾಟೆಯಂತಹ ಆತ್ಮರಕ್ಷಣೆಯ ಶಿಕ್ಷಣವೂ ಸಹ ಸಿಗಬೇಕಾಗಿದೆ.
ಅತ್ಯಾಚಾರಿಗೆ ಗಲ್ಲುಶಿಕ್ಷೆ ನೀಡಲು ಸಹಮತ ಮೂಡಿದಲ್ಲಿ ಅಂತಹ ಕಾನೂನು ಮಾಡಬೇಕೆಂದು 2002ರಲ್ಲಿಯೇ ಆಗಿನ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಘೋಷಿಸಿದ್ದರು. ಆದರೆ ಶಿಕ್ಷೆ ಕಡಿಮೆ ಮಾಡಬೇಕೆಂಬ ಕೂಗು ಎಲ್ಲೆಡೆಯಿಂದ ಧ್ವನಿಸುತ್ತಿರುವುದು ದುರಂತ. ಆಪಾದಿತನ ಅಪರಾದ ಖಚಿತವಾದರೆ ಮೇಲಿನ ಕೋರ್ಟ್‍ಗೆ ಹೋಗುದಕ್ಕೂ ಕೂಡ ಅವನಿಗೆ ಜಾಮೀನು ನೀಡಬಾರದು. ಎಲ್ಲಾ ಮಹಿಳಾ ಜನಪರ ಸಂಘಟನೆಗಳು ಈ ನಿಟ್ಟಿನಲ್ಲಿ ಧ್ವನಿ ಎತ್ತಿ ಹೋರಾಡಬೇಕಿದೆ. 
ಸ್ವಾತಂತ್ರ್ಯ ಬಂದು 65 ವರ್ಷ ದಾಟಿದರೂ ನ್ಯಾಯಾಂಗ, ಶಾಸಕಾಂಗ ಮತ್ತು ಮಾಧ್ಯಮಗಳು ಪುರುಷರ ಹಿಡಿತದಲ್ಲೇ ಇವೆ. ಮಹಿಳೆಯರನ್ನು ಎಲ್ಲಾ ಕ್ಷೇತ್ರಗಳಲ್ಲಿ ಇನ್ನಷ್ಟು ಸಶಕ್ತರನ್ನಾಗಿ ಮಾಡಬೇಕಾದ ಅನಿವಾರ್ಯತೆಯಿದೆ.
ಒಮ್ಮೊಮ್ಮೇ ಅತ್ಯಾಚಾರವೆಂಬ ಈ ಕ್ರೌರ್ಯಕ್ಕೆ ಹೆಣ್ಣೇ ಮಾರಕವಾಗುವುದನ್ನು
 ಅಲ್ಲಗಳೆಯುವಂತಿಲ್ಲ. ಹೆಣ್ಣು ಇನ್ನೊಂದು ಹೆಣ್ಣಿನ ಬಗ್ಗೆ ತಾತ್ಸಾರ ಮನೋಭಾವನೆ ತಾಳುವುದು ನಿಲ್ಲಬೇಕು. ಸ್ತ್ರೀ ಸಮಾಜದಲ್ಲಿ ಒಗ್ಗಟ್ಟು ಕಂಡು, ಸ್ತ್ರೀ ಶಕ್ತಿ ಸಂಘಗಳು ಹಾಗೂ ಸ್ತ್ರೀ ಪರ ಸಂಘಟನೆಗಳು ಕಟುವಾಗಿ ಖಂಡಿಸಿ, ಸ್ವಾತಂತ್ರ್ಯ, ಸಮಾನತೆಯಿಂದ ದಿಟ್ಟ ಹೆಜ್ಜೆ ಇಡಬೇಕಾಗಿದೆ. ಹಾಗೆಯೇ ಪುರುಷ ಸಂಕುಲವೂ ಸಹ ಸ್ತ್ರೀ ಬಗ್ಗೆ ಅಪಾರ ಕಾಳಜಿ ವಹಿಸಬೇಕಾಗಿದೆ. ಅವಳು ನಮ್ಮ ತಾಯಿಯಾಗಿ, ಸಹೋದರಿಯಾಗಿ, ಬಾಳ ಸಂಗಾತಿಯಾಗಿ ಅತ್ತಿಗೆಯಾಗಿ, ಸ್ನೇಹಿತೆಯಾಗಿ, ಗುರುವಾಗಿ ಇನ್ನೂ ಮುಂತಾದ ಸಂಬಂಧಗಳಲ್ಲಿ ಬೆಸೆದುಕೊಂಡು ಪುರುಷ ಕುಲಕ್ಕೆ ಬೆಳಕಾಗುವವಳು. ಅಂತಹ ಮಹತ್ತರವಾದವಳನ್ನು ನಾವಿಂದು ಹೇಗೆ ಕಾಣಬೇಕಾಗಿದೆ ಎಂದು ಸ್ವಲ್ಪ ಚಿಂತಿಸಿ ಆ ನಿಟ್ಟಿನಲ್ಲಿ ಎಲ್ಲರೂ ಸಾಗಿದರೆ ಈ ಅತ್ಯಾಚಾರವೆಂಬ ಕ್ರೌರ್ಯಕ್ಕೆ ಕಡಿವಾಣ ಹಾಕಬಹುದಾಗಿದೆ. ಹಾಗೆಯೇ ದಿನದಿಂದ ದಿನಕ್ಕೆ ಮಹಿಳಾ ಪರ ಕಾನೂನು ಜಾರಿಗೆ ಬರುತ್ತಿರುವುದು ಸಂತಸದಾಯಕವಾದುದು, ಹಾಗೆಯೇ ಹೋರಾಟದ ಫಲವಾಗಿದೆ. ಆದರೆ ಬೆರಳೆಣಿಕೆಯ ದಾವೆಗಳು ಕಾನೂನುಗಳನ್ನು ದುರುಪಯೋಗಪಡಿಸಿಕೊಂಡಿದ್ದು ಉಂಟು. ಅದಾಗಬಾರದು ತಪ್ಪಿತಸ್ತರು ಯಾರೇಯಾಗಲೀ ಸರಿಯಾದ ಶಿಕ್ಷೆಯಾದರೆ ಅವಘಡಗಳು ಮರುಕಳಿಸುವುದಿಲ್ಲವೆಂಬುದು ನನ್ನ ಭಾವನೆ.


ಕೊಟ್ರೇಶ್ ಎಸ್. ಉಪ್ಪಾರ್,ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ-573201
ಮೊ-9483470794, 9739878197     
    

ಭಾನುವಾರ, ಆಗಸ್ಟ್ 3, 2014

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾಹಿತ್ಯದ ಪಾತ್ರ ಹಿರಿದು - ರಾಜಶೇಖರ್ ಮಠಪತಿ



ಹಾಸನ, ಆ. 3: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಅನೇಕ ಸಾಹಿತಿಗಳು ತಮ್ಮ ಅಮೋಘ ಕೊಡುಗೆ ಕೊಟ್ಟಿದ್ದಾರೆ. ಅರವಿಂದ ಘೋಷ್, ರವೀಂದ್ರನಾಥ ಠ್ಯಾಗೋರ್, ಬಂಕಿಮಚಂದ್ರ ಚಟರ್ಜಿ, ಇಬ್ರಾಹಿಂ, ಇಕ್ಬಾಲ್, ಖುಷ್ವಂತ್ ಸಿಂಗ್, ಆರ್.ಕೆ. ನಾರಾಯಣ, ಅಮೃತ ಪ್ರಿಯತಂ ಮುಂತಾದ ಅನೇಕ ದಿಗ್ಗಜರು ಅತ್ಯದ್ಭುತ ಕೊಡುಗೆ ನೀಡಿದ್ದಾರೆ ಎಂದು ಡಾ|| ರಾಜಶೇಖರ್ ಮಠಪತಿ ಸ್ಮರಿಸಿದರು.
ಹಾಸನದ ರಂಗೋಲಿ ಹಳ್ಳದಲ್ಲಿರುವ ಯೋಗ ಗುರು ಸುರೇಶ್ ಗುರೂಜಿ ಅವರ ಪ್ರಾಯೋಜಕತ್ವದಲ್ಲಿ ವ್ಯಕ್ತಿತ್ತ್ವ ವಿಕಸನ ಕೇಂದ್ರದಲ್ಲಿ ನಡೆದ 209ನೆಯ ಮನೆ ಮನೆ ಕವಿಗೋಷ್ಠಿಯಲ್ಲಿ ‘ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಸ್ಲಾಮಿಕ್ ಸಾಹಿತ್ಯ’
ವಿಷಯವಾಗಿ ಉಪನ್ಯಾಸ ನೀಡಿದರು.

ಸಾಹಿತ್ಯವು ಪ್ರಚಾರದ ಮಾಧ್ಯಮವಲ್ಲ. ಅದೊಂದು







`ನಾ ಮೆಚ್ಚಿದ ಕವಿತೆ’ ಬಗ್ಗೆ ಡಾ|| ಕೆ.ಕೆ. ಜಯಚಂದ್ರಗುಪ್ತ ಮಾತನಾಡಿದರು. ನಂತರ ನಡೆದ ಕವಿ ಗೋಷ್ಠಿಯಲ್ಲಿ ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್, ಎನ್.ಎಲ್. ಚನ್ನೇಗೌಡ, ಚಂದ್ರಕಾಂತ ಪಡೆಸೂರ, ಸುಶೀಲ ಸೋಮಶೇಖರ್, ಶ್ರೀವಿಜಯ ಹಾಸನ, ನವಾಬ್ ಬೇಲೂರು, ಭಾರತಿ ಹಾದಿಗೆ, ಪವನ್ ಆಲೂರು, ವಾಸು ಸಮುದ್ರವಳ್ಳಿ, ಚೂಡಾಮಣಿ, ಸರೋಜ, ಲಲಿತ, ಬಿ. ವೇದಾವತಿ, ಗೊರೂರು ಅನಂತರಾಜು, ಮನೋಹರ ತಿಪಟೂರು, ಸಾತ್ವಿಕ್, ಪ್ರಮೋದ್ ಬೆಳಗೋಡು ಮುಂತಾದವರು ಕವಿತೆ ವಾಚಿಸಿದರು.
ಕಾರ್ಯಕ್ರಮದಲ್ಲಿ ಎಚ್.ಆರ್. ಮಂಜಪ್ಪಗೌಡ, ತುಳಸಿಯಮ್ಮ, ಜಯದೇವಪ್ಪ, ಪದ್ಮಶ್ರೀ ಮಠಪತಿ, ದ್ಯಾವನೂರು ಮಂಜುನಾಥ, ಸುರೇಶ್ ಗುರೂಜಿ, ಚಿನ್ನೇನಹಳ್ಳಿ ಸ್ವಾಮಿ ಮುಂತಾದವರು ಭಾಗವಹಿಸಿದ್ದರು.
ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್ ನಿರೂಪಿಸಿದರು, ಚಂದ್ರಕಾಂತ ಪಡೆಸೂರ ಸ್ವಾಗತಿಸಿದರು, ಸುರೇಶ್ ಗುರೂಜಿ ಪ್ರಾರ್ಥಿಸಿ, ವಂದಿಸಿದರು.

ಶನಿವಾರ, ಆಗಸ್ಟ್ 2, 2014

ಹಾಸನದ ಮಿರ್ಜಾ- ಎಚ್.ಬಿ.ಜ್ವಾಲನಯ್ಯ- ಕೊಟ್ರೇಶ್ ಎಸ್. ಉಪ್ಪಾರ್


ಕನ್ನಡ ಭಾಷೆಯು ಎರಡು ಸಾವಿರ ವರ್ಷಗಳ ಭವ್ಯ ಪರಂಪರೆಯನ್ನು ಒಳಗೊಂಡು ವಿಶಿಷ್ಟ, ವಿಭಿನ್ನ, ವಿನೂತನ, ವೈವಿಧ್ಯ, ಆಳ-ವಿಸ್ತಾರಗಳನ್ನು ಸದಾಕಾಲವೂ ಪ್ರತಿಬಿಂಬಿಸುತ್ತಾ, ಮೌಲಿಕ ಸಾಹಿತ್ಯ, ಸಾಹಿತಿ, ಪೋಷಕರಿಂದ ಪ್ರಜ್ವಲಿಸುತ್ತಾ ಮುನ್ನುಗ್ಗುತ್ತಿದೆ.
ಹಾಸನ ಮಾದರಿಯಾಗಬೇಕೆಂದು, ನನ್ನ ಉಸಿರಿರುವ ತನಕ ಈ ನಗರದ ಬದಲಾವಣೆಗೆ, ಇಲ್ಲಿನ ಕಲೆ, ಸಾಹಿತ್ಯ ಪರಂಪರೆಯ ಉಳಿವಿಗೆ ಹೋರಾಡುತ್ತೇನೆಂದು ನುಡಿದಂತೆ, ನಡೆಯುತ್ತಾ ಸಾಧಿಸಿದ ವ್ಯಕ್ತಿ ಎಚ್.ಬಿ ಜ್ವಾಲಯ್ಯನವರೆಂದರೆ ಅತಿಶಯೋಕ್ತಿಯಾಗಲಾರದು.
1920 ಜುಲೈ 15 ರ ಗುರುವಾರ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಳಗೋಡು ಮೂಲದ ಎಚ್.ಪಿ ಬ್ರಹ್ಮದೇವಯ್ಯ ಮತ್ತು ಪದ್ಮಾವತಮ್ಮ ದಂಪತಿಗಳ ಹಿರಿಯ ಮಗನಾಗಿ ಜನಿಸಿದ ಎಚ್.ಬಿ ಜ್ವಾಲನಯ್ಯರವರು ಸರಳ, ಸಜ್ಜನ, ಆದರ್ಶವ್ಯಕ್ತಿಯಾಗಿ ಬದುಕಿ ಬಾಳಿದವರು. ಇವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಿಕ್ಕಾಗಿ ಇವರ ಆತ್ಮೀಯರಾಗಿದ್ದ ಯೋಗ ಗುರುಗಳಾದ ಎಚ್.ಬಿ.ರಮೇಶ್ ಅವರಿಗೆ ಫೋನಾಯಿಸಿ ಅನುಮತಿ ಪಡೆದು ಮನೆಗೆ ತೆರಳಿದಾಗ ಜ್ವಾಲಯ್ಯನವರ ಬದುಕಿನ ಚಿತ್ರಣವನ್ನು, ನಡೆದು ಬಂದ ಹಾದಿಯನ್ನು ಅವರೊಂದಿಗೆ ಕಳೆದ ಸುವರ್ಣ ಘಳಿಗೆಗಳನ್ನು ಅನುಭವ-ಆನಂದಗಳನ್ನು ಸುಮಾರು ಎರಡು ಗಂಟೆಗೂ ಅಧಿಕವಾಗಿ ಹಂಚಿಕೊಳ್ಳತ್ತಾ ರೋಮಾಂಚನಗೊಂಡರು. ಆ ಎಲ್ಲಾ ಚಿತ್ರಣ ಹಾಗೂ ಪ.ನಾಗರಾಜಯ್ಯ ಬರೆದ ಎಚ್.ಬಿ ಜ್ವಾಲನಯ್ಯ ಜೀವನ ಮತ್ತು ಸಾಧನೆ ಎಂಬ ಲೇಖನ, ‘ಹೇಮಸಿರಿ’ ಕಸಾಪ ಸ್ಮರಣ ಸಂಚಿಕೆ, ಮತ್ತು ಜ್ವಾಲನಯ್ಯರವರೊಂದಿಗೆ ಚಂದ್ರಕಾಂತ ಪಡೆಸೂರರ ಅನುಭವಗಳು, ರಂಗಕರ್ಮಿ ಎಚ್.ರಾಮಣ್ಣರ ಜ್ವಾಲನಯ್ಯರವರೊಂದಿಗಿನ ರಂಗಭೂಮಿ ಅನುಭವಗಳು   ನನಗೆ ಹೆಚ್ಚಿನ ಮಾಹಿತಿಗಳನ್ನು ಒದಗಿಸಿದವು.
1942ರಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಇವರು ತಮ್ಮ ಮಿತ್ರರೊಡಗೂಡಿ ‘ಭಗತ್ ಪಾರ್ಟಿ’ ಎಂಬ ಯುವ ಸೈನ್ಯ ಕಟ್ಟಿ ಅವಿರತವಾಗಿ ಹೋರಾಡಿದರು. 
ಹಿಡಿದ ಕಾರ್ಯವ ಸಾದಿಸದ ಹೊರತು ಮುಂದೆ ಸಾಗದ ಹಠವಾದಿ ವ್ಯಕ್ತಿತ್ತ್ವ ಜ್ವಾಲಯ್ಯನವರದು. ಜ್ಯಾತ್ಯಾತೀತವಾದಿಯಾಗಿ, ಉತ್ತಮ ರೈತಾಪಿ ಜೀವನದ ಮೂಸೆಯಲ್ಲಿ ತಿದಿಯೊತ್ತಿ ಬಂದಿದ್ದ ಜ್ವಾಲಯ್ಯನವರು ಎಲ್.ಟಿ ಕಾರ್ಲೆಯವರೊಂದಿಗೆ ಹಾಸನದಲ್ಲಿ ದನಗಳ ಜಾತ್ರೆ, ಕೈಗಾರಿಕೆ ಮತ್ತು ವ್ಯವಸಾಯಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನದ ಆರಂಭಕ್ಕೆ ದುಡಿದರು. ಆದ್ದರಿಂದಲೇ ಮುಂದೆ ಹಾಸನದ ಪಾಲಿಗೆ ಕೈಗಾರಿಕಾ ಕ್ರಾಂತಿಕಾರರಾದರು.
ಪ. ನಾಗರಾಜಯ್ಯನವರು ಒಂದು ಕಡೆ ಹೀಗೆ ಹೇಳಿದ್ದಾರೆ, “ಜ್ವಾಲಯ್ಯನವರು ಮಿತಭಾಷಿ, ಕಾರ್ಯತತ್ಪರ, ಕಾರ್ಯ ಸಾಧಕ, ಸದಾ ಉತ್ಸಾಹದ ಚಿಲುಮೆ, ಸಜ್ಜನ, ನಿರುಪದ್ರವಿ, ಸ್ನೇಹ ಜೀವಿ, ಜನಪ್ರಿಯ ವ್ಯಕ್ತಿ, ಪರೋಪಕಾರಿ, ಒಳ್ಳೆಯ ವಾಗ್ಮಿ, ಗುಣಗ್ರಾಹಿ, ಬಡವರ ಬಂಧು, ದಕ್ಷ ಆಡಳಿತಗಾರ, ಯಾವುದನ್ನೂ ಯೋಜನಾಬದ್ಧವಾಗಿಯೇ ನಿರ್ವಹಿಸುವ ಧ್ಯೇಯವುಳ್ಳವ, ಸೃಜನಶೀಲ ಪ್ರತಿಭೆ, ಇತಿಹಾಸ ಪ್ರಜ್ಞೆಗಳನ್ನುಳ್ಳವ, ಜೀವನದಲ್ಲಿ ಒಂದು ಶಿಸ್ತನ್ನು ರೂಢಿಸಿಕೊಂಡವರು, ತನಗಾಗಿ ತನ್ನವರಿಗಾಗಿ ಎಂದೂ ಏನೂ ಮಾಡಿಕೊಂಡವರಲ್ಲ”.
ಜ್ವಾಲಣ್ಣನವರೆಂದೇ ಪ್ರಸಿದ್ಧರಾದ ಇವರು ಮನೆಗೆ ಮಾತ್ರ ಹಿರಿಮಗನಾಗದೆ ಹಾಸನಕ್ಕೆ ಅಗ್ರಜ ಸ್ಥಾನವನ್ನು ತುಂಬಿದವರಾಗಿದ್ದರು. ಕುಸ್ತಿಪಟುವಾಗಿ, ಈಜುಗಾರನಾಗಿ, ಬ್ಯಾಡ್ಮಿಂಟನ್ ಆಟಗಾರನಾಗಿ ಖ್ಯಾತಿವೆತ್ತಿದ್ದರು. ಪೋಷಕರ ಸಂಸ್ಕಾರದಿಂದ, ಜೈನ ಪುರಾಣ ಪುಣ್ಯ ಕಥೆಗಳಿಂದ ಉತ್ತಮ ಜೈನಾಚಾರರಾಗಿ ರೂಪಗೊಂಡು, ಸಮಾಜದಲ್ಲಿನ ಮಾನವೀಯ ನೆಲೆಗಳೊಟ್ಟಿಗೆ ಜೀವಿಸಿ, ಅನುಭವಿಸಿ, ಒಡಗೂಡಿ ಉದಾತ್ತ ಚಿಂತನಕಾರರಾಗಿ, ಜ್ಯಾತ್ಯಾತೀತ ಖಣಜವಾಗಿ ರೂಪುಗೊಂಡರು.


ರಾಜಕೀಯ ಪ್ರವೇಶ
ಸಾಮಾಜಿಕವಾಗಿ ಸದಾ ಮುಂಚೂಣಿಯಲ್ಲಿದ್ದ ಜ್ವಾಲಯ್ಯನವರು ಜನರ ಒತ್ತಾಯಕ್ಕೆ ಮಣಿದು 1952-53ರಲ್ಲಿ ಮೊದಲ ಸಲ ಪುರಸಭಾ ಅಧ್ಯಕ್ಷರಾಗಿ ಆಯ್ಕೆಗೊಂಡು ಜನರ ಆಶೋತ್ತರಗಳಿಗೆ   ಸ್ಪಂದಿಸುತ್ತಾ ಉತ್ತಮ ಕಾರ್ಯಗಳನ್ನು ಮಾಡಿದರು. ಇವರ ಕರ್ತವ್ಯ ನಿಷ್ಠೆ, ಸಮಾಜ ಪರ ಚಿಂತನೆಗಳು, ನಿಸ್ವಾರ್ಥ ರಾಜಕಾರಣ 1974-75ರಲ್ಲಿ ಪುನಃ ಪುರಸಭಾ ಅಧ್ಯಕ್ಷರಾಗಲು ಕಾರಣವಾಯಿತು. 
ಇವರ ಅಧಿಕಾರವಧಿಯಲ್ಲಿ ಬೀರನಹಳ್ಳಿ ಕೆರೆಯ ಜೀರ್ಣೋದ್ಧಾರ. ದೇವಿಗೆರೆಗೆ ಮೂರ್ತರೂಪ ಕೊಟ್ಟು ಸುಂದರಮಯವಾಗುವಂತೆ ಮಾಡಿದ್ದು, ಜೈಲು ಎದುರಿನ ಬಾರಿ ಅಗಗಳನ್ನು ಮುಚ್ಚಿಸಿ ಉತ್ತಮ ರಸ್ತೆ ನಿರ್ಮಿಸಿ, ಬಸವ ಮೂರ್ತಿ ನಿರ್ಮಾಣ ಮಾಡಿಸಿ ಅದು ‘ಬಸವ ಸರ್ಕಲ್’ ಎಂದೇ ಪ್ರಸಿದ್ದವಾಗಲು ಕಾರಣವಾಗಿದ್ದು ಜ್ವಾಲನಯ್ಯನವರೇ.... ಆದರೆ ಅದು ಈಗಿಲ್ಲ! ನಗರದಲ್ಲಿ ಕುಡಿಯುವ ನೀರಿನ ತೊಂದರೆಯಿದ್ದುದರಿಂದ ಹೇಮಾವತಿ ನದಿಯಿಂದ ಹಾಸನಕ್ಕೆ ನೀರು ಸರಬರಾಜು ಮಾಡುವ ಬೃಹತ್ ಯೋಜನೆಯನ್ನು ಕೈಗೊಂಡರು. ಆಗಿನ ಕೇಂದ್ರ ಸರಕಾರದ ಗಮನ ಸೆಳೆದು ಅನುದಾನ ತರುವಲ್ಲಿ ಯಶಸ್ವಿಯಾದರು.
     ತಮ್ಮ ಆಪ್ತರಾಗಿದ್ದ ಆಗಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಸಹಕಾರದಿಂದ ನಗರಕ್ಕೆ ಒಳಚರಂಡಿ ವ್ಯವಸ್ಥೆ, ಸಿಮೆಂಟ್ ರಸ್ತೆಗಳು, ವಿಶಾಲ ರಸ್ತೆಗಳು, ಪುರಸಭಾ ಕಟ್ಟಡಗಳು, ಮಹಾರಾಜ ಉದ್ಯಾನವನದ ಸೌಂದರ್ಯ, ಈಜುಕೊಳದ ನಿರ್ಮಾಣ ಯೋಜನೆ, ಸುಭಾಷ್ ಚೌಕ, ಪಾಳುಬಿದ್ದ ಕಟ್ಟಿನ ಕೆರೆಯನ್ನು ಅಗತ್ಯವಿದ್ದ ಸಾರಿಗೆ ಬಸ್ ನಿಲ್ದಾಣವಾಗಿ (ಈಗಿನ ಹಳೇಬಸ್ ನಿಲ್ದಾಣ) ರೂಪಿಸಿದ್ದು, ಮಾರುಕಟ್ಟೆ ಸಂಕೀರ್ಣಗಳನ್ನು ನಿರ್ಮಿಸಿದ್ದು, ಇವರ ಆಡಳಿತದ ಮಹತ್ತರ ಅಂಶಗಳಾಗಿವೆ. ಇವೆಲ್ಲವುಗಳ ಪರಿಣಾಮದಿಂದಲೇ ಕೆಂಗಲ್ ಹನುಮಂತಯ್ಯರವರಿಂದ ‘ಹಾಸನದ ಮಿರ್ಜಾ’ ಎಂದು ಬಿರುತಾಂಕಿತಗೊಂಡ ಖ್ಯಾತಿ ಜ್ವಾಲನಯ್ಯನವರದು. 
      ಮುಸ್ಲಿಂ-ಕ್ರೈಸ್ತರ ಸ್ಮಶಾನಗಳಿಗೆ ಜಾಗ ಕಲ್ಪಿಸಿದ್ದು, ಬೀದಿ ಕಸಗುಡಿಸುವವರಿಗೆ ನೆಲೆ ಒದಗಿಸಿದ ಕೀರ್ತಿ ಜ್ವಾಲಯ್ಯನವರಿಗೆ ಸಲ್ಲುತ್ತದೆ.
    1962ರಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಶ್ರೀಮತಿ ಯಶೋದಮ್ಮ ಅವರ ವಿರುದ್ದ ಸೋಲುತ್ತಾರೆ. ಆದರೆ ತಮ್ಮ ಸಾಮಾಜಿಕ ಕಳಕಳಿಯಿಂದ  ವಿಮುಖರಾಗದ ಇವರು 1966 ರಲ್ಲಿ ರಾಜಗೋಪಾಲಚಾರಿಯವರ ಸ್ವತಂತ್ರ ಪಕ್ಷವನ್ನು ಸೇರಿ ಪುನ: ಸ್ಪರ್ಧಿಸಿ ಬಹುಸಂಖ್ಯಾತ  ಜನಾಂಗದ ಅಂದಿನ ಪ್ರಭಾವಿ ರಾಜಕಾರಣಿಯಾಗಿದ್ದ ಎಲ್.ಟಿ. ಕಾರ್ಲೆ ಅವರನ್ನು ಸೋಲಿಸಿ ನಾಲ್ಕನೆಯ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು.
ಸಾಹಿತ್ಯ ಪರಿಷತ್ತು
       ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಜಿ. ನಾರಾಯಣರವರ ಅವಧಿಯಲ್ಲಿ ಇಲ್ಲಿ ರೂಪುಗೊಂಡ ನವ ಸಮಿತಿ 1969 ಜೂನ್ 15 ರಂದು ಜ್ವಾಲಯ್ಯನವರನ್ನು ಹಾಸನ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷರನ್ನಾಗಿ ನೇಮಿಸಿತು.
       ಕನ್ನಡ ಭಾಷಾಭಿಮಾನಿಯೂ, ಸಾಹಿತಿಯೂ, ನಾಟಕಕಾರರು, ಆಗಿದ್ದ ಜ್ವಾಲಯ್ಯನವರು ಸುಮಾರು ಎರಡು ದಶಕಗಳ ಕಾಲ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದರು. 
        1971ರ ನವಂಬರ್ 8 ಮತ್ತು 9 ರಂದು ಚನ್ನರಾಯಪಟ್ಟಣದಲ್ಲಿ ಹೆಸರಾಂತ ಗದ್ಯ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅಧ್ಯಕ್ಷತೆಯಲ್ಲಿ ಪ್ರಥಮ ಜಿಲ್ಲಾ ಸಮ್ಮೇಳನವನ್ನು ಯಶಸ್ವಿಯಾಗಿ ನೆರವೇರಿಸಿದರು. 1981ರಲ್ಲಿ ಹಾಸನದಲ್ಲಿ ನಡೆದ 2 ನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಡಾ.ಎಸ್.ಎಲ್.ಬೈರಪ್ಪನವರ ಅಧ್ಯಕ್ಷತೆಯಲ್ಲಿ, 1985ರಲ್ಲಿ ಅರಸೀಕೆರೆ ತಾಲ್ಲೂಕಿನ ಮಾಲೆಕಲ್ಲು ತಿರುಪತಿಯಲ್ಲಿ ನಡೆದ ಮೂರನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಡಾ.ಎಸ್.ಕೆ.ಕರೀಂಖಾನ್ ಅಧ್ಯಕ್ಷತೆಯಲ್ಲಿ ನಡೆಸಿದ ಕೀರ್ತಿ ಇವರದು.
        1976ರ ಜನವರಿ 17 ರಂದು ಜಿಲ್ಲಾ ಮಟ್ಟದ ಬೃಹತ್ ಜಾನಪದ ಕಲಾಮೇಳವನ್ನು ನಡೆಸಿದರು. ಇವರ ಅವಿರತ ಪ್ರಗತಿಪರ ಹೋರಾಟದ ಫಲವಾಗಿ 1986ರವರೆಗೂ ಹಾಸನ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾಗಿ ನಾಡು-ನುಡಿ ಶ್ರೇಯೋಭಿವೃದ್ಧಿಗಾಗಿ ದುಡಿದರು.
        ಬಹುಮುಖ್ಯವಾಗಿ ಕ.ಸಾ.ಪ ಭವನಕ್ಕೆ 1981 ಆಗಸ್ಟ್ 4 ರಂದು ನಿವೇಶನ ದೊರಕಿಸಿಕೊಟ್ಟರು. ಇವರ ಕಾರ್ಯತತ್ಪರತೆಯಿಂದ ರಾಜ್ಯ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡ ಇವರು 1989 ಫೆ 16 ರಂದು ಅಧ್ಯಕ್ಷರ ಚುಣಾವಣೆಯಲ್ಲಿ ಆರಿಸಿಬಂದು ರಾಜ್ಯ ಕ.ಸಾ.ಪ. ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇವರ ಕಾಲದಲ್ಲಿಯೇ 1987 ಅಕ್ಟೋಬರ್ 29, 30, 31 ರಂದು ಕಲ್ಬುರ್ಗಿಯಲ್ಲಿ ಡಾ.ಸಿದ್ಧಯ್ಯ ಪುರಾಣಿಕರ ಅಧ್ಯಕ್ಷತೆಯಲ್ಲಿ 58ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಹಾಗೆಯೇ ಹಲವಾರು ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ನಡೆದವು.  
ಸಾಹಿತ್ಯ ಕ್ಷೇತ್ರ
ಬಹುಮುಖ ಪ್ರತಿಭೆಯ ಚಿಂತನಾಶೀಲರಾದ ಜ್ವಾಲನಯ್ಯನವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಹಾಶಿಲ್ಪಿ, ರಾಜಲಾ, ಅಮಿತಾ, ಮಹಾಪರಿವರ್ತನೆ, ರಾಣಿ ರತ್ನಾಜಿ, ಪುರಸ್ಕಾರ, ನಯನ ಬಂಧನ, ಆರ್ಯ ಚಾಣಕ್ಯ ಮುಂತಾದ ಸುಮಾರು 17 ನಾಟಕಗಳನ್ನು ರಚಿಸಿದ ಕೀರ್ತಿ ಇವರದು. ಸಂಕೇತ, ಇವರ ಕವನ ಸಂಕಲನ. ಇವರ ‘ಮಹಾಶಿಲ್ಪಿ’ ನಾಟಕ ಮುಂದೆ ಇವರ ನಿರ್ದೇಶನದಲ್ಲಿಯೇ ಚಲನಚಿತ್ರವಾಗಿ ಮೂಡಿಬರುವುದರ ಜೊತೆಗೆ ಬೆಳ್ಳಿತೆರೆಯಲ್ಲಿ ತಾವೇ ಅಭಿನಯಿಸಿದರು. ಆಕಾಶವಾಣಿಯಲ್ಲಿ ಇವರ ಹಲವಾರು ನಾಟಕಗಳು ಪ್ರಸಾರವಾಗಿವೆ.ಕನ್ನಡದ ಜೊತೆಗೆ ಉತ್ತಮ ಹಿಂದಿ ಪಾಂಡಿತ್ಯ ಹೊಂದಿದ್ದ ಇವರು ಸ್ವತಃ ತಮ್ಮ ನಾಟಕಗಳನ್ನು ಹಿಂದಿಗೆ ಅನುವಾದಿಸಿದ್ದಾರೆ. ಇವರ ಬಹುಪಾಲು ನಾಟಕಗಳು ಐತಿಹಾಸಿಕವಾದವುಗಳೇ. ಅವುಗಳಲ್ಲಿ ಅಮಿತ, ಸಾಮ್ರಾಟ ಅಶೋಕ ಪ್ರಮುಖವಾದವುಗಳು. ‘ದಿವ್ಯಧ್ವನಿ’ ಇವರ ಸಂಪಾದಿತ ಕೃತಿ. ‘ಜೈನ ಸಾಹಿತ್ಯದಲ್ಲಿ ನಾಟಕಗಳು’ ಇವರ ಪ್ರಬಂಧ ಲೇಖನ. ಇಷ್ಟೇ ಅಲ್ಲದೆ ನೂರಾರು ಚಿಂತನ, ಭಾಷಣ ಕಾರ್ಯಕ್ರಮಗಳನ್ನು ಆಕಾಶವಾಣಿಯಲ್ಲಿ ಪ್ರಸ್ತುತಪಡಿಸಿದ್ದಾರೆ. 
ಇವರು ನಾಟಕಾರರಷ್ಟೇ ಅಲ್ಲದೇ ಉತ್ತಮ ಅಭಿನಯ ಚತುರರಾಗಿದ್ದರು. ಆದ್ದರಿಂದಲೇ ಇವರಿಗೆ ಬರವಣಿಗೆಯ ಜೊತೆಗೆ, ಅಭಿನಯ, ನಿರ್ದೇಶನಗಳು ಸಿದ್ಧಿಸಿದ್ದವು. ಧುರ್ಯೋಧನ, ಶಕುನಿ ಪಾತ್ರಗಳು ಇವರಿಗೆ ಖ್ಯಾತಿ ತರುವುದರ ಜೊತೆಗೆ ಅಭಿನಯದಾಳಕ್ಕೆ ಇಳಿಯುವಂತೆ ಮಾಡಿದವು.
ಶಿಕ್ಷಣ ಕ್ಷೇತ್ರ
ಸಮುದಾಯದ ಪ್ರಗತಿ ಶಿಕ್ಷಣ ಕ್ಷೇತ್ರದಿಂದಲೇ ಎಂದು ಅರಿತಿದ್ದ ಜ್ವಾಲನಯ್ಯನವರು ಜನರಿಗೆ ಶಿಕ್ಷಣ ಮೂಲಭೂತ ಹಕ್ಕಾಗಬೇಕೆಂದು ಅಂದಿನ ಕಾಲದಲ್ಲಿಯೇ ಅರಿತು ಹೋರಾಡಿದರು. ಅಲ್ಲದೆ ಅನೇಕ ಶಿಕ್ಷಣ ಸಂಸ್ಥೆಗಳ ಉದಯಕ್ಕೆ ಕಾರಣರಾದರು. ಈಗಿನ ‘ಭಾರತಿ ವಿದ್ಯಾಮಂದಿರ’ ಜ್ವಾಲನಯ್ಯನವರ ಕನಸಿನ ಕೂಸು. ಅದೀಗ ಚಂದ್ರಕಾಂತ ಪಡೆಸೂರು ಅವರ ವಿವೇಕಯುಕ್ತ ಆಡಳಿತದಿಂದ ಹೆಮ್ಮರವಾಗಿ ಬೆಳೆಯುತ್ತಿದೆ. 
ಅದರಲ್ಲೂ ಹಿಂದಿ ಪ್ರಚಾರ ಮಿತ್ರವೃಂದಗಳ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದುದು. ಹಾಸನಕ್ಕೆ ನೂತನ ಬಾಲಿಕಾ ಪ್ರೌಢಶಾಲೆ, ಶಿಕ್ಷಕರ ತರಬೇತಿಯ ಸಂಜೆ ಕಾಲೇಜು, ಹಿಂದಿ ಬಿ.ಇಡಿ ಕಾಲೇಜು ಮುಂತಾದವುಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿದರು. 
ಜ್ವಾಲನಯ್ಯನವರು ಅರಕಲಗೂಡು ವರದರಾಜುಲು ಕಾಂತಮ್ಮ ಮಹಿಳಾ ಕಾಲೇಜು ಹಾಗೂ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರಾಗಿ ಇವುಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. 

ಎಚ್.ಬಿ.ಜ್ವಾಲನಯ್ಯನವರೆಂದರೆ ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಲ್ಲ. ಸಾಮಾಜಿಕ, ರಾಜಕೀಯ, ಶಿಕ್ಷಣ, ಸಾಹಿತ್ಯ, ಸಂಘಟನೆ, ರಂಗಭೂಮಿ ಹೀಗೆ ಹಲವಾರು ಮೈಲಿಗಲ್ಲುಗಳ ಸಾಧಕ, ಛಲಗಾರ, ಹೋರಾಟಗಾರ. ಇವುಗಳೆಲ್ಲವುಗಳ ಫಲವಾಗಿಯೇ 1993ರಲ್ಲಿ ಹಾಸನದಲ್ಲಿ ನಡೆದ ನಾಲ್ಕನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪಟ್ಟ ಇವರನ್ನಲಂಕರಿಸಿತ್ತು.

ಕೊಟ್ರೇಶ್ ಎಸ್. ಉಪ್ಪಾರ್, ಆಲೂರು
ತೇಜೂರು ರಸ್ತೆ, ಶಾಂತಿನಗರ
ಹಾಸನ – 573201
ಮೊ-9483470794, 9739878197